ಬೆಂಗಳೂರಿನ ಪೊಲೀಸ್‌, ಅಗ್ನಿ ಶಾಮಕ ಠಾಣೆಗಳಲ್ಲಿ ಸೈರನ್‌ ಸದ್ದು; ಐಐಎಸ್ಸಿಯಲ್ಲೂ ಅಣಕು ಕವಾಯತು ಪ್ರದರ್ಶನ, ಜನರ ಗೊಂದಲ ನಿವಾರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಪೊಲೀಸ್‌, ಅಗ್ನಿ ಶಾಮಕ ಠಾಣೆಗಳಲ್ಲಿ ಸೈರನ್‌ ಸದ್ದು; ಐಐಎಸ್ಸಿಯಲ್ಲೂ ಅಣಕು ಕವಾಯತು ಪ್ರದರ್ಶನ, ಜನರ ಗೊಂದಲ ನಿವಾರಣೆ

ಬೆಂಗಳೂರಿನ ಪೊಲೀಸ್‌, ಅಗ್ನಿ ಶಾಮಕ ಠಾಣೆಗಳಲ್ಲಿ ಸೈರನ್‌ ಸದ್ದು; ಐಐಎಸ್ಸಿಯಲ್ಲೂ ಅಣಕು ಕವಾಯತು ಪ್ರದರ್ಶನ, ಜನರ ಗೊಂದಲ ನಿವಾರಣೆ

ಭಾರತ ಸರ್ಕಾರದ ಗೃಹ ಸಚಿವಾಲಯದ ಸೂಚನೆ ಮೇರೆಗೆ ಬೆಂಗಳೂರು ಸಹಿತ ವಿವಿಧೆಡೆ ಬುಧವಾರ ಸಂಜೆ ಅಣಕು ಕವಾಯತು ಪ್ರದರ್ಶನಗಳು ನಡೆದವು.

ಬೆಂಗಳೂರಿನಲ್ಲಿ ಅಣಕು ಕವಾಯತು ಪ್ರದರ್ಶನಕ್ಕೆ ಅಣಿಯಾಗಿದ್ದು ಹೀಗೆ
ಬೆಂಗಳೂರಿನಲ್ಲಿ ಅಣಕು ಕವಾಯತು ಪ್ರದರ್ಶನಕ್ಕೆ ಅಣಿಯಾಗಿದ್ದು ಹೀಗೆ (The Hindu)

ಬೆಂಗಳೂರು: ಕಾಶ್ಮೀರದಲ್ಲಿ ಉಗ್ರರ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗುತ್ತಿರುವ ನಡುವೆ ಭಾರತ ಸರ್ಕಾರದ ಗೃಹ ಸಚಿವಾಲಯ (MHA) ಸೂಚನೆ ಮೇರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಅಣಕು ಕವಾಯತು ಪ್ರದರ್ಶನಗಳು ನಡೆದವು.ಅದರಲ್ಲೂ ಏನಾದರೂ ಘಟನೆಗಳಾದರೆ ಇಲ್ಲವೇ ಅನಾಹುತಗಳಾದರೆ ಜನ ಹೇಗೆ ವರ್ತಿಸಬೇಕು. ನೆರವಿಗೆ ಹೇಗೆ ಧಾವಿಸಬೇಕು ಎನ್ನುವುದನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಮಾಹಿತಿಗಳನ್ನು ಒದಗಿಸಲಾಯಿತು. ಸೈರನ್‌ಗಳನ್ನು ಮೊಳಗಿಸಿ ಸನ್ನದ್ದತೆಯ ವಿವರಣೆ ನೀಡಲಾಯಿತು. ಮುಖ್ಯವಾಗಿ ರಕ್ಷಣಾ ಪಡೆಗಳು, ಪೊಲೀಸ್‌ ಪಡೆಗಳು, ಅಗ್ನಿ ಶಾಮಕ ದಳ ಸಹಿತ ತುರ್ತು ಸೇವೆ ಒದಗಿಸುವ ಸಂಸ್ಥೆಗಳ ಕಾರ್ಯವೈಖರಿ ಹೇಗಿರಲಿದೆ ಎನ್ನುವ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಯಿತು. ಕೆಲವು ಕಡೆಗಳು ತುರ್ತು ಸಂದರ್ಭದ ಸನ್ನಿವೇಶಗಳನ್ನು ಅಣಕು ಪ್ರದರ್ಶನದ ಮೂಲಕವೇ ತೋರಿಸಲಾಯಿತು.

ಪಹಲ್ಗಾಮ್ ದಾಳಿಯ ನಂತರ ನಾಗರಿಕ ರಕ್ಷಣಾ ಸನ್ನದ್ಧತೆಯನ್ನು ನಿರ್ಣಯಿಸಲು ಬುಧವಾರದಂದು ದೇಶಾದ್ಯಂತ ಅಣಕು ಕವಾಯತುಗಳನ್ನು ನಡೆಸುವಂತೆ ಗೃಹ ಸಚಿವಾಲಯವು ರಾಜ್ಯಗಳಿಗೆ ಸೂಚನೆ ನೀಡಿತ್ತು.ಪಹಲ್ಗಾಮ್ ದಾಳಿಯ ನಂತರ ನಾಗರಿಕ ರಕ್ಷಣಾ ಸನ್ನದ್ಧತೆಯನ್ನು ಮೌಲ್ಯಮಾಪನ ಮಾಡಲು ಮೇ 7 ರಂದು ದೇಶಾದ್ಯಂತ ಅಣಕು ಕವಾಯತುಗಳನ್ನು ನಡೆಸಿ ಜನರಿಗೆ ನಿಖರ ಮಾಹಿತಿ ನೀಡುವಂತೆ ಗೃಹ ಸಚಿವಾಲಯ (MHA) ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.ಮುಖ್ಯವಾಗಿ ಸೇನೆ, ಪೊಲೀಸ್‌, ಅಗ್ನಿಶಾಮಕ ದಳಗಳು, ಸೈರನ್‌ ವ್ಯವಸ್ಥೆ ಇರುವ ಕಡೆಗೆ ಅಣಕು ಪ್ರದರ್ಶನ ನಡೆಸುವಂತೆ ಸೂಚಿಸಲಾಗಿತ್ತು.

ವಾಯುದಾಳಿ ಸೈರನ್‌ಗಳನ್ನು ಸಕ್ರಿಯಗೊಳಿಸುವುದು, ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಮೂಲಭೂತ ಸ್ವರಕ್ಷಣೆಯಲ್ಲಿ ತರಬೇತಿ ನೀಡುವುದು, ಅಪಘಾತದ ಬ್ಲ್ಯಾಕೌಟ್ ಕ್ರಮಗಳನ್ನು ಪರಿಶೀಲಿಸುವುದು, ಪ್ರಮುಖ ಮೂಲಸೌಕರ್ಯಗಳನ್ನು ಪ್ರದರ್ಶಿಸುವುದು ಮತ್ತು ಸ್ಥಳಾಂತರಿಸುವ ಯೋಜನೆಗಳನ್ನು ಪರಿಶೀಲಿಸುವುದು ಮತ್ತು ಪೂರ್ವಾಭ್ಯಾಸ ಮಾಡುವುದು ಈ ಅಣಕು ಕವಾಯತುಗಳ ಉದ್ದೇಶ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮಹಿಳೆಯರು, ಹಿರಿಯರು ಸೇರಿದಂತೆ ಬೇರೆ ಬೇರೆ ವಯೋಮಾನದವರು ಅಣಕು ಪ್ರದರ್ಶನದಲ್ಲಿ ಭಾಗಿಯಾದರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಸಿಕ್ಯೂಎಎಲ್‌, ಇಎಸ್‌ಐ ಆಸ್ಪತ್ರೆ ರಾಜಾಜಿನಗರ ಎನ್‌ಎಎಲ್ ,ಬೆಂಗಳೂರು ಡೈರಿ, ಕೆನರಾ ಬ್ಯಾಂಕ್‌, ಎಸ್‌ಆರ್‌ಎಸ್‌ ಪೀಣ್ಯ, ವಿವಿ ಟವರ್‌ ಅಗ್ನಿಶಾಮಕ ಠಾಣೆ, ಜ್ಞಾನಭಾರತಿ ಅಗ್ನಿಶಾಮಕ ಠಾಣೆ, ಥಣಿಸಂದ್ರ ಅಗ್ನಿಶಾಮಕ ಠಾಣೆ, ಬಾಣಸವಾಡಿ ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆ, ಹಲಸೂರು ಗೇಟ್‌ ಪೊಲೀಸ್‌ ಠಾಣೆ, ಹಲಸೂರು ಪೊಲೀಸ್‌ ಠಾಣೆ, ಉಪ್ಪಾರಪೇಟೆ ಪೊಲೀಸ್‌ ಠಾಣೆ, ರಾಜರಾಜೇಶ್ವರಿನಗರ ಪೊಲೀಸ್‌ ಠಾಣೆ, ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ, ಕೆ.ಆರ್‌ ಮಾರ್ಕೆಟ್‌ ಪೊಲೀಸ್‌ ಠಾಣೆ, ವೈಯಾಲಿಕಾವಲ್‌ ಪೊಲೀಸ್‌ ಠಾಣೆ, ಹಲಸೂರು ಗೃಹರಕ್ಷಕ ದಳ ಕೇಂದ್ರ ಕಚೇರಿ, ಪೀಣ್ಯ ಅಗ್ನಿಶಾಮಕ ಠಾಣೆ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕ ದಳ ಕಚೇರಿ ಬಾಗಲೂರು ಅಗ್ನಿಶಾಮಕ ಠಾಣೆ, ಅಂಜನಾಪುರ ಅಗ್ನಿಶಾಮಕ ಠಾಣೆ, ಐಟಿಪಿಎಲ್‌ ಅಗ್ನಿಶಾಮಕ ಠಾಣೆ, ಸರ್ಜಾಪುರ ಅಗ್ನಿಶಾಮಕ ಠಾಣೆ, ಎಲೆಕ್ಟ್ರಾನಿಕ್‌ ಸಿಟಿ ಅಗ್ನಿಶಾಮಕ ಠಾಣೆ ಡೇರಿ ಸರ್ಕಲ್‌ ಅಗ್ನಿಶಾಮಕ ಠಾಣೆಯಲ್ಲಿ ಮೇಲ್ಭಾಗದಲ್ಲಿ ಸೈರನ್ ವ್ಯವಸ್ಥೆ ಮಾಡಲಾಗಿತ್ತು.

ಬೆಂಗಳೂರಿನ ಸಿವಿಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ನಡೆದ ಕವಾಯತಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಸಂಸದ ಡಾ.ಸುಧಾಕರ್‌, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ಮತ್ತಿತರರು ಭಾಗಿಯಾದರು. ಅಪಾರ್ಟ್‌ಮೆಂಟ್‌ ಸಹಿತ ಪ್ರಮುಖ ಜಾಗಗಳಲ್ಲಿ ಜನ ಸಿಲುಕಿದರೆ ಅವರನ್ನು ರಕ್ಷಿಸುವ ಕುರಿತು ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.