ಬೆಂಗಳೂರಲ್ಲಿ ನಕಲಿ ಅಂಕಪಟ್ಟಿ ಜಾಲ, 350ಕ್ಕೂ ಹೆಚ್ಚು ನಕಲಿ ಮಾರ್ಕ್ಸ್ಕಾರ್ಡ್ ವಿತರಣೆ; ಇವರ ಅಂಕಪಟ್ಟಿಯಿಂದ ಸರ್ಕಾರಿ ನೌಕರಿಯೂ ಸಿಕ್ಕಿದೆ
Fake Markscard Metwork: ಬೆಂಗಳೂರಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆಯಾಗಿದ್ದು, ಆರೋಪಿಗಳು 350ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ವಿತರಿಸಿದ್ದಾರೆ. ಇವರು ನೀಡಿದ ಅಂಕಪಟ್ಟಿಗಳ ಮೂಲಕ ಸರ್ಕಾರಿ ನೌಕರಿ ಗಿಟ್ಟಿಸಿ ಕೊಂಡವರೂ ಇದ್ದಾರೆ. (ವರದಿ: ಎಚ್. ಮಾರುತಿ)

ಬೆಂಗಳೂರು: ಎಸ್ಎಸ್ಎಲ್ಸಿ ಮತ್ತು ಪಿಯುಸಿ ತತ್ಸಮಾನ ಎಂದು ನಮೂದಿಸಿ ನೀಡುತ್ತಿದ್ದ ನಕಲಿ ಅಂಕಪಟ್ಟಿ ಜಾಲವನ್ನು ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ. ಧಾರವಾಡದ ಪ್ರಶಾಂತ್ ಗುಡುಮಿ (41), ಬೆಂಗಳೂರಿನ ಬನಶಂಕರಿ ನಿವಾಸಿ ಮೌನಿಷ್ (36) ಮತ್ತು ಗದಗ ಜಿಲ್ಲೆಯ ರಾಜಶೇಖರ್ ಎಚ್. (41) ಬಂಧಿತ ವಂಚಕರು. ಇವರು ಪ್ರತಿಯೊಬ್ಬ ಆಕಾಂಕ್ಷಿಯಿಂದ ರೂ. 5 ಸಾವಿರದಿಂದ 10 ಸಾವಿರ ರೂ. ಪಡೆದು ಅಂಕಪಟ್ಟಿ ವಿತರಿಸುತ್ತಿದ್ದರು. ಈ ರೀತಿ 350 ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ವಿತರಣೆ ಮಾಡಿದ್ದರು ಎಂಬ ಸ್ಫೋಟಕ ಅಂಶ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಎಂಬ ಸಂಸ್ಥೆಯನ್ನು ನೋಂದಣಿ ಮಾಡಿಕೊಂಡಿದ್ದರು. ರಾಜ್ಯ ಶಿಕ್ಷಣ ಮಂಡಳಿಯಿಂದ ಯಾವುದೇ ಮಾನ್ಯತೆ ಪಡೆಯದೇ ಇದ್ದರೂ ರಾಜ್ಯ ಶಿಕ್ಷಣ ಇಲಾಖೆ ನೀಡುವ ಶಿಕ್ಷಣಕ್ಕೆ ಸರಿ ಸಮಾನವಾಗಿರುತ್ತದೆ ಎಂದು ಪ್ರಚಾರ ಮಾಡುತ್ತಿದ್ದರು. ಇವರು 350ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ವಿತರಿಸಿದ್ದು ಕೆಲವರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗವನ್ನೂ ಗಿಟ್ಟಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬನಶಂಕರಿಯಲ್ಲಿ ಅಕಾಡೆಮಿ ನಡೆಸುತ್ತಿದ್ದ ಮೌನೀಷ್ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಬೆಳಕಿಗೆ ಬಂದ್ದು ಹೇಗೆ?
ಕತ್ರಿಗುಪ್ಪೆಯ ರಾಮ್ ರಾವ್ ಲೇಔಟ್ ನಿವಾಸಿ ಮಿರ್ಜಾ ಇನಾಮುಲ್ಲಾ ಎಂಬ ವ್ಯಾಪಾರಿಯೊಬ್ಬರು ಅಕಾಡೆಮಿಯ ಮಾಲೀಕನನ್ನು ಭೇಟಿ ಮಾಡಿ, ತಮ್ಮ ಅಣ್ಣನ ಮಗನನ್ನು ದೂರ ಶಿಕ್ಷಣದ ಮೂಲಕ ಪಿಯುಸಿಗೆ ದಾಖಲು ಮಾಡಲು ಬಯಸಿದ್ದಾರೆ. ಆಗ ಮೌನಿಷ್, ತರಗತಿಗಳಿಗೆ ಹಾಜರಾಗದೆ ಪರೀಕ್ಷೆ ಬರೆಯದೇ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಅಂಕಪಟ್ಟಿಗಳನ್ನು ನೀಡುವುದಾಗಿ ತಿಳಿಸಿದ್ದಾನೆ. ಕೂಡಲೇ ಇನಾಮುಲ್ಲಾ ಸಿಸಿಬಿ ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಬನಶಂಕರಿಯಲ್ಲಿರುವ ಅಕಾಡೆಮಿ ಮೇಲೆ ದಾಳಿ ನಡೆಸಿ ಸಂಸ್ಥೆಯ ಮಾಲೀಕ ಮೌನಿಪ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈತ ತನ್ನ ಕಚೇರಿಯಲ್ಲೇ ಅಂಕಪಟ್ಟಿಗಳನ್ನು ಮುದ್ರಿಸುತ್ತಿದ್ದ. ನಂತರ ರಾಜ್ಯದ ವಿವಿಧ ಭಾಗಗಳಲ್ಲಿರುವ ತನ್ನ ಸಹಚರರ ಮೂಲಕ ಈ ವಂಚನೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಕಚೇರಿಯಲ್ಲಿ ಶಿಕ್ಷಣ ಮಂಡಳಿಗೆ ಸೇರಿದ ಅಸಲಿ ಪಿಯುಸಿ ಅಂಕಪಟ್ಟಿ, ಲೀವಿಂಗ್ ಸರ್ಟಿಪಿಕೇಟ್, ಅಸಲು ಪ್ರಾವಿಷನಲ್ ಮಾರ್ಕ್ಸ್ ಕಾರ್ಡ್ ಮತ್ತು ಹಾಲ್ ಟಿಕೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತನಿಖೆ ಮುಂದುವರೆಸಿದ ಪೊಲೀಸರು ಧಾರವಾಡದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನ ಮೊಬೈಲ್ನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿಯ ಹೆಸರಿನಲ್ಲಿ ಸುಮಾರು 300ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳಿರುವುದು ಪತ್ತೆಯಾಗಿದೆ. ಈ ಆರೋಪಿಗೆ ಸೇರಿದ ಶ್ರೀನಗರದಲ್ಲಿರುವ ಕಚೇರಿಯನ್ನು ಪರಿಶೀಲಿಸಿದಾಗ, ಅಂಕಪಟ್ಟಿಗಳನ್ನು ಪಡೆದುಕೊಂಡಿದ್ದ ಹಲವಾರು ವಿದ್ಯಾರ್ಥಿಗಳ ಅಂಕಪಟ್ಟಿಗಳ ನೈಜತೆಯ ಪರಿಶೀಲನೆಗಾಗಿ ವಿವಿಧ ಸರ್ಕಾರಿ ಇಲಾಖೆಗಳಿಂದ ಅಕಾಡೆಮಿಗೆ ವರದಿ ಕೇಳಿರುವ ಮತ್ತು ಅಕಾಡೆಮಿಯು ನೀಡಿರುವ ಅಂಕಪಟ್ಟಿಗಳ ನೈಜತೆಯ ಬಗ್ಗೆ ವರದಿ ನೀಡಿರುವ ಸುಮಾರು 50ಕ್ಕೂ ಹೆಚ್ಚು ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಬೆಳಗಾವಿ ಮೂಲದ ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಹುಡುಕಾಟ ನಡೆದಿದೆ.
