Police Transfer: ಕರ್ನಾಟಕದಲ್ಲಿ ಅಂತರ ಜಿಲ್ಲಾ ಪೊಲೀಸ್ ವರ್ಗಾವಣೆಗೆ ಶೀಘ್ರ ಚಾಲನೆ
Karnataka Police news ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡಲು ಗೃಹ ಇಲಾಖೆ ಸಿದ್ದತೆ ಮಾಡಿಕೊಳ್ಳಲಾಗಿದೆ.ನೇಮಕಗೊಂಡ ಜಿಲ್ಲೆ ಇಲ್ಲವೇ ವಿಭಾಗದಲ್ಲಿ ಆಯಾ ಪೊಲೀಸರು ಕೆಲಸ ಮಾಡುವುದು ಕಡ್ಡಾಯವಾಗಿದೆ. ಅವರು ಜೀವಮಾನವಿಡೀ ಅದೇ ಜಿಲ್ಲೆ ಇಲ್ಲವೇ ವಿಭಾಗದಲ್ಲಿ ಸೇವೆ ಮಾಡುವ ಕಾನೂನು ಇದೆ. ಆದರೆ ಸರ್ಕಾರ ಪರಿಗಣನೆ ಮಾಡಿ ಅನಿವಾರ್ಯ ಇದ್ದವರಿಗೆ ಆಯಾ ಜಿಲ್ಲೆಗೆ ವರ್ಗ ಮಾಡುವ ವ್ಯವಸ್ಥೆ ಮಾಡಿಕೊಂಡಿದೆ. ಇದಕ್ಕಾಗಿ ನೂರಾರು ಪೊಲೀಸರು ಈಗಾಗಲೇ ಬೇಡಿಕೆ ಇಟ್ಟಿದ್ದರೂ ಅನುಮತಿ ನೀಡಿರಲಿಲ್ಲ. ಈಗ ಚುನಾವಣೆ ಪ್ರಕ್ರಿಯೆಗಳೆಲ್ಲವೂ ಮುಗಿದಿರುವುದರಿಂದ ವರ್ಗಾವಣೆ ಚಟುವಟಿಕೆಗಳೂ ಕರ್ನಾಟಕದಲ್ಲಿ ಪುನಾರಂಭಗೊಳ್ಳುತ್ತಿದ್ದು. ಇದರಲ್ಲಿ ಪೊಲೀಸ್ ಇಲಾಖೆಯ ಅಂತರ ಜಿಲ್ಲಾ ವರ್ಗಾವಣೆಯೂ ಸೇರಿದೆ.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪೊಲೀಸ್ ಇಲಾಖೆಯವರ ಅಂತರ ಜಿಲ್ಲಾ ವರ್ಗಾವಣೆಯ ವಿಷಯವನ್ನು ಪ್ರಸ್ತಾಪಿಸಿದರು.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬಂದಿತು. ಕಳೆದ ಎರಡು ತಿಂಗಳು ಸರ್ಕಾರದ ಯಾವುದೇ ರೀತಿಯ ಕೆಲಸ ಕಾರ್ಯಗಳು ಸಾಧ್ಯವಾಗಿಲ್ಲ. ಈಗ ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡುತ್ತೇವೆ ಎಂದು ಹೇಳಿದರು.
ವಾಲ್ಮೀಕಿ ನಿಗಮ ಹಗರಣ
ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರದಲ್ಲಿ ಸರ್ಕಾರ ಭಾಗಿಯಾಗಿದೆ, ಸಿಎಂ ಸಿದ್ದರಾಮಯ್ಯ, ನಿಗಮದ ಅಧ್ಯಕ್ಷ ದದ್ದಲ್ ಬಸನಗೌಡ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿಯವರ ಒತ್ತಾಯದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಹೇಳಿದ್ದಕ್ಕೆಲ್ಲ ಎಸ್ ಅನ್ನೋದಿಕ್ಕೆ ಆಗಲ್ಲ. ತನಿಖೆಯನ್ನು ಪ್ರಾರಂಭ ಮಾಡಿದ್ದೇವೆ. ಬ್ಯಾಂಕ್ನಲ್ಲಿ ಫ್ರಾಡ್ ಆಗಿದೆ ಅಂತ ಸಿಬಿಐನವರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಆಗಲಿ. ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಎಸ್ಐಟಿಗೆ ಸೂಚಿಸಿದ್ದೇವೆ. ತನಿಖೆ ವಿಚಾರದಲ್ಲಿ ಅಧಿಕಾರಿಗಳಿಗೆ ಒತ್ತಾಯ ಮಾಡಲು ಆಗುವುದಿಲ್ಲ. ಅವರ ತನಿಖೆಗೆ ಸಮಯ ಕೊಡಬೇಕಾಗುತ್ತದೆ. ಏನೆಲ್ಲ ಹೇಳಿಕೆಗಳು ಬರುತ್ತವೆ ಪರಿಶೀಲಿಸುತ್ತಾರೆ. ಸಿಬಿಐನವರು ಅಧಿಕೃತವಾಗಿ ಯಾವುದೇ ಪತ್ರ ಬರೆದಿಲ್ಲ ಎಂದು ತಿಳಿಸಿದರು.
ಸರ್ಕಾರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಹಂಚಿಕೊಳ್ಳಲು ಕ್ಯಾಬಿನೆಟ್ ಇದೆ. ಪಕ್ಷಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಕೈಗೊಳ್ಳಲು ಕೋರ್ಕಮಿಟಿ ಸಭೆ ಮಾಡಬಹುದು. ಇದಕ್ಕೆ ಅವಕಾಶಗಳನ್ನು ಪಕ್ಷದ ಅಧ್ಯಕ್ಷರು ಕೊಡಬೇಕಾಗುತ್ತದೆ. ಸಂದರ್ಭ ಬಂದಾಗ ಅವರು ಮಾಡುತ್ತಾರೆ ಎಂದರು.
ನಮ್ಮಲ್ಲಿ ಭಿನ್ನಾಭಿಪ್ರಾಯಗಳಿಲ್ಲ
ಕಾಂಗ್ರೆಸ್ನಲ್ಲಿ ಹಿರಿಯರನ್ನು ಪರಿಗಣಿಸುತ್ತಿಲ್ಲ ಎಂಬ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ಏನು ಇಲ್ಲ. ಸಂದರ್ಭ ಅನುಸಾರ ಅಂತಹ ಮಾತುಗಳನ್ನು ಹೇಳಿರುತ್ತೀವಿ. ನಮ್ಮಲ್ಲಿ ಒಳ ಜಗಳಗಳು ಆಗಿಲ್ಲ. ತುಮಕೂರಿನ ಶಾಸಕ ಸುರೇಶ್ಗೌಡ ಅವರು ನಮ್ಮ ಪಕ್ಷದಲ್ಲಿನ ಒಳ ಜಗಳವನ್ನು ಎಲ್ಲಿ ನೋಡಿದ್ದಾರೋ, ಎಲ್ಲಿ ಆಗಿದೆಯೋ ಅವರಿಗೆ ಗೊತ್ತು. ಯಾವುದಾದರು ವಿಚಾರಗಳು ಬಂದಾಗ ಒಬ್ಬೊಬ್ಬರು ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಸಹಜ. ಅಂತಹ ಸಂದರ್ಭದಲ್ಲಿ ಬಿಟ್ಟರೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಒಳ ಜಗಳಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಬಲ ಸಚಿವರ ಕ್ಷೇತ್ರಗಳಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರುವುದಕ್ಕೆ ಸಮಿತಿ ರಚನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಜಿಲ್ಲೆ ಸೇರಿದಂತೆ 17 ಜಿಲ್ಲೆಗಳಲ್ಲಿ ಸೋತಿದ್ದೇವೆ. ಈ ಬಗ್ಗೆ ಪರಿಶೀಲನೆ ಮಾಡುವ, ಆತ್ಮಾವಲೋಕನಾ ಮಾಡಿಕೊಳ್ಳುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ನಾವೆಲ್ಲ ಅದನ್ನು ಒಪ್ಪುತ್ತೇವೆ. ಮುಂದೆ ನಮಗೆ ಏನು ಸಲಹೆ ಮಾಡುತ್ತಾರೆ. ಅದನ್ನು ಪಾಲನೆ ಮಾಡುವ ಪದ್ಧತಿ ನಮ್ಮ ಪಕ್ಷದಲ್ಲಿದೆ ಎಂದು ಹೇಳಿದರು.
ಮೋದಿ ಅವರು ಕರ್ನಾಟಕಕ್ಕೆ ಒಳ್ಳೆ ಖಾತೆ ನೀಡಲಿ
ದೇಶದಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಜನ ಸಮುದಾಯ ಅನೇಕ ತೊಂದರೆಗಳಿಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಅನೇಕ ನೀತಿಗಳನ್ನು ಮಾಡುವ ಸಂದರ್ಭದಲ್ಲಿ ಜನರ ದೃಷ್ಟಿಯಿಂದ ರೂಪಿಸಬೇಕು ಎಂಬುದು ಪ್ರಜಾಪ್ರಭುತ್ವದಲ್ಲಿದೆ. ಜನರಿಗೆ ವಿರುದ್ಧವಾದ ತೀರ್ಮಾನಗಳನ್ನು, ಕಾನೂನುಗಳನ್ನು ಕಳೆದ ಹತ್ತು ವರ್ಷದಲ್ಲಿ ಮಾಡಿದ್ದಾರೆ. ಏನೆಲ್ಲ ತಪ್ಪುಗಳಾಗಿದೆಯೋ ಅದೆಲ್ಲವನ್ನು ಸರಿಪಡಿಸಿಕೊಂಡು ಜನಪರ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಕ್ಕೆ ಹೆಚ್ಚು ಸಚಿವ ಸ್ಥಾನಗಳನ್ನು ಸಿಗಲಿ ಎಂದು ಆಪೇಕ್ಷೆ ಪಡುತ್ತೇನೆ. ಇಲ್ಲಿವರೆಗೂ ನೇಮಕವಾದ ರಾಜ್ಯವನ್ನು ಪ್ರತಿನಿಧಿಸಿದ ಕೇಂದ್ರ ಸಚಿವರು ರಾಜ್ಯದ ಹಿತ ಕಾಪಾಡುವುದರಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಹೋರಾಟ ಮಾಡುವಲ್ಲಿ ನಿರ್ಮಲಾ ಸೀತಾರಾಮನ್ ಸೇರಿದಂತೆ ಇನ್ನುಳಿದ ಸಚಿವರು ವಿಫಲರಾಗಿದ್ದಾರೆ. ನಮಗೆ ಉಪಯೋಗವಾಗುವಂತಹ ಖಾತೆಗಳನ್ನು ನೀಡಲಿ ಎಂದು ಸಲಹೆ ನೀಡಿದರು.