ಕರ್ನಾಟಕದ ಶೇಂಗಾ ಬೆಳೆಗಾರರಿಗೆ ಖುಷಿ ಸುದ್ದಿ; ಬೆಂಬಲ ಬೆಲೆಯಲ್ಲಿ ಖರೀದಿ ಫೆ 15 ರ ತನಕ ವಿಸ್ತರಣೆಯಾಗಿದೆ: ಕೇಂದ್ರ ಸಚಿವ ಜೋಶಿ
ಕರ್ನಾಟಕದ ಶೇಂಗಾ ಬೆಳೆಗಾರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದ್ದು, ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಯ ಅವಧಿಯನ್ನು ಫೆ 15ರ ತನಕ ವಿಸ್ತರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕದ ಶೇಂಗಾ ಬೆಳೆಗಾರರಿಗೆ ಖುಷಿ ಸುದ್ದಿ ನೀಡಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಸುವ ಅವಧಿ ವಿಸ್ತರಣೆ ಮಾಡಿದ್ದು, ಹೆಚ್ಚುವರಿ ಶೇಂಗಾ ಖರೀದಿಸುವುದಕ್ಕೂ ಸೂಚನೆ ನೀಡಿದೆ. ಕರ್ನಾಟಕದಲ್ಲಿ ಈ ಬಾರಿ ಅಧಿಕ ಪ್ರಮಾಣದಲ್ಲಿ ಶೇಂಗಾ (ನೆಲಗಡಲೆ) ಬೆಳೆದ ಹಿನ್ನೆಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ರೈತರಿಗೆ ನೆರವಾಗಿದ್ದ ಕೇಂದ್ರ ಸರ್ಕಾರ, ಈಗ ಮತ್ತೆ ಖರೀದಿ ಅವಧಿಯನ್ನು ಫೆ 15ರ ತನಕ ವಿಸ್ತರಿಸಿದ್ದು, ಶೇಂಗಾ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಶೇಂಗಾ ಖರೀದಿ ಅವಧಿ ಹೆಚ್ಚಿಸಲು ಗಮನ ಸೆಳೆದಿದ್ದರು ಸಚಿವ ಜೋಶಿ
ಕನಿಷ್ಠ ಬೆಂಬಲ ಬೆಲೆ ಯೋಜನೆಯ ಪ್ರಕಾರ ಕೇಂದ್ರ ಕೃಷಿ ಸಚಿವಾಲಯವು, ಕರ್ನಾಟಕದಲ್ಲಿ 2024-25ರ ರಾಬಿ ಋತುವಿನಲ್ಲಿ (ಹಿಂಗಾರು ಬೆಳೆ) ಬೆಳೆದ ಶೇಂಗಾವನ್ನು ಖರೀದಿಸುವುದಕ್ಕೆ 90 ದಿನಗಳ ಕಾಲವಕಾಶ ನೀಡಿ ಕರ್ನಾಟಕ ಸರ್ಕಾರಕ್ಕೆ ಅನುಮತಿ ನೀಡಿತ್ತು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಇದ್ದ ಕಾರಣ, ರೈತರ ಹಿತದೃಷ್ಟಿಯಿಂದ ಬೆಂಬಲ ಬೆಲೆ ಖರೀದಿಯ ಕಾಲಮಿತಿ ಹೆಚ್ಚಿಸುವಂತೆ ಧಾರವಾಡದ ಸಂಸದರೂ ಆಗಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿದ್ದರು. ಅಲ್ಲದೇ, ಇತ್ತೀಚೆಗೆ ಕರ್ನಾಟಕ ಸರ್ಕಾರವೂ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿತ್ತು. ಇವೆರಡನ್ನೂ ಪರಿಗಣಿಸಿದ ಕೇಂದ್ರ ಕೃಷಿ ಸಚಿವಾಲಯ ಈ ತೀರ್ಮಾನ ಪ್ರಕಟಿಸಿದೆ.
ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಅವಧಿ ವಿಸ್ತರಣೆ, 57703 ಮೆಟ್ರಿಕ್ ಟನ್ ಖರೀದಿಗೆ ಸೂಚನೆ
ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರ ಮನವಿ ಮೇರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಪ್ರಕ್ರಿಯೆಯನ್ನು ಫೆಬ್ರವರಿ 15ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಕೇಂದ್ರ ಸರ್ಕಾರ ಕರ್ನಾಟಕದಿಂದ ಈ ಬಾರಿ ಒಟ್ಟು 57703 ಮೆಟ್ರಿಕ್ ಟನ್ ಶೇಂಗಾವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ. ಮೊದಲಿಗೆ 36,974 ಮೆಟ್ರಿಕ್ ಟನ್ ಶೇಂಗಾ ಖರೀದಿಗೆ ರಾಜ್ಯಕ್ಕೆ ಸೂಚಿಸಲಾಗಿತ್ತು. ಈಗ ಅವಧಿ ವಿಸ್ತರಣೆ ಜತೆಗೆ ಮತ್ತೆ 20,730 ಮೆಟ್ರಿಕ್ ಟನ್ ಶೇಂಗಾವನ್ನು ಹೆಚ್ಚುವರಿಯಾಗಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ರಾಜ್ಯದಲ್ಲಿ ಶೇಂಗಾ ಬೆಳೆದ ರೈತರ ಪರಿಸ್ಥಿತಿ ಅರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಅವರು ಸ್ಪಂದಿಸಿದ್ದು, ಸಮಸ್ತ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
