ಬೆಂಗಳೂರಿನಲ್ಲಿ ಮಿತಿ ಮೀರಿದ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆ; ಒಂದಕ್ಕೊಂದು ಸಂಬಂಧ ಇದ್ದರೂ ಪರಿಹಾರ ಸೂತ್ರವೇ ಇಲ್ಲವಲ್ಲ
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಪಾರ್ಕಿಂಗ್ ಹಾಗೂ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಪಾರ್ಕಿಂಗ್ ಸಮಸ್ಯೆಗೆ ಕಟ್ಟುನಿಟ್ಟಿನ ಕ್ರಮ ಆದರೆ ಟ್ರಾಫಿಕ್ ಸಮಸ್ಯೆಯನ್ನು ಗಣನೀಯವಾಗಿ ತಗ್ಗಿಸಬಹುದು ಎನ್ನುವ ಅಭಿಪ್ರಾಯಗಳಿವೆ.ವರದಿ: ಎಚ್.ಮಾರುತಿ. ಬೆಂಗಳೂರು

ಬೆಂಗಳೂರು: ಕರ್ನಾಟಕದ ರಾಜಧಾನಿ, ಭಾರತದ ಐಟಿಬಿಟಿ ರಾಜಧಾನಿ ಬೆಂಗಳೂರಿನಲ್ಲಿ ಅತಿ ದೊಡ್ಡಸಮಸ್ಯೆ ಎಂದರೆ ಪಾರ್ಕಿಂಗ್ ಅರ್ಥಾತ್ ವಾಹನ ನಿಲುಗಡೆ. ನಗರದ ಹೃದಯ ಭಾಗದ ವ್ಯಾಪ್ತಿಯಲ್ಲಿ 10-15 ಕಿಮೀ ವ್ಯಾಪ್ತಿಯಲ್ಲಿ ಕಾರು ಬಿಡಿ, ದ್ವಿಚಕ್ರ ವಾಹನಕ್ಕೂ ಪಾರ್ಕಿಂಗ್ ಸಿಗುವುದಿಲ್ಲ. ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿ ಒಂದರ ಮೇಲೊಂದು ವಾಹನಗಳನ್ನು ಪಾರ್ಕಿಂಗ್ ಮಾಡಿರುವುದನ್ನು ಕಾಣಬಹುದು. ಕಚೇರಿಗೆ ಹೋಗುವವರು, ವ್ಯಾಪಾರಿಗಳು, ಅಂಗಡಿ ಮುಂಗಟ್ಟು ಮಾಲೀಕರು ಮತ್ತು ನಿವಾಸಿಗಳು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಯಾಗಿದೆ. ಬೆಂಗಳೂರು ಅಷ್ಟ ದಿಕ್ಕುಗಳಲ್ಲೂ ಯೋಜನಾರಹಿತವಾಗಿ ಬೆಳೆಯುತ್ತಿದೆ. ಕಂಡ ಕಂಡಲ್ಲಿ ಲೇಔಟ್ ಗಳು, ಬಡಾವಣೆಗಳು, ಅಪಾರ್ಟ್ ಮೆಂಟ್ ಗಳು ತಲೆ ಎತ್ತುತ್ತಲೇ ಇವೆ. ಈ ಕಾರಣಕ್ಕೆ ನಗರದ ಜನಸಂಖ್ಯೆಯೂ ವಿಪರೀತ ಎನ್ನುವಷ್ಟು ಹೆಚ್ಚಳವಾಗಿದೆ.
ಜತೆ ಜತೆಯಾಗಿ ವಾಹನಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬೆಂಗಳೂರಿನಲ್ಲಿ ನೋಂದಣಿಯಾದ 1.23 ಕೋಟಿ ವಾಹನಗಳಿವೆ. ಇದರಲ್ಲಿ ಶೇ.70ರಷ್ಟು ದ್ವಿಚಕ್ರ ವಾಹನಗಳು. ನಗರದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚುತ್ತಿದ್ದು, ಕಾರುಗಳ ಸಂಖ್ಯೆ ಹೆಚ್ಚುತ್ತಿದೆ. ಮಧ್ಯಮ ವರ್ಗದ ಜನಸಂಖ್ಯೆ ಹೆಚ್ಚುತ್ತಿರುವಂತೆ ದ್ವಿಚಕ್ರ ವಾಹನಗಳ ಸಂಖ್ಯೆಯೂ ಏರುತ್ತಿದೆ. ಆದರೆ ನಗರದ ಪಾರ್ಕಿಂಗ್ ಸ್ಥಳಾವಕಾಶ ಮತ್ತು ರಸ್ತೆಗಳ ಸಾಮರ್ಥ್ಯ ದಶಕಗಳ ಹಿಂದೆ ಇದ್ದಷ್ಟೇ ಇದೆ. ವಾಹನಗಳ ನಿಲುಗಡೆಗೆ ಜಾಗ ಇಲ್ಲದೆ ರಸ್ತೆಗಳ ಇಕ್ಕೆಲಗಳಲ್ಲಿ, ವಾಸದ ಮನೆ ಅಂಗಡಿ ಮುಂಗಟ್ಟುಗಳ ಮುಂದೆ ವಾಹನಗಳನ್ನು ಪಾರ್ಕಿಂಗ್ ಮಾಡಿರುವುದು ಕಂಡು ಬರುತ್ತದೆ.
ವಾಹನಗಳ ಯದ್ವಾತದ್ವ ನಿಲುಗಡೆಯಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಲೇ ಇದೆ. ಸಂಚಾರ ದಟ್ಟಣೆ ಸಂಚಾರಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಮೇಲಾಗಿ ಫೆಬ್ರವರಿ 2022 ರಿಂದ ಟೋಯಿಂಗ್ ವ್ಯವಸ್ಥೆ ರದ್ದಾಗಿದೆ. ನೋ ಪಾರ್ಕಿಂಗ್ ಇಲ್ಲದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿದರೆ ಟೋಯಿಂಗ್ ಮಾಡಬಹುದಾಗಿತ್ತು. ಈಗ ಅದಕ್ಕೂ ಅವಕಾಶ ಇಲ್ಲವಾಗಿದೆ.
ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಟೋಯಿಂಗ್ ವ್ಯವಸ್ತೆಯನ್ನು ಮರು ಜಾರಿಗೊಳಿಸುವುದಾಗಿ ಹೇಳಿದ್ದರಾದರೂ ಅಂತಹ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ತಿಳಿದು ಬಂದಿದೆ.
ಪಾರ್ಕಿಂಗ್ ನೀತಿ- 2:
ಇತಿಹಾಸವನ್ನು ಅವಲೋಕಿಸಿದರೆ ಬೆಂಗಳೂರು ನಗರದಲ್ಲಿ ಯಾವತ್ತೂ ವ್ಯವಸ್ಥಿತ ಪಾರ್ಕಿಂಗ್ ಇರಲೇ ಇಲ್ಲ. ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಪಾರ್ಕಿಂಗ್ ನೀತಿ- 2 ಕರಡು ಸಿದ್ದಪಡಿಸಿದೆ. ಪಾರ್ಕಿಂಗ್ ಸಮಸ್ಯೆಗೆ ಪರಿಹಾರವಾಗಿ ಏರಿಯಾ ಲೆವೆಲ್ ಪಾರ್ಕಿಂಗ್ ಯೋಜನೆ ಸಿದ್ದಪಡಿಸಿದೆ. ಈ ನೀತಿಯ ಉದ್ದೇಶ ಪಾರ್ಕಿಂಗ್ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವುದು. ಸಾರ್ವಜನಿಕರಿಗೆ ನಷ್ಟವನ್ನುಂಟು ಮಾಡುವ ಇಂತಹ ಯೋಜನೆಗೆ ಸರ್ಕಾರ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ.
2012 ರಲ್ಲೇ ಪಾರ್ಕಿಂಗ್ ನೀತಿ- 2 ಯನು ಅಂಗೀಕರಿಸಲಾಗಿದೆ. ಬೇಡಿಕೆ ಆಧಾರದ ಮೇಲೆಅತಿ ಹೆಚ್ಚು ವಾಹನದಟ್ಟಣೆ ಇರುವ ಪ್ರದೇಶಗಳಲ್ಲಿ ಪಾವತಿ ಮಾಡಿ ಪಾರ್ಕಿಂಗ್ ಮಾಡುವುದು ಇದರ ಉದ್ದೇಶ. ಖಾಸಗಿ ವಾಹನಗಳ ಪ್ರೋತ್ಸಾಹವನ್ನು ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಗೊಳಿಸುವುದು ಈ ನೀತಿಯ ಉದ್ದೇಶ.
ಬಿಬಿಎಂಪಿಯಿಂದಲೂ ಪ್ರಯತ್ನ
ಈ ಮಧ್ಯೆ ಬಿಬಿಎಂಪಿ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆಗೆ ವಿವಿಧ ಭಾಗಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿದೆ. ಸ್ವಾತಂತ್ರ್ಯ ಉದ್ಯಾನವನದಲ್ಲೂ ನಿರ್ಮಿಸಲಾಗಿದೆ. ಜೆಸಿ ರಸ್ತೆ, ಗರುಡಾ ಮಾಲ್ ಸಮೀಪ, ಕೆಂಪೇಗೌಡ ರಸ್ತೆಗಳಲ್ಲಿ ನಿರ್ಮಿಸಲಾಗಿದೆ. ಈ ಪಾರ್ಕಿಂಗ್ ಕಟ್ಟಡಗಳಲ್ಲಿ ವಾರಾಂತ್ಯದ ದಿನಗಳಲ್ಲಿ ಶೇ. 70 ಪಾರ್ಕಿಂಗ್ ಭರ್ತಿಯಾಗುತ್ತದೆ. ಗಾಂಧಿನಗರ, ಚಕ್ಕಪೇಟೆ, ಅವೆನ್ಯೂ ರಸ್ತೆಗಳಿಗೆ ಹತ್ತಿರದಲ್ಲಿದ್ದರೂ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಉದ್ಯಾನವನದ ಪಾರ್ಕಿಂಗ್ ಸ್ಥಳಕ್ಕೆ ಮಾತ್ರ ವಾಹನಗಳ ಆಗಮನವಾಗುತ್ತಿಲ್ಲ. ಗಾಂಧಿನಗರದ ಮುಖ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಆದರೆ ಮುಖ್ಯ ರಸ್ತೆಗಳಿಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಈ ರಸ್ತೆಗಳಲ್ಲೂ ಸಂಚಾರಿ ಪೊಲೀಸರು ವಾಹನ ನಿಷೇಧ ಮಾಡಿದರೆ ಫ್ರೀಡಂ ಪಾರ್ಕ್ ನಲ್ಲಿರುವ ಪಾರ್ಕಿಂಗ್ ಸೌಲಭ್ಯ ಬಳಕೆಯಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ.
ಬಿಬಿಎಂಪಿ ಇತ್ತೀಚೆಗೆ ದಕ್ಷಿಣ ಭಾಗದ ಗಾಂಧಿ ಬಜಾರ್ ನಲ್ಲೂ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು ಕೆಆರ್ ಪುರ ಮತ್ತು ಮೆಜೆಸ್ಟಿಕ್ ನಲ್ಲಿ ಎಂಎಲ್ ಪಿ ಕಟ್ಟಲು ಉದ್ದೇಶಿಸಿದೆ.ಇಂತಹ ಪರಿಹಾರದ ಯೋಜನೆಗಳು ರೂಪುಗೊಳ್ಳುವ ಹೊತ್ತಿಗೆ ಇನ್ನಷ್ಟು ವಾಹನಗಳ ಸಂಖ್ಯೆ ಏರಿಕೆ ಕಂಡು ಸಮಸ್ಯೆ ಜಟಿಲವಾಗಿ ಜನರಿಗೆ ತೊಂದರೆಯಾಗುತ್ತಿದೆ.
ವರದಿ: ಎಚ್. ಮಾರುತಿ, ಬೆಂಗಳೂರು