Toto Awards: 2025ರ ಟೊಟೊ ಪ್ರಶಸ್ತಿಗೆ ಅರ್ಜಿ ಆಹ್ವಾನ; ಯುವ ಬರಹಗಾರರು ತಮ್ಮ ಕತೆ, ನಾಟಕ, ಕವಿತೆಗಳಿಗೆ ಬಹುಮಾನ ಗೆಲ್ಲಲ್ಲು ಸುರ್ವಣಾವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  Toto Awards: 2025ರ ಟೊಟೊ ಪ್ರಶಸ್ತಿಗೆ ಅರ್ಜಿ ಆಹ್ವಾನ; ಯುವ ಬರಹಗಾರರು ತಮ್ಮ ಕತೆ, ನಾಟಕ, ಕವಿತೆಗಳಿಗೆ ಬಹುಮಾನ ಗೆಲ್ಲಲ್ಲು ಸುರ್ವಣಾವಕಾಶ

Toto Awards: 2025ರ ಟೊಟೊ ಪ್ರಶಸ್ತಿಗೆ ಅರ್ಜಿ ಆಹ್ವಾನ; ಯುವ ಬರಹಗಾರರು ತಮ್ಮ ಕತೆ, ನಾಟಕ, ಕವಿತೆಗಳಿಗೆ ಬಹುಮಾನ ಗೆಲ್ಲಲ್ಲು ಸುರ್ವಣಾವಕಾಶ

ಕನ್ನಡದ ಯುವ ಸೃಜನಶೀಲ ಬರಹಗಾರರನ್ನು ಸನ್ಮಾನಿಸಿ ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ಟೊಟೊ ಪ್ರಶಸ್ತಿಯನ್ನು ನೀಡಲಾಗುತ್ತದೆ. 2025ರ ಸಾಲಿನ ಟೊಟೊ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಬರಹಗಾರರು ಅರ್ಜಿ ಸಲ್ಲಿಸಬಹುದು. ಈ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ, ಬಹುಮಾನ ವಿವರ ಸೇರಿದಂತೆ ಈ ಕುರಿತ ಇನ್ನಷ್ಟು ಮಾಹಿತಿ ಇಲ್ಲಿದೆ.

2025ರ ಟೊಟೊ ಪ್ರಶಸ್ತಿಗೆ ಅರ್ಜಿ ಆಹ್ವಾನ; ಯುವ ಬರಹಗಾರರಿಗಿದು ಸುರ್ವಣಾವಕಾಶ
2025ರ ಟೊಟೊ ಪ್ರಶಸ್ತಿಗೆ ಅರ್ಜಿ ಆಹ್ವಾನ; ಯುವ ಬರಹಗಾರರಿಗಿದು ಸುರ್ವಣಾವಕಾಶ

ಕನ್ನಡ ಸಾಹಿತ್ಯದ ಹಿರಿಮೆ ಅಪಾರ. ಕನ್ನಡ ಸಾಹಿತ್ಯ ಪರಂಪರೆಯನ್ನು ಎತ್ತಿ ಮೆರೆಸುವ ಕೆಲಸ ಮಾಡುತ್ತಿದ್ದಾರೆ ಯುವ ಬರಹಗಾರರು. ಇಂತಹ ಯುವ ಬರಹಗಾರರನ್ನು ಪುರಸ್ಕರಿಸಿ, ಸನ್ಮಾನಿಸುವ ಉದ್ದೇಶದಿಂದ ಟೊಟೊ ಫಂಡ್ಸ್ ದಿ ಆರ್ಟ್ಸ್ (Toto Funds the Arts) ಸಂಸ್ಥೆಯು ಪ್ರತಿವರ್ಷ ಟೊಟೊ ಪ್ರಶಸ್ತಿಯನ್ನು ನೀಡುತ್ತದೆ. 2025ನೇ ಸಾಲಿನ ಟೊಟೊ ಪ್ರಶಸ್ತಿಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಬರಹಗಾರರಿಂದ ಕವಿತೆ, ಕಥೆ, ನಾಟಕಗಳನ್ನು ಆಹ್ವಾನಿಸಲಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಬರಹಗಾರರನ್ನು ಸನ್ಮಾನಿಸುತ್ತಿರುವ ಟೊಟೊ ಸಂಸ್ಥೆ ಇದೀಗ 21ನೇ ವರ್ಷಕ್ಕೆ ಕಾಲಿಡುತ್ತಿದೆ. ಟೊಟೊ ಪುರಸ್ಕಾರದ ಪ್ರಶಸ್ತಿಯ ನಗದು ಬಹುಮಾನದ ಮೊತ್ತ ರೂ. 60,000.

ಪ್ರಸ್ತುತ ಪುರಸ್ಕಾರಕ್ಕಾಗಿ ಪ್ರವೇಶ ಪತ್ರ ಕಳುಹಿಸುವವರು ಭಾರತೀಯ ನಾಗರಿಕರಾಗಿರಬೇಕು (ಓವರ್ಸೀಸ್ ಸಿಟಿಜೆನ್ ಆಫ್‌ಇಂಡಿಯಾ –OCI –ಚೀಟಿ ಉಳ್ಳವರು ಪ್ರವೇಶಕ್ಕೆ ಅರ್ಹರಾಗಿರುವುದಿಲ್ಲ) ಮತ್ತು 18 ರಿಂದ 29 ವರ್ಷದೊಳಗಿನವರಾಗಿರಬೇಕು. ಕತೆ, ಕವಿತೆ, ನಾಟಕ ಈ ಮೂರು ಸೃಜನಾತ್ಮಕ ಪ್ರಕಾರಗಳಿಂದ ಒಬ್ಬರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆಯನ್ನು ಪ್ರತಿವರ್ಷದಂತೆ ಕನ್ನಡದ ಹಿರಿಯ ಬರಹಗಾರರ ಸಮಿತಿಯು ಮಾಡುತ್ತದೆ ಎಂದು ಟೊಟೊ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸ ಬಯಸುವವರು ನಿಮ್ಮ ಸೃಜನಾತ್ಮಕ ಬರಹಗಳನ್ನು ಪ್ರವೇಶ ಪತ್ರದೊಂದಿಗೆ ಲಗತ್ತಿಸಬೇಕು. ಪ್ರವೇಶ ಪತ್ರವನ್ನು https://totofundsthearts.org/ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಿ. ಗಮನಿಸಿ, ಪ್ರವೇಶ ಪತ್ರರಹಿತ ಇಮೇಲ್‌ಗಳನ್ನು ಪರಿಗಣಿಸಲಾಗುವುದಿಲ್ಲ.

ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ನಿಯಮಗಳು ಹೀಗಿವೆ

ನೀವು 1995ರ ಜನವರಿ 1 ರಿಂದ 2007ರ ಜನವರಿ 1ರೊಳಗೆ ಹುಟ್ಟಿದವರಾಗಿದ್ದಲ್ಲಿ ಮಾತ್ರ ಈ ಪುರಸ್ಕಾರಕ್ಕೆ ಪ್ರವೇಶ ಪತ್ರ ಕಳಿಸಲು ಅರ್ಹರು. ಕವಿತೆ/ಕಥೆ/ನಾಟಕವು MS WORD ನಲ್ಲಿ ನುಡಿ, ಬರಹ ಅಥವಾ ಯೂನಿಕೋಡ್‌ನಲ್ಲಿ ಕಡ್ಡಾಯವಾಗಿರಬೇಕು. ಈಗಾಗಲೇ ಪ್ರಕಟಗೊಂಡ ಪುಸ್ತಕ ಅಥವಾ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ. ನಿಮ್ಮ ಹೆಸರು, ಜನ್ಮದಿನಾಂಕ ಮತ್ತು ವಿಳಾಸವನ್ನು ದಯವಿಟ್ಟು ಇಂಗ್ಲಿಷಿನಲ್ಲಿಯೂ ಬರೆಯಿರಿ.

ಪ್ರವೇಶ ಪತ್ರದಲ್ಲಿ ಮಾತ್ರ ನಿಮ್ಮ ಹೆಸರು, ಸ್ವವಿವರವನ್ನು ಬರೆಯಬೇಕು. ನಿಮ್ಮ ಕತೆ, ಕವಿತೆ, ನಾಟಕಗಳ ಫೈಲ್‌ನಲ್ಲಿ ನಿಮ್ಮ ಹೆಸರನ್ನು ಬರೆಯಕೂಡದು. ಕವಿತೆಗಳನ್ನು ಕಳುಹಿಸುವವರು ಕನಿಷ್ಠ 8 ರಿಂದ ಗರಿಷ್ಠ 12 ಕವಿತೆಗಳನ್ನು ಕಳಿಸಬಹುದು. ಕತೆಗಳನ್ನು ಕಳಿಸುವವರು ಕನಿಷ್ಠ ಮೂರು ಕತೆಗಳನ್ನು ಕಳಿಸಬಹುದು. ಒಟ್ಟು ಕತೆಗಳ ಶಬ್ದ ಮಿತಿ 7,500 ಪದಗಳು. ನಾಟಕಗಳ ಶಬ್ದಮಿತಿ 10,000 ಪದಗಳು.

ನೀವು ಮೂರೂ ಸೃಜನಶೀಲ ಪ್ರಕಾರಗಳಲ್ಲಿಯೂ ಭಾಗವಹಿಸಲು ಇಚ್ಛಿಸಿದಲ್ಲಿ, ಪ್ರತಿಯೊಂದನ್ನೂ ಪ್ರತ್ಯೇಕ ಪ್ರವೇಶ ಪತ್ರದೊಂದಿಗೆ ಪ್ರತ್ಯೇಕ ಇಮೇಲ್‌ ಕಳುಹಿಸಬೇಕು.

ಬರಹಗಳನ್ನು ಮತ್ತು ಪ್ರವೇಶ ಪತ್ರವನ್ನು ಕಳಿಸಬೇಕಾದ ಇಮೇಲ್: totokannada@gmail.com

ಈಗಾಗಲೇ ಪುಸ್ತಕರೂಪದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪುರಸ್ಕಾರಕ್ಕಾಗಿ ಕಳಿಸುವಂತಿಲ್ಲ. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕತೆ, ಕವಿತೆ, ನಾಟಕಗಳನ್ನು ಕಳಿಸಬಹುದು. ಆದರೆ ಎಲ್ಲವೂ ಈಗಾಗಲೇ ಹೇಳಿದಂತೆ ಇಮೇಲ್ ಮೂಲಕ ಮಾತ್ರ ಕಳಿಸಬೇಕು. ನೀವು ಈ ಹಿಂದೆ ಈ ಪುರಸ್ಕಾರಕ್ಕೆ ಕಳಿಸಿದ ಕಥೆ, ಕವಿತೆ, ನಾಟಕಗಳನ್ನೇ ಮತ್ತೆ ಕಳಿಸುವಂತಿಲ್ಲ. ಹೊಸದಾಗಿ ಬರೆದ ಕಥೆ, ಕವಿತೆಯನ್ನು ಕಳುಹಿಸಬೇಕು.

ಇಮೇಲ್ Subject ನಲ್ಲಿ ನಿಮ್ಮ ಕೃತಿಯ ಪ್ರಕಾರವನ್ನು ಸೂಚಿಸಬೇಕು. ಉದಾಹರಣೆಗೆ: “ಕನ್ನಡ ಸೃಜನಶೀಲ ಸಾಹಿತ್ಯ – ಕವಿತೆ”, “ಕನ್ನಡ ಸೃಜನಶೀಲ ಸಾಹಿತ್ಯ – ನಾಟಕ” ಅಥವಾ “ಕನ್ನಡ ಸೃಜನಶೀಲ ಸಾಹಿತ್ಯ – ಕತೆ”.

ಪ್ರವೇಶಗಳನ್ನು ಕಳುಹಿಸಲು ಕೊನೆಯ ದಿನಾಂಕ ಸೆಪ್ಟೆಂಬರ್‌ 15, 2024. ಈ ದಿನಾಂಕದ ನಂತರ ಬಂದ ಪ್ರವೇಶಗಳನ್ನು ಪರಿಗಣಿಸುವುದಿಲ್ಲ.

ಷರತ್ತುಗಳು

ನೀವು ಸಲ್ಲಿಸಿದ ಬರಹಗಳನ್ನು ಹಿಂತಿರುಗಿಸಲಾಗುವುದಿಲ್ಲ. ಅಗತ್ಯವಾದಲ್ಲಿ ನೀವು ಸಲ್ಲಿಸಿದ ಬರಹಗಳ ಆಯ್ದ ಭಾಗಗಳನ್ನು ಅಂತರ್ಜಾಲ ತಾಣದಲ್ಲಿ ಅಥವ ಸಂಸ್ಥೆಯ ಬ್ಲಾಗ್‌ನಲ್ಲಿ ಪುರಸ್ಕಾರದ ಪ್ರಚಾರಕ್ಕೆ ಬಳಸಿಕೊಳ್ಳುವ ಹಕ್ಕು ಟಿ.ಎಫ್.ಎ. ಗೆ ಇದೆ. ಉಳಿದಂತೆ ಕೃತಿಯ ಪೂರ್ತಿ ಹಕ್ಕುಸ್ವಾಮ್ಯವು ಬರಹಗಾರರದೇ ಆಗಿರುತ್ತದೆ. ಈ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಪುರಸ್ಕಾರದ ಕುರಿತು ಟಿ.ಎಫ್.ಎ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾದುದು ಮತ್ತು ಇದನ್ನು ಯಾವ ಬಗೆಯಲ್ಲೂ ಪ್ರಶ್ನಿಸಲಾಗದು.

ಸಂದೇಹಗಳಿದ್ದಲ್ಲಿ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಇಮೇಲ್: totokannada@gmail.com

ಈ ಪುರಸ್ಕಾರಕ್ಕೆ ಭೂಮಿಜಾ ಟ್ರಸ್ಟ್‌ ನೆರವು ನೀಡುತ್ತಿದೆ. ಈ ಟ್ರಸ್ಟ್‌ ಬೆಂಗಳೂರು ಸೇರಿದಂತೆ ವಿಶ್ವದಾದ್ಯಂತ ಪ್ರದರ್ಶನ ಕಲೆಗಳ ಕಾರ್ಯಕ್ರಮವನ್ನು ನೀಡುತ್ತದೆ.

ಟೊಟೊ ಫಂಡ್ಸ್ ದಿ ಆರ್ಟ್ಸ್ ಬಗ್ಗೆ

ಟಿ.ಎಫ್.ಎ. ಸಂಸ್ಥೆಯು ಆಂಗೀರಸ ʼಟೋಟೋʼ ವೆಲ್ಲಾನಿಯ ಸ್ಮರಣಾರ್ಥ 2004ರಲ್ಲಿ ಸ್ಥಾಪಿತವಾಯಿತು. ಕಲೆಗಳ ಬಗ್ಗೆ ಗಾಢವಾದ ಆಸಕ್ತಿಯನ್ನಿರಿಸಿಕೊಂಡಿದ್ದ ತರುಣ ಟೊಟೊರವರ ಅಕಾಲಿಕ ಮರಣವು ಅವರ ಕುಟುಂಬ ಮತ್ತು ಸ್ನೇಹಿತರನ್ನು ಈ ಸಂಸ್ಥೆಯ ಸ್ಥಾಪನೆಗೆ ಪ್ರೇರೇಪಿಸಿತು. ಈ ಮೂಲಕ ಯುವ ಪ್ರತಿಭೆಗಳು ತಮ್ಮ ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡುಕೊಳ್ಳುವಲ್ಲಿ ಉತ್ತೇಜನ ಸಿಗಲೆಂಬುದು ಇದರ ಆಶಯವಾಗಿದೆ.