ಕನ್ನಡ ಸುದ್ದಿ  /  Karnataka  /  Bellary News Kiccha Sudeep Road Show At Kudligi Campaign For Bjp Candidate Lokesh Nayak Karnataka Election News Mnk

Karnataka Election 2023: ಗಣಿನಾಡಿನಲ್ಲಿ ಕಿಚ್ಚ ರೋಡ್‌ ಶೋ; ಬಿಜೆಪಿ ಅಭ್ಯರ್ಥಿ ಲೋಕೇಶ್‌ ನಾಯಕ ಪರ ಸುದೀಪ್‌ ಪ್ರಚಾರ

Karnataka Election 2023: ಬಿಜೆಪಿ ಪರ ಪ್ರಚಾರ ಕಣಕ್ಕಿಳಿದಿರುವ ನಟ ಕಿಚ್ಚ ಸುದೀಪ್‌ ಇಂದು (ಏ. 27) ಬಳ್ಳಾರಿ, ಹಾವೇರಿ ಜಿಲ್ಲೆಯ ಹಲವೆಡೆಗಳಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

ಗಣಿನಾಡಿನಲ್ಲಿ ಕಿಚ್ಚ ರೋಡ್‌ ಶೋ; ಬಿಜೆಪಿ ಅಭ್ಯರ್ಥಿ ಲೋಕೇಶ್‌ ನಾಯಕ ಪರ ಸುದೀಪ್‌ ಪ್ರಚಾರ
ಗಣಿನಾಡಿನಲ್ಲಿ ಕಿಚ್ಚ ರೋಡ್‌ ಶೋ; ಬಿಜೆಪಿ ಅಭ್ಯರ್ಥಿ ಲೋಕೇಶ್‌ ನಾಯಕ ಪರ ಸುದೀಪ್‌ ಪ್ರಚಾರ

ಬಳ್ಳಾರಿ: ಚುನಾವಣೆ ಕಣ ರಂಗೇರುತ್ತಿದೆ. ಪ್ರಚಾರದ ಅಬ್ಬರದ ನಡುವೆ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮತಯಾಚನೆಗೆ ಇಳಿದಿದ್ದಾರೆ. ಸಿನಿಮಾ ಸ್ಟಾರ್‌ಗಳೂ ಕೂಡ ಅಭ್ಯರ್ಥಿಗಳ ಪರ ಮತಬೇಟೆಗೆ ಕ್ಷೇತ್ರ ಸುತ್ತುತ್ತಿದ್ದಾರೆ. ಅದೇ ರೀತಿ ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಸಹ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕ್ಯಾಂಪೇನ್‌ ಮಾಡುವುದಾಗಿ ಹೇಳಿದ್ದರು. ಮೊದಲಾರ್ಥ ಸಿಎಂ ತವರು ಕ್ಷೇತ್ರ ಶಿಗ್ಗಾಂವಿ- ಸವಣೂರಿನಲ್ಲಿ ನಾಮಪತ್ರ ಸಲ್ಲಿಸುವಾಗ ರೋಡ್‌ ಶೋದಲ್ಲಿ ಪ್ರಚಾರ ಕಹಳೆ ಮೊಳಗಿಸಿದ್ದರು. ಅದಾದ ಬಳಿಕ ಚಿತ್ರದುರ್ಗದಲ್ಲಿಯೂ ಮತಯಾಚನೆ ಮಾಡಿದ್ದರು. ಇದೀಗ ಗಣಿನಾಡು ಬಳ್ಳಾರಿಯತ್ತ ಮುಖ ಮಾಡಿದ್ದಾರೆ.

ಇಂದು (ಏ.27) ಬಳ್ಳಾರಿ ಜಿಲ್ಲೆಯ ಹಲವೆಡೆಗಳಲ್ಲಿ ಸುದೀಪ್‌ ಪ್ರಚಾರ ಮಾಡಲಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ್‌ ವಿ ನಾಯಕ್‌ ಅವರ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಕೊಟ್ಟೂರಿಒಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ, ಹೊಸಪೇಟೆ ರಸ್ತೆ, ರಾಮಲಿಂಗೇಶ್ವರ ದೇವಸ್ಥಾನ, ಸಂತೆ ಮೈದಾನದ ಕಡೆಯಿಂದ ಮದಕರಿ ವೃತ್ತದವರೆಗೂ ಸುದೀಪ್‌ ರೋಡ್‌ ಶೋ ನಡೆಸಲಿದ್ದಾರೆ. ಈ ವೇಳೆ ಜಿಲ್ಲೆ ಮತ್ತು ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಮುಖಂಡರು, ಮತ್ತು ಅಪಾರ ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಕೂಡ್ಲಿಗಿ ಪ್ರಚಾರ ಮುಗಿಯುತ್ತಿದ್ದಂತೆ, ನೇರವಾಗಿ ಹಾವೇರಿಗೆ ತೆರಳಲಿದ್ದಾರೆ. ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿಸಿ.ಪಾಟೀಲ್‌ ಪರವಾಗಿ ಪ್ರಚಾರ ಕಣಕ್ಕಿಳಿಯಲಿದ್ದಾರೆ. ಅದಾದ ಮೇಲೆ ಬ್ಯಾಡಗಿಯ ವಿರೂಪಾಕ್ಷಪ್ಪ, ರಾಣೆಬೆನ್ನೂರಿನ ಅರುಣ್‌ ಪೂಜಾರ, ಕುಂದಗೋಳದಲ್ಲಿ ಎಂ.ಆರ್‌ ಪಾಟೀಲ್‌ ಪರ ಸುದೀಪ್‌ ಕ್ಯಾಂಪೇನ್‌ ಮಾಡಲಿದ್ದಾರೆ. ಇನ್ನು ಬುಧವಾರ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ಸುದೀಪ್‌, ಬಿಜೆಪಿ ಅಭ್ಯರ್ಥಿ ತಿಪ್ಪೇಸ್ವಾಮಿ ಪರವಾಗಿ ಪ್ರಚಾರ ಮಾಡಿದ್ದರು.

ಈ ವೇಳೆ ಮಾತನಾಡಿದ ಸುದೀಪ್‌, ನಾನು ಕೇವಲ ಚಿತ್ರದುರ್ಗದ ಮೊಳಕಾಲ್ಮುರು ಕ್ಷೇತ್ರ ಮಾತ್ರವಲ್ಲ ಬಿಜೆಪಿಗಾಗಿ ಎಲ್ಲಿ ಬೇಕಾದರೂ ಹೋಗಿ ಪ್ರಚಾರ ನಡೆಸಲು ಸಿದ್ಧನಿದ್ದೇನೆ. ಈಗಾಗಲೇ ರಾಜ್ಯದ ಹಲವೆಡೆಗಳಲ್ಲಿ ಪ್ರಚಾರ ಮಾಡಿದ್ದೇನೆ. ಹೀಗೆ ಪ್ರಚಾರ ನಡೆಸುವುದರಲ್ಲಿಯೂ ನನ್ನದೂ ಸ್ವಾರ್ಥ ಇದೆ. ಈ ಮೂಲಕ ನನ್ನ ಅಭಿಮಾನಿಗಳನ್ನೂ ಭೇಟಿ ಮಾಡುವ ಸುಯೋಗ ಒದಗಿ ಬಂದಿದೆ" ಎಂದಿದ್ದರು.