ಬೆಂಗಳೂರು: ಇಂದಿನಿಂದ 18 ದಿನ ಲಾಲ್ಬಾಗ್ನಲ್ಲಿ ಮಾವು ಮತ್ತು ಹಲಸು ಮಾರಾಟ ಮೇಳ, ಕಾರ್ಬೈಡ್ ಮುಕ್ತ ಹಣ್ಣುಗಳು ಒಂದೇ ಸೂರಿನಡಿ ಲಭ್ಯ
ಬೆಂಗಳೂರು: ಇಂದಿನಿಂದ 18 ದಿನ ಲಾಲ್ಬಾಗ್ನಲ್ಲಿ ಮಾವು ಮತ್ತು ಹಲಸು ಮಾರಾಟ ಮೇಳ ಶುರುವಾಗುತ್ತಿದ್ದು, ಕಾರ್ಬೈಡ್ ಮುಕ್ತ ಹಣ್ಣುಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಈ ವರ್ಷದ ಮಾವು ಮತ್ತು ಹಲಸು ಮಾರಾಟ ಮೇಳ ಇಂದು ಮೇ 24 ರಿಂದ ಜೂನ್ 10 ರವರಗೆ ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆಯಲಿದೆ. ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಗಳ ಸಹಯೋಗದೊಂದಿಗೆ ಈ ಮಾವು ಮೇಳ ನಡೆಯುತ್ತಿದೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಕಾರ್ಬೈಡ್ ಮುಕ್ತ ಹಾಗೂ ಸಹಜವಾಗಿ ಮಾಗಿದ ಹಣ್ಣುಗಳನ್ನು ರೈತರ ತೋಟದಿಂದ ನೇರವಾಗಿ ಗ್ರಾಹಕರಿಗೆ ಒದಗಿಸುವುದು. ಮಾವು, ಹಲಸು ಹಣ್ಣುಗಳ ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಿ ಬೆಳೆಗಾರರಿಗೆ ಯೋಗ್ಯ ಬೆಲೆ ಹಾಗೂ ಗ್ರಾಹಕರಿಗೆ ರುಚಿಯಾದ ಉತ್ಕೃಷ್ಟ ಗುಣಮಟ್ಟದ ತಾಜಾ ಹಣುಗಳನ್ನು ದೊರಕುವಂತೆ ಮಾಡುವುದು. ಮಾವು ಮತ್ತು ಹಲಸಿನಲ್ಲಿರುವ ತಳಿಗಳ ವೈವಿದ್ಯತೆ ಮತ್ತು ವೈಶಿಷ್ಟ್ಯಗಳ ಪರಿಚಯ ಮತ್ತು ಆಸ್ವಾದನೆಗೆ ಅವಕಾಶ ಕಲ್ಪಿಸುವುದು ಮೇಳದ ಮೂಲ ಉದ್ದೇಶವಾಗಿದೆ.
ಈ ಮೇಳದಲ್ಲಿ ಮಾವು ನಿಗಮದ ತಾಂತ್ರಿಕ ತರಬೇತಿಗಳಿಗೆ ಹಾಜರಾದ ಹಾಗೂ ಮಾವು ಮೇಳದಲ್ಲಿ, ಸತತವಾಗಿ ಭಾಗವಹಿಸಿ ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ಸರಬರಾಜು ಮಾಡುತ್ತಿರುವ ಪ್ರಗತಿ ಪರ ರೈತರಿಗೆ ಆದ್ಯತೆ ನೀಡಲಾಗಿದೆ.
ಜೂನ್ 10 ರ ತನಕ 18 ದಿನ ಮಾವು ಮತ್ತು ಹಲಸು ಮೇಳ
ಮಾವು ಮತ್ತು ಹಲಸಿನ ಬೆಳೆಗಾರರು ತಾವು ಬೆಳೆದ ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಒದಗಿಸುವ ಸಲುವಾಗಿ ಲಾಲ್ಬಾಗ್ನಲ್ಲಿ ಲಭ್ಯವಿರುವ ಮಾರಾಟ ಮಳಿಗೆಗಳನ್ನು ಕನಿಷ್ಠ ಮೂಲ ಭೂತಸೌಕರ್ಯಗಳೊಂದಿಗೆ ಸಿದ್ಧಪಡಿಸಲಾಗಿದೆ. ಇದರಲ್ಲಿ 74 ಮಳಿಗೆಗಳನ್ನು ಮಾವು ಬೆಳೆಗಾರರಿಗೆ, 9 ಮಳಿಗೆಗಳನ್ನು ಹಲಸು ಬೆಳೆಗಾರರಿಗೆ ಮತ್ತು 14 ಮಳಿಗೆಗಳನ್ನು ಮಾವು ಮತ್ತು ಇತರೆ ಹಣ್ಣಿನ ಉತ್ಪನ್ನಗಳಿಗೆ ನೀಡಲಾಗಿದೆ.
ಈ ಮಳಿಗೆಗಳಲ್ಲಿ, ಬೆಳೆಗಾರರು ಮೇ 24 ರಿಂದ ಜೂನ್ 10 ರವರಗೆ ಸತತ 18 ದಿನ ಗ್ರಾಹಕರಿಗೆ ಹಣುಗಳನ್ನು ಒದಗಿಸಲಿದ್ದಾರೆ.
ಪ್ರತಿದಿನ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಗ್ರಾಹಕರು ವ್ಯಾಪಾರ ಮಾಡಬಹುದಾಗಿದೆ. ಮೇಳದ ಅವಧಿಯಲ್ಲಿ, ಗ್ರಾಹಕರು ಯೋಗ್ಯ ಬೆಲೆಗೆ ತಾಜಾ ಹಣ್ಣುಗಳನ್ನು ಕೊಂಡುಕೊಳ್ಳಬಹುದಾಗಿದೆ. ಸಹಜವಾಗಿ ಮಾಗಿದ ಅಥವಾ ಇಥಲೀನ್ ಉಪಚರಿಸಿ ಮಾಗಿಸಿದ ಹಣ್ಣುಗಳನ್ನು ಮಾತ್ರ ಮಾರುವ ಅವಕಾಶವನ್ನು ಕಲ್ಪಿಸಲಾಗಿದೆ.
ಅಂಕೋಲಾ ತಾಲೂಕಿನ ಕರಿಶಾದ್ ಮಾವು ಮೇಳದ ಪ್ರಮುಖ ಆಕರ್ಷಣೆ
ಮೇಳದಲ್ಲಿ ಬಾದಾಮಿ, ಮಲ್ಲಿಕಾ, ಅಮ್ರಪಾಲಿ, ದಶೇರಿ, ಬಂಗನಪಲಿ, ರಸಪುರಿ, ಇಮಾಮ್ ಪಸಂದ್ರ, ಸಕ್ಕರೆಗುತ್ತಿ, ಕಾಲಪಾಡ್, ಕೇಸರ್, ಮಲಗೋವ, ಸೇಂದೂರ, ತೋತಾಪುರಿ, ನೀಲಂ ತಳಿಗಳ ಮಾವಿನ ಹಣ್ಣುಗಳು ಲಭ್ಯವಾಗಲಿವೆ.
ತನ್ನ ವಿಶಿಷ್ಟ ಪರಿಮಳ, ಸುವಾಸನೆಯ ರುಚಿ, ಹೆಚ್ಚಿನ ಪ್ರಮಾಣದ ತಿರುಳು, ಆಕಾರ ಮತ್ತು ಗಾತ್ರದ ಕಾರಣದಿಂದ ಭೌಗೋಳಿಕ ಸೂಚನೆ (GI) ಟ್ಯಾಗ್ ಪಡೆದುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕರಿಶಾದ್ ಮಾವು ಮೇಳದ ಪ್ರಮುಖ ಆಕರ್ಷಣೆಯಾಗಿದೆ.
ಮಾವಿನ ಹಣ್ಣುಗಳನ್ನು ಆಕರ್ಷಕ ರಟ್ಟಿನ ಡಬ್ಬಗಳಲ್ಲಿ, ಬಟ್ಟೆಯ ಚೀಲಗಳಲ್ಲಿ, ಹಾಗೂ ಜೈವಿಕವಾಗಿ ಕರಗುವ ಚೀಲಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಅತ್ತ್ಯುತ್ತಮ ಮಾವಿನ ಹಣ್ಣುಗಳನ್ನು ಸವಿಯಲು ಈ ಮೇಳ ಮತ್ತು ಪ್ರದರ್ಶನವು ಬೆಂಗಳೂರಿನ ನಾಗರಿಕರಿಗೆ ಉತ್ತಮ ಅವಕಾಶವಾಗಿದೆ.
ಕರ್ನಾಟಕದ ಮಾವನ್ನು ಹೊರದೇಶ ಮತ್ತು ಹೊರರಾಜ್ಯಗಳಲ್ಲಿ ಪರಿಚಯಿಸಲು ರಾಜ್ಯದ ಮಾವಿಗೆ 'karsirimangoes' ಎಂಬ ಹೆಸರು ಮತ್ತು ಚಿಹ್ನೆಯನ್ನು ವಿನ್ಯಾಸಗೊಳಿಸಿ ಬ್ರಾಂಡ್ ಮೂಲಕ ಹಣ್ಣುಗಳನ್ನು ಮಾರಾಟ ಮಾಡಲು ಉತ್ತೇಜಿಸಲಾಗುತ್ತಿದೆ.
ರಾಜ್ಯದಲ್ಲಿ ಮಾವು ಬೆಳೆಯನ್ನು ಸುಮಾರು 1.49 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆಯುತ್ತಿದ್ದು, ಸರಾಸರಿ ಪ್ರತಿವರ್ಷ 12-14 ಲಕ್ಷ ಟನ್ಗಳಷ್ಟು ಇಳುವರಿ ಬರುತ್ತಿದೆ. ಪ್ರಸಕ್ತ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಾವು ಉತ್ಪಾದನೆ ಕಡಿಮೆಯಾಗಿದ್ದು ಸರಾಸರಿ ಶೇ. 30 ರಷ್ಟು ಫಸಲು ಮಾತ್ರ ಲಭ್ಯವಾಗಲಿದೆ ಎಂದು ನೀರಿಕ್ಷಿಸಲಾಗಿದೆ.
ಹಲಸು ಮೇಳದ ವಿವರಗಳು: ಪ್ರಸಕ್ತ, ಮೇಳದಲ್ಲಿ ಹಲಸಿನ ಹಣ್ಣುಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಹಲವಾರು ಪ್ರಮುಖ ಹಲಸು ಬೆಳೆಗಾರರು ಮಾರಾಟ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಕರ್ನಾಟಕದಲ್ಲಿ, ಹಲಸು ಬೆಳೆಯನ್ನು 23096 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 39,92,000 ಮೆ, ಟನ್ ಗಳಷ್ಟು ಉತ್ಪಾದನೆ ಮಾಡಲಾಗುತ್ತಿದೆ. ಹಲಸಿನ ತಳಿಗಳು ವಿವಿಧ ಗಾತ್ರ ಮತ್ತು ಹಳದಿ, ಕೇಸರಿ ಹಾಗೂ ಕೆಂಪು ಬಣ್ಣದ ತೊಳೆಗಳಲ್ಲಿ ಲಭ್ಯವಿರುತ್ತವೆ.
(ವರದಿ- ಎಚ್. ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
