ವಿದೇಶಗಳ ನಕಲಿ ಚಾಕೋಲೇಟ್ಸ್, ಬಿಸ್ಕತ್‌, ತಂಪು ಪಾನೀಯಗಳ ಮಾರಾಟ; 1 ಕೋಟಿ ರೂ. ಮೌಲ್ಯದ ಮಾಲು ಬೆಂಗಳೂರು ಪೊಲೀಸರ ವಶಕ್ಕೆ
ಕನ್ನಡ ಸುದ್ದಿ  /  ಕರ್ನಾಟಕ  /  ವಿದೇಶಗಳ ನಕಲಿ ಚಾಕೋಲೇಟ್ಸ್, ಬಿಸ್ಕತ್‌, ತಂಪು ಪಾನೀಯಗಳ ಮಾರಾಟ; 1 ಕೋಟಿ ರೂ. ಮೌಲ್ಯದ ಮಾಲು ಬೆಂಗಳೂರು ಪೊಲೀಸರ ವಶಕ್ಕೆ

ವಿದೇಶಗಳ ನಕಲಿ ಚಾಕೋಲೇಟ್ಸ್, ಬಿಸ್ಕತ್‌, ತಂಪು ಪಾನೀಯಗಳ ಮಾರಾಟ; 1 ಕೋಟಿ ರೂ. ಮೌಲ್ಯದ ಮಾಲು ಬೆಂಗಳೂರು ಪೊಲೀಸರ ವಶಕ್ಕೆ

Bengaluru Crime News: ವಿದೇಶಗಳ ನಕಲಿ ಚಾಕೋಲೇಟ್ಸ್, ಬಿಸ್ಕತ್ ಮತ್ತು ತಂಪು ಪಾನೀಯಗಳ ಮಾರಾಟ, 1 ಕೋಟಿ ರೂ. ಮೌಲ್ಯದ ಮಾಲು ವಶ. ವಾಹನಗಳಲ್ಲಿ ಕಣ್ಣುಕುಕ್ಕುವ ದೀಪ ಅಳವಡಿಕೆ, 10 ದಿನಗಳಲ್ಲಿ 4 ಸಾವಿರ ಪ್ರಕರಣ ದಾಖಲು.

ವಿದೇಶಗಳ ನಕಲಿ ಚಾಕೋಲೇಟ್ಸ್, ಬಿಸ್ಕತ್‌, ತಂಪು ಪಾನೀಯಗಳ ಮಾರಾಟ; 1 ಕೋಟಿ ರೂ. ಮೌಲ್ಯದ ಮಾಲು ಬೆಂಗಳೂರು ಪೊಲೀಸರ ವಶಕ್ಕೆ
ವಿದೇಶಗಳ ನಕಲಿ ಚಾಕೋಲೇಟ್ಸ್, ಬಿಸ್ಕತ್‌, ತಂಪು ಪಾನೀಯಗಳ ಮಾರಾಟ; 1 ಕೋಟಿ ರೂ. ಮೌಲ್ಯದ ಮಾಲು ಬೆಂಗಳೂರು ಪೊಲೀಸರ ವಶಕ್ಕೆ

Bengaluru Crime News: ವಿದೇಶಗಳ ಕಳಪೆ ಗುಣಮಟ್ಟದ ಚಾಕೋಲೇಟ್ಸ್, ಬಿಸ್ಕತ್ ಮತ್ತು ತಂಪು ಪಾನೀಯಗಳನ್ನು ಮಾಲ್ ಮತ್ತು ಸೂಪರ್ ಮಾರ್ಕೆಟ್ ಗಳಿಗೆ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬನನ್ನು ಕೇಂದ್ರ ಅಪರಾಧ ವಿಭಾಗದ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಈತನಿಂದ 1 ಕೋಟಿ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. 45 ವರ್ಷದ ಈ ವ್ಯಾಪಾರಿಯು ತಾನೇ ಮುದ್ರಿಸಿಕೊಂಡಿದ್ದ ಭಾರತ ಆಹಾರ ಗುಣಮಟ್ಟ ಮತ್ತು ಸ್ಟಾಂಡರ್ಡ್ ಪ್ರಾಧಿಕಾರದ ನಕಲಿ ಲೇಬಲ್ ಗಳನ್ನು ಈ ಪದಾರ್ಥಗಳಿಗೆ ಅಂಟಿಸಿ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

1 ಕೋಟಿ ರೂ ಮೌಲ್ಯದ ಮಾಲು ವಶಕ್ಕೆ

ಲಭ್ಯವಾದ ಖಚಿತ ಮಾಹಿತಿಯನ್ನಾಧರಿಸಿ ಅಧಿಕಾರಿಗಳು ಸುಧಾಮನಗರದ ಗೋದಾಮಿನ ಮೇಲೆ ದಾಳಿ ನಡೆಸಿ 45 ವರ್ಷದ ರಾಜಸ್ಥಾನ ಮೂಲದ ನರೇಂದ್ರ ಸಿಂಗ್ ಎಂಬ ವ್ಯಾಪಾರಿಯನ್ನು ಬಂಧಿಸಿದ್ದಾರೆ. ಅಲ್ಲದೆ ಗೋದಾಮಿನಲ್ಲಿದ್ದ ನಕಲಿ ಗುಣಮಟ್ಟದ ಚಾಕೋಲೇಟ್ಸ್, ಬಿಸ್ಕತ್ ಮತ್ತು ತಂಪು ಪಾನೀಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ವಿದೇಶಗಳ ವಿವಿಧ ಬ್ರಾಂಡ್‌ಗಳ ಈ ಆಹಾರ ಪದಾರ್ಥಗಳ ಮೌಲ್ಯ ಸುಮಾರು 1 ಕೋಟಿ ರೂಪಾಯಿ ಎಂದೂ ಹೇಳಿದ್ದಾರೆ.

ಕಳೆದ ಐದು ವರ್ಷಗಳಿಂದ ಮಾರಾಟ

ಲಭ್ಯವಾದ ಮಾಹಿತಿಗಳ ಪ್ರಕಾರ ಈತ ಕಳೆದ 5 ವರ್ಷಗಳಿಂದ ಈ ಅಕ್ರಮ ವಹಿವಾಟನ್ನು ನಡೆಸಿಕೊಂಡು ಬಂದಿದ್ದಾನೆ. ಭಾರತ ಆಹಾರ ಗುಣಮಟ್ಟ ಮತ್ತು ಸ್ಟಾಂಡರ್ಡ್ ಪ್ರಾಧಿಕಾರದ ನಕಲಿ ಲೇಬಲ್ ಗಳನ್ನು ಬಳಸಿಕೊಂಡು ಹೆಚ್ಚಿನ ಎಂಆರ್‌ಪಿ ದರ ಮುದ್ರಿಸಿ ಮಾರಾಟ ಮಾಡುತ್ತಿದ್ದ. ಈ ಕಳಪೆ ಉತ್ಪನ್ನಗಳನ್ನು ವಿದೇಶಗಳಿಂದ ಮುಂಬೈ ಬಂದರಿಗೆ ತರಿಸಿಕೊಳ್ಳುತ್ತಿದ್ದ. ನಂತರ ಬೆಂಗಳೂರಿಗೆ ರಸ್ತೆ ಮಾರ್ಗದಲ್ಲಿ ಸಾಗಾಣೆ ಮಾಡಿ ಮಾರಾಟ ಮಾಡುತ್ತಿದ್ದ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ಈ ವಸ್ತುಗಳ ಮಾರಾಟದಿಂದ ಕೇವಲ ಆಹಾರ ಗುಣಮಟ್ಟ ಇಲಾಖೆಯ ಗೌರವಕ್ಕೆ ಧಕ್ಕೆ ತರುತ್ತಿದ್ದದ್ದು ಮಾತ್ರವಲ್ಲ, ಗ್ರಾಹಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದ್ದವು ಎಂದು ಅವರು ತಿಳಿಸಿದ್ದಾರೆ.

10 ದಿನಗಳಲ್ಲಿ 4 ಸಾವಿರ ಪ್ರಕರಣ ದಾಖಲು

ಪ್ರಖರ ಬೆಳಕು ಹೊರಸೂಸುವ ಮತ್ತು ಕಣ್ಣು ಕುಕ್ಕುವ ಎಲ್ ಇಡಿ ದೀಪಗಳನ್ನು ಅಳವಡಿಸಿರುವ ವಾಹನ ಸವಾರರ ವಿರುದ್ಧ ರಾಜ್ಯಾದ್ಯಂತ ಪೊಲೀಸರು ಸಮರ ಸಾರಿದ್ದಾರೆ. ಜುಲೈ 1ರಿಂದ 10ರವರೆಗೆ ಬೆಂಗಳೂರಿನಲ್ಲಿ 4 ಸಾವಿರ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಇದೇ ಅವಧಿಯಲ್ಲಿ 8 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಬಹುತೇಕ ಎಲ್ಲ ವಾಹನಗಳಲ್ಲೂ ಎಲ್ ಇ ಡಿ ದೀಪಗಳನ್ನು ಬಳಸಲಾಗುತ್ತಿದೆ. ಕೆಲವು ವಾಹನ ಸವಾರರು ಹೆಚ್ಚುವರಿಯಾಗಿ ಪ್ರಖರ ಬೆಳಕು ಹೊರಸುಸುವ ಮತ್ತು ಕಣ್ಣುಕುಕ್ಕುವ ದೀಪಗಳನ್ನು ಅಳವಡಿಸಿಕೊಂಡಿದ್ದಾರೆ. ಇದರಿಂದ ಎದುರು ಬರುವ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಕಾರು, ಲಾರಿ, ಟ್ರಕ್ ಮತ್ತು ಬಸ್ ಗಳಲ್ಲಿ ಹೆಚ್ಚುವರಿ ಎಲ್ ಇಡಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ಅಪಘಾತವಾಗುವ ಸಂಭವವೂ ಉಂಟು. ಆದ್ದರಿಂದ ಇಂತಹ ದೀಪಗಳನ್ನು ಅಳವಡಿಸಿಕೊಂಡಿರುವ ವಾಹನಗಳ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.

(ವರದಿ: ಎಚ್‌ ಮಾರುತಿ)

Whats_app_banner