ಬೆಂಗಳೂರು ಕ್ರೈಮ್:‌ ಉದ್ಯಮಿ ಥಳಿಸಿ ಅವರ ಕಾರನ್ನೇ ತೆಗೆದುಕೊಂಡು ಹೋದ ಮಹಿಳೆ ವಿರುದ್ಧ ಎಫ್‌ಐಆರ್‌; 50 ಲಕ್ಷ ರೂ.ಮೌಲ್ಯದ ಆಭರಣ ಕಳ್ಳತನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಕ್ರೈಮ್:‌ ಉದ್ಯಮಿ ಥಳಿಸಿ ಅವರ ಕಾರನ್ನೇ ತೆಗೆದುಕೊಂಡು ಹೋದ ಮಹಿಳೆ ವಿರುದ್ಧ ಎಫ್‌ಐಆರ್‌; 50 ಲಕ್ಷ ರೂ.ಮೌಲ್ಯದ ಆಭರಣ ಕಳ್ಳತನ

ಬೆಂಗಳೂರು ಕ್ರೈಮ್:‌ ಉದ್ಯಮಿ ಥಳಿಸಿ ಅವರ ಕಾರನ್ನೇ ತೆಗೆದುಕೊಂಡು ಹೋದ ಮಹಿಳೆ ವಿರುದ್ಧ ಎಫ್‌ಐಆರ್‌; 50 ಲಕ್ಷ ರೂ.ಮೌಲ್ಯದ ಆಭರಣ ಕಳ್ಳತನ

ಬೆಂಗಳೂರು ಅಪರಾಧ ಸುದ್ದಿಗಳು: ಉದ್ಯಮಿಯನ್ನು ಥಳಿಸಿ ಅವರ ಕಾರನ್ನೇ ತೆಗೆದುಕೊಂಡು ಹೋದ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ. ಮತ್ತೊಂದೆಡೆ ಮನೆಯ ಒಳಗೆ ನುಗ್ಗಿದ ಕಳ್ಳರು ರೂ.50 ಲಕ್ಷ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಕ್ರೈಮ್:‌ ಉದ್ಯಮಿ ಥಳಿಸಿ ಕಾರನ್ನೇ ತೆಗೆದುಕೊಂಡು ಹೋದ ಮಹಿಳೆ ವಿರುದ್ಧ ಎಫ್‌ಐಆರ್
ಬೆಂಗಳೂರು ಕ್ರೈಮ್:‌ ಉದ್ಯಮಿ ಥಳಿಸಿ ಕಾರನ್ನೇ ತೆಗೆದುಕೊಂಡು ಹೋದ ಮಹಿಳೆ ವಿರುದ್ಧ ಎಫ್‌ಐಆರ್

ಬೆಂಗಳೂರು: ಕಾರು ತಗುಲಿದ್ದಕ್ಕೆ ಉದ್ಯಮಿಯನ್ನು ಥಳಿಸಿ ಅವರ ಕಾರನ್ನೇ ತೆಗೆದುಕೊಂಡು ಹೋದ ಮಹಿಳೆಯ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಉದ್ಯಮಿ ವಿನಯ್ ಗೌಡ ಅವರು ಮಹಿಳೆಯೊಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ದೀಪ್ತಿ ಕಟ್ರಗಡ್ಡ ಮತ್ತು ಅವರ ಸಹಚರರ ವಿರುದ್ಧ ಎಫ್‌ಐಆ‌ರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಕಾರು, ಕಾರಿನಲ್ಲಿದ್ದ ದುಬಾರಿ ಬೆಲೆಯ ವಸ್ತುಗಳು ಹಾಗೂ ನಗದು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ವಿನಯ್‌ ದೂರಿನಲ್ಲಿ ಆರೋಪಿಸಿದ್ದಾರೆ. ಲ್ಯಾವೆಲ್ಲೆ ರಸ್ತೆಯ ಪೂರ್ವ ಟ್ರ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ವಿನಯ್ ಅವರು ಮೇ 3ರಂದು ಮುಂಜಾನೆ ತಮ್ಮ ಪೊರ್ಶೆ ಕಾರನ್ನು ಅಪಾರ್ಟ್‌ ಮೆಂಟ್‌ನಿಂದ ಹೊರಗೆ ತೆಗೆಯುತ್ತಿದ್ದರು. ರಿವರ್ಸ್ ತೆಗೆಯುವ ಸಂದರ್ಭದಲ್ಲಿ ದೀಪ್ತಿ ಅವರ ಕಾರಿಗೆ ಟಚ್‌ ಆಗಿತ್ತು. ಆಗ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ದೀಪ್ತಿ ಕಡೆಯವರು ನನ್ನ ಮೇಲೆ ಹಲ್ಲೆ ನಡೆಸಿ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿದ ನಂತರ ನನ್ನ 56 ಲಕ್ಷ ಮೌಲ್ಯದ ಕಾರು ಹಾಗೂ ಕಾರಿನಲ್ಲಿದ್ದ ರೂ. 1.50 ಲಕ್ಷ ನಗದು, ರೂ. 85 ಸಾವಿರ ಮೌಲ್ಯದ ಸನ್‌ ಗ್ಲಾಸ್‌ ಸೇರಿ ಇನ್ನೂ ಅನೇಕ ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ. ಕಾರ್‌ನಲ್ಲಿದ್ದ ಮೊಬೈಲ್ ಕಾಣೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನಂತರ ದೀಪ್ತಿ ಅವರಿಗೆ ಕರೆ ಮಾಡಿ ಕಾರು ಹಾಗೂ ಮೊಬೈಲ್ ವಾಪಸ್ ನೀಡುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ ಅವರು 20 ಲಕ್ಷ ರೂ. ನೀಡಿದರೆ ಕಾರ್‌ ಹಾಗೂ ಮೊಬೈಲ್ ಮರಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದೂ ವಿನಯ್ ಗೌಡ ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಮಹಿಳೆಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಾಗಿದೆ. ವಿನಯ್‌ ಅವರ ಕಾರು ನಮ್ಮ ಕಾರಿಗೆ ಡಿಕ್ಕಿ ಹೊಡೆದಿರುವುದು ನಿಜ. ಅವರ ಕಾರನ್ನು ನಾವು ತೆಗೆದುಕೊಂಡು ಹೋಗಿಲ್ಲ. ಅವರೇ ತಮ್ಮ ಕಾರನ್ನು ತೆಗೆದುಕೊಂಡು ಬಂದು ದೇವನಹಳ್ಳಿಯ ನಮ್ಮ ಮನೆಯ ಮಂದೆ ನಿಲ್ಲಿಸಿದ್ದಾರೆ ಎಂದು ಅವರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿನಯ್‌ ಹಾಗೂ ಮಹಿಳೆ ಇಬ್ಬರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ದೂರುದಾರರ ಹೇಳಿಕೆ ನಿಜ ಎಂದು ಭಾಸಾಗುತ್ತಿದೆ. ಆದರೂ ತನಿಖೆ ಮುಂದುವರಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ರೂ.50 ಲಕ್ಷ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣ ಕಳ್ಳತನ

ಮನೆಯ ಕಬ್ಬಿಣದ ಗ್ರಿಲ್ ಅನ್ನು ಗ್ಯಾಸ್‌ ಕಟರ್‌ನಿಂದ ಕತ್ತರಿಸಿ ಮನೆಯ ಒಳಗೆ ನುಗ್ಗಿದ ಕಳ್ಳರು ರೂ.50 ಲಕ್ಷ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಯಲಹಂಕ ನ್ಯೂಟೌನ್‌ ನಿವಾಸಿ ದೂರು ದಾಖಲಿಸಿದ್ದಾರೆ.

ಯಲಹಂಕದ ಎಸ್‌ ಎಸ್‌ ಎಫ್‌ ಬಡಾವಣೆಯ ನಿವಾಸಿ ದುರುಜಸ್ವಾಲ್‌ ಎಂಬುವರು ಮೇ 5ರಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ಕೇರಳ ಹಾಗೂ ಮೈಸೂರು ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಮನೆಗೆ ಮರಳಿ ಬಂದಾಗ ಮನೆಯ ಹಿಂದೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಅನ್ನು ಗ್ಯಾಸ್‌ ಕಟರ್‌ ನೆರವಿನಿಂದ ಕತ್ತರಿಸಿ ಮನೆಯ ಒಳಗೆ ನುಗ್ಗಿ ಕಳ್ಳತನ ಮಾಡಿರುವುದು ತಿಳಿದು ಬಂದಿತ್ತು. ಮನೆಯಲ್ಲಿದ್ದ 350 ಗ್ರಾಂ ಚಿನ್ನ ಹಾಗೂ ವಜ್ರದ ಆಭರಣ ಕಾಣಿಸುತ್ತಿರಲಿಲ್ಲ. ಆಗ ಕಳ್ಳತನ ಮಾಡಲಾಗಿದೆ ಎಂದು ದೂರು ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಕ್ಕಪಕ್ಕದ ಮನೆ ಹಾಗೂ ಆ ರಸ್ತೆಯಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯವನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.