ಬೆಂಗಳೂರಿನಲ್ಲಿ ಕನ್ನಡ ಅಷ್ಟಾವಧಾನ ಕಾರ್ಯಕ್ರಮ, ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ ಭಾಗಿ; ಏನಿದು ಅವಧಾನ?
ಬೆಂಗಳೂರಿನ ವಿದ್ಯಾರಣ್ಯಪುರ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಮೇ 3 ರಂದು ಅಷ್ಟಾವಧಾನ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಗಣೇಶ ಭಟ್ಟ ಕೊಪ್ಪಲತೋಟ ಭಾಗವಹಿಸಲಿದ್ದಾರೆ. ಅವಧಾನ ಎಂದರೇನು ಎನ್ನುವ ವಿವರವನ್ನು ಈ ಬರಹದಲ್ಲಿ ನೀಡಿದ್ದಾರೆ ಲೇಖಕಿ ಜ್ಯೋತಿ ಪ್ರಸಾದ್.

ಬೆಂಗಳೂರು: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ, ಎಂಇಎಸ್ ಕಲಾವೇದಿ ಮತ್ತು ರೋಟರಿ ಬೆಂಗಳೂರು ವಿದ್ಯಾರಣ್ಯಪುರ ಇವರ ಸಹಯೋಗದಲ್ಲಿ ಮೇ 3 ರಂದು ಸಂಜೆ 4 ಗಂಟೆಗೆ ಕನ್ನಡ ಅಷ್ಟಾವಧಾನ ಕಾರ್ಯಕ್ರಮ ನಡೆಯಲಿದೆ.
ಬೆಂಗಳೂರು ವಿದ್ಯಾರಣ್ಯಪುರದ ಎಂಇಎಸ್ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಅಷ್ಟಾವಧಾನಿ ವಿದ್ವಾನ್ ಗಣೇಶ ಭಟ್ಟ ಕೊಪ್ಪಲತೋಟ ಭಾಗವಹಿಸಲಿದ್ದಾರೆ.
ಅವಧಾನ ಎಂದರೇನು?
ಭಾರತೀಯ ಪರಂಪರೆಯ ವಿಶಿಷ್ಟ ಮತ್ತು ಅಪರೂಪದ ಕಲೆ ‘ಅವಧಾನ‘. ಇದು ವಿಶಿಷ್ಟ ಸಾಹಿತ್ಯ ಪ್ರಕಾರಗಳಲ್ಲಿ ಒಂದಾಗಿದೆ. ಅವಧಾನ ಪದದ ಅರ್ಥ ಏಕಾಗ್ರತೆ. ಅಂತೆಯೇ ಇದನ್ನು ಸಾಧಿಸುವ ಕಲಾವಿದ ಅಥವಾ ಕಲಾವಿದೆಯನ್ನು ಅವಧಾನಿ ಎಂದು ಕರೆಯಲಾಗುತ್ತದೆ.
ಅಪಾರವಾದ ವಿದ್ವತ್ತಿನ ಬುನಾದಿಯ ಮೇಲೆ ನಿಂತಿರುವ ಈ ಸೃಜನಶೀಲ ಕಲೆಯು ಪಾಂಡಿತ್ಯ, ಕಾವ್ಯಶಕ್ತಿ ಮತ್ತು ತೀವ್ರ ಏಕಾಗ್ರತೆಯ ಅದ್ಭುತ ಸಂಗಮವಾಗಿದೆ. ಹಾಗೇ ಅವಧಾನಿಗೆ ಸಮಯ ಸ್ಫೂರ್ತಿ ಮತ್ತು ಹಾಸ್ಯಪ್ರಜ್ಞೆಯೂ ಅವಶ್ಯವಾಗಿರುತ್ತದೆ.
ಅವಧಾನದಲ್ಲಿ ಶ್ರವಣ, ಮನನ, ಧಾರಣೆ ಹಾಗೂ ತ್ವರಿತ ತಾರ್ಕಿಕ ಚಾತುರ್ಯವನ್ನು ಪರೀಕ್ಷೆಗೆ ಒಡ್ಡಲಾಗುತ್ತದೆ. ಧಾರಣ, ಪೂರಣ ಮತ್ತು ಸಭಾರಂಜನೆಗಳೆಂಬ ತ್ರಿಮೂರ್ತಿಗಳನ್ನೊಳಗೊಂಡ ಈ ಅವಧಾನವು ಒಂದು ದೈವಿಕ ಕಲೆಯೆಂದೇ ಹೇಳಬಹುದು.
ಅವಧಾನಿಗಳಿಗೆ ನಿಯಮಬದ್ಧ ಪ್ರಶ್ನೆಗಳನ್ನು ನೀಡಿ ಸಮಂಜಸ ಉತ್ತರಗಳನ್ನು ಪಡೆಯುವ ವಿದ್ವಾಂಸರನ್ನು ಪೃಚ್ಛಕರೆನ್ನುತ್ತಾರೆ.
ಅವಧಾನಿಯು ಯಾವುದೇ ಕಾಗದ, ಲೇಖನಿಗಳ ಸಹಾಯವಿಲ್ಲದೇ (ಪುಸ್ತಕವಿಲ್ಲ - ಮಸ್ತಕವೇ ಎಲ್ಲಾ) ಪೂರ್ವ ಸಿದ್ಧತೆಯಿಲ್ಲದೇ, ಇತರ ಪೃಚ್ಛಕರು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುತ್ತಿದ್ದರೂ ವಿಚಲಿತರಾಗದೇ, ಪೃಚ್ಛಕರು ಹೇಳುವ ನಿರ್ದಿಷ್ಟ ನಿಯಮಗಳಿಗನುಗುಣವಾಗಿ ಛಂದೋಬದ್ಧ ಕವನಗಳನ್ನು ರಚಿಸುತ್ತಾನೆ.
ಅವಧಾನದ ವಿವಿಧ ಬಗೆಗಳು
ಅವಧಾನದಲ್ಲಿ ಗೀತಾವಧಾನ, ನೃತ್ಯಾವಧಾನ, ಗಣಿತಾವಧಾನ, ಘಂಟಾವಧಾನ, ನೇತ್ರಾವಧಾನ, ಚಿತ್ರಾವಧಾನ, ಸಾಹಿತ್ಯಾವಧಾನ ಹೀಗೆ ವಿವಿಧ ಬಗೆಗಳಿವೆ.
ಇವುಗಳಲ್ಲಿ ‘ಸಾಹಿತ್ಯಾವಧಾನ‘ ಬಹಳ ಜನಪ್ರಿಯವಾದದ್ದು. ಅವಧಾನದ ಹಲವು ಪ್ರಕಾರಗಳಲ್ಲಿ ಅಷ್ಟಾವಧಾನ ಮತ್ತು ಶತಾವಧಾನಗಳು ಹೆಚ್ಚು ಪ್ರಚಲಿತದಲ್ಲಿವೆ. ಇವುಗಳಲ್ಲದೇ ದಶಾವಧಾನ, ದ್ವಾದಶಾವಧಾನ, ಸಹಸ್ರಾವಧಾನಗಳೂ ಉಂಟು.
ಅಷ್ಟಾವಧಾನ
ಅಷ್ಟಾವಧಾನದಲ್ಲಿ ಎಂಟು ಮಂದಿ ಪೃಚ್ಛಕರು ಪ್ರಚಂಡ ಬುದ್ಧಿಮತ್ತೆಯ ಸವಾಲುಗಳನ್ನು ಅವಧಾನಿಯ ಮುಂದಿಡುತ್ತಾರೆ.
ಅವಧಾನದ ಆರಂಭದಿಂದ ಅಂತ್ಯದವರೆಗೆ ಅವಧಾನಿಯು ಪೂರಣ - ಸಮಸ್ಯೆಯ ಪರಿಹಾರಗಳನ್ನು ಪೂರ್ತಿಗೊಳಿಸುವುದು
ಮತ್ತು ಧಾರಣ - ನೆನಪಿನ ಶಕ್ತಿಯಿಂದ ಅದನ್ನು ಪೂರ್ತಿಯಾಗಿ ಹೇಳುವುದು ಎಂಬ ದ್ವಿಪಾತ್ರಗಳನ್ನು ನಿರ್ವಹಿಸುತ್ತಲೇ ಇರುತ್ತಾನೆ.ಈ ನಡುವೆ ಪೃಚ್ಛಕರು ಅವಧಾನಿಗಳ ಏಕಾಗ್ರತೆಗೆ ಭಂಗ ತರಲು ಯತ್ನಿಸಬಹುದು.
ಅವಧಾನಿಯು ಈ ಎಲ್ಲ ಸವಾಲುಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಾ ತನ್ನ ಛಂದೋಬದ್ಧ ಕಾವ್ಯ ರಚನಾ ಶಕ್ತಿಯನ್ನು ಪ್ರದರ್ಶಿಸುತ್ತಾನೆ.
ಅಷ್ಟಾವಧಾನವು ನಾಲ್ಕು ಹಂತದಲ್ಲಿ ನಡೆಯುತ್ತದೆ. ಪ್ರತಿ ಸುತ್ತಿನಲ್ಲಿ ಅವಧಾನಿಯು ಒಂದು ಪದ್ಯದ ಒಂದು ಪಾದವನ್ನು ರಚಿಸುತ್ತಾ ಐದನೆಯ ಸುತ್ತಿನಲ್ಲಿ ಪೂರ್ಣ ಪದ್ಯವನ್ನು ನೆನಪಿಸಿಕೊಂಡು ಅದರ ಅರ್ಥವನ್ನು ವಿವರಿಸುತ್ತಾನೆ.
ಪೃಚ್ಛಕರು ಅವಧಾನಿಯ ವಿದ್ವತ್ತನ್ನು ಬೇರೆ ಬೇರೆ ರೀತಿಯಲ್ಲಿ ಹೊರತರಬಹುದು. ಅವುಗಳಲ್ಲಿ ಅಷ್ಟಾವಧಾನದಲ್ಲಿ ಕೆಲವು ಹೀಗಿರಬಹುದು:
1.ನಿಷೇಧಾಕ್ಷರಿ
ಕೊಟ್ಟ ವಿಷಯ ಮತ್ತು ಛಂದಸ್ಸಿನಲ್ಲಿ ಅವಧಾನಿಯು ಪದ್ಯ ರಚಿಸುತ್ತಿರುವಾಗ ನಿರ್ದಿಷ್ಟ ಅಕ್ಷರಗಳನ್ನು ಪೃಚ್ಛಕ ನಿಷೇಧಿಸುವುದು.
2.ಸಮಸ್ಯಾಪೂರಣ
ನೀಡಿದ ಅಪಾರ್ಥಕ ಸಾಲಿನ ಆಧಾರದ ಮೇಲೆ ಪದ್ಯವನ್ನು ಸಾರ್ಥಕವಾಗಿ ಪೂರ್ಣಗೊಳಿಸುವುದು.
3.ದತ್ತಪದಿ
ನಿರ್ದಿಷ್ಟ ನಾಲ್ಕು ಪದಗಳು ಕವನದ ನಾಲ್ಕುಸಾಲುಗಳಲ್ಲಿ ಬರುವಂತೆ ಪ್ರದತ್ತ ವಿಷಯಾಧಾರಿತ ಪದ್ಯ ರಚನೆ.
4.ನ್ಯಸ್ತಾಕ್ಷರೀ
ನಿರ್ದಿಷ್ಟ ಸ್ಥಾನದಲ್ಲಿ ಸೂಚಿಸಲ್ಪಟ್ಟ ಅಕ್ಷರ ಬರುವಂತೆ ಪ್ರದತ್ತ ವಿಷಯಾಧಾರಿತ ಪದ್ಯ ರಚನೆ.
5.ಆಶುಕವಿತೆ
ವಿಷಯಾಧಾರಿತವಾಗಿ ಆಶುವಾಗಿ ವರ್ಣನಾತ್ಮಕ ಪದ್ಯ ರಚನೆ.
6.ಕಾವ್ಯವಾಚನ
ಪ್ರಾಚೀನ ಕವಿಗಳ ಪದ್ಯದ ಗಾಯನವನ್ನು ಗುರುತಿಸಿ, ಪದ್ಯದ ಕೃತಿಕಾರ, ಸಂದರ್ಭ - ಸ್ವಾರಸ್ಯವನ್ನು ವಿವರಿಸುವುದು
7.ಸಂಖ್ಯಾಬಂಧ
5 x 5 ಮಾಯಾ ಚೌಕವನ್ನು ಪರಿಹರಿಸಿ, ಕೇಳಿದಾಗ ನಿರ್ದಿಷ್ಟ ಸ್ಥಾನದ ಸಂಖ್ಯೆಯನ್ನು ಹೇಳುವುದು
8.ಅಪ್ರಸ್ತುತ - ಪ್ರಸಂಗ
ಮನರಂಜನಾತ್ಮಕವಾಗಿ ಅಪ್ರಸ್ತುತ ವಿಷಯದ ಚರ್ಚೆ, ವ್ಯಂಗ್ಯ-ಹಾಸ್ಯಮಯ ಉತ್ತರಗಳಿಂದ ಸಭಾರಂಜನೆ.
ಇವುಗಳಲ್ಲದೇ ಉದ್ದಿಷ್ಟಾಕ್ಷರಿ, ವ್ಯಸ್ತಾಕ್ಷರಿ, ಗುಣಿತಾಕ್ಷರೀ, ಚಿತ್ರಕವಿತೆ, ಪುಷ್ಪಗಣನಾ ಮುಂತಾದ ಬೇರೆ ಬೇರೆ ರೀತಿಗಳೂ ಇವೆ. ಒಟ್ಟಾರೆ ಅವಧಾನವೆಂಬುದು ಅದ್ಭುತ ಕಲೆಯೂ ಹೌದು, ಮನೋರಂಜನಾತ್ಮಕ ಬೌದ್ಧಿಕ ಕ್ರೀಡೆಯೂ ಹೌದು.
ಲೇಖನ: ಜ್ಯೋತಿ ಪ್ರಸಾದ್, ಹವ್ಯಾಸಿ ಲೇಖಕಿ ಮತ್ತು ಕವಯಿತ್ರಿ