ಬೆಂಗಳೂರು: ಕೊನೆಗೂ ತೆರಿಗೆ ಕಟ್ಟಲು ಒಪ್ಪಿಕೊಂಡ ಮಂತ್ರಿ ಮಾಲ್; ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು: ಕೊನೆಗೂ ತೆರಿಗೆ ಕಟ್ಟಲು ಮಂತ್ರಿ ಮಾಲ್ ಒಪ್ಪಿಕೊಂಡ ಕಾರಣ, ಅದಕ್ಕೆ ಜಡಿದಿದ್ದ ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ಕರ್ನಾಟಕ ಹೈಕೋರ್ಟ್ನಲ್ಲಿ ಈ ಸಂಬಂಧ ಮಂತ್ರಿ ಮಾಲ್ ಸಲ್ಲಿಸಿದ್ದ ದಾವೆಯ ವಿಚಾರಣೆ ನಿನ್ನೆ (ಮೇ 16) ನಡೆಯಿತು. ಇದರ ವಿವರ ಇಲ್ಲಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯಲ್ಲಿ ಶೇ. 50 ರಷ್ಟನ್ನು 2024ರ ಜುಲೈ 31ರೊಳಗೆ ಪಾವತಿಸುವುದಾಗಿ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಮುಚ್ಚಳಿಕೆ ಬರೆದು ಕೊಟ್ಟಿರುವ ಹಿನ್ನೆಲೆಯಲ್ಲಿ ಶುಕ್ರವಾರ (ಮೇ 17) ಬೆಳಗ್ಗೆ 10 ಗಂಟೆಯೊಳಗಾಗಿ ಬೀಗ ತೆರೆಯುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಾಕಿ ಉಳಿಸಿಕೊಳ್ಳಲಾಗಿದೆ ಎನ್ನಲಾದ 41 ಕೋಟಿ ಆಸ್ತಿ ತೆರಿಗೆಯ ಬಾಕಿ ಹಣದ ಪೈಕಿ 20 ಕೋಟಿಯನ್ನು 2024ರ ಜುಲೈ 31ರೊಳಗೆ ಪಾವತಿಸುವುದಾಗಿ ಮಂತ್ರಿ ಮಾಲ್, ಹೈಕೋರ್ಟ್ಗೆ ಮುಚ್ಚಳಿಕೆ ನೀಡಿದೆ. ಮಾಲ್ ಗೆ ಬೀಗ ಹಾಕಿರುವುದನ್ನು ಪ್ರಶ್ನಿಸಿ ಮಂತ್ರಿ ಮಾಲ್ನ ಮೆ. ಅಭಿಷೇಕ್ ಪ್ರಾಪ್ಬಿಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ರಜಾಕಾಲದ ಹೈಕೋರ್ಟ್ ನ್ಯಾಯಪೀಠದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಗುರುವಾರ ವಿಚಾರಣೆ ನಡೆಸಿದರು.
ಮೇ 10ರಂದು ಮಂತ್ರಿ ಮಾಲ್ಗೆ ಬೀಗ ಬಿದ್ದಿದೆ
ಅರ್ಜಿದಾರರ ಪರ ವಾದ ಮಂಡಿಸಿದ ಹಾಜರಿದ್ದ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ಈ ಮಾಲ್ನಲ್ಲಿ 250ಕ್ಕೂ ಹೆಚ್ಚಿನ ಮಳಿಗೆಗಳಿವೆ. ಸುಮಾರು 2,500 ಉದ್ಯೋಗಿಗಳಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಾನೂನು ಬಾಹಿರವಾಗಿ ಮಾಲ್ಗೆ ಮೇ 10 ರಿಂದ ಬೀಗ ಹಾಕಿದೆ. ಇದರಿಂದ ಉದ್ಯೋಗಿಗಳ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಈ ಮಾಲ್ ನಲ್ಲಿ ಪ್ರತಿದಿನ 7 ರಿಂದ 8 ಕೋಟಿ ವಹಿವಾಟು ನಡೆಯುತ್ತಿತ್ತು. ಬೀಗ ಹಾಕಿರುವುದರಿಂದ ನಷ್ಟವಾಗುತ್ತಿದೆ ಎಂದು ಕೋರ್ಟ್ ಗಮನಕ್ಕೆ ತಂದರು.
ಅಕ್ಷಯ ತೃತೀಯಾ ದಿನದಿಂದು ಮಾಲ್ ನಲ್ಲಿರುವ ಚಿನ್ನಾಭರಣ ಮಳಿಗೆಗಳಿಗೆ ಭಾರಿ ನಷ್ಟ ಉಂಟಾಗಿದೆ. ಇಂತಹ ನಡವಳಿಕೆಗಳಿಂದ ಬಾಡಿಗೆದಾರರು ಮಾಲ್ ವಿರುದ್ಧ ಮೊಕದ್ದಮೆ ಹೂಡಲು ಮತ್ತು ಬಾಡಿಗೆ ಪಾವತಿಸದೆ ಇರಲು ಪ್ರೇರೇಪಣೆ ನೀಡುತ್ತದೆ ಎಂದು ಆಪಾದಿಸಿದರು.
ಜುಲೈ 31ರೊಳಗೆ 20 ಕೋಟಿ ಮೊತ್ತವನ್ನು ಬಿಬಿಎಂಪಿಗೆ ಪಾವತಿಸಲಾಗುವುದು ಎಂದು ಮುಚ್ಚಳಿಕೆ ನೀಡಿದರು. ಇದನ್ನು ಒಪ್ಪಿಕೊಂಡ ನ್ಯಾಯಪೀಠ, ಮಾಲ್, 2024ರ ಜೂನ್ 1ರೊಳಗೆ ರೂಪಾಯಿ 3.5 ಕೋಟಿ ಮೊತ್ತವನ್ನು ಬಿಬಿಎಂಪಿಗೆ ಪಾವತಿಸಬೇಕು ಎಂದು ಸೂಚಿಸಿ ಷರತ್ತುಬದ್ಧ ಮಧ್ಯಂತರ ಆದೇಶ ಹೊರಡಿಸಿತು.
ಮಂತ್ರಿಮಾಲ್, 41 ಕೋಟಿ ರೂಪಾಯಿ ಮೊತ್ತದ ಆಸ್ತಿ ತೆರಿಗೆ ಪಾವತಿಸಿಲ್ಲ ಎಂದು ಆರೋಪಿಸಿ ಬಿಬಿಎಂಪಿ ಇದೇ ಮೇ 10ರಂದು ಸತತ ಐದನೇ ಬಾರಿಗೆ ಬೀಗ ಜಡಿದಿತ್ತು. ಈ ಕ್ರಮವನ್ನು ಪ್ರಶ್ನಿಸಿ ಮಾಲ್, ಸಿಟಿ ಸಿವಿಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಬಾಕಿಯಿರುವ ತೆರಿಗೆ ಮೊತ್ತದ ಪೈಕಿ ಶೇ. 50ರಷ್ಟು ತೆರಿಗೆ ಹಣವನ್ನು 10 ದಿನಗಳಲ್ಲಿ ಬಿಬಿಎಂಪಿಗೆ ಪಾವತಿಸುವಂತೆ ಆದೇಶ ಹೊರಡಿಸಿತ್ತು. ತೆರಿಗೆ ಹಣ ಪಾವತಿಸಿದ ನಂತರವೇ ಬಿಬಿಎಂಪಿ ಮಾಲ್ ನ ಬೀಗ ತೆರೆದು ವಹಿವಾಟು ನಡೆಸಲು ಅನುಮತಿ ನೀಡಬೇಕು ಎಂದು ಮೇ 15 ಬುಧವಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಾಲ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಬಿಬಿಎಂಪಿ ತೆರಿಗೆ ಲೆಕ್ಕಾಚಾರವನ್ನು ಸರಿಯಾಗಿ ಹಾಕಿಲ್ಲ. ಕೋವಿಡ್ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ನಡೆದಿಲ್ಲ. ಆದ್ದರಿಂದ ಬಿಬಿಎಂಪಿ ಲೆಕ್ಕ ಹಾಕಿರುವಷ್ಟು ತೆರಿಗೆ ಪಾವತಿ ಮಾಡಲು ಅಸಾಧ್ಯ ಎಂದು ಮಂತ್ರಿ ಮಾಲ್ ವಾದ ಮಂಡಿಸುತ್ತಾ ಬಂದಿತ್ತು.
ಬೆಂಗಳೂರು ವ್ಯಾಪ್ತಿಯಲ್ಲಿ ಮತ್ತೆ 3 ದಿನ ಮದ್ಯ ಮಾರಾಟ ನಿಷೇಧ; ಏಕೆ ಮತ್ತು ಯಾವಾಗ
ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂನ್ 3 ರಂದು ನಡೆಯಲಿದ್ದು ಫಲಿತಾಂಶ ಜೂನ್ 6ರಂದು ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯು ಮುಕ್ತ, ನಿಷ್ಪಕ್ಷಪಾತ ಹಾಗೂ ಶಾಂತಿಯುತವಾಗಿ ನಡೆಸುವ ಸಲುವಾಗಿ ಮತದಾನ ಮುಗಿಯುವ ಅವಧಿಯ ಹಿಂದಿನ 48 ಗಂಟೆಗಳು ಮತ್ತು ಮತ ಎಣಿಕೆ ದಿನದಂದು ಮದ್ಯ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಆದೇಶ ಹೊರಡಿಸಿದ್ದಾರೆ. ರಸ್ಕೋರಂಟ್ ಹಾಗೂ ಹೋಟೆಲ್ ಗಳಲ್ಲಿ ಆಹಾರ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಜೂನ್ 3 ರಂದು ಮತದಾನ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತ ಚಲಾಯಿಸಬಹುದಾಗಿದೆ. ಜೂನ್ 6ರಂದು ಮತಗಳ ಎಣಿಕೆ ನಡೆಯಲಿದೆ. ಬೆಂಗಳೂರು ಪದವೀಧರ, ಈಶಾನ್ಯ ಪದವೀಧರ, ನೈಋತ್ಯ ಪದವೀಧರ, ಆಗ್ನೇಯ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರ ಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.
(ವರದಿ- ಎಚ್. ಮಾರುತಿ, ಬೆಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.