Video: ಪಾಪ ಗುರು, ನವರಾತ್ರಿ ಪೂಜೆಗೂ ಭಾಗಿ- ಲ್ಯಾಪ್ಟಾಪ್ ಹಿಡ್ಕೊಂಡ್ ಮೀಟಿಂಗ್ಗೂ ಭಾಗಿ; ಬೆಂಗಳೂರಿನಲ್ಲಿ ಉದ್ಯೋಗಿಯೊಬ್ಬರು ಕಂಡದ್ದು ಹೀಗೆ
Bengaluru Video Viral: ಬೆಂಗಳೂರಿನಲ್ಲಿ ಉದ್ಯೋಗಿಯೊಬ್ಬರು ನವರಾತ್ರಿ ಪೂಜೆಗೂ ಭಾಗಿ, ಲ್ಯಾಪ್ಟಾಪ್ ಹಿಡ್ಕೊಂಡು ಮೀಟಿಂಗ್ಗೂ ಭಾಗಿಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ.

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಹಬ್ಬ ಹರಿದಿನಗಳಲ್ಲಿ ಪಾಲ್ಗೊಳ್ಳುವುದು ಅಪರೂಪ. ಕೆಲಸದ ಒತ್ತಡ ಮತ್ತು ರಜೆಗಳ ಕೊರತೆಯ ಕಾರಣ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಮಂದಿ ಹಗಲು-ರಾತ್ರಿ ಕಷ್ಟಪಡುತ್ತಾ, ಸರಿಯಾಗಿ ಕುಟುಂಬ ಸದಸ್ಯರೊಂದಿಗೆ ಅಮೂಲ್ಯ ಸಮಯವನ್ನು ಕಳೆಯಲು ವಿಫಲವಾಗುತ್ತಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಎನ್ನುವಂತೆ ಒಂದು ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿದೆ.
ಬೆಂಗಳೂರು ನಗರದಲ್ಲಿ ಆಯೋಜಿಸಿದ್ದ ನವರಾತ್ರಿ ಪೂಜಾ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ತನ್ನ ಲ್ಯಾಪ್ಟಾಪ್ ಮತ್ತು ಫೋನ್ ಎರಡರಲ್ಲೂ ಕ್ಲೈಂಟ್ ಮೀಟಿಂಗ್ಗೆ ಹಾಜರಾಗಿದ್ದ ಅಪರೂಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದಲ್ಲಿ ಇದು ಕೆಲಸದ ಒತ್ತಡ ಮತ್ತು ವೇಗದ ಸಂಸ್ಕೃತಿಯನ್ನು ಹೇಗೆ ಆವರಿಸಿದೆ ಎಂಬುದನ್ನು ಬಿಂಬಿಸುತ್ತದೆ. ಅವರು ಪ್ರೊಫೆಷನಲ್ ಕಮಿಟ್ಮೆಂಟ್ ಮತ್ತು ಹಬ್ಬಗಳನ್ನು ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ವಿಡಿಯೋ ಇದಾಗಿದೆ ಎಂದು ಕರ್ನಾಟಕ ಪೋರ್ಟ್ಪೋಲಿಯೋ ಎನ್ನುವ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.
ನವರಾತ್ರಿ ಹಬ್ಬದ ಸಂಭ್ರಮಾಚರಣೆಯ ವಾತಾವರಣದ ಹೊರತಾಗಿಯೂ ಈ ವ್ಯಕ್ತಿಯು ತನ್ನ ಕೆಲಸದ ಭಾಗವಾಗಿ ಮೀಟಿಂಗ್ನಲ್ಲಿ ಭಾಗವಹಿಸಿದ್ದರು. ಅವರು ಮಲ್ಟಿ ಟಾಸ್ಕಿಂಗ್ ನಿಭಾಯಿಸುವ ಮೂಲಕ ಗಮನ ಸೆಳೆದರು. ರೋಮಾಂಚಕ ಹಬ್ಬಗಳ ನಡುವೆಯೂ ಕೆಲಸ ಮಾಡುವ ಆತನಿಗೆ ಕೆಲಸದ ಮೇಲಿರುವ ಬದ್ಧತೆ ಮತ್ತು ಹಬ್ಬದ ಆಚರಣೆಯ ಸಂಪ್ರದಾಯವು ಆಧುನಿಕ ಹಬ್ಬಗಳ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ ಎಂದು ಪೋಸ್ಟ್ನಲ್ಲಿ ಬರೆಯಲಾಗಿದೆ. ಆದರೆ, ನೆಟ್ಟಿಗರು ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಂಪನಿಗಳ ನಡೆಗೆ ನೆಟ್ಟಿಗರ ತೀವ್ರ ಆಕ್ರೋಶ
ಈ ಪೋಸ್ಟ್ಗೆ ಸುರೇಶ್ ಎನ್ನುವವರು ಪ್ರತಿಕ್ರಿಯಿಸಿದ್ದು, ಕಂಪನಿಗಳಲ್ಲಿ ಕೆಲಸದಿಂದ ತೆಗೆಯುವವರೆ ಈ ಉದ್ಯೋಗಿಯ ಬದ್ದತೆಯನ್ನು ಒಮ್ಮೆ ನೋಡಿ. ಕಂಪನಿಯು ಕೆಲಸದಿಂದ ತೆಗೆಯುವ ಅಸಂಬದ್ಧತೆಯನ್ನು ನಿಲ್ಲಿಸಿ. ವಜಾಗೊಳಿಸುವ ಮೊದಲು ಎರಡು ಬಾರಿ ಯೋಚಿಸಬೇಡಿ, ಆದ್ದರಿಂದ ವೈಯಕ್ತಿಕ ಮತ್ತು ವೃತ್ತಿಪರ ಸಮಯವನ್ನು ಪ್ರತ್ಯೇಕಿಸಿ ಎಂದು ಸಲಹೆ ನೀಡಿದ್ದಾರೆ. ಅನ್ನೌನ್ ಎನ್ನುವ ಖಾತೆಯು ಪ್ರತಿಕ್ರಿಯಿಸಿ, ಅವರು ನಾಳೆ ಸತ್ತರೆ, ಶವಸಂಸ್ಕಾರಕ್ಕೂ ಮುನ್ನವೇ ಅವರ ಸ್ಥಾನವನ್ನು ಬದಲಿಸಿ ಮತ್ತೊಬ್ಬರನ್ನು ನೇಮಿಸಿಕೊಳ್ಳುತ್ತಾರೆ ಎಂದು ಕಂಪನಿಗಳ ಅಮಾನವೀಯ ನಡೆಯನ್ನು ಖಂಡಿಸಿದ್ದಾರೆ.
ಅಮರ್ ಭಾಸ್ಕರ್ ಎನ್ನುವವರು ಈ ಪೋಸ್ಟ್ಗೆ ಪ್ರತಿಕ್ರಿಯಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲ್ಲೇ ಕೆಲಸ ಮಾಡಲಿ, ಕೆಲಸದ ಶಿಸ್ತಿನ ಸಂಪೂರ್ಣ ಪರಿಷ್ಕರಣೆ ಅಗತ್ಯವಿದೆ ಎಂದಿದ್ದಾರೆ. ಇದೇ ವೇಳೆ ಕೆಲವೊಂದು ಹಾಸ್ಯಾಸ್ಪದ ಕಾಮೆಂಟ್ಗಳನ್ನೂ ನೋಡಬಹುದು. ಆತ ಪೂಜಾ ಕಮಿಟಿಯ ಸದಸ್ಯರಾಗಿರಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಈ ನನ್ ಮಕ್ಕಳು ಸಿಕ್ಕಿದ್ ಸಿಕ್ಕಿದ್ದಕ್ಕೆಲ್ಲಾ ಪೀಕ್ ಬೆಂಗಳೂರು, ಪೀಕ್ ಬೆಂಗಳೂರು ಅಂದ್ಕೊಂಡು ಎಲ್ಲ ಹಾಳ್ ಮಾಡ್ತಾವ್ರೆ ಎಂದು ಟಾಸ್ಕ್ ರನ್ ಎಂಬ ಖಾತೆಯವರು ಕಾಮೆಂಟ್ ಮಾಡಿದ್ದಾರೆ.