ಬೆಂಗಳೂರು: ಚಲಿಸುತ್ತಿದ್ದ ರೈಲುಗಳ ಮೇಲೆ ದಾಳಿ 65 ಕೆಜಿ ಗಾಂಜಾ ವಶ, ಬಾಡಿಗೆಗೆ ಕಾರು ಪಡೆದು ಮಾರಾಟ ಮಾಡುತ್ತಿದ್ದ ವಂಚಕನ ಬಂಧನ
ಬೆಂಗಳೂರು: ಚಲಿಸುತ್ತಿದ್ದ ರೈಲುಗಳ ಮೇಲೆ ದಾಳಿ ನಡೆಸಿದ ಪೊಲೀಸರು 65 ಕೆಜಿ ಗಾಂಜಾ ವಶ ಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಬಾಡಿಗೆಗೆ ಕಾರು ಪಡೆದು ಮಾರಾಟ ಮಾಡುತ್ತಿದ್ದ ವಂಚಕನ ಬಂಧನವಾಗಿದ್ದು, 90 ಲಕ್ಷ ರೂ ಮೌಲ್ಯದ ಕಾರುಗಳನ್ನು ಪೊಲೀಸರು ವಶಪಡಿಸಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಚಲಿಸುತ್ತಿದ್ದ ರೈಲುಗಳ ಮೇಲೆ ದಾಳಿ ನಡೆಸಿರುವ ರೈಲ್ವೇ ಪೊಲೀಸರು 65 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಜೂನ್ 13ರಿಂದ 18ರವರಗೆ ನಡೆದಿರುವ ಈ ದಾಳಿಯಲ್ಲಿ 65.47 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಈ ಗಾಂಜಾ ಮೌಲ್ಯ 65,47,900 ರೂ.ಗಳು ಎಂದು ತಿಳಿದು ಬಂದಿದೆ.
ಬೆಂಗಳೂರು ವಿಭಾಗದ ಸರ್ಕಾರಿ ರೈಲ್ವೇ ಪೊಲೀಸ್ ಪಡೆ ಈ ದಾಳಿ ನಡೆಸಿದ್ದು ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಜಿಆರ್ ಪಿ ಉಪ ಪೊಲೀಸ್ ಆಯುಕ್ತ ರವಿಕುಮಾರ್, ಬೆಂಗಳೂರು ಸರ್ಕಲ್ ಇನ್ಸ್ಪೆಕ್ಟರ್ ಎಂ.ಎನ್.ರವಿಶಂಕರ್ ಮತ್ತು ಸಬ್ ಇನ್ ಸ್ಪೆಕ್ಟರ್ ಗಳಾದ ವಸಂತ ಕುಮಾರ್ ಮತ್ತು ಸತ್ಯಪ್ಪ ಈ ಗಾಂಜಾ ಜಪ್ತಿ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ ಎಂದು ರೈಲೇ ಇಲಾಖೆ ತಿಳಿಸಿದೆ.
ಬಾಡಿಗೆಗೆ ಕಾರು ಪಡೆದು ಮಾರಾಟ ಮಾಡುತ್ತಿದ್ದ ವಂಚಕನ ಬಂಧನ: 90 ಲಕ್ಷ ರೂ ಕಾರುಗಳ ವಶ
ಕಾರುಗಳನ್ನು ಬಾಡಿಗೆಗೆ ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಇಲ್ಲವೇ ಗಿರವಿ ಇಡುತ್ತಿದ್ದ ವಂಚಕನೊಬ್ಬನನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿ ಸುಮಾರು 90 ಲಕ್ಷ ರೂ. ಮೌಲ್ಯದ 9 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಾರುತಿ ಸ್ವಿಫ್ಟ್ ಕಾರೊಂದನ್ನು ಒಂದು ತಿಂಗಳ ಮಟ್ಟಿಗೆ ಬಾಡಿಗೆಗೆ ಪಡೆದು ನಂತರ ಕಾರು ಮಾಲೀಕರ ಸಂಪರ್ಕಕ್ಕೆ ಸಿಗದೆ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಕಾರು ಮಾಲೀಕರು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಶಿವಮೊಗ್ಗದಲ್ಲಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಆತನನ್ನು ವಿಚಾರಣೆಗೊಳಪಡಿಸಿದಾಗ ಕಾರುಗಳನ್ನು ಕಳವು ಮಾಡುತ್ತಿದ್ದ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.
ಕಾರುಗಳನ್ನು ಬಾಡಿಗೆಗೆ ಪಡೆದ ನಂತರ ಅವುಗಳ ಜಿಪಿಎಸ್ ಕಿತ್ತು ಹಾಕಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಇಲ್ಲವೇ ಗಿರವಿ ಇಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 9 ಕಾರುಗಳ ಪೈಕಿ 6 ಕಾರುಗಲನ್ನು ಮಾರಾಟ ಮಾಡಿದ್ದರೆ 3 ಕಾರುಗಳನ್ನು ಗಿರವಿ ಇಟ್ಟಿದ್ದ. ಈತ ಕಾರುಗಳ ಮಾಲೀಕರು ಮತ್ತು ಕಾರುಗಳನ್ನು ಕೊಳ್ಳುವವರಿಬ್ಬರಿಗೂ ಟೋಪಿ ಹಾಕಿ ಹಣ ಸಂಪಾದನೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ವಿಲಾಸಿ ಜೀವನಕ್ಕಾಗಿ ಗೇರ್ ಸೈಕಲ್ ಗಳನ್ನೇ ಕದಿಯುತ್ತಿದ್ದ ಕಳ್ಳನ ಬಂಧನ
ಐಷಾರಾಮಿ ಜೀವನ ನಡೆಸಲು ಹಣಕ್ಕಾಗಿ ದುಬಾರಿ ಬೆಲೆಯ ಗೇರ್ ಸೈಕಲ್ ಗಳನ್ನೇ ಕಳವು ಮಾಡುತ್ತಿದ್ದ ಕಳ್ಳನೊಬ್ಬನನ್ನು ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸಿ ಆತನಿಂದ 60 ಗೇರ್ ಸೈಕಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಗಣಿಯ 43 ವರ್ಷದ ನಾರಾಯಣಸ್ವಾಮಿ ಗೇರ್ ಸೈಕಲ್ ಕಳ್ಳ. ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಗೇರ್ ಸೈಕಲ್ ಕಳವಾಗಿದೆ ಎಂದು ಜೆಪಿ ನಗರದ ನಿವಾಸಿಯಬ್ಬರು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೆ.ಪಿ. ನಗರದ ವ್ಯಾಪ್ತಿಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳನ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದರು. ನಂತರ ಬನ್ನೇರುಘಟ್ಟ ಮುಖ್ಯ ರಸ್ತೆಯ ಕೋಳಿ ಫಾರಂ ಬಳಿ ಆರೋಪಿ ನಾರಾಯಣಸ್ವಾಮಿಯನ್ನು ಬಂಧಿಸಿದ್ದಾರೆ.
ವಿಲಾಸಿ ಜೀವನ ನಡೆಸಲು ಗೇರ್ ಸೈಕಲ್ ಗಳನ್ನು ಕಳವು ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಈತನಿಂದ 12 ಲಕ್ಷ ರೂ. ಬೆಲೆ ಬಾಳುವ 60 ಗೇರ್ ಸೈಕಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.