Hassan Scandal: 4 ದಿನ ಎಸ್ಐಟಿ ವಶಕ್ಕೆ ಮಾಜಿ ಸಚಿವ ರೇವಣ್ಣ, ತೀವ್ರ ವಿಚಾರಣೆ ಸಾಧ್ಯತೆ
ಹಾಸನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆ ಅಪಹರಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಎಸ್ಐಟಿ ವಶಕ್ಕೆ ನೀಡಲಾಗಿದೆ.
ಬೆಂಗಳೂರು: ಹಾಸನ ಜಿಲ್ಲೆ ಹೊಳೆ ನರಸೀಪುರದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೂರು ನೀಡಿರುವ ಮೈಸೂರು ಜಿಲ್ಲೆ ಕೆಆರ್ನಗರ ತಾಲ್ಲೂಕಿನ ಮನೆಕೆಲಸದ ಮಹಿಳೆ ಮಹಿಳೆಯನ್ನು ಅಪಹರಣ ಮಾಡಿದ ಆರೋಪ ಪ್ರಕರಣದಲ್ಲಿ ಶನಿವಾರ ವಿಶೇಷ ತನಿಖಾ ತಂಡದಿಂದ( SIT) ಬಂಧನಕ್ಕೊಳಗಾಗಿರುವ ಹೊಳೆ ನರಸೀಪುರ ಶಾಸಕ ಹಾಗೂ ಮಾಜಿ ಸಚಿವ ಹೆಚ್. ಡಿ. ರೇವಣ್ಣ ಅವರನ್ನು 4 ದಿನಗಳ ಕಾಲ ವಿಶೇಷ ತಂಡದ ವಶಕ್ಕೆ ನೀಡಿ ಆದೇಶಿಸಲಾಗಿದೆ. ಮೇ 8ರ ವರೆಗೆ ರೇವಣ್ಣ ಅವರು ಎಸ್ಐಟಿ ವಶಕದಲ್ಲಿರದ್ಧಾರೆ ಎಂದು ಭಾನುವಾರ ಆದೇಶ ನೀಡಿದ ಬೆಂಗಳೂರಿನ ನ್ಯಾಯಾಧೀಶರು ತಿಳಿಸಿದ್ದಾರೆ.ಬಂಧನಕ್ಕೆ ಒಳಗಾದ 24 ಗಂಟೆಯ ಒಳಗೆ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಈ ಹಿನ್ನೆಲೆಯಲ್ಲಿ ರೇವಣ್ಣ ಅವರನ್ನು ತನಿಖಾಧಿಕಾರಿಗಳ ತಂಡ ರಜೆ ಇದ್ದರೂ ಕೋರಮಂಗಲದ ಎನ್. ಜಿ. ವಿಯಲ್ಲಿರುವ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಕುಮಾರ್ ಬಿ. ಕಟ್ಟೀಮನಿ ಅವರ ನಿವಾಸದ ಮುಂದೆ ಹಾಜರುಪಡಿಸಿದರು.
ಈ ವೇಳೆ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಎಚ್.ಡಿ.ರೇವಣ್ಣ ಅವರನ್ನು 5 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ವಿಶೇಷ ತನಿಖಾ ತಂಡದ ಪರ ವಕೀಲರು ಮನವಿ ಸಲ್ಲಿಸಿದರು. ಆದರೆ ರೇವಣ್ಣ ಅವರನ್ನು ಎಸ್ಐಟಿ ವಶಕ್ಕೆ ನೀಡಬೇಡಿ ಎಂದು ಅವರ ಪರ ವಕೀಲರು ಕೋರಿದರು.
ಈ ಕುರಿತು ಎರಡೂ ಕಡೆಯ ವಾದವನ್ನು ಆಲಿಸಿದ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಕುಮಾರ್ ಬಿ. ಕಟ್ಟೀಮನಿ ಅವರು ಎಸ್ಐಟಿ ವಶಕ್ಕೆ ರೇವಣ್ಣ ಅವರನ್ನು ನೀಡುವ ನಿರ್ಧಾರ ಪ್ರಕಟಿಸಿದರು.
ಈ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಭದ್ರತೆಯಲ್ಲಿ ಎಸ್ಐಟಿ ಅಧಿಕಾರಿಗಳ ತಂಡವು ರೇವಣ್ಣ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿತು. ಭಾನುವಾರ ರಾತ್ರಿಯಿಂದಲೇ ಸಿಐಡಿ ಕಚೇರಿಯಲ್ಲಿ ರೇವಣ್ಣ ಅವರನ್ನು ವಿಚಾರಣೆ ಒಳಪಡಿಸಲಾಗಿದೆ.
ಸೋಮವಾರದಿಂದ ಬುಧವಾರ ಸಂಜೆವರೆಗೂ ತಮ್ಮ ವಶದಲ್ಲಿ ಇರಿಸಿಕೊಂಡು ವಿಚಾರಣೆಗೆ ಒಳಪಡಿಸಲಿದೆ. ಸಂತ್ರಸ್ತ ಮಹಿಳೆ ನೀಡಿದ ದೂರೇನು. ಆಕೆಗೆ ತೊಂದರೆ ಕೊಟ್ಟವರು ಯಾರು, ಅಪಹರಿಸುವಲ್ಲಿ ರೇವಣ್ಣ ಪಾತ್ರವೇನು ಎನ್ನುವುದು ಸೇರಿದಂತೆ ಈ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕುವ ಸಾಧ್ಯತೆಯಿದೆ. ರೇವಣ್ಣ ಅವರನ್ನೂ ಹೊಳೆನರಸೀಪುರ, ಕೆಆರ್ ನಗರಕ್ಕೂ ಕರೆದೊಯ್ದು ಹೇಳಿಕೆ ಪಡೆಯುವ ಸಾಧ್ಯತೆಯಿದೆ.
ಅಪಹರಣ ಪ್ರಕರಣದಲ್ಲಿ ಎಚ್ಡಿ ರೇವಣ್ಣ ಅವರನ್ನು ಶನಿವಾರ ರಾತ್ರಿಯೇ ಎಸ್ಐಟಿ ತಂಡ ಬಂಧಿಸಿತ್ತು. ಇದೇ ಪ್ರಕರಣದಲ್ಲಿ ಸತೀಶ್ ಬಾಬು ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಸತೀಶ್ ಬಾಬು ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದ ಆರೋಪಿಯಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)