ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಹತ್ಯೆ ಪ್ರಕರಣ; ಈವರೆಗೆ ಏನೇನಾಯ್ತು? ಇಲ್ಲಿವೆ ಪ್ರಮುಖ 10 ಅಂಶಗಳು
ಕನ್ನಡ ಸುದ್ದಿ  /  ಕರ್ನಾಟಕ  /  ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಹತ್ಯೆ ಪ್ರಕರಣ; ಈವರೆಗೆ ಏನೇನಾಯ್ತು? ಇಲ್ಲಿವೆ ಪ್ರಮುಖ 10 ಅಂಶಗಳು

ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಹತ್ಯೆ ಪ್ರಕರಣ; ಈವರೆಗೆ ಏನೇನಾಯ್ತು? ಇಲ್ಲಿವೆ ಪ್ರಮುಖ 10 ಅಂಶಗಳು

ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪುತ್ರ ಪೊಲೀಸ್‌ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು, ಓಂ ಪ್ರಕಾಶ್ ಪತ್ನಿ ಪಲ್ಲವಿ ಹಾಗೂ ಮಗಳನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಹತ್ಯೆ ಪ್ರಕರಣ; ಈವರೆಗೆ ಏನೇನಾಯ್ತು? ಇಲ್ಲಿವೆ 10 ಅಂಶಗಳು (File Photo)
ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಹತ್ಯೆ ಪ್ರಕರಣ; ಈವರೆಗೆ ಏನೇನಾಯ್ತು? ಇಲ್ಲಿವೆ 10 ಅಂಶಗಳು (File Photo)

ಕರ್ನಾಟಕದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ (DGP) ಓಂ ಪ್ರಕಾಶ್‌ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದ ನಿವೃತ್ತ ಡಿಜಿಪಿ, ಏಪ್ರಿಲ್ 20ರ ಭಾನುವಾರ ಭೀಕರವಾಗಿ ಕೊಲೆಯಾಗಿದ್ದರು. ಹತ್ಯೆಗೆ ಸಂಬಂಧಿಸಿದಂತೆ ಓಂ ಪ್ರಕಶ್‌ ಮಗ ದೂರು ನೀಡಿದ್ದು, ಓಂ ಪ್ರಕಾಶ್‌ ಪತ್ನಿ ಹಾಗೂ ಮಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಿದ್ದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ಸಾವು ಸಹಜವಾಗಿ ಸಂಚಲನ ಸೃಷ್ಟಿಸಿದ್ದು, ಪ್ರಕರಣ ಸಂಬಂಧ ಈವರೆಗಿನ ಪ್ರಮುಖ 10 ಅಂಶಗಳನ್ನು ನೋಡೋಣ.

  1. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ವಾಸವಿದ್ದ ಓಂಪ್ರಕಾಶ್‌ ಅವರನ್ನು ಭಾನುವಾರ ಮಧ್ಯಾಹ್ನ 4 ಗಂಟೆ ಹೊತ್ತಿಗೆ ಭೀಕರವಾಗಿ ಕೊಲೆ ಮಾಡಲಾಗಿತ್ತು. ಪತ್ನಿ ಪಲ್ಲವಿ ಅವರೇ ಓಂಪ್ರಕಾಶ್‌ ಅವರನ್ನು ಕೊಲೆ ಮಾಡಿರುವ ಅನುಮಾನದ ಮೇಲೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಕೌಟುಂಬಿಕ ಕಾರಣದಿಂದ ಈ ಕೊಲೆ ನಡೆದಿರಬಹುದು ಎಂದು ಪೊಲೀಸರು ಆರಂಭದಲ್ಲೇ ಶಂಕಿಸಿದ್ದರು.
  2. ಕರ್ನಾಟಕದಲ್ಲಿ ಡಿಜಿಪಿ ದರ್ಜೆಯ ಹಿರಿಯ ಐಪಿಎಸ್‌ ಅಧಿಕಾರಿಯೊಬ್ಬರು ಈ ರೀತಿ ಕೊಲೆಯಾಗಿರುವುದು ಇದೇ ಮೊದಲು. 1981ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಓಂ ಪ್ರಕಾಶ್ ಅವರಿಗೆ 68 ವರ್ಷ ವಯಸ್ಸಾಗಿತ್ತು. ಕರ್ನಾಟಕದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದ ಓಂಪ್ರಕಾಶ್, ನಿವೃತ್ತರಾದ ನಂತರ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ನೆಲೆಸಿದ್ದರು.
  3. ಆರಂಭಿಕ ತನಿಖೆಯ ವೇಳೆ ನಮ್ಮ ಜೀವ ಉಳಿಸಿಕೊಳ್ಳಲು ನಾವು ಚಾಕುವಿನಿಂದ ಚುಚ್ಚಿದ್ದಾಗಿ ಪಲ್ಲವಿ ಹೇಳಿಕೆ ನೀಡಿದ್ದರು. ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪತಿ ಪದೇ ಪದೇ ಗನ್ ತಂದು ತನಗೂ, ಮಗಳಿಗೂ ಕೊಲೆ ಬೆದರಿಕೆ ಹಾಕುತ್ತಿದ್ದರು. ಶೂಟ್ ಮಾಡುತ್ತೇನೆ ಎಂದು ಹೆದರಿಸುತ್ತಿದ್ದರು. ಭಾನುವಾರ ಬೆಳಿಗ್ಗೆಯಿಂದಲೇ ಬೇರೆ ಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳ ನಡೆದಿತ್ತು. ಆಗ ಜೀವ ಉಳಿಸಿಕೊಳ್ಳಲು ನಾವು ಹೋರಾಟ ನಡೆಸಿದೆವು. ಅವರ ಮೇಲೆ ಅಡುಗೆ ಎಣ್ಣೆ ಹಾಗೂ ಖಾರದ ಪುಡಿ ಎರಚಿದೆವು. ಕೈ ಕಾಲು ಕಟ್ಟಿ ಚಾಕುವಿನಿಂದ ಚುಚ್ಚಿದೆವು ಎಂದು ತನಿಖಾಧಿಕಾರಿಗಳ ಮುಂದೆ ಪಲ್ಲವಿ ಹೇಳಿದ್ದರು.
  4. ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಚುಚ್ಚಿರುವ ಕಾರಣದಿಂದ ತೀವ್ರ ರಕ್ತಸ್ರಾವದಿಂದ ಓಂ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಂಜೆ ಹೊತ್ತಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಘಟನೆ ನಡೆದಾಗ ಮನೆಯಲ್ಲಿ ಓಂ ಪ್ರಕಾಶ್‌ ಮತ್ನಿ ಹಾಗೂ ಮಗಳು ಇದ್ದರು. ಅವರ ಮಗ ಮನಯಲ್ಲಿ ಇರಲಿಲ್ಲ.
  5. ಕೊಲೆಯ ಸಂಬಂಧ ತಾಯಿ ಪಲ್ಲವಿ ಹಾಗೂ ಸಹೋದರಿ ಕೃತಿ ವಿರುದ್ಧ ಓಂ ಪ್ರಕಾಶ್ ಅವರ ಪುತ್ರ ಕಾರ್ತಿಕೇಶ್, ಹೆಚ್‌ಎಸ್‌ಆರ್ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಏಪ್ರಿಲ್ 20ರ ಸಂಜೆ ಸುಮಾರು 5 ಗಂಟೆಗೆ ನಾನು ದೊಮ್ಮಲೂರಿನಲಿರುವ ಕರ್ನಾಟಕ ಗಾಲ್ಫ್, ಆಸೋಸಿಯಷನ್‌ಲ್ಲಿದ್ದಾಗ ತಂದೆಯ ಹತ್ಯೆ ಕುರಿತು ಮಾಹಿತಿ ಸಿಕ್ಕಿತ್ತು. ತಕ್ಷಣ ನಾನು ಮನೆಗೆ ಬಂದು ನೋಡಿದೆ. ಮನೆಯಲ್ಲಿ ಪೊಲೀಸ್ ಮತ್ತು ಸಾರ್ವಜನಿಕರು ಇದ್ದರು. ತಂದೆಯ ತಲೆಗೆ ಗಾಯವಾಗಿ ಮೈತುಂಬಾ ರಕ್ತವಾಗಿತ್ತು ಎಂದು ಮಗ ಹೇಳಿದ್ದಾರೆ.
  6. ತಾಯಿ ಪಲ್ಲವಿ ಹಾಗೂ ತಂಗಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದು, ಪ್ರತಿನಿತ್ಯ ತಂದೆಯೊಂದಿಗೆ ಜಗಳ ಮಾಡುತ್ತಿದ್ದರು. ತಾಯಿ ಮತ್ತು ತಂಗಿ ಕೃತಿ ನಮ್ಮ ತಂದೆಯನ್ನು ಕೊಲೆ ಮಾಡಿರುವ ಅನುಮಾನವಿದೆ. ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಕಾರ್ತಿಕೇಶ್ ದೂರಿನಲ್ಲಿ ಉಲ್ಲೇಖಿಸಿದ್ದರು.
  7. ಓಂ ಪ್ರಕಾಶ್‌ ಅವರ ಮಗ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಅದಕ್ಕೆ ಅನುಗುಣವಾಗಿ ನಾವು ಪ್ರಕರಣದ ತನಿಖೆ ನಡೆಸುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ ಹೇಳಿದ್ದಾರೆ ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
  8. ಪಲ್ಲವಿ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಹಲವು ವಿಚಾರಗಳು ಬಹಿರಂಗಗೊಂಡಿವೆ. ಹತ್ಯೆ ಆರೋಪಿ ಪಲ್ಲವಿಯವರು ಸ್ಕಿಜೋಫ್ರೇನಿಯಾ (Schizophrenia) ಎಂಬ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ ಎಂಬ ಅಂಶ ತಿಳಿದುಬಂದಿದೆ. ತಮ್ಮ ಪತಿ ಓಂ ಪ್ರಕಾಶ್​ ಅವರ ಕುರಿತು ಇಲ್ಲಸಲ್ಲದ ಊಹೆ ಮಾಡಿಕೊಳ್ಳುತ್ತಿದ್ದರು. ಗನ್‌ ಹಿಡಿದುಕೊಂಡು ಭಯ ಪಡಿಸುತ್ತಿದ್ದಾರೆ ಎಂದು ಆಗಾಗ ಹೇಳುತ್ತಿದ್ದರು. ಪತಿ ಗನ್​ ಹಿಡಿದುಕೊಂಡು ಭಯ ಪಡಿಸುತ್ತಾರೆ ಎಂಬುದಾಗಿ ತಮ್ಮ ಫ್ಯಾಮಿಲಿ ವಾಟ್ಸಪ್​ ಗ್ರೂಪ್​ ಮತ್ತು ಐಪಿಎಸ್ ಅಧಿಕಾರಿಗಳ ಗ್ರೂಪ್‌ನಲ್ಲಿಯೂ ಸಂದೇಶ ಕಳುಹಿಸಿದ್ದರು ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
  9. ಮನೆಯಲ್ಲಿ ಪತಿಯನ್ನು ಹತ್ಯೆ ಮಾಡಿದ ನಂತರ, ಮಾನ್​ಸ್ಟರ್​ ಸತ್ತ ಎಂದು ಪಲ್ಲವಿ ರಣಕೇಕೆ ಹಾಕಿದ್ದರಂತೆ. ವಿಕೃತವಾಗಿ ಕಿರುಚುತ್ತಾ ಹಿರಿಯ ಪೊಲೀಸ್ ಅಧಿಕಾರಿಯ ಪತ್ನಿಗೆ ಕರೆ ಮಾಡಿ, ಐ ಹ್ಯಾವ್ ಫಿನಿಶ್‌ಡ್‌ ಮಾನ್‌ಸ್ಟರ್ ಎಂದು ವಿಕೃತ ಖುಷಿ ವ್ಯಕ್ತಪಡಿಸಿದ್ದರಂತೆ. ವಿಡಿಯೋ ಕಾಲ್​ ಮೂಲಕ ಓಂಪ್ರಕಾಶ್ ಮೃತದೇಹವನ್ನ ತೋರಿಸಿದ್ದರಂತೆ.
  10. ಓಂ ಪ್ರಕಾಶ್ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್‌, ಸಮಗ್ರ ತನಿಖೆ ಅಗುವವರೆಗೂ ಯಾವುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಪ್ರಕರಣ ತನಿಖೆಯಾಗುವವರೆಗೂ ಘಟನೆಗೆ ಇದೇ ಕಾರಣ ಎಂದು ಹೇಳಲು ಆಗುವುದಿಲ್ಲ. ತನಿಖೆಯಲ್ಲಿ ಏನೆಲ್ಲ ಮಾಹಿತಿ ಸಿಗುತ್ತದೆ ಎಂಬುದನ್ನು ನೋಡಬೇಕಿದೆ. 2025ರಲ್ಲಿ ನಾನು ಗೃಹ ಸಚಿವನಾಗಿದ್ದ ವೇಳೆ ಓಂಪ್ರಕಾಶ್ ಅವರು ಡಿಜಿಪಿಯಾಗಿ ಕೆಲಸ ಮಾಡಿದ್ದರು. ಒಳ್ಳೆಯ ಅಧಿಕಾರಿ, ಒಳ್ಳೆಯ ವ್ಯಕ್ತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಓಂ ಪ್ರಕಾಶ್‌ ಅವರ ಅಂತಿಮ ವಿಧಿವಿಧಾನ ನಡೆದಿದೆ. ಹಿರಿಯ ಅಧಿಕಾರಿಯೊಬ್ಬರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.