Hassan Scandal: ರೇವಣ್ಣಗೆ ಎರಡನೇ ಪ್ರಕರಣದಲ್ಲೂ ಜಾಮೀನು, ನ್ಯಾಯಾಧೀಶರ ಸೂಚನೆ ಏನು
ಹಾಸನದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಜಾಮೀನು ದೊರೆತಿದೆ.

ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಪುತ್ರ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರೊಂದಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ದವೂ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ದೊರೆತಿದೆ. ನಾಲ್ಕು ದಿನದ ಹಿಂದೆಯೇ ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯವು ಸೋಮವಾರ ಮಧ್ಯಾಹ್ನ ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈಗಾಗಲೇ ಲೈಂಗಿಕ ದೌರ್ಜನ್ಯಕ್ಕೆ ಸಿಲುಕಿದ ಸಂತ್ರಸ್ತ ಮಹಿಳೆ ಅಪಹರಣಕ್ಕೆ ಯತ್ನಿಸಿದ ಪ್ರಕರಣದಲ್ಲಿ ರೇವಣ್ಣ ಅವರ ಹೆಸರಿತ್ತು. ಆ ಪ್ರಕರಣದಲ್ಲೂ ಕಳೆದ ವಾರವೇ ರೇವಣ್ಣ ಅವರಿಗೆ ಜಾಮೀನು ಸಿಕ್ಕಿತು. ಎರಡೂ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವುದರಿಂದ ರೇವಣ್ಣ ನಿರಾಳರಾಗಿದ್ದಾರೆ.
ಹೊಳೆ ನರಸೀಪುರ ಠಾಣೆಯಲ್ಲಿ ಕಳೆದ ತಿಂಗಳು ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್.ಡಿ ರೇವಣ್ಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನ ಮೂರು ದಿನದ ಹಿಂದೆಯೇ ನಡೆಸಿದ್ದರೂ ತೀರ್ಪನ್ನು ಇಂದಿಗೆ ಮುಂದೂಡಿಕೆ ಮಾಡಲಾಗಿತ್ತು. ಸೋಮವಾರ ಹೆಚ್.ಡಿ ರೇವಣ್ಣಗೆ 42ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, 5 ಲಕ್ಷ ಮೌಲ್ಯದ ಬಾಂಡ್ ಒಬ್ಬರ ಶ್ಯೂರಿಟಿ ನೀಡಲು ಆದೇಶ ಹೊರಡಿಸಿದೆ. ಅಲ್ಲದೇ ತನಿಖೆಗೆ ಸಹಕರಿಸಬೇಕು. ನ್ಯಾಯಾಲಯದ ಸೂಚನೆ ಪಾಲಿಸುವಂತೆಯೂ ಆದೇಶಿಸಲಾಗಿದೆ.
ಈ ಪ್ರಕರಣದ ವಿಚಾರಣೆ ಕೈಗತ್ತಿಕೊಂಡ ನ್ಯಾಯಾಧೀಶ ರವೀಂದ್ರ, ಎರಡು ಕಡೆಯ ವಾದ ಆಲಿಸಿದ್ದರು. ಜಾಮೀನು ನೀಡದಂತೆ ಸರ್ಕಾರಿ ವಿಶೇಷ ವಕೀಲರು ವಾದಿಸಿದ್ದರೆ, ಈ ಪ್ರಕರಣದಲ್ಲಿ ಗಂಭೀರ ಆರೋಪಗಳು ರೇವಣ್ಣ ಅವರ ಮೇಲೆ ಇಲ್ಲ. ಅವರಿಗೆ ಜಾಮೀನು ನೀಡಬಹುದು ಎಂದು ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿದ್ದರು. ಅಂತಿಮವಾಗಿ ನ್ಯಾಯಾಧೀಶರು ಜಾಮೀನು ನೀಡುವ ತೀರ್ಮಾನ ಪ್ರಕಟಿಸಿದರು.
ಈಗಾಗಲೇ ಇನ್ನೊಂದು ಪ್ರಕರಣದಲ್ಲಿ ರೇವಣ್ಣ ಅವರಿಗೆ ಜಾಮೀನು ದೊರೆತಿದ್ದರೂ ಈ ಪ್ರಕರಣದಲ್ಲೂ ಆತಂಕ ಇತ್ತು. ಎರಡೂ ಪ್ರಕರಣದಲ್ಲೂ ರೇವಣ್ಣ ಜಾಮೀನು ಪಡೆದು ಕೊಂಚ ನಿರಾಳರಾಗಿದ್ದಾರೆ.
