ಸಿನಿಮೀಯ ಶೈಲಿಯಲ್ಲಿ ಬಾಲಕನ ಅಪಹರಣ ಮಾಡಿದ ಉದ್ಯಮಿ; ಜಸ್ಟ್ 14 ಗಂಟೆಯಲ್ಲಿ ಖಾಕಿ ಖೆಡ್ಡಾಕ್ಕೆ ಬಿದ್ದ ಅಪಹರಣಕಾರ
ಉದ್ಯಮದಲ್ಲಿ ನಷ್ಟ ಅನುಭವಿಸಿ, ನಷ್ಟ ಸರಿದೂಗಿಸಲು ಬಾಲಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
Bengaluru crime news: ಕ್ಲೌಡ್ ಕಿಚನ್ ಉದ್ಯಮದಲ್ಲಿ ನಷ್ಟ ಅನುಭವಿಸಿದ್ದ ಉದ್ಯಮಿಯೊಬ್ಬ ಹಣಕ್ಕಾಗಿ ಬಾಲಕನೊಬ್ಬನನ್ನು ಅಪಹರಿಸಿ ಪೊಲೀಸರ ಅತಿಥಿಯಾಗಿರುವ ಪ್ರಕರಣ ಬೆಂಗಲೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ. ಅಪಹರಣಕ್ಕೊಳಗಾದ ಬಾಲಕನನ್ನು ಅಪಹರಣ ನಡೆದ 14 ಗಂಟೆಯೊಳಗೆ ಪೋಷಕರ ಮಡಿಲಿಗೆ ಸೇರಿಸಿ ಪೊಲೀಸರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
23 ವರ್ಷದ ಜಸ್ಮಾವುದ್ದೀನ್ ಶೇಖ್ 9 ವರ್ಷದ್ದ ಬಾಲಕನನ್ನು ಅಪಹರಿಸಿ ತನ್ನ ಅಪಾರ್ಟ್ ಮೆಂಟ್ನಲ್ಲಿ ಬಚ್ಚಿಟ್ಟಿದ್ದ. ನಂತರ ಬಾಲಕನ ಪೋಷಕರಿಗೆ ಮೊಬೈಲ್ ಕರೆ ಮಾಡಿ 10 ಲಕ್ಷ ರೂ.ನೀಡಿದರೆ ಮಗನನ್ನು ಒಪ್ಪಿಸುತ್ತೇನೆ ಎಂದು ಬೇಡಿಕೆ ಇರಿಸಿದ್ದ. ಕೆಲವು ಗಂಟೆಗಳ ನಂತರ ಬಾಲಕನ ತಂದೆ ಕರೆ ಮಾಡಿ 5 ಲಕ್ಷ ರೂ. ಸಿದ್ದಪಡಿಸಿರುವುದಾಗಿ ತಿಳಿಸುತ್ತಾರೆ. ಆಗ ಅಪಹರಣಕಾರ ತನ್ನ ಅಪಾರ್ಟ್ ಮೆಂಟ್ ಸಮೀಪವಿರುವ ಅಂಗಡಿಯೊಂದರ ಬಳಿ ಹಣದ ಬ್ಯಾಗ್ ಇಡಲು ತಿಳಿಸುತ್ತಾನೆ. ಹಣದ ಬ್ಯಾಗ ಇಟ್ಟಿದ್ದ ಅಂಗಡಿ ಬಳಿ ಅಪಹರಣಕಾರ ಆಗಮಿಸಿದಾಗ ಮಫ್ತಿಯಲ್ಲಿದ್ದ ಪೊಲೀಸರು ಈತನನ್ನು ಬಂಧಿಸುತ್ತಾರೆ.
ಕ್ಲೌಡ್ ಕಿಚನ್ನಲ್ಲಿ ನಷ್ಟ
ಜಾರ್ಖಂಡ್ ನ ರಾಂಚಿ ಮೂಲದ ಈ ಉದ್ಯಮಿ ಜಸ್ಮಾವುದ್ದೀನ್ 9 ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಆಗಮಿಸಿದ್ದ. ಜೀವನೋಪಾಯಕ್ಕಾಗಿ ತನ್ನ ಅಪಾರ್ಟ್ ಮೆಂಟ್ ನಲ್ಲಿಯೇ ಕ್ಲೌಡ್ ಕಿಚನ್ ಆರಂಭಿಸಿದ್ದ. ಆದರೆ ಈ ಉದ್ಯಮದಲ್ಲಿ ಅಪಾರ ನಷ್ಟ ಅನುಭವಿಸಿದ್ದ ಶೇಖ್ ನಷ್ಟವನ್ನು ತುಂಬಿಕೊಳ್ಳಲು ಅಪಹರಣದ ಸೂತ್ರವನ್ನು ಹೆಣೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಈ ಐಡಿಯಾ ಆತನಿಗೆ ಬಂದದ್ದಾದರೂ ಹೇಗೆ?
ಶೇಖ್ ಪ್ರತಿದಿನ ತನ್ನ ಅಪಾರ್ಟ್ ಮೆಂಟ್ ಇರುವ ಸಮೀಪದ ಅಂಗಡಿಗೆ ಸಿಗರೇಟ್ ಮತ್ತು ಟೀ ಸೇವಿಸಲು ಹೋಗುತ್ತಿದ್ದ. ಅಲ್ಲಿ ಒಬ್ಬ ಬಾಲಕ ಇತರ ಬಾಲಕರೊಂದಿಗೆ ಆಟವಾಡುತ್ತಿದ್ದನ್ನು ಗಮನಿಸಿದ್ದ. ಶೇಖ್ ಪ್ರತಿ ದಿನ ಆ ಬಾಲಕನಿಗೆ ಚಾಕೋಲೇಟ್ ಮತ್ತು ಬಿಸ್ಕೆಟ್ ಕೊಡಿಸುವ ಮೂಲಕ ಆತನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಅಪಹರಣಕ್ಕೆ ಸಂಚು ರೂಪಿಸಿದ್ದ ದಿನ ಸಂಜೆ ಬಾಲಕನನ್ನು ತನ್ನ ಹುಟ್ಟು ಹಬ್ಬದ ಅಂಗವಾಗಿ ಕೇಕ್ ಕತ್ತರಿಸಲು ತನ್ನ ಮನೆಗೆ ಆಹ್ವಾನಿಸಿದ್ದ. ಬಾಲಕನನ್ನು ಆಟೋದಲ್ಲಿ ಕುಳ್ಳರಿಸಿಕೊಂಡು ಎಲೆಕ್ಟ್ರಾನಿಕ್ಸ್ ಸಿಟಿ ಸುತ್ತ ಮುತ್ತ ಸಂಚರಿಸಿದ್ದ. ರಾತ್ರಿ 9 ಗಂಟೆಯ ನಂತರ ತನ್ನ ಅಪಾರ್ಟ್ ಮೆಂಟ್ ಗೆ ಕರೆದುಕೊಂಡು ಬಂದು ಚಾಕುವಿನಿಂದ ಎದುರಿಸಿ ಸುಮ್ಮನೆ ಮಲಗುವಂತೆ ಎದರಿಸಿದ್ದ. ಹೆದರಿಕೊಂಡ ಬಾಲಕ ನಿದ್ರೆಗೆ ಜಾರಿದ್ದ.
10 ಲಕ್ಷಕ್ಕೆ ಡಿಮಾಂಡ್
ಬಾಲಕನಿಂದ ಆತನ ಪೋಷಕರ ಮೊಬೈಲ್ ನಂಬರ್ ಪಡೆದಕೊಂಡಿದ್ದ ಶೇಖ್ ವಾಟ್ಸಾಪ್ ಮೂಲಕ ನಿಮ್ಮ ಮಗನನ್ನು ಅಪಹರಿಸಿದ್ಧೇನೆ. 10 ಲಕ್ಷ ರೂ. ನೀಡಿದರೆ ಬಿಡುವುದಾಗಿ ಸಂದೇಶ ಕಳುಹಿಸಿದ್ದ. ಕೂಡಲೇ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯವಕನೊಬ್ಬ ಬಾಲಕನನ್ನು ಆಟೋದಲ್ಲಿ ಕರೆದೊಯ್ಯುತ್ತಿರುವ ದೃಶ್ಯ ಪತ್ತೆಯಾಗಿತ್ತು. ಬಾಲಕ ಸಹಜವಾಗಿ ಯಾವುದೇ ಅಳುಕಿಲ್ಲದೆ ಆತನೊಂದಿಗೆ ಮಾತನಾಡುತ್ತಿದ್ದ. ಅಂದರೆ ಬಾಲಕನಿಗೆ ಅಪಹರಣಕಾರನ ಪರಿಚಯ ಇರುವುದು ಖಚಿತವಾಗಿತ್ತು.
ಬುಧವಾರ ರಾತ್ರಿ 9 ಗಂಟೆಯ ವೇಳೆಗೆ ಇಬ್ಬರೂ ಆಟೋದಿಂದ ಕೆಳಗಿಳಿಯುತ್ತಿರುವ ದೃಶ್ಯವೂ ಕಂಡು ಬಂದಿತ್ತು. ಆಗ ಪೊಲೀಸರ ಸಲಹೆಯಂತೆ ಬಾಲಕನ ತಂದೆ 5 ಲಕ್ಷ ರೂ. ಹಣ ಸಿದ್ದಪಡಿಸಿರುವುದಾಗಿ ಸಂದೇಶ ಕಳುಹಿಸಿದ್ದರು. ಸಿಗರೇಟ್ ಅಂಗಡಿಯ ಬಳಿ ಹಣದ ಬ್ಯಾಗ್ ಇಟ್ಟು ಹೋಗಬೇಕು ಎಂದು ಅಪಹರಣಕಾರ ಸೂಚಿಸಿದ್ದ. ಅಲ್ಲಿಗೆ ಬಂದ ಅಪಹರಣಕಾರನನ್ನು ಪೊಲೀಸರು ಬಂಧಿಸಿ ಬಾಲಕನನ್ನು ರಕ್ಷಿಸಿ ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ.