ಇನ್ಮುಂದೆ ಶೀಘ್ರದಲ್ಲೇ ಸಿಗಲಿದೆ ಬಿಬಿಎಂಪಿ ಇ-ಖಾತಾ ತಿದ್ದುಪಡಿಗೆ ಪರಿಹಾರ; ಬಾಕಿ ಅರ್ಜಿಗಳ ತೆರವಿಗೆ FIFO ವ್ಯವಸ್ಥೆ ಜಾರಿ!
ಕನ್ನಡ ಸುದ್ದಿ  /  ಕರ್ನಾಟಕ  /  ಇನ್ಮುಂದೆ ಶೀಘ್ರದಲ್ಲೇ ಸಿಗಲಿದೆ ಬಿಬಿಎಂಪಿ ಇ-ಖಾತಾ ತಿದ್ದುಪಡಿಗೆ ಪರಿಹಾರ; ಬಾಕಿ ಅರ್ಜಿಗಳ ತೆರವಿಗೆ Fifo ವ್ಯವಸ್ಥೆ ಜಾರಿ!

ಇನ್ಮುಂದೆ ಶೀಘ್ರದಲ್ಲೇ ಸಿಗಲಿದೆ ಬಿಬಿಎಂಪಿ ಇ-ಖಾತಾ ತಿದ್ದುಪಡಿಗೆ ಪರಿಹಾರ; ಬಾಕಿ ಅರ್ಜಿಗಳ ತೆರವಿಗೆ FIFO ವ್ಯವಸ್ಥೆ ಜಾರಿ!

ಬಾಕಿ ಉಳಿದಿರುವ ಇ-ಖಾತಾ ತಿದ್ದುಪಡಿ ಅರ್ಜಿಗಳನ್ನು ತೆರವುಗೊಳಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಫ್​ಐಎಫ್​ಒ-ಮೊದಲು ಒಳಗೆ, ಮೊದಲು ಹೊರಗೆ ಯೋಜನೆ ಜಾರಿಗೆ ಸಜ್ಜಾಗಿದೆ.

ಇನ್ಮುಂದೆ ಶೀಘ್ರದಲ್ಲೇ ಸಿಗಲಿದೆ ಬಿಬಿಎಂಪಿ ಇ-ಖಾತಾ ತಿದ್ದುಪಡಿಗೆ ಪರಿಹಾರ; ಬಾಕಿ ಅರ್ಜಿಗಳ ತೆರವಿಗೆ FIFO ವ್ಯವಸ್ಥೆ ಜಾರಿ!
ಇನ್ಮುಂದೆ ಶೀಘ್ರದಲ್ಲೇ ಸಿಗಲಿದೆ ಬಿಬಿಎಂಪಿ ಇ-ಖಾತಾ ತಿದ್ದುಪಡಿಗೆ ಪರಿಹಾರ; ಬಾಕಿ ಅರ್ಜಿಗಳ ತೆರವಿಗೆ FIFO ವ್ಯವಸ್ಥೆ ಜಾರಿ!

ಬೆಂಗಳೂರು: ಇ-ಖಾತಾ ತಿದ್ದುಪಡಿಗೆ ಸಂಬಂಧಿಸಿ ತಿಂಗಳುಗಟ್ಟಲೇ ಕಾಯುತ್ತಿರುವ ಸಾರ್ವಜನಿಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಶುಭ ಸುದ್ದಿ ನೀಡಿದೆ. ಬಾಕಿ ಉಳಿದಿರುವ ಇ-ಖಾತಾ ತಿದ್ದುಪಡಿ ಅರ್ಜಿಗಳನ್ನು ತೆರವುಗೊಳಿಸಲು ಬಿಬಿಎಂಪಿ ಎಫ್​ಐಎಫ್​ಒ - ಮೊದಲು ಒಳಗೆ, ಮೊದಲು ಹೊರಗೆ (First In, First Out) ಎಂಬ ವ್ಯವಸ್ಥೆ ಜಾರಿಗೆ ಚಿಂತನೆ ನಡೆಸಿದೆ. ಬಿಬಿಎಂಪಿಗೆ ಪ್ರತಿದಿನ ಸುಮಾರು 3,000 ಆಸ್ತಿ ಮಾಲೀಕರು ಇ-ಖಾತಾಗೆ ಅರ್ಜಿ ಸಲ್ಲಿಸುತ್ತಿದ್ದು, ಈ ವ್ಯವಸ್ಥೆಯ ಮೂಲಕ ಶೇ 90ರಷ್ಟು ಖಾತೆಗಳಿಗೆ 24 ಗಂಟೆಗಳಲ್ಲಿ ಪರಿಹಾರ ಒದಗಿಸಬಹುದಾಗಿದೆ.

ಇ-ಖಾತಾ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಕಚೇರಿಗೆ ಅಲೆದಾಡಿದರೂ ಪರಿಹಾರ ಮಾತ್ರ ಸಿಗುತ್ತಿಲ್ಲ. ಸಬೂಬು ಹೇಳುತ್ತಿದ್ದಾರೆಯೇ ವಿನಃ ಅಧಿಕಾರಿಗಳು ಪರಿಹಾರ ಒದಗಿಸುವ ಗೋಜಿಗೆ ಹೋಗುತ್ತಿಲ್ಲ ಎನ್ನುವುದು ಸಾರ್ವಜನಿಕರ ದೂರು. ತಿದ್ದುಪಡಿಗೆ ಸಂಬಂಧಿಸಿ ದೂರುಗಳು ಹೆಚ್ಚಾದ ಬೆನ್ನಲ್ಲೇ ಇದನ್ನು ಪರಿಹರಿಸಲು, ಬಿಬಿಎಂಪಿ ಅಧಿಕಾರಿಗಳು ಆಂತರಿಕವಾಗಿ 'ಮೊದಲು ಒಳಗೆ, ಮೊದಲು ಹೊರಗೆ' (FIFO) ಎಂಬ ವ್ಯವಸ್ಥೆ ಜಾರಿಗೆ ತರಲು ಯೋಜಿಸುತ್ತಿದ್ದಾರೆ. ಈ ಪದ್ಧತಿಯ ಉದ್ದೇಶ 24 ಗಂಟೆಗಳ ಒಳಗೆ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿದೆ. ಆದರೆ ಈ ವ್ಯವಸ್ಥೆ ಹೇಗೆ ಕೆಲಸ ಮಾಡಲಿದೆ ಎನ್ನುವುದರ ಬಗ್ಗೆ ಮಾಹಿತಿ ಬಹಿರಂಗಗೊಂಡಿಲ್ಲ.

ಸಾರ್ವಜನಿಕರ ದೂರುಗಳ ಸರಮಾಲೆ

ಇ-ಖಾತಾ ತಿದ್ದುಪಡಿಗೆ ಸಂಬಂಧಿಸಿ ದೂರುಗಳ ಸಂಖ್ಯೆ ಹೆಚ್ಚಾಗಿದೆ. ಹೀಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೊಡಿಗೇಹಳ್ಳಿ (ವಾರ್ಡ್ 44) ನಿವಾಸಿ ಗೋವಿಂದ್ ರಾಜ್ ಎಂಬವರು ಫೆಬ್ರವರಿ 7 ರಂದು ತಮ್ಮ ಚಿಕ್ಕಪ್ಪ ಆರ್ ಬಾಲಕೃಷ್ಣ ಪರವಾಗಿ ಇ-ಖಾತಾ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ತಿದ್ದುಪಡಿ ಮಾಡದೆ ತಿಂಗಳುಗಟ್ಟಲೇ ಅಲೆದಾಡಿಸಿದ್ದರು. ವಿಳಂಬದ ಬಗ್ಗೆ ವಿಚಾರಿಸಲು ಗೋವಿಂದ್ ರಾಜ್ ಬಿಬಿಎಂಪಿ ಕಚೇರಿಗೆ ಭೇಟಿ ಕೊಟ್ಟಾಗ, ಪಾಲಿಕೆ ದಾಖಲೆಗಳಲ್ಲಿನ ಆಸ್ತಿ ಸಂಖ್ಯೆ ಮತ್ತು ಬಿಡಿಎ ಹಂಚಿಕೆ ಮಾಡಿದ ಸೈಟ್ ಸಂಖ್ಯೆಗೆ ಹೊಂದಿಕೆಯಾಗುವುದಿಲ್ಲ ಎಂದು ಕೇಸ್ ವರ್ಕರ್​ಗೆ ತಿಳಿಸಿರುವುದಾಗಿ ವರದಿಯಾಗಿದೆ.

35 ಸಾವಿರ ಲಂಚಕ್ಕೆ ಬೇಡಿಕೆ

ಇದರಿಂದ ಅಚ್ಚರಿಗೊಂಡ ರಾಜ್, ಪಕ್ಕದ ನಿವೇಶನಗಳ ಮಾರಾಟ ಪತ್ರ ಮತ್ತು ಆಸ್ತಿ ಸಂಖ್ಯೆಗಳೊಂದಿಗೆ ಸಾಕ್ಷಿ ಸಮೇತ ಕೊಟ್ಟಿದ್ದಾರೆ. ಆಗ 2016ರಲ್ಲಿ ಖಾತಾ ನೀಡುವಾಗ ಬಿಬಿಎಂಪಿಯಿಂದ ತಪ್ಪು ನಡೆದಿದೆ ಎಂದು ಸಹಾಯಕ ಕಂದಾಯ ಅಧಿಕಾರಿ (ARO) ಒಪ್ಪಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಬಿಡಿಎಯಿಂದ ನಿವೇಶನ ದೃಢೀಕರಣ ಪತ್ರ ಪಡೆಯಲು ರಾಜ್‌ಗೆ ನಿರ್ದೇಶವನ್ನೂ ಕೊಟ್ಟಿದ್ದರು. ಆದರೆ ಆಸ್ತಿ ಸಂಖ್ಯೆಯನ್ನು ಸರಿಪಡಿಸಲು ಕೇಸ್ ವರ್ಕರ್ 35,000 ರೂ. ಲಂಚ ಕೇಳಿದ್ದಾರೆ ಎಂದು ರಾಜ್ ಆರೋಪಿಸಿದ್ದಾರೆ. ಮಾರಾಟ ಪತ್ರ ಒದಗಿಸಿದರೂ ಬಿಬಿಎಂಪಿ ವಲಯ ಕಚೇರಿಯಿಂದ ಬೆಂಬಲದ ಕೊರತೆ ಉಲ್ಲೇಖಿಸಿ ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.

ಅರ್ಜಿ ತಿರಸ್ಕಾರ

ಕರಡು ಖಾತಾ ಅಥವಾ ಅಂತಿಮ ಇ-ಖಾತಾದಲ್ಲಿ ತಿದ್ದುಪಡಿ ಬಯಸುವ ಹಲವಾರು ಆಸ್ತಿ ಮಾಲೀಕರು ಇದೇ ರೀತಿಯ ಅಡೆತಡೆ ಎದುರಿಸುತ್ತಿದ್ದಾರೆ. ಹೊಯ್ಸಳನಗರದ ನಿವಾಸಿ ವಿ ಸುಬ್ರಮಣಿ ಅವರು ಇ-ಖಾತಾಗೆ ಅರ್ಜಿ ಸಲ್ಲಿಸುವಾಗ ತಮ್ಮ ಆಸ್ತಿ ಗುರುತಿನ ಸಂಖ್ಯೆಯ ಕೊನೆಯ 2 ಅಂಕೆಗಳಲ್ಲಿ ಹೊಂದಾಣಿಕೆಯಾಗದಿರುವುದು ಕಂಡುಬಂದಿದೆ. ಮ್ಯುಟೇಶನ್ ರಿಜಿಸ್ಟರ್‌ನಲ್ಲಿ ಅವರ ಹೆಸರಿನಲ್ಲಿ ಆಸ್ತಿ ಸ್ಪಷ್ಟವಾಗಿ ತೋರಿಸುತ್ತಿದ್ದರೂ, ಬಿಬಿಎಂಪಿ ಈ ಅರ್ಜಿ ತಿರಸ್ಕರಿಸಿದೆ ಎಂದು ಅವರು ಹೇಳಿದ್ದಾರೆ.

ತಿಂಗಳ ಮೇಲಾದರೂ ಬಗೆಹರಿದಿಲ್ಲ ಸಮಸ್ಯೆ

ಕೆಲವು ನಿವಾಸಿಗಳಿಗೆ, ಇ-ಖಾತಾ ಪಡೆದ ನಂತರವೂ ಸಮಸ್ಯೆಗಳು ಉದ್ಭವಿಸಿವೆ. ತುಮಕೂರು ರಸ್ತೆಯ ಶೋಭಾ ಎಂಬವರು ನಾಗಸಂದ್ರ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಇವರು ಬಿಬಿಎಂಪಿ ಮೇಳದ ಸಂದರ್ಭದಲ್ಲಿ ಇ-ಖಾತಾಗೆ ಅರ್ಜಿ ಸಲ್ಲಿಸಿದ್ದರು. ಅಂತಿಮ ಇ-ಖಾತಾದಲ್ಲಿನ ಅಳತೆಗಳು, ಹಸ್ತಚಾಲಿತ ಖಾತಾ ಮತ್ತು ಮಾರಾಟ ಪತ್ರದಲ್ಲಿನ ಅಳತೆಗಳ ನಡುವಿನ ವ್ಯತ್ಯಾಸ ಗಮನಿಸಿ ಮಾರ್ಚ್​​ ಮೊದಲ ವಾರದಲ್ಲಿ ತಿದ್ದುಪಡಿಗೆ ಮನವಿ ಸಲ್ಲಿಸಿದ್ದರು. ಆದರೆ ತಿಂಗಳ ಮೇಲಾದರೂ ಆ ಸಮಸ್ಯೆ ಇನ್ನೂ ಹಾಗೆಯೇ ಉಳಿದಿದೆ.

ಹೊಸ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತಿದೆ: ಮೌದ್ಗಿಲ್

ಬಿಬಿಎಂಪಿಯ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಮಾತನಾಡಿ, ಹೊಸ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವ ಮೊದಲು ಕಂದಾಯ ಅಧಿಕಾರಿಗಳು ಬಾಕಿ ಇರುವ ಅರ್ಜಿಗಳನ್ನು ತೆರವುಗೊಳಿಸಲು ಎಫ್​​ಐಎಫ್​ಒ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಮಾಡಲಾಗುತ್ತಿದೆ. ಹೊಸ ವ್ಯವಸ್ಥೆಯನ್ನು ಪ್ರಸ್ತುತ ಪರೀಕ್ಷಿಸಲಾಗುತ್ತಿದ್ದು, ಒಂದು ವಾರದೊಳಗೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.