ಬೆಂಗಳೂರಲ್ಲಿ ಚಳಿ ಬಿಡಿಸಿದ ಸೆಕೆ, ವಾಡಿಕೆಗಿಂತ ಎರಡೂವರೆ ಡಿಗ್ರಿ ಸೆಲ್ಶಿಯಸ್ ತಾಪಮಾನ ಹೆಚ್ಚಳ, ಕರ್ನಾಟಕ ಹವಾಮಾನ ಮುನ್ಸೂಚನೆ ಹೀಗಿದೆ
Karnataka Weather: ಶಿವರಾತ್ರಿಗೂ ಮೊದಲೇ ಬೆಂಗಳೂರಲ್ಲಿ ಚಳಿ ಬಿಡಿಸಿದೆ ಸೆಕೆ. ಎಲ್ಲೆಡೆ ವಾಡಿಕೆಗಿಂತ ಹೆಚ್ಚಿನ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ಭಾಗಗಳಲ್ಲಿ ವಾಡಿಕೆಗಿಂತ ಎರಡೂವರೆ ಡಿಗ್ರಿ ಸೆಲ್ಶಿಯಸ್ ತಾಪಮಾನ ಹೆಚ್ಚಳವಾಗಿದೆ. ಕರ್ನಾಟಕದ ಹವಾಮಾನ ಮುನ್ಸೂಚನೆ ವಿವರ ಹೀಗಿದೆ.

Karnataka Weather: ವಿಪರೀತ ಮಳೆ, ಮೈ ನಡುಕದ ಚಳಿ ಆಯಿತು. ಬೆಂಗಳೂರಿಗರಿಗೆ ಇನ್ನು ಬಿಸಿಲಿನ ತಾಪ ಅನುಭವಿಸುವ ಪರಿಸ್ಥಿತಿ. ಹೌದು, ಬೆಂಗಳೂರಿನಲ್ಲಿ ವಾಡಿಕೆಗಿಂತ ಎರಡೂವರೆ ಡಿಗ್ರಿ ಸೆಲ್ಶಿಯಸ್ ತಾಪಮಾನ ಹೆಚ್ಚಳವಾಗಿದೆ. ಇನ್ನೊಂದೆಡೆ, ಈವರೆಗೆ ಚಳಿಯಿಂದ ನಡುಗುತ್ತಿದ್ದ ಕರ್ನಾಟಕದ ವಿವಿಧ ಭಾಗದ ಜನ ನಿಧಾನವಾಗಿ ಬಿಸಿಲಿನ ತಾಪ ಎದುರಿಸತೊಡಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 30 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ತಾಪಮಾನ 4.5 ಡಿಗ್ರಿ ಸೆಲ್ಶಿಯಸ್ವರೆಗೂ ಹೆಚ್ಚಳವಾಗಿದೆ. ವಾಡಿಕೆಯಂತಾದರೆ ಶಿವರಾತ್ರಿ ಕಳೆದ ಬಳಿಕ ಬೇಸಿಗೆ ಶುರುವಾಗಬೇಕು. ಆದರೆ ಈ ಬಾರಿ ಹಾಗಲ್ಲ. ಅದಕ್ಕೂ ಮೊದಲೇ ಸೆಕೆ ಆನುಭವಕ್ಕೆ ಬರತೊಡಗಿದೆ.
ಬೆಂಗಳೂರಲ್ಲಿ ಚಳಿ ಬಿಡಿಸಿದ ಸೆಕೆ, ವಾಡಿಕೆಗಿಂತ ಎರಡೂವರೆ ಡಿಗ್ರಿ ಸೆಲ್ಶಿಯಸ್ ತಾಪಮಾನ ಹೆಚ್ಚಳ
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದ್ದು ಸೆಕೆ ಇದುವರೆಗಿನ ಚಳಿಯನ್ನು ಬಿಡಿಸಿದೆ. ಸದ್ಯದ ಗರಿಷ್ಠ ತಾಪಮಾನವು ವಾಡಿಕೆಗಿಂತ ಎರಡೂವರೆ ಡಿಗ್ರಿ ಸೆಲ್ಶಿಯಸ್ ಅಧಿಕ ಎಂದು ಹವಾಮಾನ ಇಲಾಖೆ ತಜ್ಞರು ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದು (ಫೆ 5) ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಶಿಯಸ್ ಇರಬಹುದು. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಇಂದು ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಶಿಯಸ್ ಇರಬಹುದು. ನಿನ್ನೆ (ಫೆ 4) ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 31.9 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 15.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಬೆಂಗಳೂರು ಗ್ರಾಮಾಂತರದಲ್ಲಿ ಗರಿಷ್ಠ ತಾಪಮಾನ 32.5 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರದ ವಿಜ್ಞಾನಿ ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.
ಕರ್ನಾಟಕ ಹವಾಮಾನ ಮುನ್ಸೂಚನೆ ಹೀಗಿದೆ
ಕರ್ನಾಟಕದ ವಿವಿಧೆಡೆ ತಾಪಮಾನ ಹೆಚ್ಚಳ ಅನುಭವಕ್ಕೆ ಬಂದಿದ್ದು, ಈಗಾಗಲೇ ಕಲಬುರಗಿಯಲ್ಲಿ ಮಂಗಳವಾರ (ಫೆ 4) ಅತಿ ಹೆಚ್ಚು 36.8 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ವಾಡಿಕೆಗಿಂತ 3.6 ಡಿಗ್ರಿ ಸೆಲ್ಶಿಯಸ್ ಅಧಿಕವಾಗಿದೆ. ಹಾಗೆಯೇ, ಬಾಗಲಕೋಟೆಯಲ್ಲಿ 34.8 ಡಿಗ್ರಿ ಸೆಲ್ಶಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ವಾಡಿಕೆ ಪ್ರಮಾಣಕ್ಕಿಂತ 4.5 ಡಿಗ್ರಿ ಸೆಲ್ಶಿಯಸ್ ಹೆಚ್ಚಾಗಿದೆ. ಇದೇ ರೀತಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಿನ ಬಿಸಿಲು ದಾಖಲಾಗುತ್ತಿದೆ. ಗರಿಷ್ಠ ಉಷ್ಣಾಂಶದಲ್ಲಿ 2 ರಿಂದ 4.5 ಡಿಗ್ರಿ ಸೆಲ್ಶಿಯಸ್ವರೆಗೆ ಹೆಚ್ಚಳವಾಗಿರುವುದು ಕಂಡುಬಂದಿದೆ. ಅದರಲ್ಲೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸುಡು ಬಿಸಿಲು ಉಂಟಾಗಿದೆ ಎಂದು ಹವಾಮಾನ ತಜ್ಞರು ವಿವರಿಸಿದ್ದಾರೆ.
ಚಳಿಗಾಲ ಮುಗಿಯಲು ಇನ್ನೂ ಮೂರು ವಾರ ಇದೆ. ಹೀಗಾಗಿ ಇದುವರೆಗೂ ಬಿಸಿಲು ಕಡಿಮೆ ಇತ್ತು. ಇಂತಹ ಸನ್ನಿವೇಶದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಒಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಭಾರೀ ಬಿಸಿಲಿನ ಅನುಭವ ಆಗಲಿದೆ. ಬೇಸಿಗೆ ಬಿಸಿಲು ಪೂರ್ಣ ಪ್ರಮಾಣದಲ್ಲಿ ಶುರುವಾಗುತ್ತಿದಂತೆ ತಾಪಮಾನ ಹೆಚ್ಚಳದ ಅನುಭವವೂ ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಕೆಲವು ಸಂದರ್ಭಗಳಲ್ಲಿ ತಾಪಮಾನ ಹೆಚ್ಚಳವಾದ ಕೂಡಲೇ ಮೋಡ ಕಟ್ಟಿ ಮಳೆಯಾಗುವ ಸಾಧ್ಯತೆಯೂ ಇದೆ. ಇಂತಹ ಸನ್ನಿವೇಶಗಳು ಹಿಂದೆಯೂ ಇತ್ತು. ಹೀಗಾಗಿ, ಈಗಾಗಲೇ ಉಷ್ಣ ಅಲೆ ಸಂದರ್ಭದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಲು ಜನಜಾಗೃತಿ ಮೂಡಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಸದ್ಯದ ಮಟ್ಟಿಗೆ ಕರ್ನಾಟಕದ ಹವಾಮಾನದಲ್ಲಿ ಬಹಳ ವ್ಯತ್ಯಾಸವೇನೂ ಇರದು. ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
