ಬೆಂಗಳೂರು ರಸ್ತೆ ಗುಂಡಿ ಫೋಟೋ ಕ್ಲಿಕ್ಕಿಸಿ ಅಪ್ಲೋಡ್ ಮಾಡಿ, ಶೀಘ್ರವೇ ಬಿಡುಗಡೆಯಾಗಲಿದೆ ಬಿಬಿಎಂಪಿ PACE ಆಪ್
ಬೆಂಗಳೂರು ರಸ್ತೆ ಗುಂಡಿಗಳ ಸಂಕಷ್ಟ ಅನುಭವಿಸಬೇಕಷ್ಟೆ ಎಂದು ನಿಟ್ಟುಸಿರು ಬಿಡಬೇಕಾಗಿಲ್ಲ. ಈ ಹಿಂದಿನಂತೆ ಗಮನಸೆಳೆಯಲು ಪ್ರತಿಭಟನೆಗಳನ್ನು ಮಾಡಬೇಕಾಗಿಲ್ಲ. ಬೆಂಗಳೂರು ರಸ್ತೆ ಗುಂಡಿ ಫೋಟೋ ಕ್ಲಿಕ್ಕಿಸಿ ಅಪ್ಲೋಡ್ ಮಾಡಿ, ಶೀಘ್ರವೇ ಬಿಬಿಎಂಪಿ PACE ಆಪ್ ಬಿಡುಗಡೆಯಾಗಲಿದೆ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿಗಳಿಂದ ಬೇಸತ್ತಿದ್ದೀರಾ, ಇನ್ನು ಚಿಂತೆ ಬೇಡ. ರಸ್ತೆ ಗುಂಡಿ ಕಂಡ ಕೂಡಲೇ ಬಿಬಿಎಂಪಿಗೆ ತಿಳಿಸುವುದಕ್ಕಾಗಿ ನಾಗರಿಕರಿಗೆ ಅವಕಾಶ ನೀಡಲು ಬಿಬಿಎಂಪಿ ಮುಂದಾಗಿದೆ. ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ವರದಿ ಮಾಡುವ ವೇದಿಕೆಯಾದ 'PACE' (ಪಾಟ್ಹೋಲ್ ಅಸಿಸ್ಟೆನ್ಸ್ ಸಿಟಿಜೆನ್ ಎಂಗೇಜ್ಮೆಂಟ್) ಎಂಬ ಹೊಸ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಿದೆ.
ರಸ್ತೆ ಹೊಂಡಗಳಿಗೆ ಕುಖ್ಯಾತಿ ಪಡೆದಿರುವ ಬೆಂಗಳೂರಿನ ರಸ್ತೆಗಳು, ವಿಶೇಷವಾಗಿ ಮಳೆಗಾಲದಲ್ಲಿ ವಾಹನ ಸವಾರರ ಜೀವಕ್ಕೆ ಕಂಟಕವೆನಿಸುವ ರಸ್ತೆಗಳೆಂದು ಸಾಬೀತಾಗಿದೆ. ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚುವಲ್ಲಿ ವಿಫಲವಾಗಿರುವ ಬಗ್ಗೆ ಬಿಬಿಎಂಪಿ ಪದೇಪದೆ ಟೀಕೆಗಳನ್ನು ಎದುರಿಸುತ್ತಲೇ ಇರುವುದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು. ಹೀಗಾಗಿ, ಈ ಹೊಸ ಮೊಬೈಲ್ ಆಪ್ ಮೂಲಕ ಸಾರ್ವಜನಿಕರಿಂದಲೇ ಮಾಹಿತಿ ಪಡೆದು ರಸ್ತೆ ಹೊಂಡ ಮುಚ್ಚುವ ಕೆಲಸಕ್ಕೆ ಮುಂದಾಗಿರುವುದು ಗಮನಸೆಳೆದಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಣೆ
ಹೆಚ್ಚುತ್ತಿರುವ ಪಾಟ್ ಹೋಲ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೊಸ ಆಪ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಆದಾಗ್ಯೂ, ಔಪಚಾರಿಕ ಬಿಡುಗಡೆ ದಿನಾಂಕವನ್ನು ಇನ್ನೂ ನಿಗದಿಪಡಿಸಬೇಕಾಗಿದೆ. ಹೊಂಡಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ವರದಿ ಮಾಡಲು ಮತ್ತು ಒಟ್ಟಾರೆ ರಸ್ತೆ ನಿರ್ವಹಣಾ ವ್ಯವಸ್ಥೆಯನ್ನು ಸುಧಾರಿಸಲು ಅಪ್ಲಿಕೇಶನ್ ನಾಗರಿಕರನ್ನು ಸಕ್ರಿಯಗೊಳಿಸುತ್ತದೆ ಮತ್ತು ಅಧಿಕಾರ ನೀಡುತ್ತದೆ.
ಈ ಹಿಂದೆ, ನಾಗರಿಕರು ಮತ್ತು ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳನ್ನು ವರದಿ ಮಾಡಲು ಬಿಬಿಎಂಪಿಯು ನಾಗರಿಕರಿಗಾಗಿ ‘ಫಿಕ್ಸ್ ಮೈ ಸ್ಟ್ರೀಟ್’ ಆ್ಯಪ್ ಅನ್ನು ಬಿಡುಗಡೆ ಮಾಡಿತ್ತು. ಆದಾಗ್ಯೂ, ಈ ಮೊಬೈಲ್ ಅಪ್ಲಿಕೇಶನ್ ಬಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದು ನಾಗರಿಕರಿಂದ ಹಲವಾರು ಟೀಕೆಗಳನ್ನು ಎದುರಿಸಿತ್ತು. ಬಳಿಕ ಮರೆಯಾಗಿತ್ತು.
ಹೊಸ ಆಪ್ ಹೇಗೆ ಕೆಲಸ ಮಾಡಲಿದೆ; ಅಧಿಕಾರಿಗಳು ಹೇಳಿರುವುದಿಷ್ಟು
ರಸ್ತೆ ಗುಂಡಿಗಳ ಫೋಟೋ ಕ್ಲಿಕ್ ಮಾಡಿ ಮತ್ತು ಅದನ್ನು ಆಪ್ ಮೂಲಕ ಅಪ್ಲೋಡ್ ಮಾಡಿ ವರದಿ ಮಾಡಬಹುದು. ಗುಂಡಿಯನ್ನು ಸರಿಪಡಿಸುವ ಹೊಣೆಗಾರಿಕೆ ಗುತ್ತಿಗೆದಾರರದ್ದು. ಹೀಗಾಗಿ ಸಂಬಂಧಪಟ್ಟ ಎಂಜಿನಿಯರ್ ಮೂಲಕ ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರಿಗೆ ಮಾಹಿತಿಯನ್ನು ಕಳುಹಿಸಲಾಗುತ್ತದೆ. ಗುಂಡಿಯನ್ನು ಸರಿಪಡಿಸಿದ ನಂತರ, ಗುತ್ತಿಗೆದಾರರು ಪೂರ್ಣಗೊಂಡ ಕೆಲಸದ ಫೋಟೋವನ್ನು ಅಪ್ಲೋಡ್ ಮಾಡುತ್ತಾರೆ ಮತ್ತು ನಂತರ ದೂರುದಾರರಿಗೆ ಕೆಲಸದ ನಿರ್ಣಯವನ್ನು ಖಚಿತಪಡಿಸಲು ಸಂದೇಶವನ್ನು ಕಳುಹಿಸಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ವಿವರಿಸಿದ್ದಾರೆ.
ದೂರುಗಳನ್ನು ಸಕಾಲದಲ್ಲಿ ಪರಿಹರಿಸಲು, ದೂರುಗಳು ಗಮನಕ್ಕೆ ಬಂದಿಲ್ಲ ಅಥವಾ ತಪ್ಪಿ ಹೋಯಿತೆಂದು ಸಬೂಬು ಹೇಳುವಂತೆ ಇಲ್ಲ. ಇದು ಉನ್ನತಾಧಿಕಾರಿಗಳ ಗಮನಕ್ಕೂ ಬರುತ್ತದೆ. ಗುತ್ತಿಗೆದಾರರು ಸಮಯಕ್ಕೆ ದೂರನ್ನು ಪರಿಹರಿಸಲು ವಿಫಲವಾದರೆ ಅವರ ವಿರುದ್ಧ ತ್ವರಿತ ಕ್ರಮ ತೆಗೆದುಕೊಳ್ಳಲು ಇದು ನೆರವಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
"ಪಿಎಸಿಇ ಅಪ್ಲಿಕೇಶನ್ ಸ್ವಯಂಚಾಲಿತ ಬಿಲ್ಲಿಂಗ್ ವ್ಯವಸ್ಥೆಯನ್ನು ಸಹ ಹೊಂದಿದೆ. ಇದರಲ್ಲಿ ಗುತ್ತಿಗೆದಾರರು ಕೆಲಸದ ಬಿಲ್ಗಳನ್ನು ಹಸ್ತಚಾಲಿತವಾಗಿ ಸಲ್ಲಿಸುವ ಅಗತ್ಯ ಇಲ್ಲ. ಎಲ್ಲ ದಾಖಲೆಗಳನ್ನು ಅಪ್ಲಿಕೇಶನ್ನಲ್ಲಿ ನಿರ್ವಹಿಸಲಾಗುತ್ತದೆ. ತಡೆರಹಿತ ಮತ್ತು ಪರಿಣಾಮಕಾರಿ ಪ್ರಕ್ರಿಯೆಯನ್ನು ಖಾತ್ರಿಪಡಿಸುತ್ತದೆ ”ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.