ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ, ನಕಲಿ ಅಂಕಪಟ್ಟಿ ನೀಡಿ ಪಿಎಸ್ಐ ಹುದ್ದೆ ಗಳಿಸಿದ ಕಾನ್ಸ್ಟೇಬಲ್ ವಿರುದ್ಧ ದೂರು; ಬೆಂಗಳೂರಲ್ಲಿ ಘಟನೆ
ನಕಲಿ ಅಂಕಪಟ್ಟಿ ನೀಡಿ ಪಿಎಸ್ಐ ಹುದ್ದೆ ಗಳಿಸಿದ ಕಾನ್ಸ್ಟೇಬಲ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ಕೊಂದು ಮಹಿಳೆಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಈ ಎರಡೂ ಅಪರಾಧ ಸುದ್ದಿಗಳ ವಿವರ ಇಲ್ಲಿದೆ. (ವರದಿ: ಮಾರುತಿ ಎಚ್.)
ಬೆಂಗಳೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿಗೆ ನಕಲಿ ಅಂಕಪಟ್ಟಿ ಸಲ್ಲಿಸಿದ ಆರೋಪದಡಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ಪೈಗಂಬರ್ ನದಾಫ್ ವಿರುದ್ಧ ನಕಲಿ ದಾಖಲೆಗಳನ್ನು ನೀಡಿ ಉದ್ಯೋಗ ಗಿಟ್ಟಿಸಿಕೊಂಡಿರುವ ಪ್ರಕರಣ ದಾಖಲಾಗಿದೆ. =
ನಗರ ಪೊಲೀಸ್ ಕಮಿಷನರ್ ಕಚೇರಿಯ ನೇಮಕಾತಿ ವಿಭಾಗದ ಅಧಿಕಾರಿಯೊಬ್ಬರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಿಧಾನಸೌಧ ಠಾಣೆಯ ಪೊಲೀಸರು ತಿಳಿಸಿದ್ದಾರೆ. 2021-22ನೇ ಸಾಲಿನಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಪಿಎಸ್ಐ (ಸಿವಿಲ್) ಹುದ್ದೆಗೆ ಇಬ್ಬರು ಹಾಗೂ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ (ಸಿಪಿಸಿ) ಹುದ್ದೆಗೆ ಏಳು ಮಂದಿ ಕ್ರೀಡಾ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದರು. ಆಯ್ಕೆಯಾದ ಅಭ್ಯರ್ಥಿಗಳು ಸಲ್ಲಿಸಿದ್ದ ದಾಖಲಾತಿಗಳ ನೈಜತೆ ಪರಿಶೀಲನೆಗಾಗಿ ಆಯಾ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿತ್ತು. ನದಾಫ್ ಸಲ್ಲಿಸಿದ್ದ ಅಂಕಪಟ್ಟಿ ನಕಲಿ ಎನ್ನುವುದು ಪರಿಶೀಲನೆ ವೇಳೆ ಗೊತ್ತಾಗಿದೆ ಎಂದು ತಿಳಿದು ಬಂದಿದೆ.
ಕ್ರೀಡಾಕೋಟಾ ಅಡಿಯಲ್ಲಿ ಸಿಪಿಸಿ ಹುದ್ದೆಗೆ ನೇಮಕವಾಗಿ ಭಾರತಿನಗರ ಠಾಣೆಯಲ್ಲಿ ಪೈಂಗಬರ ನದಾಫ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮತ್ತೆ ಕ್ರೀಡಾ ಕೋಟಾ ಅಡಿಯಲ್ಲಿ ಪಿಎಸ್ಐ ಹುದ್ದೆಗೂ ಆಯ್ಕೆಯಾಗಿದ್ದರು. ಇವರು ಸಲ್ಲಿಸಿದ್ದ ಅಂಕಪಟ್ಟಿ ಮತ್ತಿತರ ದಾಖಲೆಗಳನ್ನು ಪರಿಶೀಲನೆಗಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿತ್ತು. ಅಂಕಪಟ್ಟಿಗಳು ನೈಜತೆಯಿಂದ ಕೂಡಿಲ್ಲ. ವಿಶ್ವವಿದ್ಯಾಲಯ ವಿತರಿಸಿದ ಅಂಕಪಟ್ಟಿಯೂ ಆಗಿರುವುದಿಲ್ಲ ಎಂದು ವಿವಿ ಮರಳಿಸಿತ್ತು. ಈ ವರದಿ ನಂತರ ಇಲಾಖೆ ದೂರು ದಾಖಲಿಸಿದೆ.
ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ
ಯಲಹಂಕ ಸಮೀಪವಿರುವ ಕೊಡಿಗೆಹಳ್ಳಿಯ ಬಾಲಾಜಿ ಅಪಾರ್ಟ್ಮೆಂಟ್ನಲ್ಲಿ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ನಂತರ ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ದುರಂತ ಘಟನೆ ವರದಿಯಾಗಿದೆ.
ಪುತ್ರ ಶ್ರೇಯಾನ್ (6) ಹಾಗೂ ಪುತ್ರಿ ಚಾರ್ವಿ (ಒಂದೂವರೆ ವರ್ಷ) ಕೊಲೆಯಾದ ಮಕ್ಕಳು. ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ 35 ವರ್ಷದ ತಾಯಿ ಕುಸುಮಾ ಅವರೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಮಧುಗಿರಿಯ ಸುರೇಶ್ ಮತ್ತು ಯಶವಂತಪುರದ ಕುಸುಮಾ 2015ರಲ್ಲಿ ವಿವಾಹವಾಗಿದ್ದರು. ಇವರು ಬಾಲಾಜಿ ಲೇಔಟ್ನ ಫ್ಲ್ಯಾಟ್ನಲ್ಲಿ ನೆಲೆಸಿದ್ದರು. ಸುರೇಶ್ ಅವರು ವೈಟ್ಫೀಲ್ಡ್ನ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಮಕ್ಕಳಿದ್ದ ಕಾರಣಕ್ಕೆ ಕುಸುಮಾ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು.
ಇವರ ಮನೆಯಲ್ಲಿ ಡೆತ್ನೋಟ್ ಸಿಕ್ಕಿದ್ದು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ. ನಮ್ಮ ಸಾವಿಗೆ ನಾವೇ ಕಾರಣ. ಅಭಿನಂದನೆಗಳು. ವಿನ್ ಯುವರ್ ಈಗೋ. ಜೀವನ ಪೂರ್ತಿ ಇದು ನೆನಪಿನಲ್ಲಿ ಇರಬೇಕು ಎಂದು ಬರೆಯಲಾಗಿದೆ. ಮರಣ ಪತ್ರದ ನೈಜತೆ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕುಸುಮಾ ಅವರ ಸಹೋದರ ದೂರು ನೀಡಿದ್ದು, ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲಿಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ವರದಿ ಬಂದ ಬಳಿಕ ಮಕ್ಕಳ ಸಾವು ಹೇಗಾಯಿತು ಎಂಬುದು ಗೊತ್ತಾಗಲಿದೆ ಎಂದು ಮೂಲಗಳು ಹೇಳಿವೆ. ಬುಧವಾರ ಬೆಳಿಗ್ಗೆ ಸುರೇಶ್ ಕೆಲಸಕ್ಕೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿತ್ತು. ಕೂಡಲೇ ದೂರು ಸಲ್ಲಿಸಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ವಿವಾಹವಾದ ಆರಂಭದಲ್ಲಿ ದಂಪತಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ. ಕ್ರಮೇಣ ಭಿನ್ನಾಭಿಪ್ರಾಯ ಉಂಟಾಗಿತ್ತು. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲಿಸರು ಹೇಳಿದ್ದಾರೆ. ಎರಡು ದಿನಗಳ ಹಿಂದೆ ದಂಪತಿ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆಯಿಂದ ಕುಸುಮಾ ತೀವ್ರ ಬೇಸರಗೊಂಡಿದ್ದರು. ಇದೇ ವಿಷಯಕ್ಕೆ ಅವರು ಮಕ್ಕಳನ್ನೂ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.