ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಡ್ರೈವಿಂಗ್ ಲೈಸೆನ್ಸ್ ರದ್ದು, ಬೆಂಗಳೂರು ಸಂಚಾರ ಪೊಲೀಸರ ಖಡಕ್ ವಾರ್ನಿಂಗ್
Bengaluru Traffic Police: ಬೆಂಗಳೂರಲ್ಲಿ ಸಂಚಾರ ದಟ್ಟಣೆ ಎದುರಾದ ವೇಳೆ ಅನೇಕರು ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಇದರ ಭಾಗವಾಗಿ ಈಗ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

Bengaluru Traffic Police: ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಅಂಥವರಿಗೆ ಭಾರಿ ದಂಡ ವಿಧಿಸುವುದಲ್ಲದೆ, ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್ ) ರದ್ದುಗೊಳಿಸಲು ಶಿಫಾರಸು ಮಾಡುವುದಾಗಿ ಬೆಂಗಳೂರು ಸಂಚಾರ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ. ಸಾಮಾನ್ಯವಾಗಿ ಸಂಚಾರ ದಟ್ಟಣೆ ಎದುರಾದ ವೇಳೆ ಅನೇಕರು ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಇದರ ಭಾಗವಾಗಿ ಈಗ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸಿದರೆ ಡಿಎಲ್ ರದ್ದು
ಬೆಂಗಳೂರು ನಗರ ಸಂಚಾರ ಪೊಲೀಸರು ಸಂಚಾರ ನಿಯಮಗಳ ಬಗ್ಗೆ ಪ್ರತಿನಿತ್ಯ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೂ ಸಹ ಅನೇಕರು ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಿರುವುದನ್ನು ಸಂಚಾರ ಪೊಲೀಸರು ಗಮನಿಸಿದ್ದಾರೆ. ಹೀಗಾಗಿ, ಬೆಂಗಳೂರು ನಗರ ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿ, ಈ ರೀತಿ ನಿಯಮ ಉಲ್ಲಂಘನೆ ಮಾಡುವವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಮೊದಲ ಬಾರಿಗೆ ದಂಡ ಹಾಕಲಾಗುತ್ತದೆ. ಮತ್ತೆ ಮತ್ತೆ ಅದೇ ನಿಯಮ ಉಲ್ಲಂಘನೆಗೆ ಸಿಕ್ಕಿಬಿದ್ದರೇ, ಅಂಥವರ ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡುವಂತೆ ಆರ್ಟಿಓ ಅಧಿಕಾರಿಗಳಿಗೆ ಸಂಚಾರ ಪೊಲೀಸರು ಶಿಫಾರಸು ಮಾಡುತ್ತಾರೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.
ನಿಯಮ ಉಲ್ಲಂಘಕರಿಗೆ ಬೆಂಗಳೂರು ಸಂಚಾರ ಪೊಲೀಸರ ಖಡಕ್ ವಾರ್ನಿಂಗ್
ಪಾದಚಾರಿ ಮಾರ್ಗದಲ್ಲಿ ವಾಹನ ಓಡಿಸಬೇಡಿ ಎಂದು ಬೆಂಗಳೂರು ಸಂಚಾರ ಪೊಲೀಸರು ಪದೇಪದೆ ಮನವಿ ಮಾಡಿಕೊಳ್ಳುವುದರ ಜೊತೆಗೆ ಆಗಾಗ, ವಾಹನ ಸವಾರರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆದರೆ, ವಾಹನ ಸವಾರರು ಇದಕ್ಕೆ ಬೆಲೆ ನೀಡುತ್ತಿಲ್ಲ. ಅಲ್ಪ ಪ್ರಮಾಣದ ಸಂಚಾರ ದಟ್ಟಣೆ ಎದುರಾದ ಕೂಡಲೇ ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವುದನ್ನು ರೂಢಿಸಿಕೊಂಡಿದ್ದಾರೆ. ಜಾಗೃತಿ ಮೂಡಿಸಿದ ಬಳಿಕವೂ ತಿಳಿವಳಿಕೆ ಮೂಡದೇ ಇದ್ದರೆ, ಅಂಥವರಿಗೆ ಪಾಠ ಕಲಿಸಲು ಮುಂದಿನ ಹಂತಕ್ಕೆ ಹೋಗಬೇಕು. ಈಗ ಪೊಲೀಸರು ಮಾಡುತ್ತಿರುವುದು ಕೂಡ ಇದನ್ನೇ. ನಿಯಮ ಉಲ್ಲಂಘಕರ ಡ್ರೈವಿಂಗ್ ಲೈಸೆನ್ಸ್ ರದ್ದು ಮಾಡಿದರೆ ಆಗ ಬೇರೆಯವರೂ ಎಚ್ಚೆತ್ತುಕೊಳ್ಳುತ್ತಾರೆ ಎಂಬುದು ಪೊಲೀಸರ ವಿಶ್ವಾಸ.
ಪಾದಚಾರಿಗಳಿಗೆ ಅಡ್ಡಿಯಾದರೆ ವಾಹನ ಸವಾರರ ವಿರುದ್ಧ ಕ್ರಮ
ಬೆಂಗಳೂರಲ್ಲಿ ಲಭ್ಯವಿರುವ ಪಾದಚಾರಿ ಮಾರ್ಗದಲ್ಲಿ ಪಾದಚಾರಿಗಳು ಹೊರತು ವಾಹನ ಸವಾರಿ ಮಾಡಬಾರದು. ಅಥವಾ ವಾಹನಗಳನ್ನು ನಿಲುಗಡೆ ಮಾಡಲು ಬಳಸಬಾರದು. ಪಾದಚಾರಿಗಳ ಸುಗಮ ಓಡಾಡಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿಯೆ ಪಾದಚಾರಿ ಮಾರ್ಗ ಇರುವಂಥದ್ದು. ಇದನ್ನು ಮೀರಿ ಅವರಿಗೆ ಅನನುಕೂಲವಾಗುವಂತೆ ವಾಹನ ಸವಾರರು ನಡೆದುಕೊಂಡರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಪಾದಚಾರಿಗಳ ಸುಗಮ ಓಡಾಟಕ್ಕೆ ಪೊಲೀಸರು ಕ್ರಮ ಜರುಗಿಸಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜ.27ರಿಂದ ಫೆ.2ರವರೆಗೆ 2.30 ಲಕ್ಷ ದಂಡ ಸಂಗ್ರಹ
ಮದ್ಯಪಾನ ಮಾಡಿ ಹಾಗೂ ಅತಿ ವೇಗದ ವಾಹನ ಚಲಾಯಿಸುವವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಕೇಸ್ ದಾಖಲಿಸಿಕೊಂಡು 2.30 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಅತಿವೇಗದಿಂದ ವಾಹನ ಚಲಾಯಿಸುವವರ ವಿರುದ್ಧ ನಡೆಸಿ ವಿಶೇಷ ಕಾರ್ಯಾಚರಣೆಯಲ್ಲಿ 228 ಪ್ರಕರಣಗಳನ್ನು ದಾಖಲಿಸಲಾಗಿದ್ದು 2.30 ಲಕ್ಷ ದಂಡ ಸಂಗ್ರಹಿಸಲಾಗಿದೆ. ಜ.27ರಿಂದ ಫೆ.2ರವರೆಗೆ ಈ ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರು ನಗರದ 50 ಸಂಚಾರ ಪೊಲೀಸ್ ಠಾಣೆಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, 62,300 ವಾಹನಗಳನ್ನು ತಪಾಸಣೆ ಮಾಡಿ, ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ 800 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
