Bengaluru Weather: ಇನ್ನೆರಡು ದಿನ ಬೆಂಗಳೂರಲ್ಲಿ ಮಳೆ ಸಾಧ್ಯತೆ, ಹವಾಮಾನ ಇಲಾಖೆ, ಸ್ಕೈಮೆಟ್ ಮುನ್ಸೂಚನೆ
ಬೆಂಗಳೂರು ನಗರದಲ್ಲಿ ಬಹುತೇಕ ಕಡೆಗಳಲ್ಲಿ ನವೆಂಬರ್ 23 ಮತ್ತು 24ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಕೂಡ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆ ಈಗಾಗಲೇ ಈ ಕುರಿತು ಸೂಚನೆ ನೀಡಿತ್ತು.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಮುಂದಿನ ಎರಡು ದಿನ ಅಂದರೆ ನವೆಂಬರ್ 23, 24ರಂದು ಬಹುತೇಕ ಕಡೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಸ್ಕೈಮೆಟ್ ಹವಾಮಾನ ಮುನ್ಸೂಚನೆ ಹೇಳಿದೆ.
ಟ್ರೆಂಡಿಂಗ್ ಸುದ್ದಿ
ಭಾರತೀಯ ಹವಾಮಾನ ಇಲಾಖೆ ಕೂಡ ಇಂದು ಮತ್ತು ನಾಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದ ಕೆಲವೆಡೆ ಹಗುರ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಿತ್ತು. ಅದೇ ರೀತಿ ನವೆಂಬರ್ 23 ಮತ್ತು 24ರಂದು ಬಹುತೇಕ ಕಡೆ ಮಳೆ ಬೀಳಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಿದೆ.
ಸ್ಕೈಮೆಟ್ ಎಕ್ಸ್ನಲ್ಲಿ ಹವಾಮಾನ ಮುನ್ಸೂಚನೆ ವಿವರ ನೀಡಿದ್ದು, “ಕಳೆದ ಹತ್ತು ದಿನಗಳಿಂದ ಒಣ ಹವೆ ಇದೆ. ನವೆಂಬರ್ ತಿಂಗಳಲ್ಲಿ ಐದು ಮಳೆಯ ದಿನಗಳಿವೆ. ಅದರಲ್ಲಿ ಎರಡು ಮಳೆಯ ದಿನಗಳನ್ನು ಈಗಾಗಲೇ ನೋಡಲಾಗಿದೆ. ಇನ್ನುಳಿದಂತೆ ವಿಶೇಷವಾಗಿ ನವೆಂಬರ್ 23 ಮತ್ತು 24 ರಂದು ನಾವು ಹೆಚ್ಚು ಮಳೆಯ ಚಟುವಟಿಕೆಗಳನ್ನು ನಿರೀಕ್ಷಿಸಬಹುದು” ಎಂದು ಹೇಳಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಏನಿದೆ
ಹವಾಮಾನ ಇಲಾಖೆಯ ಪ್ರಕಾರ, 30-35 ಮಿಮೀ ನಿರೀಕ್ಷಿತ ಮಳೆಯಾಗಲಿದೆ. ಒಟ್ಟಾರೆ ಹವಾಮಾನ ಪರಿಸ್ಥಿತಿಯ ಸಮತೋಲನಕ್ಕೆ ಸಾಧಾರಣ ಮಳೆಯು ಕೊಡುಗೆ ನೀಡುತ್ತದೆ. ಹೆಚ್ಚುವರಿ ಮಳೆಯು ವಾತಾವರಣದ ಉಷ್ಣತೆಯನ್ನು ತಗ್ಗಿಸಿದ್ದು, ಮುದ ನೀಡುವ ಹವಾಮಾನವನ್ನು ಸೃಷ್ಟಿಸಿದೆ.
ಮಾಸಿಕ ಮಳೆ ಸರಾಸರಿಯನ್ನು ಪರಿಗಣಿಸಿದಾಗ, ಬೆಂಗಳೂರು ಈಗಾಗಲೇ ನಿರೀಕ್ಷಿತ ಮಳೆಯನ್ನು ಪಡೆದಿದೆ. ಈ ದತ್ತಾಂಶವು ದೈನಂದಿನ ಮಳೆಯದ್ದಷ್ಟೇ ಅಲ್ಲ, ಎರಡು ವಿಭಿನ್ನ ಸಂದರ್ಭಗಳಲ್ಲಿ ಬಿದ್ದ ಮಳೆಯ ಪ್ರಮಾಣವನ್ನು ಒಳಗೊಂಡಿದೆ.
ತಮಿಳುನಾಡು, ಪುದುಚೆರಿ, ಕಾರೈಕಲ್ಗೆ ಆರೆಂಜ್ ಅಲರ್ಟ್
ಏತನ್ಮಧ್ಯೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ಗೆ ಆರೆಂಜ್ ಅಲರ್ಟ್ ನೀಡಿದ್ದು, ನವೆಂಬರ್ 22 ಮತ್ತು 23 ರಂದು ಭಾರೀ ಮಳೆಯಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ಸೂಚಿಸಿದೆ.
“ಇಂದು, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಈ ಕಿತ್ತಳೆ ಎಚ್ಚರಿಕೆಯ ಸಮಯದಲ್ಲಿ ನೀರು ತುಂಬಿರುವ, ಡಾಂಬರು ಕಾಣದ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ ಮತ್ತು ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸುವಂತೆ ಸಾರ್ವಜನಿಕರಲ್ಲಲಿ ವಿನಂತಿಸಲಾಗಿದೆ. ಜಾಗರೂಕರಾಗಿರಿ, ಸುರಕ್ಷಿತವಾಗಿರಿ!” ಎಂದು ಭಾರತೀಯ ಹವಾಮಾನ ಇಲಾಖೆ ಎಕ್ಸ್ನಲ್ಲಿ ಹೇಳಿದೆ.
ಕೇರಳ, ಮಾಹೆಯಲ್ಲೂ ಆರೆಂಜ್ ಅಲರ್ಟ್
ಕೇರಳ ಮತ್ತು ಮಾಹೆಗೆ ಆರೆಂಜ್ ಅಲರ್ಟ್ ನೀಡಿದೆ, ನವೆಂಬರ್ 22 ಮತ್ತು 23 ರಂದು ಪ್ರತ್ಯೇಕವಾದ ಭಾರೀ ಮತ್ತು ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಇದಲ್ಲದೆ, ಜಲಾವೃತ, ಡಾಂಬರುಗಳಿಲ್ಲದ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಿಗೆ ಹೋಗದಂತೆ ಸಾರ್ವಜನಿಕರಿಗೆ ಹವಾಮಾನ ಇಲಾಖೆಯು ಸಲಹೆ ನೀಡಿದೆ.