BBMP Budget 2023: ಬಿಬಿಎಂಪಿ ಬಜೆಟ್ ನಲ್ಲಿ ಹೊಸದಾಗಿ ಫ್ಲೈಓವರ್ ಗಳ ನಿರ್ಮಾಣದ ಪ್ರಸ್ತಾಪ; ಎಲ್ಲೆಲ್ಲಿ ಮೇಲ್ಸೇತುವೆ?
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತಷ್ಟು ಫ್ಲೈಓವರ್ ಗಳು ತಲೆ ಎತ್ತಲಿವೆ. ಇಂದಿನ ಬಿಬಿಎಂಪಿ ಬಜೆಟ್ ನಲ್ಲಿ ಹೊಸ ಫ್ಲೈಓವರ್ ಗಳ ಬಗ್ಗೆ ಪ್ರಸ್ತಾಪಿಸಲಾಗಿದೆ.
ಬೆಂಗಳೂರು: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯದಲ್ಲಿ ರಾಜಧಾನಿ ಬೆಂಗಳೂರಿನ ಬಜೆಟ್ ಇಂದು ಮಂಡನೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-ಬಿಬಿಎಂಪಿ ಆಡಳಿತ 2023-24ನೇ ಸಾಲನ 11,157.83 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿದೆ.
ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡುವುದು, ಗ್ರೇಡ್ ಸಪರೇಟರ್ಗಳನ್ನು ನಿರ್ಮಿಸುವುದು, ರಸ್ತೆಗಳ ವೈಟ್ ಟಾಪಿಂಗ್ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಸುಧಾರಿಸಲು ಒತ್ತು ನೀಡಿದೆ. ಇದನ್ನು ‘ಆತ್ಮ ನಿರ್ಭರ ಬಜೆಟ್’ ಎಂದು ಕರೆದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತ (ಹಣಕಾಸು) ಜಯರಾಮ ರಾಯಪುರ ಅವರು, ಒಟ್ಟು ಆದಾಯ 11,163.97 ಕೋಟಿ ರೂ. ಆಗಿದ್ದರೆ, ಒಟ್ಟು ವೆಚ್ಚವು 11,157.83 ಕೋಟಿ ರೂ. ಆಗಿರುತ್ತದೆ, ಇದರಿಂದಾಗಿ 6.14 ಕೋಟಿ ರೂಪಾಯಿಗಳು ಹೆಚ್ಚುವರಿ ಬಜೆಟ್ಗೆ ಕಾರಣವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇಂದಿನ ಬಜೆಟ್ ನಲ್ಲಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸಲು ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇದರಲ್ಲಿ ಹೊಸದಾಗಿ ನಿರ್ಮಿಸುವಂತಹ ಫ್ಲೈಓವರ್ ಗಳು ಕೂಡ ಸೇರಿವೆ.
ಈ ಹೊಸ ಮೇಲ್ಸೇತುವೆಗಳು ಸುಗಮ ಸಂಚಾರಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಮತ್ತು ಜನನಿಬಿಡ ಜಂಕ್ಷನ್ಗಳಲ್ಲಿ ಟ್ರಾಫಿಕ್ ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೇಳಿದೆ.
ಬಿಬಿಎಂಪಿಯಿಂದ ಬೆಂಗಳೂರಿನಲ್ಲಿ ಹೊಸ ಮೇಲ್ಸೇತುವೆಗಳನ್ನು ಪ್ರಸ್ತಾಪಿಸಲಾಗಿದೆ
1. ಜನನಿಬಿಡ ಮತ್ತಿಕೆರೆ ತಿರುವಿನ ಬಳಿ ಗೋಕುಲ ರಸ್ತೆಯಲ್ಲಿ ಫ್ಲೈಓವರ್. 40 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಮೇಲ್ಸೇತುವೆ ನಿರ್ಮಾಣವಾಗಲಿದೆ.
2. ಜಾಲಹಳ್ಳಿಯಲ್ಲಿ ORR-ಪೈಪ್ಲೈನ್ ಜಂಕ್ಷನ್ನಲ್ಲಿ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ಬಿಬಿಎಂಪಿ 40 ಕೋಟಿ ರೂಪಾಯಿ ವೆಚ್ಚ ಮಾಡಲಿದೆ.
3. 65 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜಯಮಹಲ್ ರಸ್ತೆಯಲ್ಲಿ ಮೇಖ್ರಿ ವೃತ್ತದ ಕೆಳಸೇತುವೆಯಲ್ಲಿ ಫ್ಲೈಓವರ್ ನಿರ್ಮಾಣ.
4. ಸದಾಶಿವನಗರ ಪೊಲೀಸ್ ಠಾಣೆ ವೃತ್ತದಲ್ಲಿ ಹೊಸ ಮೇಲ್ಸೇತುವೆ. ಈ ಫ್ಲೈಓವರ್ ನಿರ್ಮಾಣಕ್ಕೂ ಬಿಬಿಎಂಪಿ 40 ಕೋಟಿ ರೂ.ವೆಚ್ಚ ಮಾಡಲಿದೆ.
ಇವುಗಳಲ್ಲದೆ, ಯಲಹಂಕ ರೈತ ಸಂತೆಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಯೋಜನೆಗೆ ಬಿಬಿಎಂಪಿ ತನ್ನ ಕೊಡುಗೆಯನ್ನು ಠೇವಣಿ ಮಾಡುತ್ತಿದೆ.
ನಗರದಲ್ಲಿ ಮೇಲ್ಸೇತುವೆಗಳ ನಿರ್ಮಾಣದಿಂದ ಮರಗಳನ್ನು ಕಡಿತ ಮಾಡಲಾಗುತ್ತಿದ್ದು, ಪರಿಸರ ನಾಶಕ್ಕೂ ಕಾರಣವಾಗಿದೆ ಎಂಬುದು ಪರಿಸರ ಕಾರ್ಯಕರ್ತರ ಆರೋಪವಾಗಿದೆ. ಪರಿಸರ ಇದೇ ವಿಚಾರ ರಾಜ್ಯ ಸರ್ಕಾರ ಮತ್ತು ಪರಿಸರ ಕಾರ್ಯಕರ್ತರ ನಡುವೆ ವಾಗ್ವಾದಕ್ಕೂ ವೇದಿಕೆ ಸೃಷ್ಟಿಸುತ್ತಿದೆ.
ಇತ್ತೀಚೆಗೆ ಸ್ಯಾಂಕಿ ಟ್ಯಾಂಕ್ ಬಂಡ್ ರಸ್ತೆ ಮತ್ತು ಬೆಂಗಳೂರಿನ ಟಿ ಚೌಡಯ್ಯ ರಸ್ತೆಯಿಂದ 18 ನೇ ಕ್ರಾಸ್ವರೆಗಿನ ಮೇಲ್ಸೇತುವೆಯ ಅಗಲೀಕರಣಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಈ ಯೋಜನೆಯ ಭಾಗವಾಗಿ 40 ಕ್ಕೂ ಹೆಚ್ಚು ದೊಡ್ಡ ಮರಗಳನ್ನು ಕತ್ತರಿಸುವ ಸಾಧ್ಯತೆಯಿದೆ. ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.