ಮಾಕ್ ಡ್ರಿಲ್ಗೆ ಬೆಂಗಳೂರು ಸಜ್ಜು, ವಿದ್ಯುತ್ ದೀಪ ಆರಿಸಿ ಮಾಡಿ ಸ್ವರಕ್ಷಣೆ ತಾಲೀಮು; ರಾಜಧಾನಿಯಲ್ಲಿ ಹಂತ ಹಂತವಾಗಿ ಮೊಳಗಲಿದೆ ಸೈರನ್
ನಾಗರಿಕ ಸ್ವರಕ್ಷಣಾ ತಾಲೀಮು ನಡೆಸುವುದಕ್ಕೆ ಕರ್ನಾಟಕದ ಮೂರು ಕಡೆ ಸಿದ್ಧತೆಗಳು ನಡೆದಿವೆ. ಬೆಂಗಳೂರಿನಲ್ಲಿ ವಿವಿಧೆಡೆ ವಿದ್ಯುತ್ ದೀಪ ಬಂದ್ ಮಾಡಿ ಸ್ವರಕ್ಷಣೆ ತಾಲೀಮು ನಡೆಸುವುದಕ್ಕೆ ಸಜ್ಜಾಗಿದ್ದು, ರಾಜಧಾನಿಯಲ್ಲಿ ಹಂತ ಹಂತವಾಗಿ ಸೈರನ್ ಮೊಳಗಲಿದೆ.

ನಾಗರಿಕ ಸ್ವರಕ್ಷಣಾ ತಾಲೀಮು: ಬೆಂಗಳೂರು ವ್ಯಾಪ್ತಿಯಲ್ಲಿ ಮಾಕ್ ಡ್ರಿಲ್ಗೆ ಸಿದ್ಧತೆ ನಡೆದಿದ್ದು, ವಿದ್ಯುತ್ ದೀಪ ಆರಿಸಿ ಸ್ವರಕ್ಷಣೆ ತಾಲೀಮು ನಡೆಸುವುದಕ್ಕೆ ಸೂಚಿಸಲಾಗಿದೆ. ಇದಲ್ಲದೆ, ವಾಯುದಾಳಿ ನಡೆದಾಗ ಸೈರನ್ ಮೊಳಗಿದಾಗ ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಇಂದು (ಮೇ 7) ನಾಗರಿಕ ಸ್ವರಕ್ಷಣಾ ತಾಲೀಮು ನಡೆಯಲಿದೆ. ವೈಮಾನಿಕ ಧಾಳಿ ನಡೆದಾಗ, ನಾಗರಿಕರು ಹೇಗೆ ಸ್ವರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಬೆಂಗಳೂರು ನಗರದಲ್ಲಿ ಹಲವು ಕಡೆ ಹಂತ ಹಂತವಾಗಿ ‘ಆಪರೇಷನ್ ಅಭ್ಯಾಸ್’ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಾಳಿ ನಡೆದರೆ ಬೆಂಗಳೂರಲ್ಲಿ ಸೈರನ್ ಮೊಳಗುವ ಸ್ಥಳಗಳು ಇವು
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ - ಐಐಎಸ್ಸಿ, ಸಿಕ್ಯುಎಎಲ್, ಇಎಸ್ಐ ಆಸ್ಪತ್ರೆ, ರಾಜಾಜಿನಗರ, ಎನ್ಎಎಲ್, ಬೆಂಗಳೂರು ಡೇರಿ, ಕೆನರಾ ಬ್ಯಾಂಕ್, ಪುರಭವನ ವೃತ್ತ, ಎಸ್ಆರ್ಎಸ್, ಪೀಣ್ಯ, ವಿ.ವಿ ಟವರ್, ಅಗ್ನಿಶಾಮಕ ಠಾಣೆ, ಜ್ಞಾನಭಾರತಿ, ಅಗ್ನಿಶಾಮಕ ಠಾಣೆ (ನಾಗರಬಾವಿ), ಥಣಿಸಂದ್ರ ಅಗ್ನಿಶಾಮಕ ಠಾಣೆ, ಹೆಬ್ಬಾಳ, ಬಾಣಸವಾಡಿ, ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ, ಹಲಸೂರು ಗೇಟ್ ಪೊಲೀಸ್ ಠಾಣೆ, ಹಲಸೂರು ಪೊಲೀಸ್ ಠಾಣೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ರಾಜರಾಜೇಶ್ವರಿ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ, ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆ, ವಯಾಲಿಕಾವಲ್ ಪೊಲೀಸ್ ಠಾಣೆ, ಹಲಸೂರು ಗೃಹರಕ್ಷಕ ದಳ, ಕೇಂದ್ರ ಕಚೇರಿ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕ ದಳ ಕಚೇರಿ, ಬಾಗಲೂರು ಅಗ್ನಿಶಾಮಕ ದಳ ಕಚೇರಿ(ಯಲಹಂಕ), ಪೀಣ್ಯ ಅಗ್ನಿಶಾಮಕ ಠಾಣೆ, ಅಂಜನಾಪುರ ಠಾಣೆ, ಐಟಿಪಿಎಲ್ ಅಗ್ನಿಶಾಮಕ ಠಾಣೆ (ವೈಟ್ಫೀಲ್ಡ್), ಸರ್ಜಾಪುರ ಅಗ್ನಿಶಾಮಕ ಠಾಣೆ, ಎಲೆಕ್ಟ್ರಾನಿಕ್ ಅಗ್ನಿಶಾಮಕ ಠಾಣೆ, ಡೇರಿ ಸರ್ಕಲ್ ಅಗ್ನಿಶಾಮಕ ಠಾಣೆ(ಜಯನಗರ)
ಮಾಕ್ ಡ್ರಿಲ್ಗೆ ಬೆಂಗಳೂರು ಸಜ್ಜು, ವಿದ್ಯುತ್ ದೀಪ ಆರಿಸಿ ಮಾಡಿ ಸ್ವರಕ್ಷಣೆ ತಾಲೀಮು
ಬೆಂಗಳೂರಿನ ಹಲಸೂರಿನ ನಾಗರಿಕ ರಕ್ಷಣಾ ಕೇಂದ್ರದಲ್ಲಿ ಮಾತ್ರ ಬುಧವಾರ (ಮೇ 7) ಮಧ್ಯಾಹ್ನ ತಾಲೀಮು ನಡೆಸಲಾಗುತ್ತಿದೆ. ಉಳಿದ ಸ್ಥಳಗಳಲ್ಲಿ ವೈಮಾನಿಕ ದಾಳಿಗೆ ಸಂಬಂಧಿಸಿದಂತೆ, ಹಂತಹಂತವಾಗಿ ಸೈರನ್ ಮೊಳಗಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ, ಯಾವುದೇ ರೀತಿ ದಾಳಿ ನಡೆಯುವ ಸಾಧ್ಯತೆ ಇರುವ ಕಾರಣ, ಕಟ್ಟಡಗಳಲ್ಲಿ ಅಗ್ನಿ ಅವಘಡ ತಡೆಯುವುದು, ರಕ್ಷಣಾ ಕಾರ್ಯಾಚರಣೆ, ಹಾನಿಗೊಂಡ ಕಟ್ಟಡಗಳಿಂದ ಸಾರ್ವಜನಿಕರ ರಕ್ಷಣೆ, ತಾತ್ಕಾಲಿಕ ಆಸ್ಪತ್ರೆ ವ್ಯವಸ್ಥೆ, ಕೆಲವು ಬಂಕರ್ಗಳಲ್ಲಿ ಸಾರ್ವಜನಿಕರ ಅಡಗಿಸಿಡುವುದು ಮುಂತಾದವುಗಳ ತರಬೇತಿಯನ್ನೂ ನೀಡಲಾಗುತ್ತಿದೆ ಎಂದು ವಿವರಿಸಿದದ್ದಾರೆ.
ವಿದ್ಯುತ್ ಪೂರೈಕೆ ಕಡಿತ
ವೈಮಾನಿಕ ದಾಳಿ ಸಂದರ್ಭಗಳಲ್ಲಿ ಶತ್ರುಗಳಿಗೆ ಜನಸಂಖ್ಯೆಯಿರುವ ಸ್ಥಳಗಳ ಗುರುತು ಸಿಗದಂತೆ ತಡೆಯಲು ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ಕಡಿತವಾಗಲಿದ್ದು, ಸಂಪೂರ್ಣ ಕಾರ್ಗತ್ತಲು ಆವರಿಸಲಿದೆ. ಜತೆಗೆ, ರಾತ್ರಿ ವೇಳೆ ವಾಹನ ಸಂಚಾರ ಕೂಡ ಸ್ಥಗಿತವಾಗಲಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಹಲಸೂರು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ವಿದ್ಯುತ್ ದೀಪಗಳನ್ನು ಬಂದ್ ಮಾಡಿ ಸ್ವರಕ್ಷಣೆ ತಾಲೀಮು ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.