Bengaluru Crime News: ಬೆಂಗಳೂರಿನಲ್ಲಿ ಮೆಟ್ರೋ ರೈಲ್ವೆ ನಿಲ್ದಾಣದ ಪಕ್ಕ ಪ್ಲಾಸ್ಟಿಕ್ ಡ್ರಮ್ನಲ್ಲಿ ಮಹಿಳೆಯ ಶವ ಪತ್ತೆ, ಹಂತಕರಿಗಾಗಿ ಶೋಧ
ಉದ್ಯಾನನಗರಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಶವವು ಪ್ಲಾಸ್ಟಿಕ್ ಡ್ರಮ್ನಲ್ಲಿ ದೊರಕಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಡ್ರಮ್ವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಶವವು ಪ್ಲಾಸ್ಟಿಕ್ ಡ್ರಮ್ನಲ್ಲಿ ದೊರಕಿದೆ. ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಡ್ರಮ್ವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಹಂತಕರು ಮಹಿಳೆಯನ್ನು ಬೇರೆಡೆ ಕೊಂದು ಡ್ರಮ್ನಲ್ಲಿಟ್ಟು ಇಲ್ಲಿಗೆ ಸಾಗಿಸಿರಬಹುದು ಎನ್ನಲಾಗುತ್ತಿದೆ.
ಆತಂಕದ ವಿಷಯವೆಂದರೆ, ಬೆಂಗಳೂರಿನಲ್ಲಿ ಇದೇ ಮಾದರಿಯ ಹಲವು ಶವಗಳು ಪತ್ತೆಯಾಗಿದ್ದು, ಪೊಲೀಸರಿಗೆ ತಲೆನೋವಾಗಿದೆ. ಒಬ್ಬನೇ ಹಂತಕ ಇಂತಹ ದುಷ್ಕೃತ್ಯ ಮಾಡುತ್ತಿದ್ದಾನ? ಅಥವಾ ಇತ್ತೀಚೆಗೆ ಡ್ರಮ್ಗಳಲ್ಲಿ ಪತ್ತೆಯಾದ ಶವಗಳು ಬೇರೆಬೇರೆ ಅಪರಾಧ ಘಟನೆಗಳಾ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಈ ಹಿಂದೆ ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಡ್ರಮ್, ಚೀಲದಲ್ಲಿ ಮಹಿಳೆಯರ ಶವಗಳು ಪತ್ತೆಯಾಗಿದ್ದವು.
ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿರುವ ಪ್ರಕಾರ ಮಾರ್ಚ್ 13 ಅಂದರೆ ನಿನ್ನೆ ಸಂಜೆ ಏಳುಗಂಟೆಗೆ ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ಪ್ರವೇಶಧ್ವಾರದ ಬಳಿಕ ಪ್ಲಾಸ್ಟಿಕ್ ಡ್ರಮ್ ಪತ್ತೆಯಾಗಿತ್ತು. ಈ ಡ್ರಮ್ ವಾಸನೆ ಬರುತ್ತಿದ್ದರಿಂದ ಆಟೋ ಚಾಲಕರೊಬ್ಬರು ಡ್ರಮ್ ಮುಚ್ಚಳ ತೆರೆದು ನೋಡಿ ಬೆಚ್ಚಿ ಬಿದ್ದಿದ್ದಾರೆ.
ಆ ಡ್ರಮ್ನೊಳಗೆ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಹೆಣ ನೋಡಿ ಭಯಬಿದ್ದ ಆಟೋ ಚಾಲಕ ತಕ್ಷಣವೇ ಈ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಫ್ಎಸ್ಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರೆದಿದೆ.
ಶವವಾಗಿ ಪತ್ತೆಯಾಗಿರುವ ಮಹಿಳೆಗೆ ವಯಸ್ಸು ಸುಮಾರು 35 ವರ್ಷ ಆಗಿರಬಹುದು ಎನ್ನಲಾಗಿದೆ. ಬೇರೆ ಕಡೆ ಹತ್ಯೆ ಮಾಡಿ ಆಮೇಲೆ ಶವವನ್ನು ಡ್ರಮ್ನಲ್ಲಿ ಹಾಕಿ ಇಲ್ಲಿ ಇಟ್ಟು ಹೋಗಿರಬಹುದು ಎನ್ನಲಾಗುತ್ತಿದೆ. ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ವರ್ಷದ ಆರಂಭದಲ್ಲಿ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಯುವತಿಯೊಬ್ಬರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ಲಾಟ್ಫಾರ್ಮ್ 1ರಲ್ಲಿ ಬಾಕ್ಸ್ವೊಳಗೆ ಸೀಲ್ ಮಾಡಿರುವ ಪ್ಲಾಸ್ಟಿಕ್ ಕವರ್ನಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು.
ಯಶವಂತಪುರ ರೈಲ್ವೆ ನಿಲ್ದಾಣವನ್ನು ಸ್ಚಚ್ಛಗೊಳಿಸುವ ಸಿಬ್ಬಂದಿಗಳು ಪ್ಲಾಟ್ಫಾರ್ಮ್ ಒಂದರಲ್ಲಿ ಬಾಕ್ಸ್ವೊಳಗೆ ಕವರ್ ಮಾಡಿದ ಸ್ಥಿತಿಯಲ್ಲಿ ಯುವತಿಯೊಬ್ಬರ ಮೃತದೇಹವನ್ನು ನೋಡಿದ್ದಾರೆ. ವಿಧಿವಿಜ್ಞಾನ ವಿಭಾಗದ ತಜ್ಞರ ತಂಡ ಅಲ್ಲಿಗೆ ತಲುಪಿದೆʼʼ ಎಂದು ಸೌತ್ವೆಸ್ಟ್ ರೈಲ್ವೆಯ ಬೆಂಗಳೂರು ವಿಭಾಗದ ಎಡಿಆರ್ಎಂ ಕುಸುಮಾ ಹರಿಪ್ರಸಾದ್ ಮಾಹಿತಿ ನೀಡಿದ್ದರು.
ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಡಿಸೆಂಬರ್ 2022ರಲ್ಲಿಯೂ ಒಂದು ಮೃತದೇಹ ಪತ್ತೆಯಾಗಿತ್ತು. ಕೆಜಿಎಫ್ನಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿತ್ತು.
ಗಂಡ, ಅತ್ತೆಯನ್ನು ಕೊಂದು ಕತ್ತರಿಸಿ ಫ್ರಿಡ್ಜ್ನಲ್ಲಿ ಅಡಗಿಸಿಟ್ಟ ಮಹಿಳೆ
ಕಳೆದ ತಿಂಗಳು ಗುವಾಹಟಿಯಲ್ಲಿ ಮಹಿಳೆಯೊಬ್ಬಳು ತನ್ನ ಗಂಡ ಮತ್ತು ಅತ್ತೆಯನ್ನು ಹತ್ಯೆಗೈದು ಹೆಣ ಅಡಗಿಸಿಡುವ ಉದ್ದೇಶದಿಂದ ಇಬ್ಬರ ಶವವನ್ನು ಕತ್ತರಿಸಿ ಫ್ರಿಡ್ಜ್ನಲ್ಲಿಟ್ಟು ಬಳಿಕ ನದಿಗೆ ಎಸೆದ ಪ್ರಕರಣ ಬೆಳಕಿಗೆ ಬಂದಿತ್ತು.
ಅಸ್ಸಾಂ ಪೊಲೀಸರು ಈಕೆಯನ್ನು ವಿಚಾರಣೆ ನಡೆಸಿದ್ದು, ಅತ್ತೆ ಮತ್ತು ಗಂಡನನ್ನು ಕೊಲೆ ಮಾಡಿ ದೇಹವನ್ನು ಕತ್ತರಿಸಿ ದೇಹದ ಭಾಗಗಳನ್ನು ಫ್ರೀಜರ್ನಲ್ಲಿಟ್ಟಿರುವುದಾಗಿ ತಿಳಿಸಿದ್ದಾಳೆ. ಬಳಿಕ ಆ ದೇಹದ ತುಂಡುಗಳನ್ನು ಪಾಲಿಥಾನ್ ಬ್ಯಾಗ್ಗಳಲ್ಲಿ ಪ್ಯಾಕ್ ಮಾಡಿ ಬಳಿಕ ಮೇಘಾಲಯಕ್ಕೆ ಸಾಗಿಸಿದ್ದಾಳೆ ಎಂದು ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ.
ಇಷ್ಟು ಕೆಲಸ ಮಾಡಿದ್ದು ಈಕೆ ಒಬ್ಬಳೇ ಅಲ್ಲ. ಈಕೆ ತನ್ನ ಪ್ರಿಯತಮ ಮತ್ತು ಆತನ ಸ್ನೇಹಿತನ ಸಹಾಯ ಪಡೆದು ಈ ಪ್ಯಾಕ್ಗಳನ್ನು ಕಮರಿಗೆ ಎಸೆದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ಅಮರೇಂದ್ರ ಡೇ ಮತ್ತು ಶಂಕರಿ ಡೇ ಎಂದು ಗುರುತಿಸಲಾಗಿದೆ. ಈ ಕೊಲೆ ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್ನಲ್ಲಿ ನಡೆದಿದೆ.