ಬೆಂಗಳೂರು ಬೀದಿ ಕಾಳಗ; ವಾಯುಪಡೆ ಅಧಿಕಾರಿಯೇ ಬೈಕ್ ಸವಾರನಿಗೆ ಹಿಗ್ಗಾಮುಗ್ಗ ಥಳಿಸುತ್ತಿರುವ ಸಿಸಿಟಿವಿ ವಿಡಿಯೋಗಳು ಬಹಿರಂಗ, 5ಮುಖ್ಯ ವಿದ್ಯಮಾನ
ಬೆಂಗಳೂರು ಬೀದಿ ಕಾಳಗ ಕೇಸ್: ಬೆಂಗಳೂರಿನಲ್ಲಿ ಏಪ್ರಿಲ್ 21ರ ಬೆಳಿಗ್ಗೆ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿದ ಎಂದು ಆರೋಪಿಸಿದ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. ಸಿಸಿಟಿವಿ ವಿಡಿಯೋಗಳು ಬಹಿರಂಗವಾಗಿದ್ದು ಆಕ್ರಮಣಕಾರಿ ನಡೆ ತೋರಿದ್ದು ಶೀಲಾದಿತ್ಯ ಬೋಸ್ ಎಂಬುದರ ಕಡೆಗೆ ಗಮನಸೆಳೆದಿದೆ. ಇಲ್ಲಿದೆ ಇತ್ತೀಚಿನ 5 ವಿದ್ಯಮಾನಗಳು.

ಬೆಂಗಳೂರು ಬೀದಿ ಕಾಳಗ ಕೇಸ್: ಬೆಂಗಳೂರಿನ ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಸಮೀಪ ಸೋಮವಾರ (ಏಪ್ರಿಲ್ 21) ಬೆಳಿಗ್ಗೆ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿದ ಘಟನೆ ಸಂಚಲನ ಮೂಡಿಸಿತ್ತು. ಶೀಲಾದಿತ್ಯ ಬೋಸ್ ರಕ್ತ ಸೋರುತ್ತಿದ್ದ ಮುಖದಲ್ಲೇ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ಘಟನೆಯ ವಿವರ ನೀಡಿದ್ದರು. ಕನ್ನಡಿಗರು, ಕನ್ನಡ ಭಾಷೆ ಎಂದೆಲ್ಲ ದೂರಿದ್ದರು. ಆದರೆ, ಸೋಮವಾರ ಸಂಜೆ ವೇಳೆಗೆ ಬಹಿರಂಗವಾಗಿರುವ ಕೆಲವು ಸಿಸಿಟಿವಿ ವಿಡಿಯೋ ತುಣುಕುಗಳಲ್ಲಿ ಶೀಲಾದಿತ್ಯ ಬೋಸ್ ಆಕ್ರಮಣಕಾರಿಯಾಗಿ ವರ್ತಿಸಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದು ಬೆಂಗಳೂರು ಬೀದಿ ಕಾಳಗ ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.
ಬೆಂಗಳೂರು ಬೀದಿ ಕಾಳಗ ಕೇಸ್ಗೆ ಟ್ವಿಸ್ಟ್
ಬೆಂಗಳೂರಲ್ಲಿ ಕನ್ನಡ ಭಾಷೆ ಮಾತನಾಡುವಂತೆ ಕನ್ನಡಿಗರು ಆಕ್ರಮಣಕಾರಿ ವರ್ತನೆ ತೋರುತ್ತಿದ್ದಾರೆ ಎಂದು ಬಿಂಬಿಸಿದ್ದ ವಾಯುಪಡೆ ಅಧಿಕಾರಿ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಮತ್ತು ಅವರ ಪತ್ನಿ ಸ್ಕ್ವಾಡ್ರನ್ ಲೀಡರ್ ಮಧುಮಿತಾ ದತ್ತಾ ಅವರ ಹೇಳಿಕೆಗಳ ಬಗ್ಗೆ ಈಗ ಶಂಕೆ ವ್ಯಕ್ತವಾಗತೊಡಗಿದೆ. ಇದಕ್ಕೆ ಕಾರಣ ಸಂಜೆ ವೇಳೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ ಇವರು ಭಾಗಿಯಾಗಿದ್ದ ಬೀದಿ ಕಾಳಗದ ಸಿಸಿಟಿವಿ ವಿಡಿಯೋ ತುಣುಕುಗಳು. ಅದರಲ್ಲಿ ಶೀಲಾದಿತ್ಯ ಬೋಸ್ ಸ್ವತಃ ಆಕ್ರಮಣಕಾರಿಯಾಗಿ ಬೈಕ್ ಸವಾರನಿಗೆ ಹಿಗ್ಗಾಮುಗ್ಗ ಥಳಿಸುತ್ತಿರುವ ದೃಶ್ಯ ಕಂಡುಬಂದಿದೆ. ಇದೇ ವೇಳೆ ಮಧುಮಿತಾ ಅವರು ಕಿರುಚಾಡುತ್ತ ವಿಡಿಯೋ ಮಾಡುತ್ತಿದ್ದ ದೃಶ್ಯವೂ ಆ ವಿಡಿಯೋಗಳಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಬೀದಿ ಕಾಳಗ ಕೇಸ್ಗೆ ಸಂಬಂಧಿಸಿದ 5 ಮುಖ್ಯ ವಿದ್ಯಮಾನಗಳ ವಿವರ ಇಲ್ಲಿದೆ.
1) ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಶೀಲಾದಿತ್ಯ ದಂಪತಿ: ಶೀಲಾದಿತ್ಯ ಬೋಸ್ ಮತ್ತು ಮಧುಮಿತಾ ದತ್ತಾ ದಂಪತಿ ಇಬ್ಬರೂ ಡಿಫೆನ್ಸ್ ರೀಸರ್ಚ್ ಆಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಡಿಆರ್ಡಿಒ) ಉದ್ಯೋಗಿಗಳು. ಅವರು ಸೋಮವಾರ ಬೆಳಿಗ್ಗೆ ಕೋಲ್ಕತ್ತಾಗೆ ಹೋಗಲು ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಆಗ ಬೈಕ್ ಸವಾರ ಹಲ್ಲೆ ನಡೆಸಿದ್ದಾಗಿ ವಿಂಗ್ ಕಮಾಂಡರ್ ವಿಡಿಯೋ ಹೇಳಿಕೆಯನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದರು.
ಆ ಬೈಕ್ ಸವಾರ ಒಂದು ಕಲ್ಲನ್ನು ಎತ್ತಿಕೊಂಡು ನನ್ನ ಕಾರಿಗೆ ಹಾನಿ ಮಾಡಲು ಪ್ರಯತ್ನಿಸಿದ. ನಾನು ಅವನನ್ನು ತಡೆಯಲು ಪ್ರಯತ್ನಿಸಿದಾಗ ಆತ ನನ್ನ ಮೇಲೆ ಹಲ್ಲೆ ನಡೆಸಿದ. ನೀವು ನನ್ನ ಮುಖದಲ್ಲಿ ರಕ್ತವನ್ನು ನೋಡಬಹುದು. ನನ್ನ ಹೆಂಡತಿ ಸ್ಥಳದಲ್ಲಿದ್ದು ಅಲ್ಲಿಂದ ನನ್ನನ್ನು ಬೇರೆಡೆ ಕರೆದೊಯ್ದಳು. ಹಲ್ಲೆ ನಡೆಸಿದ ವ್ಯಕ್ತಿ ಕನ್ನಡದಲ್ಲಿ ಏನೋ ಹೇಳ್ತಾ ಇದ್ದ. ಅಲ್ಲಿದ್ದ ಕನ್ನಡದವರು ಆತನ ಬೆಂಬಲಕ್ಕೆ ನಿಂತಿದ್ದರು. ಇದು ಕನ್ನಡದ ನೆಲ ಎಂದು ಬೆದರಿಸಿದ್ದಾಗಿ ವಾಯುಪಡೆ ಅಧಿಕಾರಿ ವೀಡಿಯೊದಲ್ಲಿ ದೂರಿಕೊಂಡಿದ್ದರು.
2) ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು: ಶೀಲಾದಿತ್ಯ ಬೋಸ್ ಅವರ ಪತ್ನಿ ಮಧುಮಿತಾ ದತ್ತಾ ಅವರು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಬೈಕ್ ಸವಾರ ಹಲ್ಲೆ ನಡೆಸಿದ್ದಾಗಿ ದೂರು ದಾಖಲಿಸಿದರು. ಟಿನ್ ಫ್ಯಾಕ್ಟರಿ ಬಳಿ ಬೈಕ್ ಸವಾರ ವಿಕಾಸ್, ಶಿಲಾದಿತ್ಯರ ಕಾರನ್ನು ಹಿಂದಿಕ್ಕಿ ಮುನ್ನುಗ್ಗಿದ್ದಾನೆ. ಅತಿವೇಗವಾಗಿ ಬೈಕ್ ಓಡಿಸುತ್ತಿದ್ದೀಯಾ ಎಂದು ಕಾರು ಓಡಿಸುತ್ತಿದ್ದ ಮಧುಮಿತಾ ಆಕ್ಷೇಪಿಸಿದ್ದಾರೆ. ಈ ಮಾತಿಗೆ ಕೆರಳಿದ ವಿಕಾಸ್ ಜೋರಾಗಿ ಕೂಗಾಡಿದ್ದ. ಇದೇ ವೇಳೆ, ಕಾರಿನ ಬಾಗಿಲು ತೆರೆಯುವಾಗ ಅದು ಅಕಸ್ಮಾತ್ ಆಗಿ ಬೈಕ್ ಸವಾರನಿಗೆ ತಾಗಿದೆ. ಅದರಿಂದಾಗಿ ವಾಕ್ಸಮರ ಜರುಗಿದ್ದು, ಬಳಿಕ ಹೊಡೆದಾಟ ಆಗಿದೆ ಎಂದು ದೂರಿನಲ್ಲಿರುವ ಮಾಹಿತಿ ಆಧರಿಸಿ ಪೊಲೀಸ್ ಮೂಲಗಳು ತಿಳಿಸಿವೆ.
3) ಬಂಧಿತ ಬೈಕ್ ಸವಾರ ಯಾರು: ಶೀಲಾದಿತ್ಯ ಬೋಸ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬೈಕ ಸವಾರನನ್ನು ಕಾಲ್ ಸೆಂಟರ್ಉದ್ಯೋಗಿ, ಬೈಯಪ್ಪನಹಳ್ಳಿ ಸಮೀಪದ ನಿವಾಸಿ ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದೆ. ಮಧುಮಿತಾ ದತ್ತಾ ನೀಡಿದ ದೂರು ಆಧರಿಸಿ ಪೊಲೀಸರು ವಿಕಾಸ್ ಕುಮಾರ್ ಅವರನ್ನು ಕೂಡಲೇ ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ. ವಿಕಾಸ್ ಕುಮಾರ್ ಹೇಳಿಕೆಗೆ ಸಂಬಂಧಿಸಿ, ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿರುವ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ನಡುವೆ, ವಿಕಾಸ್ ಕುಮಾರ್ ತಾಯಿ ಕೂಡ ಹೇಳಿಕೆ ನೀಡಿ ಮಗನ ತಪ್ಪಿಲ್ಲ, ನಮಗೆ ನ್ಯಾಯ ದೊರಕಿಸಿ ಎಂದು ಆಗ್ರಹಿಸಿದ ವಿಡಿಯೋ ಕೂಡ ವೈರಲ್ ಆಗಿದೆ.
4) ಸಿಸಿಟಿವಿ ವಿಡಿಯೋ ದೃಶ್ಯದಲ್ಲಿರುವುದು ಬೇರೆಯೇ ಕಥೆ: ಬೈಕ್ ಸವಾರ ಆಕ್ರಮಣಕಾರಿಯಾಗಿದ್ದ ಎಂದು ಶೀಲಾದಿತ್ಯ ಬೋಸ್ ಮತ್ತು ಮಧುಮಿತಾ ದತ್ತಾ ಆರೋಪಿಸಿದ್ದಕ್ಕೆ ವ್ಯತಿರಿಕ್ತವಾದ ದೃಶ್ಯಗಳು ಸಿಸಿಟಿವಿ ವಿಡಿಯೋ ತುಣುಕುಗಳಲ್ಲಿ ಕಾಣಿಸಿವೆ. ಶೀಲಾದಿತ್ಯ ಬೋಸ್ ಆಕ್ರಮಣಕಾರಿಯಾಗಿ ವರ್ತಿಸಿ ಬೈಕ್ ಸವಾರ ವಿಕಾಸ್ಗೆ ಹಿಗ್ಗಾಮುಗ್ಗ ಥಳಿಸುತ್ತಿರುವುದು, ಮಧುಮಿತಾ ವಿಡಿಯೋ ಮಾಡುತ್ತಿರುವುದು ಕಂಡುಬಂದಿದೆ. ಇದು ಬೀದಿ ಕಾಳಗವಾಗಿದ್ದು, ಇದಕ್ಕೂ ಭಾಷೆಗೂ ಸಂಬಂಧವಿಲ್ಲಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಸ್ಪಷ್ಟಪಡಿಸಿದ್ದು, ವಿಕಾಸ್ ದೂರು ನೀಡಿದರೆ ಕ್ರಮ ಜರುಗಿಸುವುದಾಗಿ ಹೇಳಿದ್ದಾಗಿ ವರದಿಯಾಗಿತ್ತು.
5) ಪ್ರತಿದೂರು ದಾಖಲಿಸದ ಪೊಲೀಸರು ಆರೋಪ: ಮಧುಮಿತಾ ಅವರ ದೂರನ್ನು ಕೂಡಲೇ ತಗೊಂಡು ಎಫ್ಐಆರ್ ದಾಖಲಿಸಿದ ಪೊಲೀಸರು, ವಿಕಾಸ್ ಕುಮಾರ್ ಪರವಾಗಿ ನಾವು ನೀಡಿದ ದೂರು ಸ್ವೀಕರಿಸುತ್ತಿಲ್ಲ. ಎಫ್ಐಆರ್ ದಾಖಲಿಸುತ್ತಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಆರೋಪಿಸಿವೆ. ಕನ್ನಡ, ಕನ್ನಡ ಭಾಷಿಕರ ಮೇಲೆ ಮಿಥ್ಯಾರೋಪ ಮಾಡಿ ಇಮೇಜ್ ಹಾಳುವ ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿವೆ. ಈ ನಡುವೆ, ವಿಕಾಸ್ ಕುಮಾರ್ ಪರ ವಕೀಲ ಅಜಯ್ ಅವರು ಟಿವಿ9 ಕನ್ನಡ ಜತೆಗೆ ಮಾತನಾಡುತ್ತ, ವಿಂಗ್ ಕಮಾಂಡರ್ ಆಗಿದ್ದರೂ ಆತ ಪ್ರಜೆಯೇ. ಒಬ್ಗ ನಾಗರಿಕನಾಗಿ ಕನ್ನಡ, ಕರ್ನಾಟಕ, ಬೆಂಗಳೂರಲ್ಲಿ ಭಾಷಾ ದ್ವೇಷ, ಜನಾಂಗೀಯ ಕಲಹಕ್ಕೆ ಕುಮ್ಮಕ್ಕು ನೀಡುವಂತಹ ನಡವಳಿಕೆ ತೋರಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ದೂರು ದಾಖಲಿಸಿದ್ದು, ಆಕ್ರಮಣಕಾರಿಯಾಗಿ ವರ್ತಿಸಿದ್ದು ವಿಂಗ್ ಕಮಾಂಡರ್ ಶೀಲಾದಿತ್ಯ ಎಂಬುದು ಕಂಡುಬಂದಿದೆ. ಪೊಲೀಸರು ಈ ಬಗ್ಗೆ ಕೂಡ ತನಿಖೆ ನಡೆಸಿ ನ್ಯಾಯ ಒದಗಿಸಲಿ ಎಂದು ಆಗ್ರಹಿಸಿದ್ದಾರೆ.