- ಜಗಜೀವನ್ ರಾಮ್ ನಗರದ ಹಿಂದೂ ರುದ್ರಭೂಮಿಯಲ್ಲಿ ನಗರ ಪಾಲಿಕೆ ಸೌಧ ನಿರ್ಮಿಸಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದ್ದು, ಶೀಘ್ರವೇ ಕಟ್ಟಡವನ್ನು ತೆರವುಗೊಳಿಸಬೇಕು.
ಬೆಂಗಳೂರು: ಚಾಮರಾಜಪೇಟೆಯ ಜಗಜೀವನ್ ರಾಮ್ ನಗರದ ಹಿಂದೂ ರುದ್ರಭೂಮಿಯಲ್ಲಿ ನಗರ ಪಾಲಿಕೆ ಸೌಧ ನಿರ್ಮಿಸಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದ್ದು, ಶೀಘ್ರವೇ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದೆ.
ಟ್ರೆಂಡಿಂಗ್ ಸುದ್ದಿ
ಮಧ್ಯಮಗಳ ಜೊತೆ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, “ಕಾನೂನಿನ ಪ್ರಕಾರ ಹಕ್ಕನ್ನು ಪಡೆಯದೇ ಅಕ್ರಮವಾಗಿ ನಗರ ಪಾಲಿಕೆ ಸೌಧ ನಿರ್ಮಿಸಲಾಗಿದೆ. (ಆಸ್ತಿ ಗುರುತಿನ ಸಂಖ್ಯೆ ಪಿಐಡಿ 136-10034-115) ಕಾನೂನುಗಳನ್ನು ಗಾಳಿಗೆ ತೂರಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ. ಕೇವಲ ಚುನಾವಣೆ ದೃಷ್ಟಿಯಿಂದ ಬಿಜೆಪಿಯು ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆಯೇ ಹೊರತು ಹಿಂದೂಗಳ ನಂಬಿಕೆ ಬಗ್ಗೆ ಅದಕ್ಕೆ ಯಾವುದೇ ಕಾಳಜಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಹೇಳಿದ್ದಾರೆ.
“ರುದ್ರಭೂಮಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕಾದ ಬಿಬಿಎಂಪಿಯೇ ಅದನ್ನು ಒತ್ತುವರಿ ಮಾಡಿಕೊಂಡು ತನ್ನ ಕಚೇರಿ ನಿರ್ಮಿಸಿಕೊಂಡಿರುವುದು ಖಂಡನೀಯ. ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಕೂಡ ಈ ವಿಚಾರದಲ್ಲಿ ಬಿಜೆಪಿ ಜೊತೆ ಶಾಮೀಲಾಗಿದ್ದು, ರುದ್ರಭೂಮಿ ಕಬಳಿಕೆಗೆ ಸಹಕಾರ ನೀಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಹಿಂದೂಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ, ತಕ್ಷಣವೇ ಪಾಲಿಕೆ ಕಟ್ಟಡವನ್ನು ತೆರವುಗೊಳಿಸಿ, ಆ ಜಾಗವನ್ನು ಹಿಂದೂ ರುದ್ರಭೂಮಿಗೆ ಬಿಟ್ಟುಕೊಡಲಿ” ಎಂದು ಮೋಹನ್ ದಾಸರಿ ಆಗ್ರಹಿಸಿದ್ದಾರೆ.
ಬೆಂಗಳೂರಿನ ಜೆಜೆ ಆರ್ ನಗರ ಕನ್ನಡಿಗರ ಹಿಂದೂ ರುದ್ರಭೂಮಿ ಹಾಗೂ ತಮಿಳಿಗರ ಹಿಂದೂ ರುದ್ರಭೂಮಿಯಲ್ಲಿ 2011- 2018ರ ಅಂತ್ಯದವರೆಗೆ 5 ಸಾವಿರಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಕಾರ್ಯ ನಡೆದಿದ್ದು, ಈಗ ಅದರ ಮೇಲೆಯೇ ಪಾಲಿಕೆಯ ಸೌಧ ತಲೆ ಎತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ವಿಶ್ವ ಸನಾತನ ಪರಿಷತ್ತು ಆರೋಪಿಸಿತ್ತು.
"ರುದ್ರಭೂಮಿಗಳು ಆಟದ ಮೈದಾನದಂತೆ ಆಗಿದೆ. ಕನ್ನಡಿಗರ ಹಿಂದೂ ರುದ್ರಭೂಮಿಯಲ್ಲಿ ಕೇವಲ 50 ಸಮಾಧಿಗಳು ಮಾತ್ರ ಉಳಿದಿವೆ. ತಮಿಳಿಗರ ಹಿಂದೂ ರುದ್ರಭೂಮಿಯಲ್ಲಿ ಪಾಲಿಕೆ ಸೌಧ ತಲೆ ಎತ್ತಿದೆ. ಮುಂಭಾಗದಲ್ಲಿ ಕೇವಲ 6 ಸಮಾಧಿಗಳು ಮಾತ್ರ ಉಳಿದಿವೆʼʼ ಎಂದು ವಿಶ್ವ ಸನಾತನ ಪರಿಷತ್ತು ಅಧ್ಯಕ್ಷ ಎಸ್.ಭಾಸ್ಕರನ್ ಆರೋಪಿಸಿದ್ದರು.
ಈ ಶವಗಳ ಕಳುವು ಕುರಿತು 2021ರಲ್ಲಿಯೇ ಪೊಲೀಸ್ ಇಲಾಖೆಗೆ ವಿಶ್ವ ಸನಾತನ ಪರಿಷತ್ ನ ಅಧ್ಯಕ್ಷ ಎಸ್.ಭಾಸ್ಕರನ್ ದೂರು ನೀಡಿದ್ರು. ಈ ದೂರಿನಲ್ಲಿ ಶವಗಳ ಕಳ್ಳತನ ಹುನ್ನಾರದ ಹಿಂದೆ ಶಾಸಕ ಜಮೀರ್ ಅಹ್ಮದ್ ಖಾನ್, ಸೀಮಾ ಅಲ್ತಾಫ್ ಖಾನ್, ಅಲ್ತಾಫ್ ಖಾನ್, ಬಿಬಿಎಂಪಿ ಹೆಲ್ತ್, ರೆವೆನ್ಯೂ, ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಶಾಮೀಲು ಎಂದು ಆರೋಪಿಸಿ ತನಿಖೆ ನಡೆಸುವಂತೆ ದೂರು ನೀಡಲಾಗಿದೆ. ಆದ್ರೆ, ಈ ಬಗ್ಗೆ ಯಾವುದೇ ತನಿಖೆ ನಡೆಸಿಲ್ಲ, ಇನ್ನಾದ್ರೂ ಈ ಬಗ್ಗೆ ಸಂಬಂಧಪಟ್ಟವರು ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.
ಚಾಮರಾಜಪೇಟೆಯ ಈದ್ಗಾ ಮೈದಾನ ವಿಚಾರದಲ್ಲಿ ಬಿಬಿಎಂಪಿ ಆಯುಕ್ತರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದು, ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಇತ್ತೀಚೆಗೆ ಆರೋಪಿಸಿತ್ತು. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ರವರು ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸಂಬಂಧಿಸಿ ದ್ವಂದ್ವ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅವರು ಒಮ್ಮೆ ಇದನ್ನು ವಕ್ಫ್ ಆಸ್ತಿ ಎಂದರೆ ಕರೆದರೆ, ಮತ್ತೊಮ್ಮೆ ಬಿಬಿಎಂಪಿ ಆಸ್ತಿ ಎಂದು ಹೇಳಿಕೆ ನೀಡಿದ್ದಾರೆ. ಪ್ರಕರಣದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವುದರಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಆಯುಕ್ತರ ಬೇಜವಾಬ್ದಾರಿಯಿಂದಾಗಿ ಈದ್ಗಾ ಮೈದಾನವು ವಿವಾದಿತ ಸ್ಥಳವಾಗುತ್ತಿದೆ” ಎಂದು ಬೆಂಗಳೂರು ಎಎಪಿ ಸಂಘಟನಾ ಕಾರ್ಯದರ್ಶಿ ಹಾಗೂ ಪಕ್ಷದ ಚಾಮರಾಜಪೇಟೆ ಅಧ್ಯಕ್ಷ ಜಗದೀಶ್ ಚಂದ್ರ ಹೇಳಿದ್ದರು.