Belagavi News: ಹಲ್ಲೆ, ಕಿರುಕುಳ ಆರೋಪ, ಐಪಿಎಸ್ ಅಧಿಕಾರಿ ಸೇರಿ 14ಜನರ ವಿರುದ್ಧ ಎಫ್‌ಐಆರ್‌
ಕನ್ನಡ ಸುದ್ದಿ  /  ಕರ್ನಾಟಕ  /  Belagavi News: ಹಲ್ಲೆ, ಕಿರುಕುಳ ಆರೋಪ, ಐಪಿಎಸ್ ಅಧಿಕಾರಿ ಸೇರಿ 14ಜನರ ವಿರುದ್ಧ ಎಫ್‌ಐಆರ್‌

Belagavi News: ಹಲ್ಲೆ, ಕಿರುಕುಳ ಆರೋಪ, ಐಪಿಎಸ್ ಅಧಿಕಾರಿ ಸೇರಿ 14ಜನರ ವಿರುದ್ಧ ಎಫ್‌ಐಆರ್‌

IPS Officer Booked ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಐಗಳಿ ಗ್ರಾಮದಲ್ಲಿ ಕಿರುಕುಳ ನೀಡಿದ ಆರೋಪದ ಮೇರೆಗೆ ಐಪಿಎಸ್‌ ಅಧಿಕಾರಿ ರವೀಂದ್ರ ಗಡಾದಿ ವಿರುದ್ದಪ್ರಕರಣ ದಾಖಲಾಗಿದೆ.

ಐಪಿಎಸ್‌ ಅಧಿಕಾರಿ ಗಡಾದಿ
ಐಪಿಎಸ್‌ ಅಧಿಕಾರಿ ಗಡಾದಿ

ಬೆಳಗಾವಿ: ಕರ್ನಾಟಕದ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಇತರ ಸಂಬಂಧಿಕರೊಂದಿಗೆ ಸೇರಿ ತಮ್ಮ ಸ್ವಂತ ಊರಿನಲ್ಲಿ ಮಹಿಳೆ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ‌ ನಡೆಸಿದ ಆರೋಪದ ಮೇಲೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಗಳಿ ಗ್ರಾಮದ ನಕುಶಾ ಸೈದಪ್ಪ ಗಡಾದೆ ಎಂಬುವವರು ಐಗಳಿ ಠಾಣೆಗೆ ತಮ್ಮ ಮೇಲೆ ಕಿರುಕುಳ ಹಾಗೂ ಹಲ್ಲೆ ನಡೆದಿರುವ ಬಗ್ಗೆ ದೂರು ಸಲ್ಲಿಸಿದ್ದು ಐಪಿಸಿ 307 ಸೇರಿ ಇತರ ಕಲಂಗಳ ಅಡಿ 14ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಐಗಳಿ ಗ್ರಾಮದ ಸಾರ್ವಜನಿಕ ಕುಡಿಯುವ ಬಾವಿ ನೀರಿನ ಬಳಕೆ, ಸ್ಥಳೀಯ ಗ್ರಾ.ಪಂ‌. ಅನುಮತಿ ಮೇರೆಗೆ ಹೊಸ ಮನೆ ಕಟ್ಟುವ ಕೆಲಸಕ್ಕೆ ಬಳಕೆ ಮಾಡುವಾಗ, ಆರೋಪಿತರು ಕ್ಯಾತೆ ತೆಗೆದು ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ರವೀಂದ್ರ ಗಡಾದೆ ಎಂಬುವವರು ಪೊಲೀಸ್ ಇಲಾಖೆಯಲ್ಲಿದ್ದು, ಈ ಪ್ರಕರಣದಲ್ಲಿ ನೊಂದ ಕುಟುಂಬದೊಂದಿಗೆ ಬಹಳ ದಿನಗಳಿಂದ ಅಸಮಾಧಾನ ಹೊಂದಿದ್ದಾರೆ. ಅಕ್ರಮವಾಗಿ ಗುಂಪು ಕಟ್ಟಿಕೊಂಡು ಅಶ್ಲೀಲ ಪದಗಳನ್ನು ಬಳಸಿ ಹಲ್ಲೆ ಮಾಡಿದ್ದಾರೆ ಎಂದು ಎಫ್ ಐಆರ್ ನಲ್ಲಿ ನಮೂದಾಗಿದೆ. ಘಟನೆ ಎಪ್ರೀಲ್ 12ಕ್ಕೇ ಮಧ್ಯಾಹ್ನ ನಡೆದಿದ್ದು, ಏ.20ಕ್ಕೆ ರವೀಂದ್ರ ಗಡಾದಿ ಅವರಯ ಸಹಿತ 14ಜನರ ಮೇಲೆ ಅಥಣಿ ತಾಲ್ಲೂಕಿನ ಐಗಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಪ್ರಕರಣ ದಾಖಲಿಸಿರುವ ಪಿಎಸ್‌ಐ ಸುಮಲತಾ ಅವರು ಎಫ್‌ಐಆರ್‌ ಪ್ರತಿಯನ್ನು ಅಥಣಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ನಮ್ಮ ದೂರದ ಸಂಬಂಧಿ ಆಗಿರುವ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಅವರು ನಮ್ಮ ವಿರುದ್ಧ ದ್ವೇಷ ಕಾರುತ್ತ ಬಂದಿದ್ದಾರೆ. ಗುಂಪು ಕಟ್ಟಿಕೊಂಡು ಅಶ್ಲೀಲ ಪದ ಬಳಸಿ ಸಹ ಹಲ್ಲೆ ಮಾಡಿದ್ದಾರೆ. ತತಕ್ಷಣ ಪೊಲೀಸರು ಅವರನ್ನು ಬಂಧಿಸಬೇಕು. ಅವರ ವಿರುದ್ದ ಸರಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಕುಶಾ ಮನವಿ ಮಾಡಿದ್ದಾರೆ.

ವೈಯಕ್ತಿಕ ಕಾರಣದಿಂದ ನಡೆದಿರುವ ಗಲಾಟೆ ವಿಚಾರದಲ್ಲಿ ದೂರು ನೀಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಬೆಳಗಾವಿ ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ರವೀಂದ್ರ ಕಾಶನಾಥ ಗಡಾದಿ ಅವರು ಕೆಎಸ್‌ಪಿಎಸ್‌ ಅಧಿಕಾರಿಯಾಗಿದ್ದವರು. ಆನಂತರ ಐಪಿಎಸ್‌ಗೆ ಹುದ್ದೆಗೆ ಬಡ್ತಿ ಪಡೆದಿದಾರೆ. ಬೆಳಗಾವಿಯಲ್ಲಿ ಡಿಸಿಪಿಯಾಗಿದ್ದ ಅವರು ಸದ್ಯ ಬೆಂಗಳೂರಿನಲ್ಲಿ ಗುಪ್ತಚರ ವಿಭಾಗದ ಎಸ್ಪಿಯಾಗಿದ್ದಾರೆ.