ಬೀಚ್ ದುರಂತ: ಇಬ್ಬರು ಹರೆಯದ ಹುಡುಗರು ಸಮುದ್ರಪಾಲು, ಸುರತ್ಕಲ್ನಲ್ಲಿ ಮದುವೆಗೆಂದು ಬಂದಿದ್ದ ಮುಂಬೈನ ಕುಟುಂಬದ ಸದಸ್ಯರಿವರು
ಬೀಚ್ ದುರಂತ: ಸುರತ್ಕಲ್ ಸಮೀಪ ಮದುವೆಗೆ ಬಂದ ಮುಂಬಯಿ ಕುಟುಂಬದ ಇಬ್ಬರು ಹರೆಯದ ಬಾಲಕರು ಎನ್ಐಟಿಕೆ ಬೀಚ್ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಮುದ್ರ ಪಾಲಾದ ಒಬ್ಬ ಬಾಲಕನಿಗಾಗಿ ಶೋಧ ಮುಂದುವರಿದಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು: ಮುಂಬೈನಿಂದ ಮದುವೆಗೆ ಬಂದಿದ್ದ 10 ಮಂದಿಯ ಕುಟುಂಬ ಮಂಗಳವಾರ ಮಂಗಳೂರು ಹೊರವಲಯದ ಸುರತ್ಕಲ್ ಬೀಚಿನಲ್ಲಿ ನೀರಾಟಕ್ಕಿಳಿದಿದ್ದು, ಇವರ ಪೈಕಿ ಇಬ್ಬರು ಹರೆಯದ ಹುಡುಗರು ಸಮುದ್ರಪಾಲಾಗಿದ್ದಾರೆ. ಸುರತ್ಕಲ್ನಲ್ಲಿ ಮದುವೆ ಇದ್ದ ಕಾರಣ ಮುಂಬೈನಿಂದ ಹತ್ತು ಮಂದಿಯ ಕುಟುಂಬ ಆಗಮಿಸಿತ್ತು. ಸಂಜೆ ವೇಳೆ ಎನ್ಐಟಿಕೆ ಬಳಿಯ ಬೀಚ್ ಗೆ ತೆರಳಿದೆ. ಈ ಸಂದರ್ಭ ದುರಂತ ಸಂಭವಿಸಿದೆ.
ಇಬ್ಬರು ಹರೆಯದ ಹುಡುಗರು ಸಮುದ್ರಪಾಲು
ಈ ಕುರಿತು ಸುರತ್ಕಲ್ ಪೊಲೀಸರು ನೀಡಿದ ಮಾಹಿತಿ ಹೀಗಿದೆ. ಏ.15ರಂದು ಸಂಜೆ 5.30ಕ್ಕೆ ಮುಂಬೈನ ವಿವೇಕ್ ಎಂಬವರ ಪುತ್ರ ದ್ವಿತೀಯ ಪಿಯುಸಿ ಮುಗಿಸಿದ್ದ ಧ್ಯಾನ್ (18) ಮತ್ತು ಮುಂಬೈನ ಉಮೇಶ್ ಕುಲಾಲ್ ಅವರ ಪುತ್ರ ಎಸ್.ಎಸ್.ಎಲ್.ಸಿ. ಮುಗಿಸಿದ ಬಾಲಕ ಹನೀಶ್ ಕುಲಾಲ್ (15) ಸಮುದ್ರ ಪಾಲಾಗಿ ಮೃತಪಟ್ಟವರು.
ಸುರತ್ಕಲ್ ಸಮೀಪದ ಸೂರಿಂಜೆ ಎಂಬಲ್ಲಿ ನಡೆದ ಮದುವೆಗೆ ಬಂದಿದ್ದು, ಮಂಗಳೂರು ಹೊರವಲಯದ ಸುರತ್ಕಲ್ ತೆರಳಿದವರು. ಹತ್ತು ಮಂದಿ ಕುಟುಂಬದ ಸದಸ್ಯರೊಂದಿಗೆ ಸುರತ್ಕಲ್ ಹೊರವಲಯದ ಎನ್ಎಟಿಕೆ ಬೀಚ್ ನೋಡಲು ಬಂದಿದ್ದರು. ಧ್ಯಾನ್ ಮತ್ತು ಹನೀಶ್ ಕುಲಾಲ್ ಎಂಬವರು ಈ ಸಂದರ್ಭ ನೀರಿನ ಆಳ ಅರಿಯದೆ ಮುಂದಕ್ಕೆ ಹೋಗಿ ನೀರಲ್ಲಿ ಮುಳುಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಲೈಫ್ ಗಾರ್ಡ್ ಪ್ರದೀಪ್ ಆಚಾರ್ಯ ಎಂಬುವರು ಧ್ಯಾನ್ ನನ್ನು ದಡಕ್ಕೆ ತಂದು ಸುರತ್ಕಲ್ ನ ಪದ್ಮಾವತಿ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ಹನೀಶ್ ನು ಸಮುದ್ರದ ನೀರಿನಲ್ಲಿ ಮುಳುಗಿದ್ದು, ಆತನ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹನೀಶ್ ಕುಲಾಲ್ಗಾಗಿ ಶೋಧ ಮುಂದುವರಿಕೆ
ನೀರಿನಲ್ಲಿ ಆಟವಾಡುತ್ತಿದ್ದಾಗಲೇ ಧ್ಯಾನ್ ಮತ್ತು ಹನಿ ನೀರಿನ ಅಲೆಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ನೆಲೆಸಿರುವ ಬೈಂದೂರು ಮೂಲದ ವಿವೇಕಾನಂದ ಬಂಜನ್ ಎಂಬವರ ಪುತ್ರ ಧ್ಯಾನ್. ಹಾಗೂ ಮುಂಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ಉಮೇಶ್ ಕುಲಾಲ್ ಅವರ ಪುತ್ರ ಹನೀಶ್ ಕುಲಾಲ್ ಎಂದು ಸುರತ್ಕಲ್ ಪೊಲೀಸರು ತಿಳಿಸಿದ್ದಾರೆ ಈತನ ಪತ್ತೆಗಾಗಿ ಲೈಫ್ ಗಾರ್ಡ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದಾರೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
(ವರದಿ- ಹರೀಶ್ ಮಾಂಬಾಡಿ, ಮಂಗಳೂರು)
