ಬೆಂಗಳೂರು ಸೈಬರ್ ವಂಚನೆ : ಒಬ್ಬರು ಡಿಜಿಟಲ್ ಅರೆಸ್ಟ್, ಇಬ್ಬರು ಹೆಚ್ಚು ಹಣಗಳಿಸಲು ಟ್ರೇಡಿಂಗ್ ಗ್ರೂಪ್ ಸೇರಿದ್ರು, 30 ಲಕ್ಷ ರೂ ಕಳಕೊಂಡ್ರು
Bengaluru Cyber Crime: ಬೆಂಗಳೂರು ಸೈಬರ್ ವಂಚನೆ ಪ್ರಕರಣ ದಿನೇದಿನೆ ಹೆಚ್ಚಳವಾಗುತ್ತಿದೆ. ಇತ್ತೀಚಿನ ವರದಿ ಪ್ರಕಾರ, ಒಬ್ಬರು ಡಿಜಿಟಲ್ ಅರೆಸ್ಟ್, ಇಬ್ಬರು ಹೆಚ್ಚು ಹಣಗಳಿಸಲು ಟ್ರೇಡಿಂಗ್ ಗ್ರೂಪ್ಗೆ ಸೇರಿ ಒಟ್ಟು 30 ಲಕ್ಷ ರೂ ಕಳೆದುಕೊಂಡಿದ್ದಾರೆ. ದೂರು ದಾಖಲಾಗಿದೆ. ಜಾಗೃತರಾಗಿ, ಸೈಬರ್ ವಂಚನೆಗೆ ಒಳಗಾಗದಿರಲು ಹೀಗೆ ಮಾಡಿ. (ವರದಿ- ಎಚ್ ಮಾರುತಿ, ಬೆಂಗಳೂರು)

Bengaluru Cyber Crime: ಬೆಂಗಳೂರಿನ ಕೇಂದ್ರ ಹಾಗೂ ಈಶಾನ್ಯ ವಿಭಾಗದ ಸೈಬರ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರಿಗೆ 30 ಲಕ್ಷ ರೂ ವಂಚಿಸಿರುವ ಪ್ರಕರಣಗಳು ವರದಿಯಾಗಿದೆ. ಸೈಬರ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದು ಅಪರಾಧಿಗಳಿಗೆ ಶೋಧ ನಡೆಸಲಾಗಿದೆ. ದಿನೇದಿನೆ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬರೂ ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಹೀಗಾಗಿ, ಇಂತಹ ಪ್ರಕರಣಗಳ ಸುದ್ದಿಗಳು ಬಂದಾಗ ಒಮ್ಮೆಯಾದರೂ ಕಣ್ಣಾಡಿಸುವುದು ಒಳಿತು. ಇಂತಹ ಸನ್ನಿವೇಶ ಎದುರಾದಾಗ ಏನು ಮಾಡಬೇಕು ಎಂಬುದು ತತ್ಕ್ಷಣಕ್ಕೆ ಮನಸ್ಸಿಗೆ ಹೊಳೆದುಬಿಡಬಹುದು.
ಪ್ರಕರಣ 1: ನಿವೃತ್ತ ಅಧಿಕಾರಿ ಡಿಜಿಟಲ್ ಅರೆಸ್ಟ್, 10 ಲಕ್ಷ ರೂ ವಂಚಕರ ಪಾಲು
ಮಲ್ಲೇಶ್ವರದಲ್ಲಿ ನೆಲಸಿರುವ 65 ವರ್ಷದ ನಿವೃತ್ತ ಅಧಿಕಾರಿಯೊಬ್ಬರಿಗೆ ದೆಹಲಿ ಪೊಲೀಸರೆಂದು ಹೇಳಿಕೊಂಡ ಸೈಬರ್ ವಂಚಕರು ವಾಟ್ಸ್ಆ್ಯಪ್ನಲ್ಲಿ ವಿಡಿಯೊ ಕರೆ ಮಾಡಿ, ನಿಮ್ಮ ವಿರುದ್ಧ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿದ್ದರು. ಪ್ರಕರಣದ ಸಂಬಂಧ ತಮ್ಮನ್ನು ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಹೆದರಿಸಿ, ಐದು ದಿನಗಳ ಕಾಲ ಡಿಜಿಟಲ್ ಅರೆಸ್ಟ್ನಲ್ಲಿ ಇರಿಸಿದ್ದರು. ಜಾಮೀನು ಹಾಗೂ ನ್ಯಾಯಾಲಯದ ಪ್ರಕ್ರಿಯೆಯ ವೆಚ್ಚಕ್ಕಾಗಿ ತಾವು ನೀಡುವ ಬ್ಯಾಂಕ್ ಖಾತೆಗೆ 10 ಲಕ್ಷ ರೂಪಾಯಿ ವರ್ಗಾವಣೆ ಮಾಡುವಂತೆ ಸೂಚನೆ ನೀಡಿದ್ದರು. ವಂಚಕರ ಸೋಗಿಗೆ ಹೆದರಿದ್ದ ದೂರುದಾರರು ತಮ್ಮ ಕೆನರಾ ಬ್ಯಾಂಕ್ ಖಾತೆಯಿಂದ ಜ.15ರಂದು ಆರ್ಟಿಜಿಎಸ್ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಮತ್ತೆ 3 ಲಕ್ಷ ರೂಪಾಯಿ ವರ್ಗಾವಣೆ ಮಾಡುವಂತೆ ವಂಚಕರು ಸೂಚಿಸಿದ್ದರು. ಆಗ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಆ ಅಧಿಕಾರಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ 2: ಫೇಸ್ಬಕ್ ಟ್ರೇಡಿಂಗ್ ಗ್ರೂಪ್ ಸೇರಿ ಮೋಸ ಹೋದ ಖಾಸಗಿ ಕಂಪನಿ ಉದ್ಯೋಗಿ
ಎಚ್ಬಿಆರ್ ಲೇಔಟ್ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಗೆ ಈಗ 57 ವರ್ಷ ವಯಸ್ಸು. ಹೆಚ್ಚು ಹಣ ಗಳಿಸುವುದಕ್ಕಾಗಿ ಟ್ರೇಡಿಂಗ್ ಮಾಡುವುದಕ್ಕೆ ಚಿಂತನೆ ನಡೆಸಿದ್ದರು. ಫೇಸ್ಬುಕ್ನಲ್ಲಿ ಟ್ರೇಡಿಂಗ್ ಗ್ರೂಪ್ ಕಂಡು ಅದಕ್ಕೆ ಸೇರಿದ್ದರು. ಅಲ್ಲಿದ್ದ ಸೈಬರ್ ವಂಚಕರು ಈ ಉದ್ಯೋಗಿಗೆ 9.76 ಲಕ್ಷ ರೂಪಾಯಿ ವಂಚಿಸಿದ್ದಾರೆ.
ನಡೆದುದು ಇಷ್ಟು - ಫೇಸ್ಬುಕ್ ಟ್ರೇಡಿಂಗ್ ಗ್ರೂಪ್ನಲ್ಲಿ ಅಪರಿಚಿತ ಪೇಜ್ ಲಿಂಕ್ ಒತ್ತಿದ್ದಾರೆ. ಅದರಲ್ಲಿ ಕಂಡು ಬಂದ ದಿ ಚಾರಿಟಿ ವೆಲ್ತ್ ಗ್ರೂಪ್ಗೆ ಸೇರ್ಪಡೆಯಾಗಿದ್ದಾರೆ. ಈ ಗ್ರೂಪ್ನಲ್ಲಿ ಎಸ್ಎಂಸಿಎಸ್ಟಿಕೆ ಆಪ್ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆ ಎಂದು ವಂಚಕರು ನಂಬಿಸಿದ್ದಾರೆ. ಈ ವಂಚಕರ ಮಾತು ನಂಬಿದ ಅವರು ಹಂತಹಂತವಾಗಿ 9.76 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ನಂತರ ತಾನು ಮೋಸ ಹೋಗಿರುವುದು ತಿಳಿದು ಬಂದು ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣ 3: ಇನ್ಸ್ಟಾಗ್ರಾಂ ಖಾತೆ ಫಾಲೋ ಮಾಡಿ ಹಣ ಕಳೆದುಕೊಂಡ ಉದ್ಯಮಿ
ಕುಂಬಾರಪೇಟೆಯ ಎಸ್ಪಿ ರಸ್ತೆಯಲ್ಲಿ ನೆಲೆಸಿರುವ ಉದ್ಯಮಿಯೊಬ್ಬರಿಗೂ ಸೈಬರ್ ವಂಚಕರು 10.60 ಲಕ್ಷ ರೂ ವಂಚಿಸಿದ್ದಾರೆ. ಉದ್ಯಮಿಗೆ ಇನ್ಸ್ಟಾಗ್ರಾಂನ 'ಸೌತ್ ಅನ್ನಾ ಎಕ್ಸ್ಚೇಂಜ್' ಖಾತೆಯ ಮೂಲಕ ಸುರಾಜ್ ಎಂಬ ಹೆಸರಿನ ವ್ಯಕ್ತಿ ಪರಿಚಯವಾಗಿದ್ದ.
ಸ್ವಲ್ಪದಿನಗಳ ನಂತರ, ಎರಡು ಪ್ರತ್ಯೇಕ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ದ ಸುರಾಜ್, ಆನ್ಲೈನ್ ಮೂಲಕ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿದ್ದ. ಸುರಾಜ್ನ ಮಾತು ನಂಬಿದ ಉದ್ಯಮಿ 2024ರ ಫೆಬ್ರವರಿಯಿಂದ ಮೇ ತಿಂಗಳವರೆಗೆ ಆತ ನೀಡಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 10.60 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದರು. ಕೆಲವು ದಿನ ಕಳೆದರೂ ಅಸಲು ಹಾಗೂ ಲಾಭಾಂಶವನ್ನು ವರ್ಗಾಯಿಸಿರಲಿಲ್ಲ. ಆಗ ಉದ್ಯಮಿಗೆ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಅರಿವಾಗಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಮನಿಸಿ: ಬೆಂಗಳೂರಿನಲ್ಲಿ ಸೈಬರ್ ವಂಚನೆ (Bengaluru Cyber Crime) ಪ್ರಕರಣ ದಿನೇದಿನೆ ಹೆಚ್ಚಾಗುತ್ತಿದೆ. ಹೀಗಾಗಿ ಸೈಬರ್ ವಂಚನೆಗೆ ಒಳಾಗದರೆ ಕೂಡಲೇ ಸೈಬರ್ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡಿ ದೂರು ಸಲ್ಲಿಸಿ. ಅಥವಾ cybercrime.gov.in ತಾಣಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ದೂರು ದಾಖಲಿಸಬಹುದು.
(ವರದಿ- ಎಚ್.ಮಾರುತಿ, ಬೆಂಗಳೂರು)
