ಬೆಂಗಳೂರು: ಚಂದಾಪುರ ರೈಲ್ವೆ ಸೇತುವೆ ಸಮೀಪ ಸಿಕ್ಕ ಸೂಟ್ಕೇಸ್ನಲ್ಲಿದ್ದುದು ಯುವತಿಯ ಶವ, ಬಾಲಕಿಯದ್ದಲ್ಲ
ಬೆಂಗಳೂರು: ಆನೇಕಲ್ ತಾಲೂಕು ಹಳೆ ಚಂದಾಪುರದ ರೈಲ್ವೆ ಸೇತುವೆ ಬಳಿ ಅನಾಥವಾಗಿ ಬಿದ್ದಿದ್ದ ಸೂಟ್ಕೇಸ್ ಅನ್ನು ಪೊಲೀಸರು ಪರಿಶೀಲಿಸಿದ ವೇಳೆ ಅದರಲ್ಲಿ 18 ವಯಸ್ಸಿನ ಯುವತಿಯ ಶವ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರು: ಆನೇಕಲ್ ತಾಲೂಕು ಹಳೆ ಚಂದಾಪುರದ ರೈಲ್ವೆ ಸೇತುವೆ ಬಳಿ ಬುಧವಾರ (ಮೇ 21) ಅನಾಥವಾಗಿ ಬಿದ್ದಿದ್ದ ಸೂಟ್ಕೇಸ್ನಲ್ಲಿ ಸುಮಾರು 18 ವರ್ಷದ ಯುವತಿಯ ಶವ ಪತ್ತೆಯಾಗಿದೆ ಎಂದು ಸೂರ್ಯಸಿಟಿ ಪೊಲೀಸ್ ಠಾಣೆ ಮೂಲಗಳು ತಿಳಿಸಿವೆ. ಯುವತಿಯನ್ನು ಹತ್ಯೆ ಮಾಡಿ ಕೈಕಾಲು ಮಡಚಿ ಸೂಟ್ಕೇಸ್ನಲ್ಲಿ ತುಂಬಲಾಗಿದ್ದು, ಕಿವಿ ಮತ್ತು ಮೂಗಿನಲ್ಲಿ ರಕ್ತಸ್ರಾವವಾಗಿರುವ ಕುರುಹುಗಳಿವೆ. ಯುವತಿಯನ್ನು ಬೇರೆ ಎಲ್ಲೋ ಕೊಲೆ ಮಾಡಲಾಗಿದೆ. ಸೂಟ್ಕೇಸ್ನಲ್ಲಿ ಶವವನ್ನು ತುಂಬಿ ರೈಲಿನ ಮೂಲಕ ತಂದು ಇಲ್ಲಿ ಎಸೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಚಂದಾಪುರ ರೈಲ್ವೆ ಸೇತುವೆ ಸಮೀಪ ಸಿಕ್ಕ ಸೂಟ್ಕೇಸ್ನಲ್ಲಿದ್ದುದು ಯುವತಿಯ ಶವ, ಬಾಲಕಿಯದ್ದಲ್ಲ
ರೈಲು ಸಂಚರಿಸುವಾಗ ಕತ್ತಲಲ್ಲಿ ಸೇತುವೆ ನೋಡಿ ಸಣ್ಣ ಹಳ್ಳ ಇರಬಹುದು ಎಂದು ಭಾವಿಸಿ ಅಪರಾಧಿಗಳು ಈ ಸೂಟ್ಕೇಸ್ ಅನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
ರೈಲ್ವೆ ಸೇತುವೆಯಿಂದ ಕೆಳಗೆ ರಸ್ತೆ ಬದಿ ಅನಾಥವಾಗಿ ಬಿದ್ದಿದ್ದ ನೀಲಿ ಬಣ್ಣದ ಸೂಟ್ಕೇಸ್ ಒಳಗಿಂದ ಯುವತಿಯ ದೇಹ, ಬಟ್ಟೆ ಕಂಡ ದಾರಿಹೋಕರು ಸೂರ್ಯಸಿಟಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಮತ್ತು ಸೂರ್ಯ ಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸೂರ್ಯಸಿಟಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವ್ ಮಹಾಜನ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸೂಟ್ಕೇಸ್ ತೆರೆದಾಗ ಕೈಕಾಲು ಮಡಚಿದ್ದ ಯುವತಿಯ ಶವ ಇತ್ತು. ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭೀಕರ ಅಮಾನವೀಯ ಕೃತ್ಯ ಎಸಗಿದವರು ಯಾರು, ಯುವತಿಯ ಗುರುತು ಪತ್ತೆ ಹಚ್ಚುವ ಕೆಲಸ ಸೇರಿದಂತೆ ಕೇಸ್ ಅನ್ನು ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುವುದು ಎಂದು ಇನ್ಸ್ಟೆಕ್ಟರ್ ಮಹಾಜನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಯುವತಿಯ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಶವ ಮಹಜರು ನಡೆದು, ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ. ಸೂಟ್ಕೇಸ್ನಲ್ಲಿ ಯುವತಿಯ ಗುರುತು ಪತ್ತೆಯಾಗುವಂತಹ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.