Kannada News  /  Karnataka  /  Bengaluru Mysore Expressway: Congress And Kannada Organistaions Members Protest, Police Deployed At Toll Plaza
Bengaluru Mysore expressway: ಬೆಂಗಳೂರು ಮೈಸೂರು ದಶಪಥ ಟೋಲ್‌ ಸಂಗ್ರಹ ಆರಂಭ, ಟೋಲ್‌ ವಿರೋಧಿಸಿ ಪ್ರತಿಭಟನೆ, ಪೊಲೀಸರಿಂದ ಬಿಗಿ ಬಂದೋಬಸ್ತ್‌
Bengaluru Mysore expressway: ಬೆಂಗಳೂರು ಮೈಸೂರು ದಶಪಥ ಟೋಲ್‌ ಸಂಗ್ರಹ ಆರಂಭ, ಟೋಲ್‌ ವಿರೋಧಿಸಿ ಪ್ರತಿಭಟನೆ, ಪೊಲೀಸರಿಂದ ಬಿಗಿ ಬಂದೋಬಸ್ತ್‌

Bengaluru Mysore Expressway: ಬೆಂಗಳೂರು ಮೈಸೂರು ದಶಪಥ ಟೋಲ್‌ ಸಂಗ್ರಹ ಆರಂಭ, ಟೋಲ್‌ ವಿರೋಧಿಸಿ ಪ್ರತಿಭಟನೆ, ಪೊಲೀಸರಿಂದ ಬಿಗಿ ಬಂದೋಬಸ್ತ್‌

14 March 2023, 9:12 ISTPraveen Chandra B
14 March 2023, 9:12 IST

ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಕಣಮಿಣಿಕೆ ಮತ್ತು ಶೇಷಗಿರಿಹಳ್ಳಿ ಬಳಿಯ ಟೋಲ್‌ಗಳಳ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಬೆಂಗಳೂರು: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಇಂದಿನಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್‌ ಸಂಗ್ರಹಿಸಲು ಆರಂಭಿಸಿದೆ. ಇದರ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಕಣಮಿಣಿಕೆ ಮತ್ತು ಶೇಷಗಿರಿಹಳ್ಳಿ ಬಳಿಯ ಟೋಲ್‌ಗಳ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ನವನಿರ್ಮಾಣ ವೇದಿಕೆ, ಜನ ಸೈನ್ಯ ವೇದಿಕೆ, ಕನ್ನಡಿಗರ ರಕ್ಷಣಾ ವೇದಿಕೆ, ಕರುನಾಡ ಸೇನೆ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ನಡೆಸುತ್ತಿವೆ.

ದಶಪಥದಲ್ಲಿ ಸಂಚರಿಸುವ ವಾಹನ ಚಾಲಕರಿಂದ ಇಂದು ಬೆಳಗ್ಗೆ 8 ಗಂಟೆಯಿಂದಲೇ ಟೋಲ್‌ ಸಂಗ್ರಹಿಸಲು ಆರಂಭಿಸಲಾಗಿತ್ತು. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್‌ ಸಂಗ್ರಹಿಸಲಾಗುತ್ತಿದೆ. ಮೈಸೂರಿನಿಂದ ಬೆಂಗಳೂರಿಗೆ ಆಗಮಿಸುವ ವಾಹನಗಳಿಗೆ ರಾಮನಗರದ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್‌ ಸಂಗ್ರಹಿಸಲಾಗುತ್ತದೆ.

 

ಕಾರುಗಳಿಗೆ ಒಂದು ದಾರಿಯ ಪ್ರಯಾಣಕ್ಕೆ 135 ರೂ. ಟೋಲ್ ಶುಲ್ಕ ವಿಧಿಸಲಾಗುತ್ತದೆ ಮತ್ತು ಅದೇ ದಿನ ಹಿಂತಿರುಗಿದರೆ 205 ರೂ. ವಿಧಿಸಲಾಗುತ್ತದೆ. ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ, ಮಿನಿ ಬಸ್​ಗಳಿಗೆ ಏಕಮುಖ ಸಂಚಾರಕ್ಕೆ 220 ರೂಪಾಯಿ ನಿಗದಿಪಡಿಸಲಾಗುತ್ತದೆ. ಎರಡು ಕಡೆಯ ಪ್ರಯಾಣಕ್ಕೆ 330 ರೂಪಾಯಿ ನೀಡಬೇಕು. ಟೋಲ್‌ ಶುಲ್ಕಗಳ ಕುರಿತು ವಿವರವಾದ ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಕಾಂಗ್ರೆಸ್‌ ಕಾರ್ಯಕರ್ತರಿಂದ ಮತ್ತು ಕನ್ನಡ ಸಂಘಟನೆಗಳಿಂದ ಪ್ರತಿಭಟನೆ

ಟೋಲ್‌ ಸಂಗ್ರಹ ವಿರೋಧಿಸಿ ಕನ್ನಡ ಸಂಘಟನೆಗಳು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶೇಷಗಿರಿಹಳ್ಳಿ ಬಳಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮನಗರ ಡಿವೈಎಸ್‌ಪಿ ದಿನಕರ್‌ ಶೆಟ್ಟಿ ನೇತೃತ್ವದಲ್ಲಿ ಪೊಲೀಸ್‌ ಬಿಗಿಬಂದೋಬಸ್ತ್‌ ಮಾಡಲಾಗಿದೆ.

ಈ ಕಡೆ ಅಂದರೆ ಬೆಂಗಳೂರಿನ ದಕ್ಷಿಣ ತಾಲೂಕಿನ ಕಣಮಿಣಕೆ ಬಳಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ನೀವು ಆ ಕಡೆ ನಡೆಸಿ, ನಾವು ಈ ಕಡೆ ಪ್ರತಿಭಟನೆ ನಡೆಸುತ್ತೇವೆ ಎನ್ನುವ ರೀತಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಕನ್ನಡ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ವರದಿಗಳ ಪ್ರಕಾರ ಕನ್ನಡ ಸಂಘಟನೆಯ ಸದಸ್ಯರೊಬ್ಬರು ಟೋಲ್‌ ಪ್ಲಾಜಾದ ಕಂಬಿ ಮುರಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ರೀತಿ ಕಂಬಿ ಮುರಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಟೋಲ್‌ ಪ್ಲಾಜಾಗಳ ಬಳಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 3 ಕೆಎಸ್‌ಆರ್‌ಪಿ ತುಕುಡಿಯೂ ಕಣಮಿಣಕೆ ಟೋಲ್‌ನಲ್ಲಿದೆ.

ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ಒಂದು, ಒಂದೂವರೆ ಗಂಟೆಗೆ ಇಳಿಸುವ ಮಹಾತ್ವಕಾಂಕ್ಷಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಯಲ್ಲಿ ಟೋಲ್‌ ಸಂಗ್ರಹ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದು, ಬಿಗಿವಿನ ವಾತಾವರಣವಿದೆ.

ಪ್ರತಿಭಟನೆ ನಡೆಯುವ ಟೋಲ್‌ ಪ್ಲಾಜಾ ಬಳಿ ಕಾಂಗ್ರೆಸ್‌ ಕಾರ್ಯಕರ್ತು ನೂರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಇನ್ನೊಂದೆಡೆ ಕನ್ನಡ ಸಂಘಟನೆಗಳ ಸದಸ್ಯರೂ ಹೆಚ್ಚುತ್ತಿದ್ದು, ಬಿಗುವಿನ ವಾತಾವರಣ ಕಂಡುಬಂದಿದೆ. ಒಬ್ಬರು ಎಸಿಪಿ, ಆರು ಪಿಐ, ಐದು ಪಿಎಸ್‌ಐಗಳು ಸೇರಿದಂತೆ ನೂರಾರು ಪೊಲೀಸ್‌ ಸಿಬ್ಬಂದಿಗಳಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುತ್ತಿದ್ದಾರೆ.