ಉತ್ತರಾಖಂಡ ಚಾರಣ; ಮೂವರ ಮೃತದೇಹ ಬೆಂಗಳೂರಿಗೆ, 13 ಚಾರಣಿಗರು ಸುರಕ್ಷಿತವಾಗಿ ವಾಪಸ್, ಮೃತರ ಸಂಖ್ಯೆ 9ಕ್ಕೆ ಏರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  ಉತ್ತರಾಖಂಡ ಚಾರಣ; ಮೂವರ ಮೃತದೇಹ ಬೆಂಗಳೂರಿಗೆ, 13 ಚಾರಣಿಗರು ಸುರಕ್ಷಿತವಾಗಿ ವಾಪಸ್, ಮೃತರ ಸಂಖ್ಯೆ 9ಕ್ಕೆ ಏರಿಕೆ

ಉತ್ತರಾಖಂಡ ಚಾರಣ; ಮೂವರ ಮೃತದೇಹ ಬೆಂಗಳೂರಿಗೆ, 13 ಚಾರಣಿಗರು ಸುರಕ್ಷಿತವಾಗಿ ವಾಪಸ್, ಮೃತರ ಸಂಖ್ಯೆ 9ಕ್ಕೆ ಏರಿಕೆ

ಉತ್ತರಾಖಂಡ ಚಾರಣಕ್ಕೆ ಹೋಗಿ ಮೃತಪಟ್ಟವರ ಪೈಕಿ ಮೂವರ ಮೃತದೇಹ ಬೆಂಗಳೂರಿಗೆ ತಲುಪಿದೆ. ಬದುಕಿ ಉಳಿದ ಚಾರಣಿಗರ ಪೈಕಿ 13 ಚಾರಣಿಗರು ಸುರಕ್ಷಿತವಾಗಿ ವಾಪಸ್ ಬೆಂಗಳೂರಿಗೆ ಬಂದಿದ್ದಾರೆ. ಚಾರಣಕ್ಕೆ ಹೋದವರಲ್ಲಿ ಮೃತ ಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ಉತ್ತರಾಖಂಡ ಚಾರಣ; ಮೂವರ ಮೃತದೇಹ ಬೆಂಗಳೂರಿಗೆ, 13 ಚಾರಣಿಗರು ಸುರಕ್ಷಿತವಾಗಿ ವಾಪಸ್, ಮೃತರ ಸಂಖ್ಯೆ 9ಕ್ಕೆ ಏರಿಕೆ.
ಉತ್ತರಾಖಂಡ ಚಾರಣ; ಮೂವರ ಮೃತದೇಹ ಬೆಂಗಳೂರಿಗೆ, 13 ಚಾರಣಿಗರು ಸುರಕ್ಷಿತವಾಗಿ ವಾಪಸ್, ಮೃತರ ಸಂಖ್ಯೆ 9ಕ್ಕೆ ಏರಿಕೆ.

ಬೆಂಗಳೂರು: ಉತ್ತರಾಖಂಡ ಚಾರಣ (Uttarakhand trekking) ಕ್ಕೆ ಹೋಗಿ ಮೃತಪಟ್ಟವರ ಪೈಕಿ ಮೂವರ ಮೃತದೇಹಗಳು ಇಂದು (ಜೂನ್ 7) ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ತಲುಪಿದೆ. ಬದುಕಿ ಉಳಿದ ಚಾರಣಿಗರ ಪೈಕಿ 13 ಜನ ನಿನ್ನೆ (ಜೂನ್ 6) ಸಂಜೆ ಬೆಂಗಳೂರಿಗೆ ಸುರಕ್ಷಿತವಾಗಿ ವಾಪಸಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೇರಿಯ ಹಿಮಾಲಯನ್ ಟ್ರೆಕ್ಕಿಂಗ್ ಏಜೆನ್ಸಿಯ ಮೂಲಕ 22 ಸದಸ್ಯರ ತಂಡ ಉತ್ತರ ಕಾಶಿಯಿಂದ 35 ಕಿಮೀ ಚಾರಣವನ್ನು ಮೇ 29ರಂದು ಆರಂಭಿಸಿತ್ತು. ಈ ತಂಡದಲ್ಲಿ 18 ಚಾರಣಿಗರು ಕರ್ನಾಟಕದವರು. ಒಬ್ಬರು ಮಹಾರಾಷ್ಟ್ರದವರು. ಇನ್ನುಳಿದಂತೆ ಮೂವರು ಸ್ಥಳೀಯ ಮಾರ್ಗದರ್ಶಿಗಳು ಎಂದು ಅಧಿಕಾರಿಗಳು ವಿವರಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

"ಉತ್ತರಾಖಂಡದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪ್ರಾಣ ಕಳೆದುಕೊಂಡ ಮೂವರು ಚಾರಣಿಗರ ಮೃತದೇಹಗಳು ಇಂದು ಬೆಳಗ್ಗೆ 5.45ಕ್ಕೆ ದೆಹಲಿಯಿಂದ ಇಂಡಿಗೋ ವಿಮಾನದ ಮೂಲಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದವು. ಸರ್ಕಾರಿ ಅಧಿಕಾರಿಗಳು ಮೃತದೇಹಗಳನ್ನು ಸ್ವೀಕರಿಸಿದರು. ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಅವರ ಮನೆಗಳಿಗೆ ಸಾಗಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ" ಸರ್ಕಾರಿ ಅಧಿಕಾರಿ ಹೇಳಿದರು.

ಈಗ ಪದ್ಮಿನಿ ಹೆಗಡೆ, ವೆಂಕಟೇಶ್‌ ಪ್ರಸಾದ್, ಆಶಾ ಸುಧಾಕರ್ ಅವರ ಮೃತದೇಹಗಳು ಬಂದಿವೆ. ಇನ್ನು ಆರು ಮೃತದೇಹಗಳು ಬರಬೇಕಷ್ಟೆ. ಇಂದು ಸಂಜೆಯೊಳಗೆ ಅವುಗಳನ್ನೂ ಕರೆತರುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಉಸ್ತುವಾರಿಗೆ ತೆರಳಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ

ಉತ್ತರಾಖಂಡದ ಸಹಸ್ತ್ರ ತಾಲ್‌ಗೆ ಚಾರಣಕ್ಕೆ ತೆರಳಿದ್ದ 22 ಚಾರಣಿಗರ ತಂಡ ಹವಾಮಾನ ವೈಪರೀತ್ಯಕ್ಕೆ ಸಿಲುಕಿತ್ತು. ಅಲ್ಲಿ ಮೂವರು ಮೊದಲು ಮೃತಪಟ್ಟರೆ ಉಳಿದವರು ಬಳಿಕ ಉಸಿರಾಟದ ತೊಂದರೆ ಒಳಗಾಗಿ ಮೃತಪಟ್ಟರು. ಈ ಪೈಕಿ 13 ಜನ ಅಪಾಯದಿಂದ ಪಾರಾಗಿದ್ದು, ಅವರ ಜೊತೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತುಕತೆ ನಡೆಸಿ ಅವರನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರುವ ಕೆಲಸ ಮಾಡಿದರು.

ಬದುಕಿ ಉಳಿದ 13 ಚಾರಣಿಗರ ತಂಡ ಗುರುವಾರ ರಾತ್ರಿ 9.30ರ ಸುಮಾರಿಗೆ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರೂ ಜೊತೆಗಿದ್ದರು. ಸಚಿವರು ಬುಧವಾರ ಸುದ್ದಿ ತಿಳಿದ ಕೂಡಲೇ ಉತ್ತರಾಖಂಡ ತೆರಳಿದ್ದರು. ವಿಮಾನ ನಿಲ್ದಾಣದ ಬಳಿ ಕಾದಿದ್ದ ಅವರ ಕುಟುಂಬಸ್ಥರು ಸುರಕ್ಷಿತವಾಗಿ ಬಂದ ಚಾರಣಿಗರನ್ನು ಸ್ವಾಗತಿಸಿದರು.

ಚಾರಣದಲ್ಲಿ ಮೃತಪಟ್ಟ 9 ಮೃತದೇಹಗಳ ಮರಣೋತ್ತರ ಪರೀಕ್ಷೆಆಗಿದ್ದು, ಉತ್ತರಕಾಶಿಯಿಂದ ಮೃತದೇಹಗಳನ್ನು ನೇರವಾಗಿ ಬೆಂಗಳೂರಿಗೆ ರವಾನೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ರಸ್ತೆ ಮಾರ್ಗದ ಮೂಲಕ ಆಂಬುಲೆನ್ಸ್‌ನಲ್ಲಿ ಮೃತದೇಹಗಳನ್ನು ದೆಹಲಿಗೆ ಕೊಂಡೊಯ್ದು ಅಲ್ಲಿಂದ ವಿಮಾನದ ಮೂಲಕ ಬೆಂಗಳೂರಿಗೆ ಮೃತದೇಹ ತರುವ ಕೆಲಸ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ಎಲ್ಲ ಮೃತದೇಹಗಳು ಬೆಂಗಳೂರಿಗೆ ತಲುಪಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಚಾರಣದ ವೇಳೆ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ

ಉತ್ತರಾಖಂಡ ಸಹಸ್ತ್ರ ತಾಲ್‌ ಚಾರಣದ ವೇಳೆ ಹವಾಮಾನ ವೈಪರೀತ್ಯದ ಕಾರಣ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬುಧವಾರ ಐದು ಮೃತದೇಹಗಳು ಸಿಕ್ಕಿವೆ. ಪ್ರತಿಕೂಲ ಪರಿಸ್ಥಿತಿಯ ಕಾರಣ ಬುಧವಾರ ಸಂಜೆ ಕಾರ್ಯಾಚರಣೆ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನಾಲ್ವರ ಪತ್ತೆಯಾಗಿರಲಿಲ್ಲ. ಗುರುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದ್ದು, ಶೀಘ್ರವೇ ನಾಲ್ವರು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ.

ಮೃತರನ್ನು ಕೆ.ಪಿ.ಪದ್ಮನಾಭ, ಕೆ.ವೆಂಕಟೇಶ್ ಪ್ರಸಾದ್, ಅನಿತಾ ರಂಗಪ್ಪ, ಪದ್ಮಿನಿ ಹೆಗ್ಡೆ ಎಂದು ಗುರುತಿಸಲಾಗಿದೆ. ನಾಲ್ಕು ಮೃತದೇಹಗಳನ್ನು ದುರಂತ ಸ್ಥಳದ ಬಳಿಯಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಉತ್ತರಕಾಶಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿಂದ ಅವರವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಸೌಮ್ಯಾ ಕೆನಾಲೆ, ಸ್ಮೃತಿ ಡೋಲಾಸ್, ಶೀನಾ ಲಕ್ಷ್ಮಿ, ಎಸ್.ಶಿವ ಜ್ಯೋತಿ, ಅನಿಲ್ ಜಮತಿಗೆ, ಅರುಣಾಚಲ ಭಟ್, ಭರತ್ ಬೊಮ್ಮನಗೌಡರ್, ಮಧುಕಿರಣ್ ರೆಡ್ಡಿ, ಬಿ.ಎಸ್‌.ಜೈಪ್ರಕಾಶ್, ಎಸ್‌.ಸುಧಾಕರ್‌, ಎಂ.ಕೆ.ವಿನಯ್, ವಿವೇಕ್‌ ಶ್ರೀಧರ್‌, ಎಂ.ನವೀನ್‌, ರಿತಿಕಾ ಜಿಂದಾಲ್‌ ಸುರಕ್ಷಿತವಾಗಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner