ಬೆಂಗಳೂರಿನಲ್ಲಿ ಎರಡು ಮನೆ ಕಳ್ಳತನ ಪತ್ತೆ; ಒಂದು ಪ್ರಕರಣದಲ್ಲಿ ಮನೆ ಮಾಲೀಕನ ಪತ್ನಿಯ ತಂಗಿ ಮಗನೇ ಅಪರಾಧಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಎರಡು ಮನೆ ಕಳ್ಳತನ ಪತ್ತೆ; ಒಂದು ಪ್ರಕರಣದಲ್ಲಿ ಮನೆ ಮಾಲೀಕನ ಪತ್ನಿಯ ತಂಗಿ ಮಗನೇ ಅಪರಾಧಿ

ಬೆಂಗಳೂರಿನಲ್ಲಿ ಎರಡು ಮನೆ ಕಳ್ಳತನ ಪತ್ತೆ; ಒಂದು ಪ್ರಕರಣದಲ್ಲಿ ಮನೆ ಮಾಲೀಕನ ಪತ್ನಿಯ ತಂಗಿ ಮಗನೇ ಅಪರಾಧಿ

ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಜಯನಗರ ಮತ್ತು ಗಿರಿನಗರ ಪೊಲೀಸ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಒಟ್ಟು 57 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ. (ವರದಿ: ಎಚ್.‌ ಮಾರುತಿ)

ಬೆಂಗಳೂರಿನಲ್ಲಿ ಎರಡು ಮನೆ ಕಳ್ಳತನ ಪತ್ತೆ
ಬೆಂಗಳೂರಿನಲ್ಲಿ ಎರಡು ಮನೆ ಕಳ್ಳತನ ಪತ್ತೆ

ಬೆಂಗಳೂರು: ಹಲವು ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿರುವ ಜಯನಗರ ಮತ್ತು ಗಿರಿನಗರ ಪೊಲೀಸ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಒಟ್ಟು 57 ಲಕ್ಷ ರೂ. ಮೌಲ್ಯದ 650 ಗ್ರಾಂ ಚಿನ್ನಾಭರಣ ಮತ್ತು ಹಲವು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೊದಲ ಪ್ರಕರಣದಲ್ಲಿ ಜಯನಗರ ಪೊಲೀಸ್ ಠಾಣೆ ಪೊಲೀಸರು ಮನೆ ಕಳವು ಮತ್ತು ದ್ವಿ ಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ರೂ. 32 ಲಕ್ಷ ಮೌಲ್ಯದ 390 ಗ್ರಾಂ ಚಿನ್ನದ ಗಟ್ಟಿ ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಜಯನಗರ ಪೊಲೀಸ್ ಠಾಣೆಯಲ್ಲಿ ಏಪ್ರಿಲ್‌ ನಲ್ಲಿ ದೂರೊಂದು ದಾಖಲಾಗಿರುತ್ತದೆ. ದೂರಿನಲ್ಲಿ ಪಿರ್ಯಾದುದಾರರು ಆರ್.ಆರ್ ನಗರ ನಿವಾಸಿಯಾಗಿದ್ದು, ಜಯನಗರದ 8ನೇ ಬ್ಲಾಕ್‌ನ, ಸಂಗಮ್ ಸರ್ಕಲ್‌ ನಲ್ಲಿ ಸ್ವೀಟ್ ಅಂಗಡಿಯೊಂದನ್ನು ನಡೆಸುತ್ತಿರುತ್ತಾರೆ. ದೂರುದಾರರು ತಮ್ಮ ದ್ವಿಚಕ್ರ ವಾಹನವನ್ನುಅಂಗಡಿಯ ಮುಂದೆ ನಿಲ್ಲಿಸಿ ಸ್ವೀಟ್‌ ತಯಾರಿಸಲು ಮತ್ತೊಂದು ಅಂಗಡಿಗೆ ಹೋಗಿರುತ್ತಾರೆ. ಮರುದಿನ ಬಂದು ನೋಡಿದಾಗ ದ್ವಿಚಕ್ರ ವಾಹನವನ್ನು ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ.

ಗಾಂಧಿಬಜಾರ್ ರಸ್ತೆಯೊಂದರಲ್ಲಿ ದ್ವಿಚಕ್ರ ವಾಹನ ಸಮೇತ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. ಇವರು ವಾಹನವನ್ನು ಕಳುವು ಮಾಡಿರುವುದನ್ನು ಒಪ್ಪಿಕೊಂಡಿರುತ್ತಾರೆ. ಜತೆಗೆ ಮತ್ತೊಂದು ದ್ವಿಚಕ್ರ ವಾಹನವನ್ನೂ ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ. ಕೋಣನಕುಂಟೆ, ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತಿಬ್ಬರು ಆರೋಪಿಗಳೊಂದಿಗೆ ಸೇರಿಕೊಂಡು ಮನೆ ಕಳವು ಮಾಡಿರುವುದಾಗಿ ತಿಳಿಸಿರುತ್ತಾರೆ.

ಮನೆ ಕನ್ನ ಕಳವು ಮಾಡಿದ ಚಿನ್ನಾಭರಣಗಳನ್ನು ಕತ್ರಿಗುಪ್ಪೆಯಲ್ಲಿರುವ ಜ್ಯೂವಲ್ಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ಹೇಳಿರುತ್ತಾರೆ. ಜ್ಯೂವಲರಿ ಅಂಗಡಿಯ ಮಾಲೀಕ ಠಾಣೆಗೆ ಹಾಜರಾಗಿ ಆರೋಪಿಗಳಿಂದ ಪಡೆದ ಚಿನ್ನಾಭರಣಗಳನ್ನು ಚಿನ್ನದ ಗಟ್ಟಿಯನ್ನಾಗಿಸಿ. ಮತ್ತೊಂದು ಜ್ಯೂವಲ್ಲರಿ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ. ಇದೇ ರೀತಿಯಲ್ಲಿ ನಾಲ್ವರು ಜ್ಯೂವಲರಿ ಅಂಗಡಿ ಮಾಲೀಕರು ಬದಲಾಗಿರುತ್ತಾರೆ. ಕೊನೆಯದಾಗಿ ಚಿನ್ನ ಪಡೆದುಕೊಂಡ ಜ್ಯೂವಲರಿ ಅಂಗಡಿ ಮಾಲೀಕ 390 ಗ್ರಾಂನ ಎರಡು ಚಿನ್ನದ ಗಟ್ಟಿಗಳನ್ನು ತಂದೊಪ್ಪಿಸುತ್ತಾನೆ.

ಈ ಆರೋಪಿಗಳು ಕಳವು ಮಾಡಿದ ಮತ್ತೊಂದು ದ್ವಿಚಕ್ರ ವಾಹನವನ್ನು ಜಯನಗರದ ಮೆಟ್ರೋ ನಿಲ್ದಾಣದ ಬಳಿ ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ 4 ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ತನಿಖೆ ಪ್ರಗತಿಯಲ್ಲಿದೆ.

ಮನೆ ಮಾಲೀಕನ ಅಳಿಯ ಚಿನ್ನ ಕದ್ದ ಪ್ರಕರಣ:

ಮತ್ತೊಂದು ಪ್ರಕರಣದಲ್ಲಿ ಮನೆಯ ಜವಬ್ದಾರಿ ವಹಿಸಿ ಮನೆ ಮಾಲೀಕರು ಕೆಲಸದ ನಿಮಿತ್ತ ಹೊರಹೋಗಿದ್ದಾಗ ಪತ್ನಿ ತಂಗಿಯ ಮಗನೇ ಕಳ್ಳತನ ಮಾಡಿರುವ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಗಿರಿನಗರ ಪೊಲೀಸರು ಆತನಿಂದ 325 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬನಶಂಕರಿ 3ನೇ ಹಂತದಲ್ಲಿ ವಾಸವಿರುವ ಪಿರ್ಯಾದುದಾರರು ಗಿರಿನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ದೂರನ್ನು ಸಲ್ಲಿಸಿರುತ್ತಾರೆ. ಮನೆ ಮಾಲೀಕರು ಕೆಲಸದ ನಿಮಿತ್ತ ಪತ್ನಿ ಜತೆ ಮುಂಬೈಗೆ ತೆರಳಿರುತ್ತಾರೆ. ಮನೆಯಲ್ಲಿ ಪತ್ನಿಯ ತಂಗಿ ಮತ್ತು ಆಕೆಯ ಮಗ ಮಾತ್ರ ಇರುತ್ತಾರೆ. ಆದರೆ ಮುಂಬೈನಿಂದ ಮನೆಗೆ ಬಂದು ನೋಡಿದಾಗ ಗೋದ್ರೇಜ್ ಲಾಕರ್‌ ನ ಬಾಗಿಲು ತೆರೆದಿತ್ತು. ಲಾಕರ್‌ನಲ್ಲಿಟ್ಟಿದ್ದ 325 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುತ್ತವೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.

ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡ ಪೊಲೀಸರು ಪತ್ನಿಯ ತಂಗಿಯ ಮಗನನ್ನು ಬಂಧಿಸುತ್ತಾರೆ. ಈತನನ್ನು ವಿಚಾರಣೆಗೊಳಪಡಿಸಿದಾಗ, ಚಿನ್ನಾಭರಣಗಳನ್ನು ಕಳವು ಮಾಡಿರುವುದನ್ನು ಒಪ್ಪಿಕೊಂಡಿರುತ್ತಾನೆ.

ಈತ, ಕಳವು ಮಾಡಿದ ಚಿನ್ನಾಭರಣಗಳನ್ನು ಸ್ನೇಹಿತನ ಮುಖಾಂತರ ಬೆಂಗಳೂರಿನ ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ 2 ಜ್ಯೂವಲ್ಲರಿ ಅಂಗಡಿಗಳಲ್ಲಿ ಮತ್ತು ಚೆನ್ನೈನಲ್ಲಿರುವ ಜ್ಯೂವಲ್ಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ. ಆರೋಪಿಯು ತಿಳಿಸಿದ 'ಜ್ಯೂವಲರಿ ಅಂಗಡಿಯ ಮಾಲೀಕರು ಹಾಗೂ ಸ್ನೇಹಿತನಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜ್ಯೂವಲ್ಲರಿ ಮಾಲೀಕರು 258 ಗ್ರಾಂ ಚಿನ್ನಾಭರಣಗಳನ್ನು ತಂದು ಒಪ್ಪಿಸಿದ್ದಾರೆ. ಇವುಗಳ ಒಟ್ಟು ಮೌಲ್ಯ ರೂ. 24 ಲಕ್ಷ 51 ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

ವರದಿ: ಎಚ್.‌ ಮಾರುತಿ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in