ಬೆಂಗಳೂರು–ಮೈಸೂರು ಹೆದ್ದಾರಿ ಪ್ರಯಾಣಿಕರ ಮುಗಿಯದ ಗೋಳು, ವಾರಾಂತ್ಯದಲ್ಲಿ ಸುಗಮ ಸಂಚಾರ ಕನಸಿನ ಮಾತು; ಕಾರಣ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು–ಮೈಸೂರು ಹೆದ್ದಾರಿ ಪ್ರಯಾಣಿಕರ ಮುಗಿಯದ ಗೋಳು, ವಾರಾಂತ್ಯದಲ್ಲಿ ಸುಗಮ ಸಂಚಾರ ಕನಸಿನ ಮಾತು; ಕಾರಣ ಹೀಗಿದೆ

ಬೆಂಗಳೂರು–ಮೈಸೂರು ಹೆದ್ದಾರಿ ಪ್ರಯಾಣಿಕರ ಮುಗಿಯದ ಗೋಳು, ವಾರಾಂತ್ಯದಲ್ಲಿ ಸುಗಮ ಸಂಚಾರ ಕನಸಿನ ಮಾತು; ಕಾರಣ ಹೀಗಿದೆ

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವವರು ಒಂದಲ್ಲ ಒಂದು ಸಮಸ್ಯೆ ಎದುರಿಸುವುದು ಸಹಜವಾಗಿದೆ. ಇದೀಗ ಟೋಲ್‌ಗಳ ಬಳಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ಇದರಿಂದ ಸುಗಮ ಸಂಚಾರ ಕನಸಿನ ಮಾತಾಗಿದೆ.

ಬೆಂಗಳೂರು–ಮೈಸೂರು ಹೆದ್ದಾರಿ ಪ್ರಯಾಣಿಕರ ಮುಗಿಯದ ಗೋಳು, ವಾರಾಂತ್ಯದಲ್ಲಿ ಸುಗಮ ಸಂಚಾರ ಕನಸಿನ ಮಾತು; ಕಾರಣ ಹೀಗಿದೆ (ಸಾಂಕೇತಿಕ ಚಿತ್ರ)
ಬೆಂಗಳೂರು–ಮೈಸೂರು ಹೆದ್ದಾರಿ ಪ್ರಯಾಣಿಕರ ಮುಗಿಯದ ಗೋಳು, ವಾರಾಂತ್ಯದಲ್ಲಿ ಸುಗಮ ಸಂಚಾರ ಕನಸಿನ ಮಾತು; ಕಾರಣ ಹೀಗಿದೆ (ಸಾಂಕೇತಿಕ ಚಿತ್ರ)

ಬೆಂಗಳೂರು–ಮೈಸೂರು ಹೆದ್ದಾರಿ ಆರಂಭವಾಗುವ ಮೊದಲು ಈ ಮಾರ್ಗ ಸಾಕಷ್ಟು ಪ್ರಶಂಸೆಗೆ ಒಳಗಾಗಿತ್ತು. ಈ ಮಾರ್ಗವು ಸಂಚಾರದ ದಿಕ್ಕನ್ನೇ ಬದಲಿಸಲಿದೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ಈ ಹೆದ್ದಾರಿ ಸಂಚಾರ ಮುಕ್ತವಾದ ಮೇಲೆ ಪರಿಸ್ಥಿತಿ ಬದಲಾಗಿದೆ. ಅಲ್ಲದೇ ಇದರ ಮೇಲೆ ಇರಿಸಿಕೊಂಡಿದ್ದ ಸಾಕಷ್ಟು ನಂಬಿಕೆಗಳು ಹುಸಿಯಾಗಿವೆ. ಈ ಮಾರ್ಗವು ಪ್ರಯಾಣಿಕರಿಗೆ ನಿರಾಸೆ ಉಂಟು ಮಾಡಿದೆ.

ಇತ್ತೀಚೆಗಂತೂ ಈ ಮಾರ್ಗದ ಟೋಲ್ ಫ್ಲಾಜಾಗಳ ಬಳಿ ಟ್ರಾಫಿಕ್ ಸಿಕ್ಕಾಪಟ್ಟೆ ಉಂಟಾಗುತ್ತಿದ್ದು ಇದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಹಬ್ಬದ ದಿನಗಳು, ಲಾಂಗ್ ವೀಕೆಂಡ್ ಬಂತು ಎಂದರೆ ಶೇಷಗಿರಿ ಹಳ್ಳಿ ಮತ್ತು ಕಣಿಮಿಣಿಕೆ ಟೋಲ್ ಪ್ಲಾಜಾಗಳ ಬಳಿ ಗಂಟೆಗಟ್ಟಲೆ ಪ್ರಯಾಣಿಕರು ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಏಪ್ರಿಲ್ 20ರ ಭಾನುವಾರ ಈ ಟೋಲ್‌ಗೇಟ್‌ಗಳ ಬಳಿ ಸುಮಾರು 2 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಹಲವು ವಾಹನಗಳು ಕಿಲೋಮೀಟರ್‌ಗಟ್ಟಲೆ ಉದ್ದಕ್ಕೆ ಕ್ಯೂ ನಿಂತಿದ್ದವು. ವಾರಾಂತ್ಯದ ದಟ್ಟಣೆಯನ್ನು ನಿರ್ವಹಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸಾಕಷ್ಟು ಸಿಬ್ಬಂದಿ ಮತ್ತು ವ್ಯವಸ್ಥೆಗಳನ್ನು ನಿಯೋಜಿಸಲು ವಿಫಲವಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

‘ನಾವು ಹೆದ್ದಾರಿಯನ್ನು ದಾಟಿ ಇನ್ನೇನು ಬೆಂಗಳೂರು ನಗರ ಪ್ರವೇಶಿಸಬೇಕು ಎನ್ನುವ ಮೊದಲೇ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಮುಂಬೈ ನಗರದಲ್ಲಿ ದೀರ್ಘ ಟ್ರಾಫಿಕ್ ಜಾಮ್‌ಗಳ ಸಮಯದಲ್ಲಿ ಸಂಚಾರ ದಟ್ಟಣೆಯನ್ನು ತೆರವುಗೊಳಿಸಲು ಟೋಲ್ ನಿರ್ವಾಹಕರು ಗೇಟ್‌ಗಳನ್ನು ತೆರೆಯುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿ, ಅಂತಹ ಯಾವುದೇ ಕ್ರಮ ಇಲ್ಲ. ಟ್ರಾಫಿಕ್‌ನಲ್ಲಿ ಹೀಗೆ ಸಿಲುಕಿಕೊಳ್ಳುವುದಾದರೆ ಆರು ಪಥದ ಹೆದ್ದಾರಿಯ ಪ್ರಯೋಜನವೇನು‘ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

ಇದು ಕೇವಲ ಏಪ್ರಿಲ್ 20 ರ ಕಥೆಯಲ್ಲ. ಪ್ರತಿ ವಾರಾಂತ್ಯದಲ್ಲಿ, ವಿಶೇಷವಾಗಿ ಶುಕ್ರವಾರ ಸಂಜೆ, ಶನಿವಾರ ಬೆಳಿಗ್ಗೆ ಮೈಸೂರಿಗೆ ಹೋಗುವ ಮತ್ತು ಭಾನುವಾರ ಸಂಜೆ ಬೆಂಗಳೂರಿಗೆ ಹಿಂತಿರುಗುವಾಗ ಪ್ರಯಾಣಿಕರು ಪದೇ ಪದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಪ್ಲಾಜಾವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವುದು, ಉತ್ತಮ ಫಾಸ್ಟ್‌ಟ್ಯಾಗ್ ಸಂವೇದಕಗಳು ಮತ್ತು ಹೆಚ್ಚಿನ ಅಡಚಣೆಯನ್ನು ತಡೆಗಟ್ಟಲು ಗರಿಷ್ಠ ದಟ್ಟಣೆಯ ಸಮಯದಲ್ಲಿ ಗೇಟ್‌ಗಳನ್ನು ತೆರೆಯುವಂತಹ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ ಎಂದು ದಿ ಹಿಂದೂ ವರದಿ ತಿಳಿಸಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳನ್ನು ಸಂಪರ್ಕಿಸಲು ಹಲವು ಪ್ರಯತ್ನಗಳ ಹೊರತಾಗಿಯೂ ಅವರು ಪ್ರತಿಕ್ರಿಯೆಗೆ ಲಭ್ಯವಾಗುತ್ತಿಲ್ಲ ಎಂಬುದು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ದೂರು.

ಕುಂಬಳಗೋಡು ಫ್ಲೈ ಓವರ್

ಕುಂಬಳಗೋಡು ಎಲಿವೇಟೆಡ್ ಕಾರಿಡಾರ್‌ನಲ್ಲಿ ದೆಸೆಯಿಂದಲೂ ಪ್ರಯಾಣಿಕರು ಇನ್ನಷ್ಟು ಟ್ರಾಫಿಕ್ ಜಾಮ್ ಸಮಸ್ಯೆ ಎದುರಿಸುತ್ತಿದ್ದಾರೆ. ವಾರಾಂತ್ಯದಲ್ಲಿ 70,000 ಕ್ಕೂ ಹೆಚ್ಚು ವಾಹನಗಳು ಹೆದ್ದಾರಿಯನ್ನು ಬಳಸುವುದರಿಂದ ಟ್ರಾಫಿಕ್ ಜಾಮ್ ಹೆಚ್ಚಾಗುವುದು ಸಹಜವಾಗಿದೆ.

ವಾರಾಂತ್ಯಗಳಲ್ಲಿ, ಕುಂಬಳಗೋಡು ಮೇಲ್ಸೇತುವೆಯನ್ನು ಪ್ರವೇಶಿಸುವುದು ಮತ್ತು ನಿರ್ಗಮಿಸುವುದು ಬಹುತೇಕ ಅಸಾಧ್ಯ. ಕಳಪೆ ಯೋಜನೆಯಿಂದಾಗಿ ಹೆದ್ದಾರಿಯಲ್ಲಿ ಉಳಿಸಲಾದ ಸಮಯವು ಟೋಲ್ ಬಳಿ ಕಾಯುತ್ತಿದ್ದರಿಂದ ಕಣ್ಮರೆಯಾಗುತ್ತಿದೆ ಎಂದು ಪ್ರಯಾಣಿಕರು ದೂರುತ್ತಾರೆ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.