ಚಾರ್ ಧಾಮ್ ಅಲ್ಲ, ಚಾರ್ ಜಾಮ್ ಯಾತ್ರೆ: ಬೆಂಗಳೂರಿನ ನಾಲ್ಕು ಕಡೆಗಳ ಟ್ರಾಫಿಕ್ ಜಾಮ್ ಬಗ್ಗೆ ವ್ಯಂಗ್ಯ, ಸಂಚಾರ ದಟ್ಟಣೆಗೆ ಕೈಗನ್ನಡಿ
Bengaluru Traffic Jam: ಚಾರ್ ಧಾಮ್ ಅಲ್ಲ, ಚಾರ್ ಜಾಮ್ ಯಾತ್ರೆ ಎಂದು ಬೆಂಗಳೂರಿನ ಒಆರ್ ಆರ್ ರಸ್ತೆ, ಸಿಲ್ಕ್ ಬೋರ್ಡ್, ಎಚ್ ಎಸ್ ಆರ್ ಲೇಔಟ್ ಮತ್ತು ಮಾರತ್ ಹಳ್ಳಿ ಜಂಕ್ಷನ್ಗಳ ಟ್ರಾಫಿಕ್ ಜಾಮ್ ಬಗ್ಗೆ ವ್ಯಂಗ್ಯ ವ್ಯಕ್ತವಾಗಿದೆ. (ವರದಿ-ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ದೇಶದ ಐಟಿ ರಾಜಧಾನಿ ಬೆಂಗಳೂರಿನ ವಾಹನ ದಟ್ಟಣೆ 4 ಹಗಲು 3 ರಾತ್ರಿಗಳ ಪ್ರವಾಸದ ಅನುಭವ ನೀಡುತ್ತದೆ ಎಂದು ಇನ್ ಫೋಸಿಸ್ ಮಾಜಿ ನಿರ್ದೇಶಕ ಮೋಹನ್ ದಾಸ್ ಪೈ ವರ್ಣಿಸಿದ್ದಾರೆ. ವಾಹನ ದಟ್ಟಣೆಗೆ ಕುಖ್ಯಾತಿ ಪಡೆದಿರುವ ಒಆರ್ ಆರ್ ಸಿಲ್ಕ್ ಬೋರ್ಡ್ ಮತ್ತು ಮಾರತ್ ಹಳ್ಳಿ ಜಂಕ್ಷನ್ ಗಳನ್ನು ʼಚಾರ್ ಜಾಮ್ ಯಾತ್ರಾʼ ಎಂದು ಅವರು ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನ ಬಗ್ಗೆ ಇದೊಂದು ನೋವಿನ ಜೋಕ್ ಎಂದಿದ್ದಾರೆ.
ಔಟರ್ ರಿಂಗ್ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್, ಮಾರತ್ ಹಳ್ಳಿ ಮತ್ತು ಎಚ್.ಎಸ್. ಆರ್ ಲೇ ಔಟ್ ನಂತಹ ಹೆಸರುಗಳು ಬೆಂಗಳೂರನ್ನು ಚೆನ್ನಾಗಿ ಅರಿತುಕೊಂಡವರಲ್ಲಿ ನಡುಕ ಹುಟ್ಟಿಸುತ್ತದೆ. ಅದರಲ್ಲೂ ಈ ಮಾರ್ಗಗಳಲ್ಲಿ ದಿನನಿತ್ಯ ಸಂಚರಿಸುವವರಿಗೆ ಭೀತಿ ಹುಟ್ಟಿಸುವುದರಲ್ಲಿ ಆಶ್ಚರ್ಯವೇನಿಲ್ಲ.
ಬೆಂಗಳೂರಲ್ಲಿ ಚಾರ್ ಜಾಮ್ ಯಾತ್ರಾ ಎಲ್ಲೆಲ್ಲಿ
1) ಒಆರ್ ಆರ್ ರಸ್ತೆ: ಬೆಂಗಳೂರಿನ ವಾಹನ ದಟ್ಟಣೆ ಹಗಲಿನ ಹಾರರ್ ಶೋ ಎಂದು ನೀವು ಒಪ್ಪಿಕೊಳ್ಳುವಿರಾದರೆ ಒಆರ್ ಆರ್ ರಸ್ತೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಈ ಹೊರ ವರ್ತುಲ ರಸ್ತೆಯಲ್ಲಿ ನಮ್ಮ ಮೆಟ್ರೊ ಕಾಮಗಾರಿ ನಡೆಯುತ್ತಿದ್ದು, ರಾತ್ರಿಯೂ ವಾಹನ ದಟ್ಟಣೆಯ ಬಿಸಿ ತಟ್ಟುತ್ತದೆ. ಒಟ್ಟಾರೆ 24/7 ಟ್ರಾಫಿಕ್ ಜಾಮ್ ಇದ್ದೇ ಇರುತ್ತದೆ.
ಅದರಲ್ಲೂ ಅಗರ ಮೇಲ್ಸೇತುವೆ, ಬೆಳ್ಳಂದೂರು ಪೆಟ್ರೋಲ್ ಬಂಕ್, ಕಾಡುಬೀಸನಹಳ್ಳಿ ಮತ್ತು ಮಾರತ್ ಹಳ್ಳಿ ಮಲ್ಟಿಪ್ಲೆಕ್ಸ್ ನಿಲ್ದಾಣ ಭಯ ಹುಟ್ಟಿಸುವ ವಾಹನದಟ್ಟಣೆಯ ಕೇಂದ್ರಬಿಂದುಗಳಾಗಿವೆ. ಒಆರ್ ಆರ್ ಕಂಪನಿಗಳ ಮಾಲೀಕರ ಸಂಘ ಕೆಲವೊಂದು ತಾತ್ಕಾಲಿಕ ಪರಿಹಾರಗಳನ್ನು ಸೂಚಿಸಿದೆ. ಸಿಲ್ಕ್ ಬೋರ್ಡ್ ನಿಂದ ಕೆ ಆರ್ ಪುರಂವರೆಗಿನ ಸರ್ವೀಸ್ ರಸ್ತೆಗಳು ಮತ್ತು ಫುಟ್ ಪಾತ್ ಗಳಲ್ಲಿ ಅನಧಿಕೃತ ಪಾರ್ಕಿಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆ ಗುಂಡಿಗಳನ್ನು ಸರಿಪಡಿಸಬೇಕು ಎಂಬ ಸಲಹೆಗಳನ್ನು ನೀಡಿದೆ. ಜೂನ್ 2026ರ ವೇಳೆಗೆ ಸಿಲ್ಕ್ ಬೋರ್ಡ್ ನಿಂದ ಕೆ ಆರ್ ಪುರಂವರೆಗಿನ ಮೆಟ್ರೊ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್ ಸಿಎಲ್ ಭರವಸೆ ನೀಡಿದೆ.
2) ಸಿಲ್ಕ್ ಬೋರ್ಡ್ ಜಂಕ್ಷನ್: ಟ್ರಾಫಿಕ್ ಜಾಮ್ ಗೆ ಈ ಜಂಕ್ಷನ್ ಆರಂಭದಿಂದಲೂ ಕುಖ್ಯಾತಿ ಪಡೆದಿದೆ. ಅದರಲ್ಲೂ ರಾಗಿಗುಡಡದಿಂದ ಸಿಲ್ಕ್ ಬೋರ್ಡ್ ವರೆಗಿನ 5.12 ಕಿಮೀ ಉದ್ದದ ಫ್ಲೈ ಓವರ್ ವಾಹನ ದಟ್ಟಣೆಯನ್ನು ಸುಲಭ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ರಸ್ತೆಯಲ್ಲಿ ಪಾಡ್ ಕಾಸ್ಟ್ ಮಾಡಲು, ವರ್ಕ್ ಫ್ರಂ ಕಾರ್, ಮತ್ತು ಧ್ಯಾನ ಮಾಡಲು ಸಾಕಷ್ಟು ಅವಕಾಶ ಲಭ್ಯವಾಗುತ್ತದೆ ಎಂದು ಒಬ್ಬರು ಪ್ರತಿಕ್ರಿಯಿಸಿರುವುದು ಸರಿಯಾಗಿಯೇ ಇದೆ.
3) ಮಾರತ್ ಹಳ್ಳಿ: ಮಾರತ್ ಹಳ್ಳಿ ಬ್ರಿಡ್ಜ್ ಜಂಕ್ಷನ್ ಪರಿಸ್ಥಿತಿಯೂ ಭಿನ್ನವಾಗಿಲ್ಲ. ದಿನದ 24 ಗಂಟೆಯೂ ವಾಹನ ದಟ್ಟಣೆ ವಿಪರೀತವಾಗಿರುತ್ತದೆ. ಸಂಚಾರಿ ಪೊಲೀಸರು ಮಹದೇವಪುರ ಮತ್ತು ಮಾರತ್ ಹಳ್ಳಿ ನಡುವೆ ಸಂಚಾರ ಮಂದಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಪರ್ಯಾಯ ಮಾರ್ಗ ಬಳಸಿ ಎಂದು ಪ್ರತಿದಿನವೂ ಸೂಚನೆ ನೀಡುತ್ತಲೇ ಇರುತ್ತಾರೆ.
4) ಎಚ್ ಎಸ್ ಆರ್ ಲೇಔಟ್: ಈ ಮಾರ್ಗದಲ್ಲಿ ನಮ್ಮ ಮೆಟ್ರೊ ರಿಪೇರಿ ಕೆಲಸ ನಡೆಸುತ್ತಿದ್ದು, ಸಂಚಾರ ದಟ್ಟಣೆ ಸುಧಾರಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ. ಒಮ್ಮೊಮ್ಮೆ 40-50 ನಿಮಿಗಳವರೆಗೆ ಈ ರಸ್ತೆಯಲ್ಲೇ ನಿಂತಿರಬೇಕಾಗುತ್ತದೆ ಎಂದು ಮತ್ತೊಬ್ಬರು ತಮ್ಮ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಡಬಲ್ ಡೆಕ್ಕರ್ ಫ್ಲೈಓವರ್, ಸುರಂಗ ರಸ್ತೆ, ಫೆರಿಫೆರಲ್ ರಿಂಗ್ ರೋಡ್ ನಿರ್ಮಾಣದ ಭರವಸೆ ನೀಡಿದ್ದಾರೆ.
ಸುರಂಗ ರಸ್ತೆಗಳಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಬದಲಾಗಿ ನಮ್ಮ ಮೆಟ್ರೊ ರೈಲು ಸಂಚಾರ, ಉಪ ನಗರ ರೈಲು ಯೋಜನೆ, ಬಸ್ ಗಳ ವ್ಯವಸ್ಥೆ ದೀರ್ಘಕಾಲೀನ ಪರಿಹಾರ ಕಲ್ಪಿಸುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ರಾಜಕಾರಣಿಗಳು ತಮ್ಮ ಪ್ರತಿಷ್ಠೆಯನ್ನೇ ಮುಖ್ಯ ಮಾಡಿಕೊಂಡಿರುವಾಗ ತಜ್ಞರ ಅಭಿಪ್ರಾಯಗಳಿಗೆ ಮನ್ನಣೆ ಎಲ್ಲಿ ಸಿಕ್ಕೀತು?
(ವರದಿ-ಎಚ್. ಮಾರುತಿ, ಬೆಂಗಳೂರು)
