ಡೆಂಗ್ಯೂ ಜ್ವರ ಸಂಕಷ್ಟ; 2 ವಿಧದ ಪರೀಕ್ಷೆಗೆ ಒಟ್ಟು 600 ರೂ ಶುಲ್ಕ, ಖಾಸಗಿ ಆಸ್ಪತ್ರೆ, ಲ್ಯಾಬ್ಗಳಿಗೆ ಸರ್ಕಾರದ ಸೂಚನೆ
ಕರ್ನಾಟಕದಲ್ಲಿ ಡೆಂಗ್ಯೂ ಜ್ವರ ಸಂಕಷ್ಟ ಹೆಚ್ಚಾಗಿದೆ. ರಾಜ್ಯದಲ್ಲಿ ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿದ 2 ವಿಧದ ಪರೀಕ್ಷೆಗೆ ಒಟ್ಟು 600 ರೂ ಶುಲ್ಕವನ್ನು ಸರ್ಕಾರ ನಿಗದಿ ಮಾಡಿದೆ. ಇದಕ್ಕಿಂತ ಹೆಚ್ಚು ಶುಲ್ಕವನ್ನು ಪಡೆಯಬಾರದು ಎಂದು ಖಾಸಗಿ ಆಸ್ಪತ್ರೆ, ಲ್ಯಾಬ್ಗಳಿಗೆ ಸರ್ಕಾರ ಸೂಚನೆ ನೀಡಿದೆ.

ಬೆಂಗಳೂರು: ಕರ್ನಾಟಕದಾದ್ಯಂತ ಡೆಂಗ್ಯೂ ಪ್ರಕರಣಗಳ ಹೆಚ್ಚಳದ ಮಧ್ಯೆ, ಕರ್ನಾಟಕ ಸರ್ಕಾರವು ಖಾಸಗಿ ಆಸ್ಪತ್ರೆಗಳು ಮತ್ತು ರೋಗನಿರ್ಣಯ ಪ್ರಯೋಗಾಲಯಗಳಲ್ಲಿ ಡೆಂಗ್ಯೂ ಪರೀಕ್ಷೆಗಳಿಗೆ ವಿಧಿಸುವ ದರಕ್ಕೆ ಮಿತಿ ನಿಗದಿ ಮಾಡಿದೆ. ಕರ್ನಾಟಕ ಸರ್ಕಾರ ಬುಧವಾರ ಈ ಕುರಿತ ಆದೇಶ ಹೊರಡಿಸಿದ್ದು, ಎರಡು ವಿಧದ ಪರೀಕ್ಷೆಗೆ ಒಟ್ಟು 600 ರೂಪಾಯಿ ವಿಧಿಸಬಹುದು ಎಂದು ಸೂಚಿಸಿದೆ.
ಎನ್ಎಸ್ಐ ಪ್ರತಿಜನಕ ಪರೀಕ್ಷೆ (NS1 antigen test) ಮತ್ತು ಐಜಿಎಂ ಪರೀಕ್ಷೆ (IgM testing) ಗೆ ತಲಾ 300 ರೂಪಾಯಿಯನ್ನು ಸರ್ಕಾರ ನಿಗದಿ ಮಾಡಿದೆ. ಇದರಂತೆ, ಎರಡು ರೀತಿಯ ಪರೀಕ್ಷೆಗಳಿಗೆ ಒಟ್ಟು 600 ರೂಪಾಯಿಯನ್ನು ನಿಗದಿಪಡಿಸಲಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಡೆಂಗ್ಯೂ ಸಂಬಂಧಿತ ಪರೀಕ್ಷೆಗಳಿಗೆ ಮನಸಿಗೆ ತೋಚಿದ ದರ ವಸೂಲಿ ಮಾಡುತ್ತಿರುವುದನ್ನು ತಡೆಯಲು ಉದ್ದೇಶಪೂರ್ವಕವಾಗಿ ಮತ್ತು ಬೆಲೆಯ ಮಿತಿಯನ್ನು ನಿಗದಿಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಇದಾಗಿ ಮಾರನೇ ದಿನವೇ ಅಧಿಕಾರಿಗಳು ನೀಡಿದ ಶಿಫಾರಸಿನ ಪ್ರಕಾರ ಈ ದರವನ್ನು ಸರ್ಕಾರ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇನ್ನು ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಈ ಪರೀಕ್ಷೆಗಳಿಗೆ 600 ರೂಪಾಯಿಗಿಂತ ಹೆಚ್ಚು ಶುಲ್ಕ ವಿಧಿಸುವಂತೆ ಇಲ್ಲ.
ಕರ್ನಾಟಕದಲ್ಲಿ 5000ಕ್ಕೂ ಹೆಚ್ಚು ಡೆಂಗ್ಯೂ ಜ್ವರ ಕೇಸ್
ರಾಜ್ಯದಲ್ಲಿ 5,000 ಕ್ಕೂ ಹೆಚ್ಚು ಡೆಂಗ್ಯೂ ಜ್ವರದ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಒಂದು ಸಾವು ಸಂಭವಿಸಿದ್ದು ಸೇರಿದಂತೆ ಈ ವರ್ಷ ಆರು ಸಾವುಗಳು ಡೆಂಗ್ಯೂ ಜ್ವರದಿಂದ ಸಂಭವಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗೆ ಪತ್ತೆ ಮತ್ತು ಚಿಕಿತ್ಸೆ ಎರಡೂ ಉಚಿತ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.
ಆದಾಗ್ಯೂ, ಖಾಸಗಿ ಆಸ್ಪತ್ರೆಗಳು ಕೂಡ ಡೆಂಗ್ಯೂ ಪರೀಕ್ಷೆಗೆ ದುಬಾರಿ ಶುಲ್ಕ ವಿಧಿಸದಂತೆ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಡೆಂಗ್ಯೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳ ಕುರಿತು ಸೂಚನೆ ನೀಡಿದರು. ಇದಲ್ಲದೆ, ಅನುಸರಣಾ ಕ್ರಮವಾಗಿ ಇಂದು (ಜುಲೈ 4) ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಸೊಳ್ಳೆಗಳಿಂದ ಮತ್ತು ಇತರೆ ಕೀಟಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಅಧಿಕಾರಿಗಳು ಕೈಗೊಂಡಿರುವ ತಡೆಗಟ್ಟುವ ಕ್ರಮಗಳನ್ನು ಅವರು ಪರಿಶೀಲಿಸಲಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.