ಬೆಂಗಳೂರು ಹವಾಮಾನ; ಇನ್ನು ಮೂರ್ನಾಲ್ಕು ದಿನ ಮುಂಗಾರು ದುರ್ಬಲ, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಹೆಚ್ಚಳ
ಬೆಂಗಳೂರು ಹವಾಮಾನ; ಬೆಂಗಳೂರು ಸುತ್ತಮುತ್ತ ಇನ್ನು ಮೂರ್ನಾಲ್ಕು ದಿನ ಮುಂಗಾರು ದುರ್ಬಲವಾಗಿರಲಿದೆ. ಇದೇ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು: ಮುಂಗಾರು ಮಳೆಯ ಅವಧಿ ಶುರುವಾಗಿದೆ. ಆದಾಗ್ಯೂ, ಮಳೆ ಸುರಿಯಲು ಬೇಕಾದ ಕ್ಷಿಪ್ರ ವಲಯದ ಅನುಪಸ್ಥಿತಿಯ ಕಾರಣ ಮುಂದಿನ ಕೆಲವು ದಿನಗಳವರೆಗೆ ಬೆಂಗಳೂರು ಮತ್ತು ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಾನ್ಸೂನ್ ದುರ್ಬಲವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮಳೆಯ ನಿರೀಕ್ಷೆಯೊಂದಿಗೆ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ನೆಟ್ಟಿರುವ ಹೆಚ್ಚಿನ ಸಂಖ್ಯೆಯ ಸಸಿಗಳು ಒಣಗತೊಡಗಿವೆ. ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ನಡೆಲಾದ ಗಿಡಗಳಿಗೆ ನೀರುಣಿಸಲು ಯಾವುದೇ ಸೌಲಭ್ಯವನ್ನು ಅಧಿಕಾರಿಗಳು ಕಲ್ಪಿಸಿಲ್ಲ. ಇಂತಹ ಕಾರ್ಯಕ್ರಮಗಳು ಫೋಟೋ ಸೆಷನ್ ರೀತಿ ನಡೆದು ಹೋಗಿವೆ ಎಂದು ವಿವಿಧೆಡೆ ಸ್ಥಳೀಯರು ದೂರಿದ್ದಾರೆ.
ಮುಂದಿನ ಮೂರು ದಿನ ಬೆಂಗಳೂರು ತಾಪಮಾನ ಹೆಚ್ಚಳ
ಬೆಂಗಳೂರಿನಲ್ಲಿ ಮಳೆ ಕಡಿಮೆಯಾಗಿರುವ ಕಾರಣ ಮುಂದಿನ ಎರಡು ಅಥವಾ ಮೂರು ದಿನಗಳ ಅವಧಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಪ್ರಮಾಣದಲ್ಲಿ ಏರಿಕೆ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೈಋತ್ಯ ಮಾರುತಗಳಲ್ಲಿ ತೇವಾಂಶ ಕಡಿಮೆಯಾಗುವುದು ತಾತ್ಕಲಿಕ ಪ್ರಕ್ರಿಯೆ. ಇದು ಮತ್ತೆ ತುಂಬಿಕೊಳ್ಳಲಿದ್ದು, ಮುಂದಿನ ವಾರ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಸದ್ಯದ ಈ ಹವಾಮಾನ ಏರುಪೇರಿನ ಕಾರಣ ಮುಂದಿನ ಎರಡು ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಸರಾಸರಿ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕಳೆದ ವಾರಗಳಿಗಿಂತ ಒಂದು ಡಿಗ್ರಿ ಹೆಚ್ಚಾಗಲಿದೆ. ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರುತ್ತದೆ ಎಂದು ಐಎಂಡಿ ಅಧಿಕಾರಿ ಸಿಎಸ್ ಪಾಟೀಲ್ ಹೇಳಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.
ಜೂನ್ 20 ರ ತನಕ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಪ್ರಮಾಣ ಇಳಿಕೆ
ಬೆಂಗಳೂರು, ಕರಾವಳಿ ಕರ್ನಾಟಕ, ಉತ್ತರ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಭಾಗಗಳಲ್ಲಿ ಜೂನ್ 20 ರವರೆಗೆ ಮಳೆಯ ಪ್ರಮಾಣ ಇಳಿಕೆಯಾಗಲಿದೆ.
ಇನ್ನೊಂದೆಡೆ, ರಾಜ್ಯದಾದ್ಯಂತ ಅನೇಕ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಲಘು ಮಳೆಯಾಗಲಿದೆ. ಕರ್ನಾಟಕದ ಉತ್ತರ ಒಳನಾಡಿನ ವಿಜಯಪುರ, ಧಾರವಾಡ, ಕಲಬುರಗಿ, ರಾಯಚೂರು ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಕೊಡಗು, ಹಾಸನ, ಕೋಲಾರ, ಮೈಸೂರು, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರುಗಳಲ್ಲಿ ಸಾಧಾರಣ ಮಳೆಯಾಗಬಹುದು. ಜೂನ್ 20 ರ ನಂತರ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಪಾಟೀಲ್ ಹೇಳಿದ್ದಾಗಿ ವರದಿ ವಿವರಿಸಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
