Bengaluru Crime: ರೌಡಿಯನ್ನು ಗುಂಡಿಟ್ಟು ಕೊಂದು ಸುಟ್ಟು ಹಾಕಿದ್ದ ಮತ್ತೊಬ್ಬ ರೌಡಿ ಸೆರೆ; ಹಸು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ
ನಕಲಿ ಚಿನ್ನ ಅಡವಿಟ್ಟು ಹಣ ಪಡೆದಿದ್ದಕ್ಕಾಗಿ ಪ್ರಶ್ನಿಸಿದ ರೌಡಿಯೊಬ್ಬನನ್ನು ಮತ್ತೊಬ್ಬ ರೌಡಿ ಕೊಲೆ ಮಾಡಿ ಸುಟ್ಟು ಹಾಕಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಹಸು ಕದ್ದು ಮಾರಾಟ ಮಾಡುತ್ತಿದ್ದವನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಎರಡೂ ಪ್ರತ್ಯೇಕ ಘಟನೆಗಳು ಬೆಂಗಳೂರಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. (ವರದಿ: ಎಚ್. ಮಾರುತಿ)

ಬೆಂಗಳೂರು: ನಕಲಿ ಚಿನ್ನಾಭರಣ ಅಡ ಇಟ್ಟು ವಂಚನೆ ಮಾಡಿದ್ದನ್ನು ಪ್ರಶ್ನಿಸಿದ್ದ ರೌಡಿಶೀಟರ್ ಒಬ್ಬನನ್ನು ಗುಂಡು ಹಾರಿಸಿ ಕೊಲೆ ಮಾಡಿ ಮೃತದೇಹವನ್ನು ಸುಟ್ಟುಹಾಕಿದ್ದ ಆರೋಪದಡಿಯಲ್ಲಿ ಮತ್ತೊಬ್ಬ ರೌಡಿಯನ್ನು ಬೆಂಗಳೂರು ಹೊರವಲಯದ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರೌಡಿ 36 ವರ್ಷದ ಬಾಗಲೂರು ನಿವಾಸಿ ಬ್ರಿಜೇಶ್. ಗುಣಶೇಖರ್(30) ಮೃತ ರೌಡಿ.
ಮೃತದೇಹವನ್ನು ಸಾಗಿಸಿ ಸುಟ್ಟು ಹಾಕಲು ನೆರವು ನೀಡಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜನವರಿ 10ರಂದು ಬಾಗಲೂರು ಠಾಣೆ ವ್ಯಾಪ್ತಿಯ ಅಪಾರ್ಟ್ಮೆಂಟ್ಗೆ ಗುಣಶೇಖರ್ನನ್ನು ಕರೆಸಿಕೊಂಡು ಬ್ರಿಜೇಶ್ ಗುಂಡು ಹಾರಿಸಿ ಕೊಲೆ ಮಾಡಿದ್ದ. ತನ್ನ ಪತಿ ಗುಣಶೇಖರ್ ನಾಪತ್ತೆ ಆಗಿದ್ದಾರೆ ಎಂದು ಆತನ ಪತ್ನಿ ಜೋಸ್ಪಿನ್ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಗುಣಶೇಖರ್ನನ್ನು ಕೊಲೆ ಮಾಡಿರುವ ಮಾಹಿತಿ ಸಿಕ್ಕಿತ್ತು. ನಂತರ ಕೂಲಂಕಷವಾಗಿ ತನಿಖೆ ನಡೆಸಿದಾಗ ಬ್ರಿಜೇಶ್ ಕೊಲೆ ಮಾಡಿರುವ ಸುಳಿವು ಲಭ್ಯವಾಗಿತ್ತು. ನಂತರ ತಮಿಳುನಾಡಿನ ಪೆನ್ನಾಗರಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುಣಶೇಖರನ ಮೃತದೇಹ ಸುಟ್ಟಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪೆನ್ನಾಗರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಅಲ್ಲಿನ ಪೊಲೀಸರ ಜತೆ ಕಾನೂನು ಪ್ರಕ್ರಿಯೆ ನಡೆಸಿ ಮೃತದೇಹವನ್ನು ಗುಣಶೇಖರ್ ಅವರ ಪತ್ನಿಗೆ ಹಸ್ತಾಂತರ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ರೌಡಿಗಳಾಗಿದ್ದರಿಂದ ಕೊಲೆಯಾದ ಗುಣಶೇಖರ್ ಹಾಗೂ ಆರೋಪಿ ಬ್ರಿಜೇಶ್ ಪರಸ್ಪರ ಪರಿಚಯ ಹೊಂದಿದ್ದರು. ಬ್ರಿಜೇಶ್, ಭಾರತೀನಗರ ಠಾಣೆಯ ರೌಡಿಶೀಟರ್ ಆಗಿದ್ದರೆ, ಗುಣಶೇಖರ್ ಬಾಗಲೂರು ಠಾಣೆಯ ರೌಡಿಶೀಟರ್ ಆಗಿದ್ದ. ಬ್ರಿಜೇಶ್, ಪಂಜಾಬ್ನಿಂದ ನಕಲಿ ಚಿನ್ನವನ್ನು ತಂದು ಗುಣಶೇಖರನ ಮೂಲಕ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ. ಒಂದು ಬಾರಿ ಈ ರೀತಿ ತಂದ ನಕಲಿ ಚಿನ್ನವನ್ನು ಆರೋಪಿ ಬ್ರಿಜೇಶ್, ಗುಣಶೇಖರ್ನ ಸಂಬಂಧಿಯೊಬ್ಬರ ಮೂಲಕ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಅಡ ಇರಿಸಿ ಹಣ ಪಡೆದುಕೊಂಡಿದ್ದ. ಕೆಲವು ದಿನಗಳ ನಂತರ ಫೈನಾನ್ಸ್ ಕಂಪನಿಯವರು ತನಿಖೆ ನಡೆಸಿದಾಗ ಇವರು ಇರಿಸಿದ್ದ ಚಿನ್ನಾಭರಣ ನಕಲಿ ಚಿನ್ನಾಭರಣ ಎನ್ನುವುದು ತಿಳಿದು ಬಂದಿತ್ತು. ಫೈನಾನ್ಸ್ ಕಂಪನಿಯವರು ಸಾಲ ಪಡೆದಿರುವ ಅಸಲು ಮತ್ತು ಬಡ್ಡಿಯನ್ನು ಪಾವತಿಸಿ ಚಿನ್ನಾಭರಣ ಬಿಡಿಸಿಕೊಂಡು ಹೋಗಬೇಕು, ಒಂದು ವೇಳೆ ಚಿನ್ನಾಭರಣ ಬಿಡಿಸಿಕೊಳ್ಳದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿಯೂ ಗುಣಶೇಖರ್ಗೆ ಎಚ್ಚರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಗ ಗುಣಶೇಖರ್, ಬ್ರಿಜೇಶ್ಗೆ ಕರೆ ಮಾಡಿ ಕೂಡಲೇ ಚಿನ್ನಾಭರಣ ಬಿಡಿಸಿಕೊಳ್ಳಬೇಕು. ದೂರು ದಾಖಲಾದರೆ ಇಬ್ಬರಿಗೂ ತೊಂದರೆ ಆಗುತ್ತದೆ ಎಂದೂ ಎಚ್ಚರಿಸಿದ್ದ. ಈ ಮಧ್ಯೆ ಬ್ರಿಜೇಶ್ ನಡೆಸುತ್ತಿದ್ದ ನಕಲಿ ಚಿನ್ನಾಭರಣ ಮಾರಾಟ ದಂಧೆ ಕುರಿತು ಹಲವು ಸ್ನೇಹಿತರ ಬಳಿ ಗುಣಶೇಖರ್ ಬಾಯಿಬಿಟ್ಟಿದ್ದ. ಇದರಿಂದ ಬ್ರಿಜೇಶ್, ಗುಣಶೇಖರ್ ಮೇಲೆ ಕೋಪಗೊಂಡು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.
ಬ್ರಿಜೇಶ್ ಜ.10ರಂದು ಹಣ ಕೊಡುವುದಾಗಿ ಬಾಗಲೂರು ವ್ಯಾಪ್ತಿಯ ಅಪಾರ್ಟ್ಮೆಂಟ್ಗೆ ಗುಣಶೇಖರನನ್ನು ಕರೆಸಿಕೊಂಡಿದ್ದ. ಅಲ್ಲಿ ಇಬ್ಬರು ನಡುವೆ ಜಟಾಪಟಿ ನಡೆದಿತ್ತು. ಅದು ವಿಕೋಪಕ್ಕೆ ತಿರುಗಿದಾಗ ಗುಣಶೇಖರ್ ಮೇಲೆ ಬ್ರಿಜೇಶ್ ಎರಡು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದ. ನಂತರ ಮೃತದೇಹವನ್ನು ಸಾಗಿಸಲು ತನ್ನ ಸಹಚರನೊಬ್ಬನನ್ನು ಆರೋಪಿ ಕರೆಸಿಕೊಂಡಿದ್ದ. ಮೃತದೇಹವನ್ನು ಕಾರಿನಲ್ಲಿ ತಮಿಳುನಾಡಿಗೆ ಸಾಗಿಸಲು ತೀರ್ಮಾನಿಸಿದ್ದರು. ಅದರಂತೆ ತಮಿಳುನಾಡಿನ ಪೆನ್ನಾಗರಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಮೃತದೇಹವನ್ನು ಸುಟ್ಟು ಹಾಕಿದ್ದರು. ಮೃತದೇಹವನ್ನು ಕಂಡ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ತಮಿಳುನಾಡು ಪೊಲೀಸರು ಕರ್ನಾಟಕ ಪೊಲೀಸರಿಗೂ ಮಾಹಿತಿ ನೀಡಿದ್ದರು. ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ಕೃತ್ಯದ ಎಸಗಿದ ಬಳಿಕ ಆರೋಪಿ ಪಂಜಾಬ್ಗೆ ತೆರಳಿ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಲಭ್ಯವಾದ ನಂತರ ಪೊಲಿಸರು ಅಮೃತಸರಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಬ್ರಿಜೇಶ್ನನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಹಸುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ
ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಹಸುಗಳನ್ನು ಕದ್ದು ಮಾರಾಟ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಮೂಲದ ಸೋಮಶೇಖರ್ ಬಂಧಿತ ಆರೋಪಿ. ಈತ ಕಳವು ಮಾಡಿದ್ದ ಹಸುಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೃತಹಳ್ಳಿಯಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಸೋಮಶೇಖರ್ ಕೆಲಸ ಮಾಡುತ್ತಿದ್ದ. ಪ್ರತಿನಿತ್ಯ ಮಂಡ್ಯದಿಂದ ಬೆಂಗಳೂರಿಗೆ ಕೆಲಸಕ್ಕೆ ಬರುತ್ತಿದ್ದ. ಅಮೃತಹಳ್ಳಿಯ ಸರ್ಕಾರಿ ಶಾಲಾ ಸಮೀಪದ ಖಾಲಿ ಪ್ರದೇಶದಲ್ಲಿ ನಾಲ್ಕು ಹಸುಗಳನ್ನು ಕಟ್ಟಿ ಹಾಕುತ್ತಿದ್ದನ್ನು ಸೋಮಶೇಖರ್ ಗಮನಿಸಿದ್ದ. ಬಳಿಕ ಹಸುಗಳನ್ನು ಕದ್ದು ಮಾರಾಟ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಹಸುಗಳ ಮಾಲೀಕರು ಹಸುಗಳು ತಪ್ಪಿಸಿಕೊಂಡು ಹೋಗಿರಬಹದು ಎಂದು ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಪತ್ತೆಯಾಗಿರಲಿಲ್ಲ. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಹಸುಗಳನ್ನು ಕಟ್ಟಿದ್ದ ರಸ್ತೆ ಮತ್ತು ಇತರ ಮಾರ್ಗಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಆರೋಪಿಯ ಸುಳಿವು ಲಭ್ಯವಾಗಿತ್ತು. ನಂತರ, ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹಣ ಗಳಿಸುವ ಉದ್ದೇಶದಿಂದ ಹಸುಗಳನ್ನು ಕದ್ದು ಮಾರಾಟ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
