ಬೆಂಗಳೂರು ಆಸ್ತಿ ತೆರಿಗೆ: ಬಿಡಿಎ ಬಡಾವಣೆಗಳಲ್ಲಿ ಶೇ 50 ರವೆರೆಗೂ ಆಸ್ತಿ ತೆರಿಗೆ ಹೆಚ್ಚಳ; ನಿವೇಶನ ಮಾಲೀಕರ ಅಸಮಾಧಾನ
ಬಿಡಿಎ ಬಡಾವಣೆಗಳಲ್ಲಿ ಶೇ.50ರವೆರೆಗೂ ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಮೂಲಭೂತ ಸೌಕರ್ಯ ಕಲ್ಪಿಸಿ ನಂತರ ತೆರಿಗೆ ಹೆಚ್ಚಿಸಿ ಎಂದು ನಿವೇಶನ ಮಾಲೀಕರು ಅಸಮಾಧಾನ ತೋಡಿಕೊಂಡಿದ್ದಾರೆ. ಯಾವುವು ಆ ಬಡಾವಣೆಗಳು - ಇಲ್ಲಿದೆ ವಿವರ (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ರಾಜ್ಯ ಸರಕಾರ ಯಾವುದರ ತೆರಿಗೆ ಏರಿಸಿದೆ ಎಂದು ಹೇಳುವುದರ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ. ಇದೊಂದಕ್ಕೆ ತೆರಿಗೆ ಹಾಕಿಲ್ಲ ಎಂದು ಅಂದುಕೊಳ್ಳುತ್ತಿದ್ದಂತೆ ಅದಕ್ಕೂ ತೆರಿಗೆ ಹಾಕಿರುವ ಆದೇಶ ಕಣ್ಣಿಗೆ ರಾಚುತ್ತದೆ.
ಬಿಡಿಎ ಬಡಾವಣೆಗಳಲ್ಲಿ ಶೇ 50 ರವೆರೆಗೂ ಆಸ್ತಿ ತೆರಿಗೆ ಹೆಚ್ಚಳ
ಹಾಲು, ಮೊಸರು, ಇಂಧನ, ಕಸ, ಪಾರ್ಕಿಂಗ್, ಆಸ್ತಿ ತೆರಿಗೆ ಮದ್ಯದ ಬೆಲೆ ಏರಿಕೆ ನಂತರ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ನಾಡಪ್ರಭು ಕೆಂಪೇಗೌಡ ಲೇ ಔಟ್ ನ ಆಸ್ತಿಗಳ ತೆರಿಗೆ ಹೆಚ್ಚಿಸಲಾಗಿದೆ. ಶೇ.9 ರಿಂದ ಶೇ.50ರವೆರೆಗೂ ತೆರಿಗೆ ಹೆಚ್ಚಿಸಲಾಗಿದ್ದು, 2025-26ರ ಸಾಲಿನಿಂದಲೇ ತೆರಿಗೆ ಹೆಚ್ಚಳ ಅನ್ವಯವಾಗಲಿದೆ. ದರ ಏರಿಕೆಯನ್ನೇನೂ ಸರ್ಕಾರ ಬಹಿರಂಗವಾಗಿ ಪ್ರಕಟಿಸಿಲ್ಲ. ನಿವೇಶನದಾರರು ತೆರಿಗೆ ಪಾವತಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವೆಬ್ ಸೈಟ್ ಪ್ರವೇಶಿಸಿದಾಗ ಶಾಕ್ ಉಂಟಾಗಿದೆ.
30x40 ಅಳತೆಯ ನಿವೇಶನಕ್ಕೆ ರೂ.834 ಇದ್ದ ತೆರಿಗೆ ಈ ವರ್ಷದಿಂದ 1,208 ರೂಪಾಯಿಗೆ ಹೆಚ್ಚಳವಾಗಿದೆ. 50x80 ಅಳತೆಯ ನಿವೇಶನಕ್ಕೆ 6,000 ರೂಪಾಯಿ ಇದ್ದ ಆಸ್ತಿ ತೆರಿಗೆ 9,200 ರೂಗಳಿಗೆ ಹೆಚ್ಚಳವಾಗಿದೆ ಎಂದು ಅಲ್ಲಿನ ನಿವೇಶನ ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಆದರೆ ಅರ್ಕಾವತಿ ಲೇಔಟ್ ನಲ್ಲಿ ಅಂತಹ ಹೆಚ್ಚಳವೇನೂ ಆಗಿಲ್ಲ. ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಆಸ್ತಿ ತೆರಿಗೆಯಲ್ಲಿ ಅಲ್ಪ ಪ್ರಮಾಣದ ಏರಿಕೆಯಾಗಿದೆ.
ತೆರಿಗೆ ಏರಿಕೆ ಸಮರ್ಥಿಸಿಕೊಂಡ ಬಿಡಿಎ
ತೆರಿಗೆ ಹೆಚ್ಚಳವನ್ನು ಬಿಡಿಎ ಸಮರ್ಥಿಸಿಕೊಂಡಿದೆ. ಮಾರ್ಗಸೂಚಿ ದರದ ಅನ್ವಯ ಆಸ್ತಿ ತೆರಿಗೆಯನ್ನು ಏರಿಕೆ ಮಾಡಲಾಗಿದೆ. ಒಂದು ಬಡಾವಣೆಯ ಮಾರ್ಗಸೂಚಿ ದರ ಏರಿಕೆಯಾಗಿದ್ದರೆ ಸಹಜವಾಗಿಯೇ ತೆರಿಗೆಯೂ ಹೆಚ್ಚಳವಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ಸಮರ್ಥಿಸಿಕೊಳ್ಳುತ್ತಾರೆ.
ಐದು ವರ್ಷಗಳ ನಂತರ ಹೊಸ ಮಾರ್ಗಸೂಚಿ ದರ 2023 ಅಕ್ಟೋಬರ್ 1ರಿಂದ ಜಾರಿಗೆ ಬಂದಿದ್ದು, 2024-25 ರಿಂದ ಆಸ್ತಿ ತೆರಿಗೆ ಏರಿಕೆಯಾಗಿದೆ. ಕಳೆದ ವರ್ಷ 2024 ಮೇ ಜೂನ್ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದ್ದ ಕಾರಣಕ್ಕೆ ಆಸ್ತಿ ತೆರಿಗೆಯಲ್ಲಿ ಬದಲಾವಣೆ ಮಾಡಿರಲಿಲ್ಲ. ಈ ವರ್ಷದ ಆರ್ಥಿಕ ವರ್ಷದಿಂದ ಜಾರಿಗೆ ಬಂದಿದೆ ಎಂದು ಹೇಳುತ್ತಾರೆ.
ನಾಡಪ್ರಭು ಕೆಂಪೇಗೌಡ ಲೇ ಔಟ್ ನಲ್ಲಿ ಮಾರ್ಗಸೂಚಿ ದರ ಪ್ರತಿ ಚ.ಅಡಿಗೆ 2,000 ರೂಪಾಯಿ ಇದ್ದದ್ದು 2023ರ ಅಕ್ಟೋಬರ್ ನಲ್ಲಿ 2,900 ರೂಪಾಯಿಗೆ ಹೆಚ್ಚಿಸಲಾಗಿದೆ. ಆದ್ದರಿಂದ ಸಹಜವಾಗಿಯೇ ತೆರಿಗೆಯಲ್ಲಿ ಏರಿಕೆಯಾಗಿದೆ. ಅರ್ಕಾವತಿ ಲೇಔಟ್ ಅಥವಾ ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಮಾರ್ಗಸೂಚಿ ದರ ಏರಿಕೆ ಕಂಡಿಲ್ಲ. ಆದ್ದರಿಂದ ತೆರಿಗೆಯಲ್ಲೂ ಅಂತಹ ಬದಲಾವಣೆಯಾಗಿಲ್ಲ ಎಂದು ಬಿಡಿಎ ಮೂಲಗಳು ಹೇಳುತ್ತವೆ.
ಮಾರ್ಗಸೂಚಿ ದರವೂ ಏರಿಕೆ
ಮಾರ್ಗಸೂಚಿ ದರವನ್ನು ಹೆಚ್ಚಿಸಲಾಗಿದೆ ನಿಜ. ಆದರೆ ಕಳೆದ 8 ವರ್ಷಗಳಿಂದ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಬಿಡಿಎ ಮತ್ತು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ಬೇಡಿಕೊಳ್ಳುತ್ತಲೇ ಇದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ವಿಧಾನಮಂಡಲದ ಅರ್ಜಿ ಸಮಿತಿಗೂ ಮನವಿ ಕೊಟ್ಟಿದ್ದೇವೆ. ಆದರೆ ಮೂಲಭೂತ ಸೌಕರ್ಯಗಳಿಲ್ಲ. ಈ ಸೌಕರ್ಯಗಳಿಲ್ಲದೆ ನಾವು ಮನೆಗಳನ್ನು ಕಟ್ಟುವಂತಿಲ್ಲ. ಆದರೆ ತೆರಿಗೆ ಮಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ ಎಂದು ಹಲವಾರು ನಿವೇಶನಗಳ ಮಾಲೀಕರು ಹೇಳುತ್ತಾರೆ.
ಆದರೆ ಬಿಡಿಎ ಸಮರ್ಥನೆಯನ್ನು ಈ ಬಡಾವಣೆಯ ನಿವೇಶನ ಮಾಲೀಕರು ಒಪ್ಪುವುದಿಲ್ಲ. ವಾಸದ ಮನೆ ಅಥವಾ ಬಾಡಿಗೆ ಮನೆಗಳಿದ್ದರೆ ತೆರಿಗೆ ಕಟ್ಟಬಹುದು. ಆದರೆ ಖಾಲಿ ನಿವೇಶನಗಳಿಂದ ಯಾವುದೇ ಆದಾಯ ಇರುವುದಿಲ್ಲ. ಆದ್ದರಿಂದ ತೆರಿಗೆ ಪಾವತಿಸುವುದು ಕಷ್ಟವಾಗುತ್ತದೆ ಎಂದು ವಾದಿಸುತ್ತಾರೆ.
ಯಾವುದೇ ಬಡಾವಣೆಯಲ್ಲೂ ಏಕಾಏಕಿ ಆಸ್ತಿ ತೆರಿಗೆ ಹೆಚ್ಚಿಸಿಲ್ಲ. ಒಂದು ವೇಳೆ ಆಸ್ತಿ ತೆರಿಗೆ ಏರಿಕೆಯಲ್ಲಿ ವ್ಯತ್ಯಾಸಗಳಿದ್ದರೆ ಬಿಡಿಎ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಬಿಡಿಎ ಆಯುಕ್ತ ಎನ್. ಜಯರಾಂ ಹೇಳುತ್ತಾರೆ.
ತೆರಿಗೆ ಎಷ್ಟಾದರೂ ಆಗಲಿ, ಮೊದಲು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ನಂತರ ತೆರಿಗೆ ಹೆಚ್ಚಳ ಮಾಡಿದರೆ ಅರ್ಥವಿರುತ್ತದೆ. ಸೌಕರ್ಯಗಳಿದ್ದರೆ ಮನೆಗಳನ್ನು ಕಟ್ಟಿಕೊಳ್ಳಬಹುದು. ಆದರೆ ಅಂತಹ ಅವಕಾಶವೇ ಇಲ್ಲದಿದ್ದರೆ ವಿನಾಕಾರಣ ತೆರಿಗೆ ಕಟ್ಟುತ್ತಾ ಇದ್ದರೆ ನಿವೇಶನ ಮಾಲೀಕರಿಗೆ ನಷ್ಟ ಆಗುವುದಿಲ್ಲವೇ ಎಂದು ಪ್ರಶ್ನಿಸುತ್ತಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)