ಕನ್ನಡ ಸುದ್ದಿ  /  Karnataka  /  Belagavi Mayor Election Result: Bjp Shobha Somanache Mayor And Reshma Patil Deputy Mayor

Belagavi Mayor Election: ಬೆಳಗಾವಿಗೆ ಬಿಜೆಪಿಯಿಂದ ಹೊಸ ಮೇಯರ್‌, ಉಪಮೇಯರ್‌ ಆಯ್ಕೆ, ಇಬ್ರೂ ಮರಾಠಿ ಭಾಷಿಕರು!

Belagavi Mayor Election: ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಅವಿರೋಧವಾಗಿ ಶೋಭಾ ಪಾಯಪ್ಪಾ ಸೋಮನಾಚೆ ಆಯ್ಕೆಯಾಗಿದ್ದಾರೆ. ಉಪಮೇಯರ್‌ಗೆ ನಡೆದ ಚುನಾವಣೆಯಲ್ಲಿ ರೇಷ್ಮಾ ಪ್ರವೀಣ್ ಪಾಟೀಲ್‌ ಗೆದ್ದಿದ್ದಾರೆ.

Belagavi Mayor Election: ಬೆಳಗಾವಿಗೆ ಬಿಜೆಪಿಯಿಂದ ಹೊಸ ಮೇಯರ್‌, ಉಪಮೇಯರ್‌ ಆಯ್ಕೆ
Belagavi Mayor Election: ಬೆಳಗಾವಿಗೆ ಬಿಜೆಪಿಯಿಂದ ಹೊಸ ಮೇಯರ್‌, ಉಪಮೇಯರ್‌ ಆಯ್ಕೆ

ಬೆಳಗಾವಿ: ಕರ್ನಾಟಕದ ಅತಿದೊಡ್ಡ ಜಿಲ್ಲೆ ಖ್ಯಾತಿಯ ಬೆಳಗಾವಿಯಲ್ಲಿ ಮರಾಠಿ ಭಾಷಿಕರಿಗೆ ಮೇಯರ್‌ ಮತ್ತು ಉಪಮೇಯರ್‌ ಪಟ್ಟ ಒಲಿದಿದೆ. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಅವಿರೋಧವಾಗಿ ಶೋಭಾ ಪಾಯಪ್ಪಾ ಸೋಮನಾಚೆ ಆಯ್ಕೆಯಾಗಿದ್ದಾರೆ. ಉಪಮೇಯರ್‌ಗೆ ನಡೆದ ಚುನಾವಣೆಯಲ್ಲಿ ರೇಷ್ಮಾ ಪ್ರವೀಣ್ ಗೆದ್ದಿದ್ದಾರೆ.

"ಬೆಳಗಾವಿ ಮಹಾನಗರಪಾಲಿಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅವಿರೋಧವಾಗಿ ಬಿಜೆಪಿಯ ಸದಸ್ಯೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ. ನೂತನ ಮಹಾಪೌರರಾದ ಶ್ರೀಮತಿ ಶೋಭಾ ಪಾಯಪ್ಪಾ ಸೋಮನಾಚೆ ಮತ್ತು ಉಪಮಹಾಪೌರರಾದ ಶ್ರೀಮತಿ ರೇಷ್ಮಾ ಪ್ರವೀಣ್ ಪಾಟೀಲ್ ಅವರಿಗೆ ಅಭಿನಂದನೆಗಳು" ಎಂದು ಕರ್ನಾಟಕ ಬಿಜೆಪಿ ಟ್ವೀಟ್‌ ಮಾಡಿದೆ.

ಉಪಮೇಯರ್‌ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ರೇಷ್ಮಾ ಪಾಟೀಲ್‌ ಅವರ ಪರ 42 ಮತಗಳು ಚಲಾವಣೆಯಾಗಿದ್ದವು. ಎದುರಾಳಿ ಎಂಇಎಸ್‌ ಸದಸ್ಯೆ ವೈಶಾಲಿ ಭಾತಕಾಂಡೆ ಕೇವಲ 4 ಮತ ಪಡೆದರು. ಶೋಭಾ ಸೋಮನಾಚೆ ಅವರು 57ನೇ ವಾರ್ಡ್ ನ ಬಿಜೆಪಿ ಸದಸ್ಯೆಯಾಗಿದ್ದಾರೆ. ರೇಷ್ಮಾ ಪ್ರವೀಣ್ ಅವರು 33ನೇ ವಾರ್ಡ್​ನ ಬಿಜೆಪಿ ಸದಸ್ಯೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕನ್ನಡ ಭಾಷಿಕ ಸದಸ್ಯರಿಗೆ ಮೇಯರ್ ಸ್ಥಾನ ನೀಡಲು ಕನ್ನಡಪರ ಸಂಘಟನೆಗಳ ಆಗ್ರಹಿಸಿದ್ದವು. ಆದರೆ, ಲಿಂಗಾಯತ ಸಮುದಾಯಕ್ಕೆ ಸೇರಿದ ಕನ್ನಡ ಭಾಷಿಕ ಸದಸ್ಯರಿಗೆ ಮೇಯರ್‌ ಸ್ಥಾನ ದೊರಕಿಲ್ಲ.

ಮೇಯರ್‌, ಉಪಮೇಯರ್‌ ಚುನಾವಣೆಗೆ ಮುನ್ನವೇ ಮಹಾನಗರ ಪಾಲಿಕೆಯ 36ನೇ ವಾರ್ಡ್ ಸದಸ್ಯ ರಾಜಶೇಖರ ಡೋಣಿ ಅವರನ್ನು ಸಭಾನಾಯಕರನ್ನಾಗಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು.

ಈ ಹಿಂದೆ ಚುನಾವಣೆಗಳಲ್ಲಿ ಭಾಷೆ ಪ್ರಮುಖ ವಿಷಯವಾಗುತ್ತಿತ್ತು. ಭಾಷೆ ಆಧರಿತವಾಗಿ ನಡೆದ ಚುನಾವಣೆಗಳಲ್ಲಿ ಎಂಇಎಸ್ ಗೆಲುವು ಪಡೆಯುತ್ತಿತ್ತು. ಆದರೆ, ಈ ಬಾರಿ ಪಕ್ಷದ ಚಿಹ್ನೆ ಆಧಾರದಲ್ಲಿ ಚುನಾವಣೆ ನಡೆದಿತ್ತು.

ಒಟ್ಟಾರೆ ಬೆಳಗಾವಿಯಲ್ಲಿ ಕನ್ನಡ ಭಾಷಿಕರಿಗೆ ಮೇಯರ್‌, ಉಪಮೇಯರ್‌ ಸ್ಥಾನ ತಪ್ಪಿದೆ. ಸೆಪ್ಟೆಂಬರ್ 3ರಂದು ನಡೆದ ಚುನಾವಣೆಯಲ್ಲಿ 58 ವಾರ್ಡ್‌ಗಳ ಪೈಕಿ 35 ವಾರ್ಡ್‌ಗಳಲ್ಲಿ ಜಯ ಸಾಧಿಸುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆದಿತ್ತು.

2021ರ ಸೆಪ್ಟೆಂಬರ್ 6ರಂದು ಫಲಿತಾಂಶ ಬಂದರೂ ಕಳೆದ 17 ತಿಂಗಳಿಂದ ಮೇಯರ್, ಉಪಮೇಯರ್ ಚುನಾವಣೆ ನಡೆದಿರಲಿಲ್ಲ. ಇದೀಗ ಮೇಯರ್‌ ಸ್ಥಾನಕ್ಕೆ ಅವಿರೋಧವಾಗಿ ಶೋಭಾ ಪಾಯಪ್ಪಾ ಸೋಮನಾಚೆ ಆಯ್ಕೆಯಾಗಿದ್ದಾರೆ.

ಮರಾಠಾ ಭಾಷಿಕ ಸದಸ್ಯರಿಗೆ ಮೇಯರ್, ಉಪಮೇಯರ್ ಸ್ಥಾನ ನೀಡಿದ್ದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಪಾಲಿಕೆಗೆ ನುಗ್ಗಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ವಾಜೀದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

IPL_Entry_Point