ಗುಡ್‌ ಫ್ರೈಡೆ, ಈಸ್ಟರ್‌, ಬೇಸಿಗೆ ಹೀಗೆ ಸಾಲು ಸಾಲು ರಜೆ; ದುಪ್ಪಟ್ಟಾಗಿದೆ ಹೊರ ರಾಜ್ಯಗಳ ಪ್ರಯಾಣ ದರ, ಬಸ್ ಟಿಕೆಟ್ ದರ ವಿವರ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಗುಡ್‌ ಫ್ರೈಡೆ, ಈಸ್ಟರ್‌, ಬೇಸಿಗೆ ಹೀಗೆ ಸಾಲು ಸಾಲು ರಜೆ; ದುಪ್ಪಟ್ಟಾಗಿದೆ ಹೊರ ರಾಜ್ಯಗಳ ಪ್ರಯಾಣ ದರ, ಬಸ್ ಟಿಕೆಟ್ ದರ ವಿವರ ಹೀಗಿದೆ

ಗುಡ್‌ ಫ್ರೈಡೆ, ಈಸ್ಟರ್‌, ಬೇಸಿಗೆ ಹೀಗೆ ಸಾಲು ಸಾಲು ರಜೆ; ದುಪ್ಪಟ್ಟಾಗಿದೆ ಹೊರ ರಾಜ್ಯಗಳ ಪ್ರಯಾಣ ದರ, ಬಸ್ ಟಿಕೆಟ್ ದರ ವಿವರ ಹೀಗಿದೆ

ಗುಡ್‌ ಫ್ರೈಡೆ, ಈಸ್ಟರ್‌, ಬೇಸಿಗೆ… ಸಾಲು ಸಾಲು ರಜೆ ಈ ವಾರಂತ್ಯಕ್ಕೆ ಬಂದಿದೆ. ಹೀಗಾಗಿ ಹೊರ ರಾಜ್ಯಗಳ ಪ್ರಯಾಣ ದರ ದುಪ್ಪಟ್ಟಾಗಿದೆ. ಯಾವ ರಾಜ್ಯದ ಪ್ರಯಾಣ ದರ ಎಷ್ಟಿದೆ? ಇಲ್ಲಿದೆ ಮಾಹಿತಿ (ವರದಿ- ಎಚ್.ಮಾರುತಿ, ಬೆಂಗಳೂರು)

ಗುಡ್‌ ಫ್ರೈಡೆ, ಈಸ್ಟರ್‌, ಬೇಸಿಗೆ ಹೀಗೆ ಸಾಲು ಸಾಲು ರಜೆ ಬಂದಿದೆ. ಹೀಗಾಗಿ ಹೊರ ರಾಜ್ಯಗಳ ಪ್ರಯಾಣ ದರ  ದುಪ್ಪಟ್ಟಾಗಿದೆ. (ಸಾಂಕೇತಿಕ ಚಿತ್ರ)
ಗುಡ್‌ ಫ್ರೈಡೆ, ಈಸ್ಟರ್‌, ಬೇಸಿಗೆ ಹೀಗೆ ಸಾಲು ಸಾಲು ರಜೆ ಬಂದಿದೆ. ಹೀಗಾಗಿ ಹೊರ ರಾಜ್ಯಗಳ ಪ್ರಯಾಣ ದರ ದುಪ್ಪಟ್ಟಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಗುಡ್ ಫ್ರೈಡೆ ಮತ್ತು ಈಸ್ಟರ್ ಅಂಗವಾಗಿ ವಾರಾಂತ್ಯದ ರಜೆಗಳಿರುವ ಕಾರಣಕ್ಕೆ ಬೆಂಗಳೂರಿನಿಂದ ಕೇರಳ ಮತ್ತು ತಮಿಳುನಾಡಿಗೆ ತೆರಳುವ ಖಾಸಗಿ ಬಸ್‌ ಪ್ರಯಣ ದರ ದುಪ್ಪಟ್ಟಾಗಿದೆ. ಆಫ್‌ ಸೀಸನ್‌ ಗೆ ಹೋಲಿಸಿದರೆ ಈ ವಾರದಲ್ಲಿ ಬಸ್‌ ಪ್ರಯಾಣ ದರದಲ್ಲಿ ಹೆಚ್ಚಳವಾಗಿದೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಖಾಸಗಿ ಬಸ್‌ ಆಪರೇಟರ್‌ ಗಳ ಪ್ರಕಾರ ಈ ವಾರವಿಡೀ ಬಸ್‌ ಪ್ರಯಾಣದರಲ್ಲಿ ಏರಿಕೆಯಾಗುತ್ತಲೇ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ದುಪ್ಪಟ್ಟಾಗಿದೆ ಹೊರ ರಾಜ್ಯಗಳ ಪ್ರಯಾಣ ದರ

ಸುದೀರ್ಘ ವಾರಾಂತ್ಯದ ಜತೆಗೆ ಬೇಸಿಗೆ ರಜಾ ದಿನಗಳೂ ಇರುವುದು ಬಸ್‌ ಪ್ರಯಾಣ ದರ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ರಜೆ ಇರುವ ಕಾರಣಕ್ಕೆ ಪೋಷಕರು ಮಕ್ಕಳೊಂದಿಗೆ ಕೇರಳ ಮತ್ತು ತಮಿಳುನಾಡು ಪ್ರವಾಸ ಕೈಗೊಳ್ಳುವುದು ಸರ್ವೇ ಸಾಮಾನ್ಯ. ಈ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಖಾಸಗಿ ಬಸ್‌ ಮಾಲೀಕರು ಬಸ್‌ ಪ್ರಯಾಣ ದರವನ್ನು ಏರಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ.

ಬಸ್‌ ಪ್ರಯಾಣ ದರವೇನೂ ಏಕಾಏಕಿ ಹೆಚ್ಚಳವಾಗಿಲ್ಲ. ಶಾಲಾ ಕಾಲೇಜುಗಳ ಪರೀಕ್ಷೆಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬುಕ್ಕಿಂಗ್‌ ಆರಂಭಗೊಂಡಿದ್ದು, ಆಗಿನಿಂದಲೇ ಬಸ್‌ ಪ್ರಯಾಣ ದರ ಏರಿಕೆಯಾಗಿದೆ ಎಂದು ಪ್ರಯಾಣಿಕರೊಬ್ಬರು ಆಪಾದಿಸುತ್ತಿದ್ದಾರೆ. ಬುಕ್ಕಿಂಗ್‌ ಏಜೆಂಟ್‌ ಗಳ ಪ್ರಕಾರ ಒಂದೆರಡು ತಿಂಗಳ ಮುಂಚಿತವಾಗಿಯೇ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ.

ಕೇರಳ ಮೂಲದ ಅನೇಕ ಮಂದಿ ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ನೆಲೆಸಿದ್ದಾರೆ. ಹಬ್ಬಕ್ಕೆ ಕೇರಳದ ನಮ್ಮ ಊರಿಗೆ ಹೋಗಲು ಬುಕ್ಕಿಂಗ್‌ ಮಾಡಲು ಹೋದರೆ ಪ್ರಯಾಣ ದರ ದುಪ್ಪಟ್ಟಾಗಿದೆ. ನಮ್ಮಂತಹ ಮಧ್ಯಮ ವರ್ಗದ ಜನ ಪ್ರಯಾಣಿಸುವುದಾದರೂ ಹೇಗೆ ಎಂದು ಮೇರಿ ಜೋಸೆಫ್‌ ಪ್ರಶ್ನಿಸುತ್ತಾರೆ.

ಇ ಟಿಕೆಟ್ ಬುಕ್ಕಿಂಗ್‌ನಲ್ಲಿ ರಿಯಾಯಿತಿ ಇದ್ದರೂ ನಷ್ಟ ಹೆಚ್ಚು

ಇ-ಬುಕಿಂಗ್‌ ಮೂಲಕ ಬುಕಿಂಗ್‌ ಮಾಡಿದರೆ ಕೆಲವೊಮ್ಮೆ ರಿಯಾಯಿತಿಗಳು ಲಭ್ಯವಾಗುತ್ತವೆ. ಆದರೆ ಪ್ಲಾಟ್‌ ಫಾರ್ಮ್ ಶುಲ್ಕ ಮತ್ತು ಶೇ. 18 ರಷ್ಟು ಜಿ ಎಸ್‌ ಟಿ ವಿಧಿಸುವುದರಿಂದ ಹೆಚ್ಚುವರಿಯಾಗಿ 250 ರೂಪಾಯಿ ನಷ್ಟವಾಗುತ್ತದೆ ಎಂದು ಮತ್ತೊಬ್ಬ ಪ್ರಯಾಣಿಕರು ಅಭಿಪ್ರಾಯಪಡುತ್ತಾರೆ.

2024ರ ಡಿಸೆಂಬರ್‌ ಕ್ರಿಸ್‌ಮಸ್ ಸಂದರ್ಭದಲ್ಲಿ ಹೊರ ರಾಜ್ಯಗಳಿಗೆ ಪ್ರಯಾಣ ದರ ಒಬ್ಬರಿಗೆ 5,000 ರೂಪಾಯಿ ಇತ್ತು. ಆದರೆ ಗುಡ್‌ ಫ್ರೈ ಡೆ ಸಂದರ್ಭದಲ್ಲಿ ಅಷ್ಟೊಂದು ಹೆಚ್ಚಳವಾಗಿಲ್ಲ. ಕೇರಳ, ತಮಿಳುನಾಡಿಗೆ ಪ್ರಯಾಣ ದರ 4,000 ರೂಪಾಯಿಗಿಂತ ಕಡಿಮೆ ಇದೆ ಏಜೆನ್ಸಿ ವ್ಯವಸ್ಥಾಪಕರೊಬ್ಬರು ಹೇಳುತ್ತಾರೆ. ಆದರೂ ಈ ದರವೂ ಬಡ ಮಧ್ಯಮ ವರ್ಗದ ಜನರಿಗೆ ದುಬಾರಿ ಎನ್ನಲಾಗುತ್ತಿದೆ.

ಈಸ್ಟರ್ ವಾರಾಂತ್ಯದ ಕಾರಣ ಭಾನುವಾರದವರೆಗೆ ಪ್ರಯಾಣ ದರಗಳು ಹೆಚ್ಚಿರುವ ಸಾಧ್ಯತೆ ಇದೆ. ಭಾನುವಾರದ ನಂತರ ಸ್ವಲ್ಪ ಇಳಿಕೆ ಕಂಡುಬರಬಹುದು, ಆದರೆ ಏಪ್ರಿಲ್ ಮತ್ತು ಮೇ ತಿಂಗಳುಗಳು ಸಾಮಾನ್ಯವಾಗಿ ಜನದಟ್ಟಣೆಯ ಪ್ರಯಾಣ ತಿಂಗಳುಗಳಾಗಿವೆ ಎಂದು ಕಲಾಸಿಪಾಳ್ಯದ ಬಸ್ ಚಾಲಕರೊಬ್ಬರು ತಿಳಿಸಿರುವುದನ್ನೂ ವರದಿ ಉಲ್ಲೇಖಿಸಿದೆ.

ಭಾನುವಾರ ನಂತರ ಪ್ರಯಾಣ ದರ ಇಳಿಕೆಯಾಗಬಹುದು ಎಂದು ಭಾವಿಸಲಾಗಿದೆ. ಏಪ್ರಿಲ್‌ ಮತ್ತು ಮೇ ತಿಂಗಳು ಪ್ರವಾಸದ ತಿಂಗಳುಗಳಾಗಿದ್ದು, ಬಸ್‌ ಪ್ರಯಾಣ ದರಗಳಲ್ಲಿ ಇಳಿಕೆಯಾಗುವ ಸಾಧ್ಯತೆಗಳು ಕಡಿಮೆ. ಯಾವುದೇ ಕಾರಣಕ್ಕೂ 1000 ರೂಗಗಿಂತ ಕಡಿಮೆಯಾಗುವ ಸಾಧ್ಯತೆಗಳಿಲ್ಲ ಎಂದು ಬುಕಿಂಗ್‌ ನಲ್ಲಿ ದಶಕದ ಅನುಭವ ಹೊಂದಿರುವ ಮನೋಹರ್‌ ಹೇಳುತ್ತಾರೆ.

ಕೇರಳದ ಅನೇಕ ನಗರಗಳ ಪ್ರಯಾಣ ದರದಲ್ಲಿ ಗಣನೀಯ ಏರಿಕೆಯಾಗಿದೆ. ಕೊಚ್ಚಿ ಮತ್ತು ತಿರುವನಂತಪುರದ ಪ್ರಯಾಣ ದರ ದುಪ್ಪಟ್ಟಾಗಿದೆ. ಆಂಧ್ರಪ್ರದೇಶ ಮತ್ತು ಗೋವಾ ಪ್ರಯಾಣ ದರವೂ ಏರಿಕೆ ಕಂಡಿದೆ. ಬಿಸಿಲು ಹೆಚ್ಚಿರುವ ಕಾರಣಕ್ಕೆ ತಮಿಳುನಾಡಿನ ಪ್ರವಾಸಿ ತಾಣಗಳ ಬಸ್‌ ಪ್ರಯಾಣ ದರದಲ್ಲಿ ಏರಿಕೆಯಾಗಿದ್ದರೂ ಕೇರಳಕ್ಕೆ ಹೋಲಿಸಿದರೆ ಪ್ರಯಾಣ ದರ ಕಡಿಮೆ ಎನ್ನಲಾಗುತ್ತಿದೆ. ಆದರೂ ಬೇಡಿಕೆ ಹೆಚ್ಚಿದರೆ ಸಹಜವಾಗಿಯೇ ಟಿಕೆಟ್‌ ಬೆಲೆ ಸ್ವಾಭಾವಿಕವಾಗಿ ಏರಿಕೆ ಕಾಣುತ್ತದೆ.

ಬೆಂಗಳೂರಿನಿಂದ ಯಾವ ರಾಜ್ಯಕ್ಕೆ ಎಷ್ಟು ಬಸ್ ಟಿಕೆಟ್ ದರ

ಕೇರಳಕ್ಕೆ ಆಫ್ ಸೀಸನ್ ನಲ್ಲಿ 1,100 – 1,200 ರೂ ಇದ್ದ ಪ್ರಯಾಣ ದರ, ಪ್ರಸ್ತುತ 2,000 – 3,000 ರೂ.ಗಳಿಗೆ ಏರಿಕೆಯಾಗಿದೆ. ಆಂಧ್ರಪ್ರದೇಶಕ್ಕೆ ಆಫ್ ಸೀಸನ್ ನಲ್ಲಿ 1,000 ರೂ.ಗಿಂತ ಕಡಿಮೆ ಇದ್ದ ಪ್ರಯಾಣ ದರ ಈಗ 2,000 ರೂ. ಆಸುಪಾಸಿನಲ್ಲಿದೆ. ತಮಿಳುನಾಡು ಪ್ರಯಾಣ ದರ ಆಫ್ ಸೀಸನ್ ನಲ್ಲಿ 1,000 ರೂ ಇದ್ದದ್ದು ಪ್ರಸ್ತುತ 1,100-1,200 ರೂ.ಗೆ ಏರಿಕೆಯಾಗಿದೆ. ಇನ್ನು ಗೋವಾಕ್ಕೆ ಆಫ್-ಸೀಸನ್ ನಲ್ಲಿ 700 ರೂ. ಇದ್ದ ಪ್ರಯಾಣ ದರ ಪ್ರಸ್ತುತ 1,500-1750 ರೂ.ವರೆಗೆ ನಿಗದಿಯಾಗಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.