ಲೋಕಸಭಾ ಚುನಾವಣೆ; ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ, ಕುತೂಹಲ ಮೂಡಿಸಿದೆ ರಾಜಕೀಯ ಲೆಕ್ಕಾಚಾರ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ; ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ, ಕುತೂಹಲ ಮೂಡಿಸಿದೆ ರಾಜಕೀಯ ಲೆಕ್ಕಾಚಾರ

ಲೋಕಸಭಾ ಚುನಾವಣೆ; ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ, ಕುತೂಹಲ ಮೂಡಿಸಿದೆ ರಾಜಕೀಯ ಲೆಕ್ಕಾಚಾರ

ಲೋಕಸಭಾ ಚುನಾವಣೆ 2024 ಪ್ರಚಾರದ ಕಾವು ಏರುತ್ತಿರುವ ಈ ಹೊತ್ತಿನಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಪ್ರಧಾನಿಯವರನ್ನು ಕೊಂಡಾಡಿದ ಸುಮಲತಾ ಅವರ ಮಾತುಗಳ ಅವಲೋಕನ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಇತರೆ ನಾಯಕರ ಉಪಸ್ಥಿತಿಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಇತರೆ ನಾಯಕರ ಉಪಸ್ಥಿತಿಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆಯಾದರು.

ಬೆಂಗಳೂರು: ಮುಂದಿನ ರಾಜಕೀಯ ನಡೆ ಕುರಿತಾದ ಊಹಾಪೋಹಗಳಿಗೆ ತೆರೆ ಎಳೆದಿರುವ ಮಂಡ್ಯದ ಸ್ವತಂತ್ರ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು (ಏಪ್ರಿಲ್ 5) ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರ್ಪಡೆಯಾಗಿರುವ ಸುಮಲತಾ ನಿನ್ನೆ ಈ ವಿಚಾರ ಸ್ಪಷ್ಟಪಡಿಸಿದ್ದರು.

ಮಂಡ್ಯದಲ್ಲಿ ಸ್ಪರ್ಧಿಸಲು ಬಯಸಿದ್ದ ಹಾಲಿ ಸಂಸದೆ ಸುಮಲತಾ, ತಮ್ಮ ನಿಲುವನ್ನು ನಿನ್ನೆ ಸ್ಪಷ್ಟಪಡಿಸಿದ್ದು, ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಈಗ ಸ್ಪರ್ಧಿಸುತ್ತಿಲ್ಲ ಎಂದು ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸುತ್ತಿದ್ದಾರೆ. ಈ ಸಲ ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಇದರಿಂದಾಗಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲೂ ನೇರ ಸ್ಪರ್ಧೆ ಏರ್ಪಟ್ಟಿದೆ.

ಸುಮಲತಾ ಮಂಡ್ಯದಲ್ಲಿ ಹೇಳಿರುವುದು ಇಷ್ಟು

ಮಂಡ್ಯದಲ್ಲಿ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ 60 ವರ್ಷದ ನಟಿ-ರಾಜಕಾರಣಿ ಸುಮಲತಾ ಅಂಬರೀಶ್‌ ಹೇಳಿರುವುದು ಇಷ್ಟು -

“ನಾನು ಈ ಸಲ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಮಂಡ್ಯದ ಬಗ್ಗೆ ನನ್ನ ಬದ್ಧತೆ ಅಚಲವಾಗಿದೆ. ಟಿಕೆಟ್ ನಿರಾಕರಿಸಿದಾಗ ಕೆಲವರು ಪಕ್ಷವನ್ನು ತೊರೆಯಬಹುದು. ಆದರೆ ನಾನು ನನ್ನ ಸ್ಥಾನವನ್ನು ಬಿಟ್ಟುಕೊಟ್ಟು ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಮಂಡ್ಯದ ಕುರಿತು ನಿರ್ಧಾರ ತೆಗೆದುಕೊಳ್ಳುವ ಪ್ರತಿ ಹಂತದಲ್ಲೂ ಬಿಜೆಪಿ ನಾಯಕರು ನಿರಂತರವಾಗಿ ಸಂಪರ್ಕದಲ್ಲಿದ್ದರು. ಯಾವಾಗ ಪ್ರಧಾನಮಂತ್ರಿಯವರು ನನ್ನನ್ನು ಸಂಪರ್ಕಿಸಿ ಬಿಜೆಪಿಗೆ ನನ್ನ ಅಗತ್ಯ ಇದೆ. ಪಕ್ಷವನ್ನು ಬಿಡಬೇಡಿ ಎಂದು ಹೇಳಿದ್ದಾರೆ. ಅವರ ಮಾತನ್ನು ಗೌರವಿಸಬೇಕಾಗಿದೆ”

“ಕೆಲವು ಬೆಂಬಲಿಗರು ಕಾಂಗ್ರೆಸ್ ಸೇರಬೇಕು ಎಂದು ಆಗ್ರಹಿಸಿದರು. ಆದರೆ, ಪಕ್ಷಕ್ಕೆ ಈಗ ಅಥವಾ ಮುಂದೆ ಭವಿಷ್ಯದಲ್ಲಿ ಕೂಡ ಸುಮಲತಾ ಅವರ ಅಗತ್ಯ ಇದೆ ಅಂತ ಅನ್ನಿಸುತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ. ಈ ರೀತಿ ಮಾತುಗಳನ್ನು ಕೇಳಿಸಿಕೊಂಡು ಸ್ವಾಭಿಮಾನ ಬಿಟ್ಟು ಕಾಂಗ್ರೆಸ್‌ ಪಕ್ಷಕ್ಕೆ ಯಾರೇ ಆದರೂ ಸೇರುವುದು ಹೇಗೆ?”

2019ರ ಚುನಾವಣೆಯಲ್ಲಿ ನಿಖಿಲ್ ಕುಮಾರ ಸ್ವಾಮಿ ವಿರುದ್ಧ ಗೆಲುವು, ಸುಮಲತಾಗೆ ಬಿಜೆಪಿ ಬೆಂಬಲ

ಕಳೆದ ಲೋಕಸಭೆ ಚುನಾವಣೆ (2019 ರ ಸಾರ್ವತ್ರಿಕ ಚುನಾವಣೆ) ಯಲ್ಲಿ ಬಿಜೆಪಿ ಬೆಂಬಲದೊಂದಿಗೆ ಮಂಡ್ಯದಲ್ಲಿ ಸುಮಲತಾ ಸ್ಪರ್ಧಿಸಿದ್ದರು. ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಸುಮಲತಾ ಸೋಲಿಸಿದ್ದರು. ಈ ಸಲದ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದರೂ ಮಂಡ್ಯದಲ್ಲಿ ರಾಜಕೀಯವಾಗಿ ಮಹತ್ವದ ಬದಲಾವಣೆ ಸಂಭವಿಸಿದೆ. ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಅವರ ಗೆಲುವು ಅದನ್ನು ಸಾರಿ ಹೇಳಿದೆ. ಕಳೆದ 5 ವರ್ಷದ ಅವಧಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 4,000 ಕೋಟಿ ರೂಪಾಯಿ ಅನುದಾನ ನೀಡಿದ್ದಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರದ ಕೆಲಸಗಳನ್ನು ಸುಮಲತಾ ಒಪ್ಪಿಕೊಂಡಿದ್ದರು. ಈಗ ಅದನ್ನು ಸ್ಮರಿಸಿದ್ದಾರೆ ಕೂಡ.

ಈಗ ಅವರ ಮುಂದಿನ ರಾಜಕೀಯ ಲೆಕ್ಕಾಚಾರ ಕುತೂಹಲ ಕೆರಳಿಸಿದ್ದು, ಅವರಿಗೆ ಬಿಜೆಪಿಯಲ್ಲಿ ಯಾವ ಸ್ಥಾನಮಾನ ಸಿಗಲಿದೆ ಎಂಬ ಅಂಶ ಮುನ್ನೆಲೆಗೆ ಬಂದಿದೆ.

Whats_app_banner