Bengaluru Crime: ಕೊಲೆ ಮಾಡಿ ಮೃತದೇಹವನ್ನು ಕಾರಿನಲ್ಲಿ ಪೊಲೀಸ್ ಠಾಣೆಗೆ ತಂದ ಭೂಪ
ಹಣಕಾಸಿನ ವಿಚಾರವಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ರಾಜಶೇಖರ್ ಎಂಬ ವ್ಯಕ್ತಿ ಮೃತದೇಹವನ್ನು ಕಾರಿನಲ್ಲಿ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾನೆ.
ಬೆಂಗಳೂರು: ರಾಜಧಾನಿಯಲ್ಲಿ ನಡೆದ ಘಟನೆಯೊಂದು ಬೆಂಗಳೂರು ಜನತೆಯನ್ನು ಬೆಚ್ಚಿ ಬೀಳಿಸಿದೆ. ಹಣಕಾಸಿನ ವಿಚಾರವಾಗಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ರಾಜಶೇಖರ್ ಎಂಬ ವ್ಯಕ್ತಿ ಮೃತದೇಹವನ್ನು ಕಾರಿನಲ್ಲಿ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಶರಣಾಗಿದ್ದಾನೆ.
ಕಾರ್ ಮೆಕ್ಯಾನಿಕ್ ಆಗಿರುವ ಆರೋಪಿ ರಾಜಶೇಖರ್ ಜಯಂತಿ ನಗರದ ನಿವಾಸಿಯಾಗಿದ್ದು, ಮೃತನನ್ನು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮನಹುಂಡಿ ನಿವಾಸಿ ಮಹೇಶಪ್ಪ (45) ಎಂದು ಗುರುತಿಸಲಾಗಿದೆ.
ಮಹೇಶಪ್ಪ ಮಹಿಳಾ ಸೊಸೈಟಿ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಹಲವು ಯೋಜನೆಯಡಿ ಸಾಲ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ. ಇದರಿಂದ ಹಣ ಕಳೆದುಕೊಂಡಿದ್ದ ರಾಜಶೇಖರ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿರುವ ರಾಜಶೇಖರ್, ಮೊನ್ನೆ ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಮಹೇಶಪ್ಪನ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದೆ. ಆತ ಕಾರಿನ ಹಿಂಬದಿ ಸೀಟಿನಲ್ಲಿದ್ದ. ಆವಲಹಳ್ಳಿಯ ರೆಸ್ಟೋರೆಂಟ್ ಬಳಿ ಊಟಮಾಡಿ ಕಾರಿಗೆ ಹಿಂತಿರುಗಿದಾಗ ಮಹೇಶಪ್ಪ ಮೃತಪಟ್ಟಿರುವುದು ಕಂಡು ಬಂದಿದೆ. ಏನು ಮಾಡುವುದೆಂದು ತಿಳಿಯದೆ 3 ಗಂಟೆಗಳ ಕಾಲ ಶವವನ್ನು ಕಾರಿನಲ್ಲೇ ಇಟ್ಟುಕೊಂಡು ಸುತ್ತಾಡಿದ್ದೆ ಎಂದು ತಿಳಿಸಿದ್ದಾನೆ.
ಬಳಿಕ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ರಾಜಶೇಖರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಸಹಾಯಕ ಸಬ್ ಇನ್ಸ್ಪೆಕ್ಟರ್ ಬುಡ್ಡೆ ಗೌಡ ಅವರು ಆ ವೇಳೆ ಕರ್ತವ್ಯದಲ್ಲಿದ್ದರು. ಬುಡ್ಡೆ ಗೌಡ ಹಾಗೂ ಇತರ ಸಿಬ್ಬಂದಿ
ಧಾವಿಸಿ ನೋಡಿದಾಗ ರಾಜಶೇಖರ್ ಅವರ ಹುಂಡೈ ಎಕ್ಸೆಂಟ್ ಕಾರಿನ ಹಿಂದಿನ ಸೀಟಿನಲ್ಲಿ ಮಹೇಶಪ್ಪ ಅವರ ಶವ ಬಿದ್ದಿರುವುದು ಕಂಡುಬಂದಿದೆ. ಎಎಸ್ಐ ಬುಡ್ಡೆ ಗೌಡ ಅವರು ರಾತ್ರಿ ಗಸ್ತಿನಲ್ಲಿದ್ದ ಸಬ್ಇನ್ಸ್ಪೆಕ್ಟರ್ ಅರವಿಂದ್ ಕುಮಾರ್ ಅವರಿಗೆ ತಕ್ಷಣ ಕರೆ ಬರಹೇಳಿದ್ದಾರೆ. ಅರವಿಂದ್ ಕುಮಾರ್ ಬಂದ ಕೂಡಲೇ ಸ್ವಯಂ ಪ್ರೇರಿತವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ರಾಜಶೇಖರ್ ನನ್ನು ಬಂಧಿಸಿದ್ದಾರೆ.
ತನ್ನ ಪೋಷಕರು, ಅಜ್ಜಿ, ಸಹೋದರಿಯನ್ನು ಕೊಂದ ಮಾದಕ ವ್ಯಸನಿ
ದೆಹಲಿಯಲ್ಲಿ ಭೀಕರ ಘಟನೆಯೊಂದು ನಡೆದಿದೆ. 25 ವರ್ಷದ ಯುವಕನೊಬ್ಬ ತನ್ನ ಅಜ್ಜಿ, ಪೋಷಕರು ಮತ್ತು ಸಹೋದರಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 10:30 ರ ಸುಮಾರಿಗೆ ಮನೆಯಲ್ಲಿ ಜಗಳ ನಡೆದಿದ್ದು, ಆರೋಪಿ ಕೇಶವ್ ತನ್ನ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಆರೋಪಿ ಕೇಶವ್ ಮಾದಕ ವ್ಯಸನಿಯಾಗಿದ್ದು, ಕೆಲಸ ಕಳೆದುಕೊಂಡಿದ್ದನು ಎಂದು ಹೇಳಲಾಗಿದೆ. ಆತನನ್ನು ಸರಿಪಡಿಸುವ ವಿಚಾರಕ್ಕೆ ಪದೇ ಪದೇ ಮನೆಯಲ್ಲಿ ಜಗಳವಾಗುತ್ತಿತ್ತು ಎಂದು ನೆರೆಹೊರೆಯವರು ಹೇಳಿದ್ದಾರೆ.
ಮೃತರನ್ನು ಕೇಶವ್ ಪೋಷಕರಾದ ದಿನೇಶ್ ಮತ್ತು ದರ್ಶನ್, ಅಜ್ಜಿ ದಿವಾನೋ ದೇವಿ (75) ಮತ್ತು ಸಹೋದರಿ ಊರ್ವಶಿ ಎಂದು ಗುರುತಿಸಲಾಗಿದೆ. ಆರೋಪಿ ಕೇಶವ್ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.