Belagavi News: ಬೆಳಗಾವಿಯಲ್ಲಿ ಸಂಚಲನ ಮೂಡಿಸಿದ್ದ ರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ
ಕನ್ನಡ ಸುದ್ದಿ  /  ಕರ್ನಾಟಕ  /  Belagavi News: ಬೆಳಗಾವಿಯಲ್ಲಿ ಸಂಚಲನ ಮೂಡಿಸಿದ್ದ ರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ

Belagavi News: ಬೆಳಗಾವಿಯಲ್ಲಿ ಸಂಚಲನ ಮೂಡಿಸಿದ್ದ ರೈತ ಹೋರಾಟಗಾರ್ತಿ ಜಯಶ್ರೀ ಗುರವನ್ನವರ ನಿಧನ

ಬೆಳಗಾವಿ ಭಾಗದ ಜತೆಗೆ ಉತ್ತರ ಕರ್ನಾಟಕದಲ್ಲೂ ರೈತ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಜಯಶ್ರೀ ಗುರವನ್ನವರ್‌ ನಿಧನರಾಗಿದ್ದಾರೆ.

ಬೆಳಗಾವಿಯ ರೈತ ಹೋರಾಟಗಾರ್ತಿ ಜಯಶ್ರೀ
ಬೆಳಗಾವಿಯ ರೈತ ಹೋರಾಟಗಾರ್ತಿ ಜಯಶ್ರೀ

ಬೆಳಗಾವಿ: ಸಣ್ಣ ವಯಸ್ಸಿನಲ್ಲಿಯೇ ರೈತಪರ ಹೋರಾಟಗಳ ಮೂಲಕ ಬೆಳಗಾವಿ ಜಿಲ್ಲೆ ಮಾತ್ರವಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿ ಸಂಚಲನ ಮೂಡಿಸಿದ್ದ ರೈತ ನಾಯಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಜಯಶ್ರೀ ಗುರವನ್ನವರ((40) ಬುಧವಾರ ಹಠಾತ್‌ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ಧಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಜಯಶ್ರೀ ಗುರವನ್ನವರ್‌ ಅವರಿಗೆ ಒಬ್ಬ ಮಗ ಇದ್ದಾನೆ.

ಐದು ವರ್ಷದ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಕಬ್ಬಿನ ಬಾಕಿ ಬಿಲ್ ಗಾಗಿ ಸುವರ್ಣ ಸೌಧಕ್ಕೆ ಕಬ್ಬು ತುಂಬಿದ ಲಾರಿ ತೆಗೆದುಕೊಂಡು ಹೋಗಿ ಹೋರಾಟ ಮಾಡಿದ್ದು ಗಮನ ಸೆಳೆದಿತ್ತು.

ರೈತರ ಸಮಸ್ಯೆಗಳು ಹಾಗೂ ಬೇಡಿಕೆಗಳ ಸರ್ಕಾರದ ಗಮನ ಸೆಳೆಯಲು ದೊಡ್ಡ ಮಟ್ಟದ ಹೋರಾಟ ರೂಪಿಸಿ ಗಮನ ಸೆಳೆದಿದ್ದರು ಜಯಶ್ರೀ. ಈ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ ಜಯಶ್ರೀ ಕುರಿತು ಹಗುರವಾಗಿ ಮಾತಾಡಿ ಟೀಕೆಗೆ ಒಳಗಾಗಿದ್ದರು. ಆನಂತರ ಕ್ಷಮೆ ಕೇಳಿದ್ದರು. ಈ ವೇಳೆ ಹೆಚ್ಚು ಪ್ರವರ್ಧಮಾನಕ್ಕೆ ಜಯಶ್ರೀ ಬಂದಿದ್ಚರು. ಇದಾದ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ರೈತ ಪರ ಹೋರಾಟಗಳ ಸಂಘಟನೆ ಮಾಡಿ ರೈತ ಹೋರಾಟಗಾರ್ತಿಯಾಗಿಯೇ ಗುರುತಿಸಿಕೊಂಡಿದ್ದರು ಜಯಶ್ರೀ.

ಕಬ್ಬಿನ ಬೆಲೆ, ಬೆಳೆಗಳಿಗೆ ಬೆಂಬಲ ಬೆಲೆ, ರೈತರ ಹೊಲಗಳಿಗೆ ರಸ್ತೆ, ನರೇಗಾ ಯೋಜನೆಯ ಸಮರ್ಪಕ ಅನುಷ್ಠಾನ, ಕಾರ್ಮಿಕರ ಬದುಕು ಭವನೆಗಳ ಬಗೆಗೆ ಜಯಶ್ರೀ ತೀವ್ರ ಹೋರಾಟ ನಡೆಸಿ ಗಮನ ಸೆಳೆದಿದ್ದರು‌. ನಡುವಯಸ್ಸಿನಲ್ಲಿ ಜಯಶ್ರೀ ಅವರ ಸಾವು ರೈತ ಹೋರಾಟಕ್ಕೆ ಕುಂದು ತಂದಿದೆ ಎನ್ನುವುದು ಅವರ ಒಡನಾಡಿಗಳ ಬೇಸರದ ನುಡಿ.

ಕೆಲ ದಿನಗಳಿಂದ ಅವರಿಗೆ ಹುಷಾರಿರಲಿಲ್ಲ. ಚಿಕಿತ್ಸೆ ಪಡೆದಿದ್ದರು. ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳಿನ ಸ್ಟ್ರೋಕ್‌ ನಿಂದ ಜಯಶ್ರೀ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಜೈಲಿಗೆ ಹೊಂದಿಕೊಂಡಂತೆ ಇರುವ ಸುಲಗ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner