SK Jain: ಕರ್ನಾಟಕದ ಖ್ಯಾತ ಜ್ಯೋತಿಷಿ ಎಸ್‌ಕೆ ಜೈನ್‌ ನಿಧನ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯಕ್ರಮ ನೀಡುತ್ತಿದ್ದ ನೆನಪು
ಕನ್ನಡ ಸುದ್ದಿ  /  ಕರ್ನಾಟಕ  /  Sk Jain: ಕರ್ನಾಟಕದ ಖ್ಯಾತ ಜ್ಯೋತಿಷಿ ಎಸ್‌ಕೆ ಜೈನ್‌ ನಿಧನ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯಕ್ರಮ ನೀಡುತ್ತಿದ್ದ ನೆನಪು

SK Jain: ಕರ್ನಾಟಕದ ಖ್ಯಾತ ಜ್ಯೋತಿಷಿ ಎಸ್‌ಕೆ ಜೈನ್‌ ನಿಧನ, ವಿದ್ಯುನ್ಮಾನ ಮಾಧ್ಯಮದಲ್ಲಿ ಕಾರ್ಯಕ್ರಮ ನೀಡುತ್ತಿದ್ದ ನೆನಪು

ಜ್ಯೋತಿಷ್ಯ ಶಾಸ್ತ್ರದಲ್ಲಿ ಆಳವಾದ ಅಧ್ಯಯನ ಮಾಡಿ ಹೆಸರು ಮಾಡಿದ್ದ ಕನ್ನಡಿಗ ಎಸ್.ಕೆ.ಜೈನ್‌( SK Jain) ಅವರು ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

ಜ್ಯೋತಿಷಿ ಎಸ್‌.ಕೆ.ಜೈನ್‌ ಇನ್ನಿಲ್ಲ
ಜ್ಯೋತಿಷಿ ಎಸ್‌.ಕೆ.ಜೈನ್‌ ಇನ್ನಿಲ್ಲ

ಬೆಂಗಳೂರು: ತಮ್ಮದೇ ಶೈಲಿಯಲ್ಲಿ ಜ್ಯೋತಿಷ್ಯ ವಿಜ್ಞಾನವನ್ನು ಹೇಳುತ್ತಿದ್ದ ಕನ್ನಡಿಗ ಜ್ಯೋತಿಷಿ ಡಾ.ಸುರೇಂದ್ರಕುಮಾರ್‌( ಎಸ್‌.ಕೆ.ಜೈನ್‌) ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾದರು. ಎರಡು ತಿಂಗಳ ಅಂತರದಲ್ಲಿಯೇ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅದರಲ್ಲೂ ಚಿಕಿತ್ಸೆ ಪಡೆದು ಬಂದಿದ್ದ ಜೈನ್‌ ಅವರು ಕೆಲವು ದಿನಗಳಿಂದ ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸ ಫಲಕಾರಿಯಾಗದೇ ಕೊನೆಯುಸಿರೆಳೆದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ. ಬೆಂಗಳೂರಿನಲ್ಲಿಯೇ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ.

ಖ್ಯಾತ ಜ್ಯೋತಿಷಿ ಶಶಿಕಾಂತ್‌ ಜೈನ್‌ ಅವರ ಪುತ್ರರಾಗಿದ್ದ ಸುರೇಂದ್ರಕುಮಾರ್‌ ಜೈನ್‌ ಕೂಡ ಅಪ್ಪನಂತೆಯೇ ಜ್ಯೋತಿಷ್ಯ ಶಾಸ್ತ್ರ ಕಲಿತಿದ್ದರು. ತಂದೆಯ ಮಾರ್ಗದಲ್ಲಿಯೇ ಮುನ್ನಡೆದಿದ್ದವರು. ದಕ್ಷಿಣ ಕನ್ನಡ ಮೂಲದವಾರ ಶಶಿಕಾಂತ್‌ ಜೈನ್‌ ಅವರು ಹಲವಾರು ವರ್ಷಗಳ ಕಾಲ ಜ್ಯೋತಿಷಿಯಾಗಿಯೇ ಗುರುತಿಸಿಕೊಂಡಿದ್ದರು. ಮಗನಿಗೂ ಇದು ಒಲಿದಿತ್ತು. ಸುರೇಂದ್ರಕುಮಾರ್‌ ಜೈನ ವರು ದಕ್ಷಿಣ ಕನ್ನಡದಲ್ಲಿ ಜನಿಸಿದ್ದರು. 1957, ಅಕ್ಟೋಬರ್ 13ರಂದು ಜನಿಸಿದ್ದ ಎಸ್ ಕೆ ಜೈನ್ ಅವರು ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಎಂಜಿನಿಯರ್‌ ಆಗಬೇಕು ಎನ್ನುವ ಕನಸಿನೊಂದಿಗೆ ಶಿಕ್ಷಣದತ್ತ ಬಂದರೂ ಅದು ಈಡೇರಲಿಲ್ಲ. ಬದಲಿಗೆ ಜ್ಯೋತಿಷ್ಯಕ್ಕೆ ಸಂಬಂಧಿಸಿ ಶಿಕ್ಷಣವನ್ನೂ ಪಡೆದುಕೊಂಡಿದ್ದರು.ಹೊರದೇಶಕ್ಕೂ ಹೋಗಿದ್ದರು. ಇದಾದ ನಂತರ ಎಸ್‌ಕೆ ಜೈನ್‌ ಸ್ವತಂತ್ರವಾಗಿ ಜ್ಯೋತಿಷ್ಯ ಹೇಳಲು ಶುರು ಮಾಡಿದ್ದರು. ಮೂರು ದಶಕಕ್ಕೂ ಮಿಗಿಲಾದ ಅನುಭವವಿತ್ತು. ಆದರೆ ಉದಯ ಟಿವಿಯಲ್ಲಿ ಎರಡು ದಶಕದ ಹಿಂದೆ ಅವರು ಆರಂಭಿಸಿದ್ದ ಜ್ಯೋತಿಷ್ಯ ಕಾರ್ಯಕ್ರಮ ಜನಪ್ರಿಯವಾಗಿತ್ತು. ಅವರು ಹೇಳುವ ಶೈಲಿಯೇ ಗಮನ ಸೆಳೆಯುತ್ತಿತ್ತು. ಅಲ್ಲಿಂದ ಹಲವಾರು ಮಾಧ್ಯಮಗಳು, ಪತ್ರಿಕೆಗಳಲ್ಲೂ ಅವರ ಜ್ಯೋತಿಷ್ಯ ಪ್ರಕಟವಾಗುತ್ತಿತ್ತು. ಇದಲ್ಲದೇ ಹಲವಾರು ರಾಜಕೀಯ ನೇತಾರರು, ಗಣ್ಯರು ಕೂಡ ಇವರಲ್ಲಿ ಜ್ಯೋತಿಷ್ಯ ಕೇಳಲು ಬರುತ್ತಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿದ್‌ ಜೈನ್‌ ಅವರು ಹಲವಾರು ಪುಸ್ತಕಗಳನ್ನು ಜ್ಯೋತಿಷ್ಯ ವಿಜ್ಞಾನಕ್ಕೆ ಸಂಬಂಧಿಸಿ ಹೊರ ತಂದಿದ್ದಾರೆ.

ಕೋವಿಡ್‌ ನಂತರ ಅವರ ಆರೋಗ್ಯದಲ್ಲಿ ಏರು ಪೇರಾಗಿದ್ದರು. ಶ್ವಾಸ ಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಯನ್ನು ನೀಡಿಲಾಗಿತ್ತು. ಕಳೆದ ತಿಂಗಳು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಬಿಡುಗಡೆ ಹೊಂದಿದ್ದರು. ಮತ್ತೆ ಶ್ವಾಸಕೋಶ ಸಂಬಂಧಿತ ಕಾಯಿಲೆ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಶುಕ್ರವಾರ ಸಂಜೆ ನಿಧನರಾದರು ಎಂದು ಆಪ್ತರು ತಿಳಿಸಿದ್ದಾರೆ.