Banking exams 2025: ಬ್ಯಾಂಕಿಂಗ್‌ ಹುದ್ದೆಗಳ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೀರಾ, ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ವಿಶೇಷ ತರಬೇತಿ
ಕನ್ನಡ ಸುದ್ದಿ  /  ಕರ್ನಾಟಕ  /  Banking Exams 2025: ಬ್ಯಾಂಕಿಂಗ್‌ ಹುದ್ದೆಗಳ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೀರಾ, ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ವಿಶೇಷ ತರಬೇತಿ

Banking exams 2025: ಬ್ಯಾಂಕಿಂಗ್‌ ಹುದ್ದೆಗಳ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೀರಾ, ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ವಿಶೇಷ ತರಬೇತಿ

Banking Exams 2025: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿವಿಧ ಬ್ಯಾಂಕಿಂಗ್‌ ಪ್ರವೇಶ ಪರೀಕ್ಷೆಗಳಿಗೆ ವಿಶೇಷ ತರಬೇತಿಯನ್ನು ನೀಡಲಿದೆ. ಇದರ ವಿವರ ಇಲ್ಲಿದೆ.

ಮೈಸೂರಿನ ಕರಾಮುವಿಯು ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಿದೆ.
ಮೈಸೂರಿನ ಕರಾಮುವಿಯು ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಿದೆ.

Banking Exams 2025: ಹೊಸ ವರ್ಷದಲ್ಲಿ ಎಸ್‌ಬಿಐ, ಕೆನರಾ ಬ್ಯಾಂಕ್‌ ಸಹಿತ ಬ್ಯಾಂಕ್‌ಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ, ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆದಿದೆ. ಇದಕ್ಕಾಗಿ ಕರ್ನಾಟಕದ ಹಲವಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ತಯಾರಿಯನ್ನೂ ಆರಂಭಿಸಿದ್ದಾರೆ. ಕೆಲವರು ಸೂಕ್ತ ತರಬೇತಿ ಎಲ್ಲಿ ಸಿಗಬಹುದು ಎನ್ನುವ ಹುಡುಕಾಟವನ್ನೂ ನಡೆಸುತ್ತಿರಬಹುದು. ಇದಕ್ಕಾಗಿಯೇ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು 45 ದಿನಗಳ ತರಬೇತಿಯನ್ನು ನೀಡಲು ಸಿದ್ದತೆ ಮಾಡಿಕೊಂಡಿದೆ. ಎಸ್‌ಬಿಐ ಸಹಿತ ವಿವಿಧ ಬ್ಯಾಂಕ್‌ಗಳ ಗುಮಾಸ್ತರು ಹಾಗೂ ಅಧಿಕಾರಿಗಳ ಹುದ್ದೆಗಳ ಪರೀಕ್ಷೆಗೆ ತರಬೇತಿಯನ್ನು ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಸದ್ಯದಲ್ಲೇ ಆರಂಭಿಸಲಿದೆ.

ಬ್ಯಾಂಕಿಂಗ್‌ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಹೆಚ್ಚಿನ ತಯಾರಿ ಬೇಕಾಗುತ್ತದೆ. ಏಕೆಂದರೆ ಬ್ಯಾಂಕಿಂಗ್‌ ಹುದ್ದೆಗಳ ಆಯ್ಕೆಗೆ ನಡೆಯುವ ಪರೀಕ್ಷೆಗಳು ಕೊಂಚ ಭಿನ್ನವೇ. ಇತರೆ ಪ್ರವೇಶ ಪರೀಕ್ಷೆಗಳಂತೆ ಇರುವುದಿಲ್ಲ. ಇದಕ್ಕಾಗಿ ತರಬೇತಿಯೂ ಭಿನ್ನವಾಗಿರಲಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಈಗಾಗಲೇ ಹಲವು ಬಾರಿ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿ ನೀಡಿದೆ. ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದಾರೆ. ಅನುಭವದ ಆಧಾರದ ಮೇಲೆ ತಜ್ಞರು, ಅನುಭವಸ್ಥರ ತಂಡದೊಂದಿಗೆ ಮುಕ್ತವಿವಿಯು ಈ ಬಾರಿಯೂ ಬ್ಯಾಂಕಿಂಗ್‌ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.

14 ವರ್ಷದ ಹಿಂದೆ ಕೇಂದ್ರ ಆರಂಭ

ಮೂರು ದಶಕದಷ್ಟು ಇತಿಹಾಸ ಹೊಂದಿರುವ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ದೂರ ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡುತ್ತಿದೆ. ಹದಿಮೂರು ವರ್ಷದ ಹಿಂದೆಯೇ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಆರಂಭಿಸಲಾಗಿತ್ತು. ಅಂದಿನಿಂದಲೂ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇಲ್ಲಿ ಉಚಿತ ತರಬೇತಿಯನ್ನು ನೀಡುತ್ತಾ ಬಂದಿದೆ. ಹಾಲಿ ಕುಲಪತಿ ಪ್ರೊ. ಶರಣಪ್ಪ ಹಲಸೆ ಹಾಗೂ ಇತರರ ತೋರಿದ ಆಸಕ್ತಿಯಿಂದ ಅರ್ಹರಿಗೆ ತರಬೇತಿ ಸಿಗುತ್ತಿದೆ.

ಅದರಲ್ಲೂ ಯುಪಿಎಸ್ಸಿ ನಡೆಸುವ ಪರೀಕ್ಷೆಗಳು, ಕೆಪಿಎಸ್‌ಸಿ ಆಯೋಜಿಸುವ ವಿವಿಧ ಹುದ್ದೆಗಳ ಪರೀಕ್ಷೆಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇದಲ್ಲದೇ ಯುಜಿಸಿ ನೆಟ್‌, ಕೆ ಸೆಟ್, ಬ್ಯಾಂಕಿಂಗ್‌, ಪಿಡಿಒ, ಪೊಲೀಸ್‌ ಇಲಾಖೆ ಸಹಿತ ವಿವಿಧ ಸರ್ಕಾರಿ ನೇಮಕಾತಿಗಳ ಪ್ರವೇಶ ಪರೀಕ್ಷೆಗೂ ಇಲ್ಲಿ ತರಬೇತಿ ಮುಂದುವರಿದಿದೆ. ಬ್ಯಾಂಕಿಂಗ್‌ ಪ್ರವೇಶ ಪರೀಕ್ಷೆಗಳಿಗೂ ಹೆಚ್ಚಿನ ತರಬೇತಿಗಳು ಈ ಕೇಂದ್ರದಲ್ಲಿ ಹಿಂದೆ ನಡೆದಿವೆ. ಇದಕ್ಕಾಗಿಯೇ ಮೈಸೂರಿನ ಮುಕ್ತ ಗಂಗೋತ್ರಿ ಆವರಣದಲ್ಲಿರುವ ಕೇಂದ್ರದಲ್ಲಿ ನಿರಂತರವಾಗಿ ಆಯಾ ಸಮಯದ ಪರೀಕ್ಷೆಗಳಿಗೆ ಅನುಗುಣವಾಗಿ ತರಬೇತಿ ರೂಪಿಸುತ್ತದೆ. ಬ್ಯಾಂಕಿಂಗ್‌ ಪರೀಕ್ಷೆಗಳಿಗೂ ಹಲವು ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗಿದ್ದು, ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಹೀಗಿರಲಿದೆ ತರಬೇತಿ

ಈ ಬಾರಿಯೂ ಬ್ಯಾಂಕಿಂಗ್‌ ಪರೀಕ್ಷೆಗೆ ದಿನಾಂಕಗಳನ್ನು ನಿಗದಿಪಡಿಸಲಾಗುತ್ತಿದೆ. ಅರ್ಜಿಗಳನ್ನು ಆಹ್ವಾನಿಸಿದ್ದು, ಹಲವರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇದಕ್ಕಾಗಿ ಅಭ್ಯರ್ಥಿಗಳು ತಯಾರಿಯನ್ನು ನಡೆಸುತ್ತಿದ್ದಾರೆ. ಅಂತಿಮ ಪರೀಕ್ಷೆಗೆ ಮುಕ್ತವಿವಿಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವು ಉಚಿತ ತರಬೇತಿ ನೀಡಲಿದೆ.

ಬ್ಯಾಂಕ್‌ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು. ಈಗಾಗಲೇ ವಿವಿಧ ಬ್ಯಾಂಕ್‌ಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವವರು, ವಿಷಯ ತಜ್ಞರು ನಿತ್ಯ ಮೂರು ಗಂಟೆಗಳ ಕಾಲ ತರಬೇತಿ ನೀಡಲಿದ್ದಾರೆ. ಅದರಲ್ಲೂ ಪರೀಕ್ಷೆಗೆ ಬೇಕಾದ ಮಾದರಿಯಲ್ಲಿಯೇ ತರಬೇತಿ ಪರಿಣಾಮಕಾರಿಯಾಗಿ ನೀಡಲಾಗುತ್ತದೆ. ನಿವೃತ್ತ ಬ್ಯಾಂಕ್‌ ಅಧಿಕಾರಿಗಳು, ಬ್ಯಾಂಕಿಂಗ್‌ ಪರೀಕ್ಷೆಗಳಲ್ಲಿನ ವಿವಿಧ ವಿಷಯಗಳ ತಜ್ಞರು ಈ ಕೇಂದ್ರದೊಂದಿಗೆ ಒಡನಾಟ ಹೊಂದಿದಿರುವ ವಿಷಯ ತಜ್ಞರಾಗಿ ಭಾಗಿಯಾಗಲಿದ್ಧಾರೆ. ಇದಲ್ಲದೇ ವಿಷಯಕ್ಕೆ ಸಂಬಂಧಿಸಿ ಅಭ್ಯರ್ಥಿಗಳಿಗೆ ಅನುಮಾನಗಳಿದ್ದರೆ ಅದನ್ನೂ ಬಗೆಹರಿಸಲು ಸಂವಾದಗಳನ್ನು ಆಯೋಜಿಸಲಾಗುತ್ತದೆ.

ಗ್ರಂಥಾಲಯ ಸೌಲಭ್ಯ

ಮುಕ್ತ ವಿವಿಯಲ್ಲಿ ನಡೆಯುವ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರ ಊರುಗಳಿಂದ ಬರುವ ಅಭ್ಯರ್ಥಿಗಳಿಗೆ ವಿಶಾಲ ಗ್ರಂಥಾಲಯ ವ್ಯವಸ್ಥೆಯೂ ಇದೆ. ಇಲ್ಲಿ ಎಲ್ಲಾ ವಿಷಯಗಳ ಸಾಕಷ್ಟು ಪುಸ್ತಕಗಳು ಸಿಗಲಿವೆ. ಇದಲ್ಲದೇ ಹಾಸ್ಟೆಲ್‌ ವ್ಯವಸ್ಥೆಯನ್ನೂ ಕೂಡ ಮಾಡಿಕೊಡಲಾಗುತ್ತದೆ. ಕಡಿಮೆ ದರದಲ್ಲಿ ವಿದ್ಯಾರ್ಥಿ ಆಶ್ರಯ ವ್ಯವಸ್ಥೆಯನ್ನು ವಿವಿ ಮಾಡಿಕೊಂಡು ಬಂದಿದೆ.

ಒಂದೂವರೆ ತಿಂಗಳ ಕಾಲ ಬ್ಯಾಂಕಿಂಗ್‌ ಪರೀಕ್ಷೆ ತರಬೇತಿ ತರಗತಿಗಳಿಗೆ ಸಿದ್ದತೆಗಳು ನಡೆದಿವೆ. ಹಿಂದೆಯೂ ಹಲವಾರು ರೀತಿಯ ಪರೀಕ್ಷೆಗಳಿಗೆ ತರಬೇತಿ ನೀಡಿದ್ದೇವೆ. ಕುಲಪತಿ ಪ್ರೊ.ಶರಣಪ್ಪ ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮತ್ತಿತರರ ಸಹಕಾರದಿಂದ ಕೇಂದ್ರದಲ್ಲಿ ನಡೆದಿರುವ ತರಬೇತಿ ಪ್ರಯೋಜನ ಪಡೆದವರು ಉದ್ಯೋಗ ಪಡೆದುಕೊಂಡಿದ್ದಾರೆ ಎನ್ನುವುದು ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಅವರ ವಿವರಣೆ.

ಸಂಕ್ರಾಂತಿ ನಂತರ ಉದ್ಘಾಟನೆ

ಬ್ಯಾಂಕ್‌ ಪರೀಕ್ಷೆ ತರಬೇತಿಗೆ ಮೈಸೂರಿನ ಕರಾಮುವಿ ಕಾವೇರಿ ಸಭಾಂಗಣದಲ್ಲೇ ತರಬೇತಿಗಳು ಶುರುವಾಗಲಿವೆ. ಸಂಕ್ರಾಂತಿ ನಂತರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಅಂದಿನಿಂದಲೇ ತರಗತಿಗಳು ಶುರುವಾಗಲಿವೆ. ಸತತ ಒಂದೂವರೆ ತಿಂಗಳ ಕಾಲ ನಿರಂತರವಾಗಿ ತರಬೇತಿ ನೀಡಲಾಗುತ್ತದೆ.

ಇಲ್ಲಿ ಸಂಪರ್ಕಿಸಿ

ಇಡೀ ಒಂದು ತಿಂಗಳ ತರಬೇತಿಗೆ 500 ರೂ.ಗಳನ್ನು ಮಾತ್ರ ನೋಂದಣಿ ಶುಲ್ಕವಾಗಿ ಪಡೆಯಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಕೇಂದ್ರದ ಗಣೇಶ್‌ ಕೆಜಿ ಕೊಪ್ಪಲ್‌ ಅವರನ್ನು 99647 60090 ಇಲ್ಲವೇ ಕಚೇರಿಯನ್ನು ದೂರವಾಣಿ ಸಂಖ್ಯೆ 0821 2515944ಗೆ ಸಂಪರ್ಕಿಸಬಹುದು.

Whats_app_banner