ಬೆಂಗಳೂರು: ಹೆಚ್ಚುತ್ತಿರುವ ಬಿಸಿಲು, ಅಂತರ್ಜಲ ಕುಸಿತ, ತಲೆದೋರಿದ ಕಾವೇರಿ ನೀರಿನ ಅಭಾವ, ಶುದ್ಧ ಕುಡಿವ ನೀರಿಗೆ ಆನ್ಲೈನ್ನಲ್ಲಿ ಬುಕ್ ಮಾಡಿ
Bengaluru Water Crisis: ಬೆಂಗಳೂರು ನಗರದಲ್ಲಿ ಬಿಸಿಲಿನ ತಾಪ ಹೆಚ್ಚಳವಾಗಿದ್ದು, ಅಂತರ್ಜಲ ಕುಸಿತ ಕಾಡಿದೆ. ಕಾವೇರಿ ನೀರಿನ ಅಭಾವ ತಲೆದೋರಿದ್ದು, ಶುದ್ಧ ನೀರು ಸರಬರಾಜು ಮಾಡುವುದಕ್ಕೆ ಬೆಂಗಳೂರು ಜಲ ಮಂಡಳಿ ಆನ್ಲೈನ್ ಮೂಲಕ ಬುಕ್ಕಿಂಗ್ ಉಪಕ್ರಮ ಶುರುಮಾಡಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ಬಿಸಿಲು ಹೆಚ್ಚುತ್ತಿದ್ದು, ಇಲ್ಲಿನ ನಿವಾಸಿಗಳು ನೀರಿನ ಅಭಾವ ತಲೆದೋರಬಹುದೇ ಎಂಬ ಆತಂಕದಲ್ಲಿದ್ದಾರೆ. ಏಕಾಏಕಿ ಅಂತರ್ಜಲ ಕುಸಿತವಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ನೀರಿನ ಅಭಾವ ಸೃಷ್ಟಿಯಾಗುವುದೇ? ಖಾಸಗಿ ಟ್ಯಾಂಕರ್ ಗಳ ಮಾಫಿಯಾ ಕೆಲಸ ಮಾಡುವುದೇ? ನೀರಿಗಾಗಿಯೇ ಸಾವಿರಾರು ರೂ.ಗಳನ್ನು ಮೀಸಲಿಡಬೇಕೇ ಎಂದು ಭಯಭೀತರಾಗಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ ನಗರದ 200 ವಾರ್ಡ್ ಗಳಲ್ಲಿ 80ರಲ್ಲಿ ಅಂತರ್ಜಲ ಕುಸಿತವಾಗಿರುವುದನ್ನು ಗುರುತಿಸಿದೆ.
ಈಗಾಗಲೇ ನೀರಿನ ಅಭಾವ ತಲೆ ದೋರಿದ್ದು ಕೆಲವು ಪ್ರದೇಶಗಳಲ್ಲಿ ಮೂರ್ನಾಲ್ಕು ದಿನಗಳಿಗೊಮ್ಮೆ ಕಾವೇರಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ ನೀರಿಗೂ ಬೇಡಿಕೆ ಹೆಚ್ಚುತ್ತಿದ್ದು, ಅವರೂ ಕೂಡಲೇ ಸರಬರಾಜು ಮಾಡುತ್ತಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ನೀರಿನ ಬಿಕ್ಕಟ್ಟು ಎದುರಾಗುವ ಲಕ್ಷಣಗಳಿವೆ ಎಂದು ವೈಟ್ ಫೀಲ್ಡ್ ನಿವಾಸಿಯೊಬ್ಬರು ಹೇಳುತ್ತಾರೆ.
ಬೆಂಗಳೂರಿನ ಹೊರವಲಯದ ಅನೇಕ ಭಾಗಗಳಲ್ಲಿ ಕಾವೇರಿ ನೀರಿನ ಸಂಪರ್ಕ ಇಲ್ಲದ ಕಾರಣ ಅಂತರ್ಜಲವೇ ಆಧಾರ. ಇದೀಗ ಅಂತರ್ಜಲ ಬರಿದಾಗುತ್ತಿದ್ದು, ಬೋರ್ ವೆಲ್ ಮತ್ತು ಟ್ಯಾಂಕರ್ ಗಳನ್ನೇ ಅವಲಂಬಿಸಬೇಕಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನದ ಪ್ರಕಾರ ಪ್ರತಿದಿನ 800 ಎಂ ಎಲ್ ಡಿ ನೀರನ್ನು ಹೊರತೆಗೆಯಲಾಗುತ್ತಿದೆ. ನಗರದಲ್ಲಿ ಶೇ.20 ರಷ್ಟು ಜನತೆ ಟ್ಯಾಂಕರ್ ಗಳ ನೀರನ್ನು ಅವಲಂಬಿಸಿದ್ದಾರೆ ಎಂದು ಬೆಂಗಳೂರು ಉಸ್ತುವಾರಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ.
ಆನ್ಲೈನ್ ಮೂಲಕ ಬುಕ್ಕಿಂಗ್ ಮೂಲಕ ಶುದ್ಧ ನೀರು ಸರಬರಾಜು
ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿದ ಜನರ ಮನೆಬಾಗಿಲಿಗೆ ಬಿಐಎಸ್ ಪ್ರಾಮಾಣೀಕೃತ ಶುದ್ದ ಕುಡಿಯುವ ನೀರನ್ನು ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುವ ವಿನೂತನ ಯೋಜನೆ ಸಂಚಾರಿ ಕಾವೇರಿ - ಕಾವೇರಿ ಆನ್ ವ್ಹೀಲ್ಸ್ ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಜಲಮಂಡಳಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೇಸಿಗೆಯಲ್ಲಿ ಅಂತರ್ಜಲಮಟ್ಟ ಕಡಿಮೆಯಾದಾಗ ನೀರಿನ ಕೊರತೆ ಹೆಚ್ಚಾಗುತ್ತದೆ. ಈ ಸಂಧರ್ಭದಲ್ಲಿ ಖಾಸಗಿ ಟ್ಯಾಂಕರ್ಗಳು ತಮ್ಮ ದರವನ್ನು ಹೆಚ್ಚಿಸುವುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ಬಿಐಎಸ್ ಪ್ರಾಮಾಣೀಕೃತ ಶುದ್ದ ಕುಡಿಯುವ ನೀರನ್ನು ಜನರ ಮನೆಬಾಗಿಲಿಗೆ ತಲುಪಿಸಲು "ಸಂಚಾರಿ ಕಾವೇರಿ - ಕಾವೇರಿ ಆನ್ ವ್ಹೀಲ್ಸ್" ಅನ್ನು ಅನುಷ್ಠಾನಗೊಳಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಆಪ್ ಹಾಗೂ ವೆಬ್ಸೈಟ್ ರೂಪಿಸಲಾಗಿದೆ.
ಸಂಚಾರಿ ಕಾವೇರಿ - ಕಾವೇರಿ ಆನ್ ವ್ಹೀಲ್ಸ್ ಯೋಜನೆಯ ಪ್ರಮುಖ ಅಂಶಗಳು
⦁ ಟ್ಯಾಂಕರ್ ಟ್ರಾಕಿಂಗ್, ಓಟಿಪಿ ಪ್ರೊಟೆಕ್ಟೆಡ್ ಸೇವೆ
⦁ ಬೆಂಗಳೂರು ನಾಗರೀಕರು ಆನ್ ಡಿಮ್ಯಾಂಡ್ ಟ್ಯಾಂಕರ್ ನೀರು ಬುಕ್ಕಿಂಗ್ ಮಾಡಲು ಅವಕಾಶ
⦁ ಬಿಐಎಸ್ ಪ್ರಮಾಣಿತ ಶುದ್ದ ಹಾಗೂ ಸ್ವಚ್ಚ ಕುಡಿಯುವ ನೀರು ಲಭ್ಯ
⦁ ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ನೀಡುವ ವ್ಯವಸ್ಥೆ
⦁ ದರ ಏರಿಕೆಯ ಭಯವಿಲ್ಲದೇ ಜನರು ನಿಗದಿತ ರಿಯಾಯತಿ ದರದಲ್ಲಿ ಟ್ಯಾಂಕರ್ ನೀರು ಬುಕ್ಕಿಂಗ್ ಗೆ ಅವಕಾಶ
⦁ ಯಾವುದೇ ಸರ್ ಚಾರ್ಜ್, ಬೇಡಿಕೆ ಹೆಚ್ಚಾಗುವ ಚಾರ್ಜ್ ಗಳ ಭಯವಿಲ್ಲ
ಅತ್ಯಂತ ಸುಲಭ ವಿಧಾನದಲ್ಲಿ ಜನರು ತಮಗೆ ಅಗ್ಯವಿರುವಷ್ಟು ನೀರನ್ನು ಬುಕ್ಕಿಂಗ್ ಮಾಡಲು ಇಲ್ಲಿ ಅನುವು ಮಾಡಲಾಗಿದೆ. ಈ ಸೇವೆಯನ್ನು ಒದಗಿಸಲು ಖಾಸಗಿ ಟ್ಯಾಂಕರ್ ನವರು ಬೆಂಗಳೂರು ಜಲಮಂಡಳಿಗೆ ತಮ್ಮ ಟ್ಯಾಂಕರ್ ಗಳನ್ನು ಬಾಡಿಗೆ ಆಧಾರದಲ್ಲಿ ನೀಡಬಹುದಾಗಿದೆ.
ಟ್ಯಾಂಕರ್ ಮಾಲೀಕರು, ನೇರವಾಗಿ ಈ ಪ್ಲಾಟ್ಫಾರಂ ಗಳಲ್ಲಿ ನೊಂದಣಿ ಮಾಡಿಕೊಂಡು ಸೇವೆಯನ್ನು ಒದಗಿಸಬಹುದಾಗಿದೆ. ಏಪ್ರಿಲ್ 10 ರ ವರೆಗೆ ಟ್ಯಾಂಕರ್ಗಳು ನೊಂದಣಿ ಮಾಡಿಕೊಳ್ಳಬಹುದಾಗಿದೆ. ಟ್ಯಾಂಕರ್ ನೊಂದಣಿಗೆ https://bwssb.karnataka.gov.in/ ಜಾಲತಾಣದಲ್ಲಿ ಅವಕಾಶ ನೀಡಲಾಗಿದೆ.
ಕಾವೇರಿ ನೀರಿನ ಸಂಪರ್ಕ: ಇಎಂಐ ಅವಕಾಶ
ಕಾವೇರಿ ನೀರಿನ ಸಂಪರ್ಕವನ್ನು ಪಡೆಯುವ ನಿಟ್ಟಿನಲ್ಲಿ, ಒಮ್ಮೆಲೆ ಹಣ ಪಾವತಿಸಲು ಸಾಧ್ಯವಾಗದೇ ಇರುವಂತಹ ಅಪಾರ್ಟ್ ಮೆಂಟ್ ಅಸೋಷಿಯೇಷನ್ ಗಳು ಹಾಗೂ ಕಟ್ಟಡ ಮಾಲೀಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಮಾನ ಕಂತುಗಳಲ್ಲಿ (ಇಎಂಐ) ಶುಲ್ಕ ಪಾವತಿಸುವ ಸುರ್ವಣಾವಕಾಶನ್ನು ಬೆಂಗಳೂರು ಜಲ ಮಂಡಳಿ ರೂಪಿಸಿದೆ. ಈ ಅವಕಾಶವನ್ನು ಬಳಸಿಕೊಂಡು 12 ತಿಂಗಳ ಸಮಾನ ಕಂತುಗಳಲ್ಲಿ ಶುಲ್ಕ ಪಾವತಿಸುವ ಮೂಲಕ ಸಂಪರ್ಕ ಪಡೆದುಕೊಳ್ಳಬಹುದಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಪ್ರಾರಂಭವಾಗಲಿದೆ.
ಷರತ್ತುಗಳು
1. ಡಿಮ್ಯಾಂಡ್ ನೊಟೀಸ್ನ (ಅನ್ವಯಿಸಿದಲ್ಲಿ ಪ್ರೋರೇಟಾ ಶುಲ್ಕ, ಮೀಟರ್ ಶುಲ್ಕ,
ಇನ್ಸ್ ಪೆಕ್ಷನ್ ಚಾರ್ಜಸ್, ಜಿಬಿ ವಾಸ್ಟ್, ಬಿಸಿಸಿ ಶುಲ್ಕಗಳು ಹಾಗೂ ಲೈನ್
ಕಾಸ್ಟ್ ಸೇರಿದ) ಶೇ.20 ರಷ್ಟು ಹಣವನ್ನು ಮೊದಲ ಕಂತಾಗಿ ಪಾವತಿಸಬೇಕು.
2. ಇನ್ನುಳಿದ ಶೇಕಡಾ 80 ರಷ್ಟು ಶುಲ್ಕವನ್ನು ಪಾವತಿಸಲು 12 ತಿಂಗಳುಗಳ ಕಾಲಾವಕಾಶ
3. ಅಪಾರ್ಟ್ ಮೆಂಟ್ ಅಸೋಷಿಯೇಷನ್ಗಳು ಹಾಗೂ ಮನೆ/ಕಟ್ಟಡ ಮಾಲೀಕರಿಗೆ ಮಾತ್ರ ಇಎಂಐ ಸೌಲಭ್ಯ
(ವರದಿ- ಎಚ್. ಮಾರುತಿ, ಬೆಂಗಳೂರು)